Advertisement

ಹೊರ ರಾಜ್ಯದ ಮೀನಿಗೆ ಹೆಚ್ಚಿದ ಬೇಡಿಕೆ

01:30 PM Jul 10, 2022 | Team Udayavani |

ಮಲ್ಪೆ: ಮಳೆ ಗಾಳಿಗೆ ಕಡಲು ಪ್ರಕ್ಷುಬ್ಧಗೊಂಡಿರುವುದರಿಂದ ನಾಡದೋಣಿ ಮೀನುಗಾರರಿಗೆ ಸರಿಯಾಗಿ ಮೀನುಗಾರಿಕೆಗೆ ತೆರಳಲಾಗುತ್ತಿಲ್ಲ. ಈ ಕಾರಣದಿಂದ ಹೊರರಾಜ್ಯದಿಂದ ಬರುವ ಬಾಕ್ಸ್‌ ಮೀನುಗಳು ಮಲ್ಪೆ ಬಂದರಿನಲ್ಲಿ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ.

Advertisement

ಪೂರ್ವ ಕರಾವಳಿಯಲ್ಲಿ ಈಗಾಗಲೇ ಯಾಂತ್ರಿಕ ಮೀನುಗಾರಿಕೆ ಆರಂಭಗೊಂಡಿದೆ. ಕೇರಳದ ಗೋಲಾಯಿ ಮತ್ತು ಆಂಧ್ರಪ್ರದೇಶದ ಬೂತಾಯಿ ಮೀನು ಇಲ್ಲಿಗೆ ಲಾರಿ ಮೂಲಕ ಬರುತ್ತಿವೆ. ಹಾಗಾಗಿ ಅಲ್ಲಿನ ಮೀನುಗಳನ್ನು ತರಿಸಿ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ. ಮಲ್ಪೆ ಬಂದರಿಗೆ ಪ್ರತಿನಿತ್ಯ 15ರಿಂದ 20 ಲಾರಿಗಳಿಂದ ಸುಮಾರು 75 ಟನ್‌ಗಳಷ್ಟು ಮೀನುಗಳು ಬರುತ್ತಿದೆ. ಚಿಲ್ಲರೆ ಮೀನು ಮಾರಾಟಗಾರರಿಗೆ ರಖಂ ಆಗಿ ಮಾರಾಟವಾಗುತ್ತಿದೆ.

ಪಶ್ಚಿಮ ಕರಾವಳಿಯಲ್ಲಿ ಬಿರುಸಾದ ಮಳೆ ಗಾಳಿ ಬಂದರೆ ಪೂರ್ವ ಕರಾವಳಿಯಲ್ಲಿ ಉತ್ತಮ ಮೀನುಗಾರಿಕೆ ಆಗುತ್ತದೆ. ಹಲವು ಜಾತೀಯ ಮೀನುಗಳು ಬಲೆಗೆ ಬೀಳುತ್ತವೆ. ವಾರದ ಹಿಂದೆ ಕೇರಳದಲ್ಲಿ ಸಣ್ಣ ಗಾತ್ರದ ಬೂತಾಯಿ ಮೀನು ಹಲವು ಬೋಟ್‌ಗಳಿಗೆ ದೊರೆತಿತ್ತು. ಆದರೆ ಕೇರಳ ರಾಜ್ಯದ ಮೀನುಗಾರಿಕೆ ಇಲಾಖಾಧಿಕಾರಿಗಳು ಸಣ್ಣ ಜಾತೀಯ ಮೀನನ್ನು ಹಿಡಿಯದಂತೆ ಮೀನುಗಾರರಿಗೆ ಕಟ್ಟುನಿಟ್ಟಿನ ಕಾನೂನನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ.

ಮೀನಿನ ದರ

ಮಲ್ಪೆ ಬಂದರು ಮಾರುಕಟ್ಟೆಯಲ್ಲಿ ಬೂತಾಯಿ ಮೀನು ಕೆ.ಜಿ.ಗೆ 120-130 ರೂ. ಇದೆ. ಗೋಲಾಯಿ ಬಾಕ್ಸ್‌ಗೆ 1,000 ದಿಂದ 1,200 ರೂ. ಗೆ ಮಾರಾಟವಾಗುತ್ತಿದೆ. 10 ಕೆ.ಜಿ. ತೂಕದ ಪ್ಯಾಕೆಟ್‌ ಮೀನುಗಳು ಇಲ್ಲಿ ಸಿಗುತ್ತದೆ. ಗೊಂಕೆ 1,000 ರೂ., ಸಿ.ಡಿ. ಮೀನು 1,000 ರೂ. ರೆಬ್ಟಾಯಿ 800 ರೂ., ದೊಡ್ಡ ಬಂಗುಡೆ ಕೆ.ಜಿ.ಗೆ 200-220 ರೂ., ಸಣ್ಣದು 160-170 ರೂ., ಬೂತಾಯಿ 120-130 ರೂ.ಗೆ ಮಾರಾಟವಾಗುತ್ತಿದೆ ಎಂದು ಮೀನುಗಾರ ವಿಲಾಸ್‌ ಸುವರ್ಣ ತಿಳಿಸಿದ್ದಾರೆ.

Advertisement

ನಾಡ ದೋಣಿ ಮೀನುಗಾರಿಕೆಗೆ ಮಳೆಗಾಳಿ ಪೂರಕ

ಕಳೆದ ಒಂದು ವಾರದಿಂದ ಗಾಳಿ ಮಳೆಯಾಗುತ್ತಿದ್ದು ಗುಡ್ಡಗಾಡಿನ ನೆರೆನೀರು ಹೊಳೆ ಮೂಲಕ ಬಂದು ಸಮುದ್ರ ಸೇರಿದೆ. ಪ್ರಸ್ತುತ ಸಮುದ್ರ ನಾಡದೋಣಿ ಮೀನುಗಾರಿಕೆಗೆ ಪೂರಕವಾಗಿದೆ. ಆದರೆ ಎರಡು ಮೂರು ದಿನ ಮಳೆ ಗಾಳಿಯ ವಾತಾವರಣ ಇರುವುದರಿಂದ ನಾಡದೋಣಿಗಳು ಸಮುದ್ರಕ್ಕೆ ಇಳಿಯಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ನಾಡದೋಣಿ ಮೀನುಗಾರರು.

ಸಿಗಡಿ ಸಿಕ್ಕರೆ ಬಂಪರ್‌: ಈ ಬಾರಿ ಇದುವರೆಗೂ ನಾಡದೋಣಿ ಮೀನುಗಾರಿಕೆ ನಡೆಸಲಾಗಿಲ್ಲ. ಒಂದು ವಾರದಲ್ಲಿ ಸುರಿದ ಮಳೆಗಾಳಿಗೆ ನೆರೆ ನೀರು ಸಮುದ್ರ ಸೇರಿದೆ. ಹಾಗಾಗಿ ಉತ್ತಮ ಮೀನುಗಾರಿಕೆ ಆಗುವ ಲಕ್ಷಣ ಇದೆ. ಕಡಲಚಿನ್ನ ಸಿಗಡಿ ಮೀನು ಒಂದು ವಾರ ನಾಡದೋಣಿ ಬಲೆಗೆ ಬಿದ್ದರೆ ಮಳೆಗಾಲದ ನಾಡದೋಣಿ ಮೀನುಗಾರಿಕೆಯ ಎರಡು ತಿಂಗಳ ಸಂಪಾದನೆ ವಾರದಲ್ಲಿ ಗಳಿಸುವ ಸಾಧ್ಯತೆ ಇದೆ. – ಸುಂದರ ಪಿ. ಸಾಲ್ಯಾನ್‌, ಅಧ್ಯಕ್ಷರು, ಮಲ್ಪೆ ನಾಡದೋಣಿ ಮೀನುಗಾರರ ಸಂಘ

ಆಂಧ್ರ, ಕೇರಳದಿಂದ ಮೀನು:  ಪ್ರತೀ ವರ್ಷ ಮಳೆಗಾಲ ಆರಂಭವಾದ ಬಳಿಕ ಹೊರರಾಜ್ಯದ ಮೀನನ್ನು ತಂದು ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಬಾರಿ ಆಂಧ್ರಪ್ರದೇಶ ಮತ್ತು ಕೇರಳದ ಮೀನು ಬರುತ್ತಿದೆ. ಗೋಲಾಯಿ, ಬೂತಾಯಿ ಮೀನು ಮಾತ್ರ ಬರುತ್ತಿವೆ. ಇಲ್ಲಿನ ನಾಡದೋಣಿಗೆ ಮೀನುಗಳು ದೊರೆತಾಗ ಹೊರರಾಜ್ಯದ ಮೀನುಗಳಿಗೆ ಬೇಡಿಕೆ ಕಳೆದುಕೊಳ್ಳುತ್ತದೆ. –ಪ್ರದೀಪ್‌ ಟಿ. ಮೆಂಡನ್‌, ಮೀನುಗಾರರು

Advertisement

Udayavani is now on Telegram. Click here to join our channel and stay updated with the latest news.

Next