Advertisement

ಮಾಲಿನ್ಯ ನಿಯಂತ್ರಣ ಆದ್ಯತೆಯಾಗಲಿ

06:00 AM Dec 08, 2018 | |

ಇಂಗಾಲಾಮ್ಲವನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ವಾತಾವರಣಕ್ಕೆ ಬಿಡುಗಡೆಗೊಳಿಸಿದ ದೇಶಗಳ ಪೈಕಿ ಭಾರತ ನಾಲ್ಕನೇ ಸ್ಥಾನದಲ್ಲಿದೆ ಎನ್ನುತ್ತಿದೆ ಗ್ಲೋಬಲ್‌ ಕಾರ್ಬನ್‌ ಪ್ರಾಜೆಕ್ಟ್‌ನ ಸಮೀಕ್ಷಾ ವರದಿ. ತಾಪಮಾನ ಏರಿಕೆ, ಹವಾಮಾನ ಬದಲಾವಣೆ ಮತ್ತಿತರ ಸಮಸ್ಯೆಗಳಿಗೆ ನೇರವಾಗಿ ತಳಕು ಹಾಕಿಕೊಂಡಿರುವ ಸಮಸ್ಯೆ ವಾತಾವರಣದಲ್ಲಿ ಇಂಗಾಲಾಮ್ಲ ಪ್ರಮಾಣದ ಏರಿಕೆ. ಇಂಗಾಲಾಮ್ಲದ ಹೆಚ್ಚಳದಿಂದಾಗಿ ನಮ್ಮ ನಗರಗಳು ಹೇಗೆ ಗ್ಯಾಸ್‌ ಚೇಂಬರ್‌ಗಳಾಗಿ ಬದಲಾಗುತ್ತಿವೆ ಎನ್ನುವುದನ್ನು ಪ್ರತಿ ವರ್ಷ ನಾವು ದಿಲ್ಲಿಯಲ್ಲಿ ನೋಡುತ್ತಿದ್ದೇವೆ. ಈ ಸಂದರ್ಭದಲ್ಲಿ ನಮ್ಮನ್ನಾಳುವವರು ಇಂಗಾಲಾಮ್ಲ ಬಿಡುಗಡೆಯನ್ನು ನಿಯಂತ್ರಿಸುವ ಹಲವು ವಿಧಾನಗಳ ಬಗ್ಗೆ ಭರವಸೆಗಳನ್ನು ನೀಡುತ್ತಾರೆ. ಆದರೆ ಕ್ರಿಯಾತ್ಮಕವಾಗಿ ಈ ನಿಟ್ಟಿನಲ್ಲಿ ಗಂಭೀರವಾದ ಪ್ರಯತ್ನಗಳು ಇನ್ನೂ ನಡೆದಿಲ್ಲ. ಹೀಗಾಗಿ ಗ್ಲೋಬಲ್‌ ಕಾರ್ಬನ್‌ ಪ್ರಾಜೆಕ್ಟ್ ನೀಡಿರುವ ವರದಿ ಕಳವಳಕಾರಿ ಮಾತ್ರವಲ್ಲ ಎಚ್ಚರಿಕೆಯ ಕರೆಗಂಟೆಯೂ ಹೌದು. 

Advertisement

ಇಂಗಾಲಾಮ್ಲದ ಬಿಡುಗಡೆಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಜಗತ್ತಿನ ಶಕ್ತ ರಾಷ್ಟ್ರಗಳಾದ ಅಮೆರಿಕ, ಚೀನ ಮತ್ತು ಐರೋಪ್ಯ ಒಕ್ಕೂಟವಿದೆ. ಹಾಗೆಂದು ನಾವು ನಾಲ್ಕನೇ ಸ್ಥಾನದಲ್ಲಿದ್ದೇವೆ ಎಂದು ಸಮಾಧಾನಪಟ್ಟುಕೊಂಡು ಜವಾಬ್ದಾರಿಯಿಂದ ಜಾರಿಕೊಳ್ಳುವ ಸಮಯ ಇದಲ್ಲ. ಏಕೆಂದರೆ ಇಂಗಾಲಾಮ್ಲದ ಪ್ರಮಾಣ ಮತ್ತು ಜನಸಂಖ್ಯೆ ಏರಿಕೆ ಮತ್ತು ಅಭಿವೃದ್ಧಿಗೆ ನೇರ ಸಂಬಂಧವಿದೆ. ಪ್ರಸ್ತುತ ಜನಸಂಖ್ಯೆಯಲ್ಲಿ ನಾವು ಎರಡನೇ ಸ್ಥಾನದಲ್ಲಿದ್ದೇವೆ. ಜನಸಂಖ್ಯೆಯ ಏರಿಕೆಯ ಪ್ರಮಾಣ ತುಸು ಕಡಿಮೆಯಾಗಿದೆಯಾದರೂ ಅದಿನ್ನೂ ಪೂರ್ತಿ ನಿಯಂತ್ರಣಕ್ಕೆ ಬಂದಿಲ್ಲ. ಇನ್ನು ಕೆಲವೇ ವರ್ಷಗಳಲ್ಲಿ ಜನಸಂಖ್ಯೆಯಲ್ಲಿ ನಂಬರ್‌ ಒನ್‌ ಆಗುವತ್ತ ದಾಪುಗಾಲಿಡುತ್ತಿದ್ದೇವೆ.ಇದಕ್ಕೆ ಹೊಂದಿಕೊಂಡು ಅಭಿವೃದ್ಧಿ ಕಾರ್ಯಗಳೂ ಬಿರುಸು ಪಡೆಯುವುದರಿಂದ ಇಂಗಾಲಾಮ್ಲದ ಪ್ರಮಾಣವೂ ಹೆಚ್ಚಳವಾಗಲಿದೆ. ಹೀಗಾಗಿ ನಮ್ಮನ್ನಾಳುವವರು ಮತ್ತು ನೀತಿ ರೂಪಕರು ವಾತಾವರಣದ ಮೇಲೆ ಬೀಳುವ ಒತ್ತಡವನ್ನು ನಿವಾರಿಸಲು ಈಗಲೇ ಸೂಕ್ತ ಪರ್ಯಾಯೋಪಾಯಗಳನ್ನು ಕಂಡುಕೊಳ್ಳುವ ಅಗತ್ಯವಿದೆ. 

ವಾಯುಮಾಲಿನ್ಯಕ್ಕೆ ಪ್ರತಿ ವರ್ಷ ಜಗತ್ತಿನಾದ್ಯಂತ 6 ಲಕ್ಷ ಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ಇತ್ತೀಚೆಗಷ್ಟೇ ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿತ್ತು. ವಾಯುಮಾಲಿನ್ಯಕ್ಕೆ ಮುಖ್ಯ ಕಾರಣವೇ ಇಂಗಾಲಾಮ್ಲ. ಅದು ಮನೆಯಲ್ಲಿ ಅಡುಗೆ ತಯಾರಿಸುವುದರಿಂದ ಇರಬಹುದು, ವಾಹನಗಳ ಹೊಗೆ ಇರಬಹುದು, ಕಲ್ಲಿದ್ದಲು ಉರಿಯುವುದರಿಂದ ಇರಬಹುದು, ಇಲ್ಲವೆ ಕಾರ್ಖಾನೆಗಳ ಹೊಗೆ ಇರಬಹುದು. ಈಗೀಗ ಮಕ್ಕಳಲ್ಲೂ ಅಸ್ತಮಾ ಮತ್ತು ಕ್ಯಾನ್ಸರ್‌ನಂಥ ಮಾರಕ ರೋಗ ಕಾಣಿಸಿಕೊಳ್ಳಲು ವಾಯುಮಾಲಿನ್ಯ ಮುಖ್ಯ ಕಾರಣ ಎನ್ನುವ ವಿಚಾರವನ್ನು ವಿಜ್ಞಾನಿಗಳು ಈ ಹಿಂದೆಯೇ ಹೇಳಿದ್ದಾರೆ. ಹೀಗಾಗಿ ಭವಿಷ್ಯದ ತಲೆಮಾರನ್ನು ಆರೋಗ್ಯವಂತರನ್ನಾಗಿ ಇಡಲು ಕೂಡಾ ವಾಯುಮಾಲಿನ್ಯವನ್ನು ನಿಯಂತ್ರಿಸುವುದು ಅನಿವಾರ್ಯ. ಪ್ರತಿ ಮಗು ಶುದ್ಧ ಗಾಳಿಯನ್ನು ಉಸಿರಾಡಿ ಆರೋಗ್ಯವಂತನಾಗಿ ಬೆಳೆಯುವಂತೆ ಮಾಡುವುದು ನಮ್ಮ ಕರ್ತವ್ಯ ಎನ್ನುವುದನ್ನು ಮರೆಯಬಾರದು. 

ವಾತಾವರಣಕ್ಕೆ ಇಂಗಾಲಾಮ್ಲ ಬಿಡುಗಡೆಯಾಗುವುದನ್ನು ನಿಯಂತ್ರಿಸಲು ಇರುವ ಮುಖ್ಯ ದಾರಿಯೆಂದರೆ ವಾಹನಗಳ ಸಂಖ್ಯೆಯನ್ನು ತಗ್ಗಿಸುವುದು. ಆದರೆ ಇದಕ್ಕೆ ತದ್ವಿರುದ್ಧವಾಗಿ ನಮ್ಮ ದೇಶದಲ್ಲಿ ಪ್ರತಿವರ್ಷ ವಾಹನಗಳ ಸಂಖ್ಯೆ ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಪರಿಸರ ಸಂಬಂಧಿ ವರದಿಗಳು ಬಂದಾಗಲೆಲ್ಲ ವಾಹನಗಳ ಸಂಖ್ಯೆಯನ್ನು ನಿಯಂತ್ರಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕೆಂಬ ಕೂಗು ಕೇಳಿ ಬರುತ್ತಿದ್ದರೂ ಅಭಿವೃದ್ಧಿಯ ನಾಗಾಲೋಟದಲ್ಲಿರುವವರ ಕಿವಿಗೆ ಈ ಕೂಗು ಇನ್ನೂ ಬಿದ್ದಂತಿಲ್ಲ. ವಾಹನಗಳ ಸಂಖ್ಯೆಯನ್ನು ನಿಯಂತ್ರಿಸುವುದಕ್ಕೆ ಸಂಬಂಧಿಸಿದಂತೆ ಕಠಿನವಾದ ನಿಯಮಗಳನ್ನು ರಚಿಸಲು ಇದು ಸಕಾಲ. ಈ ನಿಟ್ಟಿನಲ್ಲಿ ಪ್ರಜ್ಞಾವಂತರು ಮತ್ತು ಪರಿಸರ ಪ್ರೇಮಿಗಳು ಸರಕಾರಗಳನ್ನು ಎಚ್ಚರಿಸುವ ಕೆಲಸವನ್ನು ಮಾಡಬೇಕು. 

ದೇಶ ಅಭಿವೃದ್ಧಿ ಹೊಂದಿದಂತೆ ಇಂಧನ ಬೇಡಿಕೆಯೂ ಹೆಚ್ಚುವುದು ಸಹಜ ಪ್ರಕ್ರಿಯೆ. ನಮ್ಮ ಅಗಾಧ ಜನಸಂಖ್ಯೆ ಇನ್ನೂ ಬಹುತೇಕ ಪಳೆಯುಳಿಕೆ ಇಂಧನವನ್ನೇ ಬಳಸುತ್ತಿದೆ. ಇದರ ಪ್ರಮಾಣ ಕಡಿಮೆಯಾಗದ ಹೊರತು ಮಾಲಿನ್ಯ ನಿಯಂತ್ರಣಕ್ಕೆ ಬಾರದು. ಈ ನಿಟ್ಟಿನಲ್ಲಿ ಪರ್ಯಾಯ ಇಂಧನ ಬಳಕೆಯತ್ತ ಜನರನ್ನು ಉತ್ತೇಜಿಸುವುದು ಈಗ ಬೇಕಾದ ಕೆಲಸ. ಪ್ರಕೃತಿಯಲ್ಲೇ ಇರುವ ಸೌರ, ಪವನ ಮತ್ತು ಜಲ ಇಂಧನ ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಇಂಗಾಲಾಮ್ಲದ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಿಕೊಳ್ಳಬಹುದು. 2030ಕ್ಕಾಗುವಾಗ ಮಾಲಿನ್ಯ ಪ್ರಮಾಣ ತಗ್ಗಿಸಲು ಕೊಡುಗೆ ನೀಡುತ್ತೇವೆ ಕಡಿಮೆ ಮಾಡುತ್ತೇವೆ ಎಂದು ಭಾರತ ಜಗತ್ತಿಗೆ ವಾಗ್ಧಾನ ನೀಡಿದೆ. ಇದು ಸಾಧ್ಯವಾಗಬೇಕಾದರೆ ಬದ್ಧತೆಯಿಂದ ನಿವಾರಣೋಪಾಯಗಳನ್ನು ಕಂಡುಕೊಳ್ಳಬೇಕು. ಹಾಗೆಂದು ನಮ್ಮದು ಸಂಪೂರ್ಣ ನಿರಾಶದಾಯಕ ಪರಿಸ್ಥಿತಿಯಲ್ಲ. 2016ರಲ್ಲಿ 3ನೇ ಸ್ಥಾನದಲ್ಲಿದ್ದ ನಾವು ಎರಡು ವರ್ಷದಲ್ಲಿ ನಾಲ್ಕನೇ ಸ್ಥಾನಕ್ಕೆ ಬಂದಿರುವುದು ಈ ನಿಟ್ಟಿನಲ್ಲಿ ತುಸು ಕೆಲಸ ಮಾಡಿದ್ದೇವೆ ಎನ್ನುವುದನ್ನು ಸೂಚಿಸುತ್ತದೆ. ಅರಣ್ಯ ಬೆಳೆಸುವಂಥ ಕ್ರಮಗಳು ಸಮರೋಪಾದಿಯಲ್ಲಿ ಸಾಗಬೇಕಿರುವುದು ಈಗಿನ ಅಗತ್ಯ.  

Advertisement
Advertisement

Udayavani is now on Telegram. Click here to join our channel and stay updated with the latest news.

Next