Advertisement

ದಿವ್ಯಾಂಗರ ಕಲ್ಯಾಣ ಕಾರ್ಯಕ್ರಮಗಳ ಅನುದಾನ ಹೆಚ್ಚಳ

10:23 PM Jun 17, 2019 | Lakshmi GovindaRaj |

ಬೆಂಗಳೂರು: ಗ್ರಾಮ ಪಂಚಾಯಿತಿಗಳ ಸ್ವಂತ ಅನುದಾನದಲ್ಲಿ ದಿವ್ಯಾಂಗರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಕೆ ಮಾಡುವ ಅನುದಾನದ ಪ್ರಮಾಣವನ್ನು ಹೆಚ್ಚಿಸಲಾಗಿದೆ. ದಿವ್ಯಾಂಗರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ವೈದ್ಯಕೀಯ ಹಾಗೂ ಪುನರ್ವಸತಿ ಕಾರ್ಯಕ್ರಮಗಳಿಗೆ ಗ್ರಾಪಂಗಳು ತಮ್ಮ ಸ್ವಂತ ಅನುದಾನದಲ್ಲಿ ಶೇ.3ರಷ್ಟು ಅನುದಾನವನ್ನು ಕಡ್ಡಾಯವಾಗಿ ಮೀಸಲಿಡಬೇಕು ಎಂದಿತ್ತು. ಆದರೆ, ಅದನ್ನು ಈಗ ಶೇ.5ಕ್ಕೆ ಹೆಚ್ಚಿಸಲಾಗಿದೆ.

Advertisement

ದಿವ್ಯಾಂಗರ (ಸಮಾನ ಅವಕಾಶ, ಹಕ್ಕುಗಳ ಸಂರಕ್ಷಣೆ ಮತ್ತು ಸಂಪೂರ್ಣ ಭಾಗವಹಿಸುವಿಕೆ) ಅಧಿನಿಯಮ-1995ರ ಕಲಂ 46ರ ಪ್ರಕಾರ ದಿವ್ಯಾಂಗರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ವೈದ್ಯಕೀಯ ಹಾಗೂ ಪುನರ್ವಸತಿ ಕಾರ್ಯಕ್ರಮಗಳಿಗೆ ಗ್ರಾಪಂಗಳು ತಮ್ಮ ಸ್ವಂತ ಅನುದಾನದಲ್ಲಿ ಶೇ.3ರಷ್ಟು ಅನುದಾನವನ್ನು ಕಡ್ಡಾಯವಾಗಿ ಮೀಸಲಿಟ್ಟು, ಅದೇ ಆರ್ಥಿಕ ವರ್ಷದಲ್ಲಿ ವೆಚ್ಚ ಮಾಡಬೇಕೆಂದು 2015ರಲ್ಲಿ ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿತ್ತು.

ಆದರೆ, ದಿವ್ಯಾಂಗರ ಹಕ್ಕುಗಳ ಕಾಯ್ದೆ-2016ರ ಪ್ರಕಾರ ಅಂಗವಿಕಲತೆಯ ಪ್ರಮಾಣಕ್ಕನುಸಾರವಾಗಿ ಮಹಿಳೆಯರಿಗೆ ಆದ್ಯತೆ ನೀಡುವುದರ ಜತೆಗೆ ಬಡತನ ನಿರ್ಮೂಲನೆ ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳಲ್ಲಿ ಶೇ.5ರಷ್ಟು ಮೀಸಲಾತಿ ಒದಗಿಸಲು 2018-19ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದರಂತೆ, ಸೂಕ್ತ ಕ್ರಮ ಕೈಗೊಳ್ಳುವಂತೆ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವರ್ಷದ ಆರಂಭದಲ್ಲಿ ಪತ್ರ ಬರೆದು ಮನವಿ ಮಾಡಿತ್ತು.

ಹಾಗಾಗಿ, ಪ್ರಸಕ್ತ ಸಾಲಿನಿಂದ ಗ್ರಾಪಂಗಳು ತಮ್ಮ ಸ್ವಂತ ಅನುದಾನದಲ್ಲಿ ದಿವ್ಯಾಂಗರ ಕಲ್ಯಾಣ ಕಾರ್ಯಕ್ರಮಗಳಿಗೆ ಶೇ.3ರ ಬದಲು ಶೇ.5 ಅನುದಾನ ಮೀಸಲಿಟ್ಟು, 2015ರ ಮಾರ್ಗಸೂಚಿಗಳ ಅನ್ವಯ ವೆಚ್ಚ ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಎಲ್ಲಾ ಗ್ರಾಪಂಗಳಿಗೆ ಸುತ್ತೋಲೆ ಹೊರಡಿಸಿದೆ.

13 ಲಕ್ಷ ದಿವ್ಯಾಂಗರು: 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 13.24 ಲಕ್ಷ ದಿವ್ಯಾಂಗರಿದ್ದಾರೆ. ಇದರಲ್ಲಿ ಸುಮಾರು 10 ಲಕ್ಷ ಜನ ಗ್ರಾಮೀಣ ಭಾಗದಲ್ಲಿ ವಾಸ ಮಾಡುತ್ತಾರೆ. ಈ ಸಂಖ್ಯೆ ಈಗ ಇನ್ನೂ ಹೆಚ್ಚಾಗಿದೆ. ಇದರಲ್ಲಿ ಬಿಪಿಎಲ್‌ ಕುಟುಂಬಗಳೆ ಹೆಚ್ಚು.

Advertisement

ವಿವಿಧ ವಯೋಮಿತಿಯ ಮತ್ತು ವಿವಿಧ ಬಗೆಯ ದಿವ್ಯಾಂಗರಿಗೆ ಅವರ ಅಂಗವಿಕಲತೆಯ ಪ್ರಮಾಣಕ್ಕನುಗುಣವಾಗಿ ಅವರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ವೈದ್ಯಕೀಯ ಹಾಗೂ ಪುನರ್ವಸತಿ ಕಾರ್ಯಕ್ರಮಗಳಿಗೆ ವಿಕಲಚೇತನರ ಮತ್ತ ಸಬಲೀಕರಣ ಇಲಾಖೆ ಸೇರಿ ಇನ್ನೂ ಕೆಲವು ಇಲಾಖೆಗಳಿಂದ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ.

ಇದರ ಜತೆಗೆ ಗ್ರಾಮೀಣ ಭಾಗದಲ್ಲಿ ಹೆಚ್ಚು ಬೇಡಿಕೆ ಹಾಗೂ ಅಗತ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಪಂಗಳು ತಮ್ಮ ಸ್ವಂತ ಅನುದಾನದಲ್ಲಿ ದಿವ್ಯಾಂಗರ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸುವ ಅನುದಾನವನ್ನು ಶೇ.5ಕ್ಕೆ ಹೆಚ್ಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಯಾವುದಕ್ಕೆ ಎಷ್ಟು ಸಹಾಯಧನ?: ಎಸ್ಸೆಸ್ಸೆಲ್ಸಿ, ಪಿಯು, ಪದವಿ ಹಾಗೂ ವೃತ್ತಿ ಶಿಕ್ಷಣ ಕಲಿಯುತ್ತಿರುವ ದಿವ್ಯಾಂಗ ವಿದ್ಯಾರ್ಥಿಗಳಿಗೆ ವಾರ್ಷಿಕ ಕ್ರಮವಾಗಿ 500, 750, 1,000 ಹಾಗೂ 1,500 ರೂ. ಪಬ್ಲಿಕ್‌ ಪರೀಕ್ಷೆಗಳಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಬಹುಮಾನ, ರಾಜ್ಯ ಮತ್ತು ರಾಷ್ಟ್ರಮಟ್ಟದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದವರಿಗೆ ಕ್ರಮವಾಗಿ 2 ಸಾವಿರ ಮತ್ತು 5 ಸಾವಿರ ರೂ., ದಿವ್ಯಾಂಗರು ಬಳಸುವ ಉಪಕರಣಗಳ ಖರೀದಿಗೆ ಗರಿಷ್ಠ 5 ಸಾವಿರ ರೂ.ಸಹಾಯಧನ, ಬಿಪಿಎಲ್‌ ಕುಟುಂಬದ ದಿವ್ಯಾಂಗರ ಶಸ್ತ್ರಚಿಕಿತ್ಸೆಗೆ ಗರಿಷ್ಠ 10 ಸಾವಿರ ರೂ.,

ಕೌಶಲ್ಯ ತರಬೇತಿಗೆ 5 ಸಾವಿರ, ಆದಾಯ ಹೆಚ್ಚಳ ಚಟುವಟಿಕೆಗಳಿಗೆ 5 ಸಾವಿರ, ಗ್ರಾಪಂ ವ್ಯಾಪ್ತಿಯಲ್ಲಿ ಸ್ವಂತ ಉದ್ದಿಮೆ ನಡೆಸಿದರೆ 5 ಸಾವಿರ, ದಿವ್ಯಾಂಗರು ಮುಖ್ಯಸ್ಥರಾಗಿರುವ ಕುಟುಂಬದ ಮನೆಗೆ ಅಡುಗೆ ಅನಿಲ ಸಂಪರ್ಕದ ವೆಚ್ಚ, ಸೋಲಾರ್‌ ಲಾಟೀನು ದೀಪಗಳನ್ನು ಅಳವಡಿಸಲು ಸಹಾಯಧನ ಸೇರಿ ಒಟ್ಟು 17ಕ್ಕೂ ಹೆಚ್ಚು ವಿವಿಧ ಯೋಜನೆ ಮತ್ತು ಕಾರ್ಯಕ್ರಮಗಳಿಗೆ ಅನುದಾನ ವಿನಿಯೋಗಿಸಲಾಗುತ್ತದೆ.

ದಿವ್ಯಾಂಗರ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗುತ್ತಿದ್ದ ಅನುದಾನವನ್ನು ಶೇ.3ರ ಬದಲಿಗೆ ಶೇ.5ಕ್ಕೆ ಹೆಚ್ಚಿಸಿ 2015ರ ಮಾರ್ಗಸೂಚಿಗಳ ಅನ್ವಯ ಆ ಅನುದಾನವನ್ನು ಬಳಕೆ ಮಾಡುವಂತೆ ಎಲ್ಲ ಗ್ರಾಪಂಗಳಿಗೆ ಸೂಚಿಸಲಾಗಿದೆ.
-ಕೆ.ಯಾಲಕ್ಕಿಗೌಡ, ನಿರ್ದೇಶಕರು, ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next