Advertisement

ಆನಂದಕ್ಕೆ ಆದಾಯವಷ್ಟೇ ಅಲ್ಲ ಆಶಾವಾದವೂ ಮುಖ್ಯ!

04:28 PM Mar 26, 2019 | |

“”ನಾಳೆ ನಿನಗೆ ಪಟ್ಟಾಭಿಷೇಕ” ಎಂದು ದಶರಥ ಹೇಳಿದಾಗ ಸದ್ಗುಣಧಾಮನಾದಂತಹ ಸೀತಾರಾಮ ಹಿಗ್ಗಲಿಲ್ಲ. “”ಇಂದೇ ನೀನು ವನವಾಸಕ್ಕೆ ಹೊರಡು” ಎಂದು ಕೈಕೇಯಿ ಹೇಳಿದಾಗ ಆತ ಕುಗ್ಗಲಿಲ್ಲ. ವಿಭಿನ್ನವಾದ ಸಂದರ್ಭ ಸಂಗತಿಗಳನ್ನು ಸಮಾನ ಮನಸ್ಕರಾಗಿ ಸ್ವೀಕರಿಸಬೇಕು ಎಂಬುದು ಇದರ ಮರ್ಮ. ಪುರುಷ ಪ್ರಯತ್ನದಿಂದ, ಕ್ರಿಯಾಶೀಲತೆಯಿಂದ, ಛಲದಿಂದ ನಿರಂತರ ಪ್ರಯತ್ನದಿಂದ ಆಶಾವಾದವೆಂಬ ನೀತಿಯನ್ನು ಪಾಲಿಸುತ್ತಾ ಸಾರ್ಥಕ ಬದುಕನ್ನು ಬದುಕಿ ತೋರಿಸಬಹುದು.

Advertisement

ಜೀವನವೆಂಬ ಚಿತ್ರ ವಿಚಿತ್ರವಾದ, ಡೋಲಾಯಮಾನವಾದ ಪಯಣವನ್ನು ಸುಖಕರವಾಗಿ ಹಾಗೂ ಸುರಕ್ಷಿತವಾಗಿ ಪೂರೈಸಲು ಅನೇಕಾನೇಕ ಅತ್ಯುತ್ತಮ ಜೀವನ ಮೌಲ್ಯಗಳ ಅಗತ್ಯ ಇದೆ. ಅಂತಹ ಜೀವನ ಸಾರ್ಥಕಗಳ ಪಂಕ್ತಿಯಲ್ಲಿ ಆಶಾವಾದಿತ್ವಕ್ಕೆ ಅಗ್ರಸ್ಥಾನ, ಪ್ರಾಥಮ್ಯ. ಆಶಾವಾದ ಮಾನವನ ಜೀವಗುಣ. ಇದು ನಮ್ಮನ್ನು ಕತ್ತಲಿನಿಂದ ಬೆಳಕಿನ ಕಡೆಗೆ ಕರೆದೊಯ್ಯವ ಪ್ರಮುಖ ಪ್ರಸಾಧನ.

”ಆಶಾವಾದದಿಂದ ಪರ್ವತವನ್ನೂ ಅಣುಗಳನ್ನಾಗಿ ಪುಡಿ ಮಾಡಬಹುದು” ಅಂದರು ಪ್ರಭಾವಶಾಲಿಯಾದ ತತ್ವಜ್ಞಾನಿ ವಿಶ್ವಮಾನವ ವಿವೇಕಾನಂದರು. ಆಶಾವಾದಿತ್ವವನ್ನೇ ಪ್ರಧಾನವಾಗಿರಿಸಿಕೊಂಡು ನಮ್ಮಲ್ಲಿರುವ ತೇಜೋಮಯ ಕ್ಷಾತ್ರ ತೇಜಸ್ಸು ಮತ್ತು ಕೌಶಲ್ಯ ಪೂರ್ಣ ಸಂಘಟನೆಯ ದರ್ಶನವನ್ನು ನೀಡಿದರು ಆದರ್ಶ ನೇತಾರ ಸುಭಾಷ್‌ ಚಂದ್ರ ಬೋಸರು. ”ನಿರಾಶಾವಾದಿ ಎಲ್ಲ ಅವಕಾಶದಲ್ಲೂ ಕಷ್ಟವನ್ನೇ ಕಾಣುತ್ತಾನೆ, ಆಶಾವಾದಿ ಎಲ್ಲ ಕಷ್ಟದಲ್ಲೂ ಅವಕಾಶವನ್ನೇ ನೋಡುತ್ತಾನೆ” ಎಂಬುದು ವಿನ್ಸ್‌ಟನ್‌ ಚರ್ಚಿಲ್ಲರ ನಿರಂತರ ಸತ್ಯನುಡಿ. ಬದುಕಿನಲ್ಲಿ ಉದ್ಭವಿಸಿದ ಕಲ್ಪನಾತೀತವಾದ ಎಡರು ತೊಡರುಗಳನ್ನು ಆಶಾವಾದಿಯಾಗಿ ಎದುರಿಸಿ ಜಗಮಾನ್ಯರಾದ ಥಾಮಸ್‌ ಆಲ್ಪಾ ಎಡಿಸನ್‌ರ ಕಥೆ ಅತ್ಯಂತ ರಮ್ಯ.

ಬಾಳಿನಲ್ಲಿ ಶಾಂತಿಯಿಂದ ಸಮಾಧಾನದಿಂದ ನೆಮ್ಮದಿಯಿಂದ ಹಾಗೂ ಆನಂದದಿಂದ ಜೀವಿಸಲು ಬೇಕಾಗಿರುವುದು ಕೇವಲ ಆದಾಯವಲ್ಲ, ಆದಾಯದ ಜೊತೆಗೆ ಅದಮ್ಯ ಆಶಾವಾದ ಅಗತ್ಯವಾಗಿ ಬೇಕು. ಮನುಷ್ಯ ಆಶಾವಾದಿಯಾಗಿ ಜೀವಿಸಬೇಕೇ ಹೊರತು ನಿರಾಶಾವಾದಿ ಯಾಗಲ.್ಲ ಬಾಳಿನ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಿ ಚಿಂತಿಸಿ ಮುನ್ನಡೆದಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ. ಚೆನ್ನಾಗಿಲ್ಲದ್ದನ್ನು ಚೆಂದ ಮಾಡಿಕೊಂಡು ಬದುಕುವುದು ಆಶಾಪೂರ್ವಕ ಮನೋಭಾವದಿಂದ ಮಾತ್ರ ಶಕ್ಯ.

ಆಶಾವಾದ ಎಂಬುದು ಸ್ಥಿರಾಸ್ತಿ. ಸಾಧನೆಯ ದಾರಿಯಲ್ಲಿ ಇದು ಒಂದು ಪ್ರಮುಖ ಘಟಕ. ಶುಭ ಪ್ರತೀಕ್ಷೆ ಎಂಬುದೊಂದು ಮನೋಭಾವ. ಜೀವನದಲ್ಲಿ ಕಂಡ ಸಕಲ ಕನಸುಗಳು ನನಸಾಗುವುದಿಲ್ಲ ಅನ್ನುವ ಮಾತು ಸಮುದ್ರದಲ್ಲಿ ಎದ್ದ ಎಲ್ಲಾ ಅಲೆಗಳು ದಡ ಸೇರುವುದಿಲ್ಲ ಎಂಬಷ್ಟೇ ಖಚಿತ. ಅಂದಾಗ ಬಾಳಿನಲ್ಲಿ ಉತ್ಸಾಹಗುಂದದೆ ನಿರಾಶೆಗಳೆಂಬ ಕೆಸರಿನಲ್ಲಿಯೇ ಆಶಾವಾದವೆಂಬ ಕಮಲ ಅರಳುವುದು ಎಂಬ ವಾಸ್ತವಿಕೆಯನ್ನು ನಂಬುವುದು ಜ್ಞಾನಿಗಳ ಲಕ್ಷಣ. ಬದುಕಿನ ಪಥದಲ್ಲಿ ತಲೆದೋರುವ ಕಷ್ಟ ಕಾರ್ಪಣ್ಯಗಳನ್ನು, ಘರ್ಷಣೆಗಳನ್ನು ಧೈರ್ಯದಿಂದ ಎದುರಿಸಿ ಕುಗ್ಗದೆ ಮುಂದಡಿಯಿರಿಸುವುದು ಬುದ್ಧಿವಂತರ ಸ್ವಭಾವ.

Advertisement

ಸದಾ ಆಶಾವಾದಿಯಾಗಿರುವುದು ಕಠಿಣವೇ?
ದಿನ ನಿತ್ಯ ಜನಿಸುವ ಭೀಭತ್ಸ ಭಯಂಕರ ಘಟನಾವಳಿಗಳು ಭಸ್ಮಾಸುರನ ಹಾಗೆ ಅಟ್ಟಹಾಸ ಮಾಡುವಾಗ ಆಶಾವಾದಿಯಾಗಿ ಜೀವಿಸುವುದು ಸಾಧ್ಯವೇ? ಎಂಬ ಪ್ರಶ್ನೆ ನಮ್ಮನ್ನು ಕಾಡುವುದು ಆಶ್ಚರ್ಯಕರವಲ್ಲ. ಈ ಪ್ರಶ್ನೆ ನಿರಂತರ ಆಶಾವಾದಿತ್ವವನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಶಕ್ಯವಾದುದು ಎಂಬ ಭಾವನೆಯನ್ನು ಮನದಲ್ಲಿ ಮೂಡಿಸುತ್ತದೆ. ಕಷ್ಟಬಂದಾಗ ಕುಗ್ಗಿ ಮೌನವಾಗಿ ನಿರಾಶಾವಾದಿಯಾಗುವುದು ಸಾಮಾನ್ಯರ ಪ್ರವೃತ್ತಿ. ಸಾಧನೆಯ ರಸ್ತೆಯಲ್ಲಿ ತೋರುವ ಮುಳ್ಳೇ ನಿರಾಶಾವಾದ. ಅದೊಂದು ಬೃಹತ್ತಾದ ಕಂಟಕ. ಅದೊಂದು ಮನಸ್ಸಿಗೆ ಮಂಕು ಹಿಡಿಸುವ ರೋಗಾಣು, ನಂಜು ತುಣುಕು. ಕಾರ್ಯಸಾಧಕರ ವ್ಯಕ್ತಿತ್ವಕ್ಕೆ ಕೀಳರಿಮೆಯನ್ನು ತಂದಿರಿಸುವ ಸಾಮರ್ಥ್ಯ ನಿರಾಶಾವಾದಕ್ಕಿದೆ. ಬದುಕುವಿಕೆಯ ಪ್ರತಿಕ್ಷಣವೂ ನಿರಾಶಾವಾದಿಯ ಪಾಲಿಗೆ ಅಸಹನೀಯ, ಅರ್ಥಹೀನ. ಹಾಗಿದ್ದರೆ ಇದಕ್ಕಿಲ್ಲವೇ ಪರಿಹಾರ?! ಇದಕ್ಕಿಲ್ಲವೇ ಪರಿಮಾರ್ಜನೆ!? ಖಂಡಿತಾ ಇದೆ.

ಎಂತಹುದೇ ವಿಲೋಮವಾದ ವ್ಯತಿರಿಕ್ತವಾದ ವಿಲಕ್ಷಣವಾದ ಸಂದರ್ಭ ಸನ್ನಿವೇಶಗಳಲ್ಲಿ ಹೆದರದ, ಮಾನಸಿಕ ಸಮತೋಲನವನ್ನು ಕಳೆದುಕೊಳ್ಳದ, ಸದಾ ರಾರಾಜಿಸುವ ವ್ಯಕ್ತಿತ್ವ ಪ್ರಶಂಸೆಗೆ ಅರ್ಹ. ಅದು ಆಶಾವಾದದ ಪ್ರಪ್ರಥಮ ಕುರುಹು. ಮಾನಸದಲ್ಲಿ ಋಣಾತ್ಮಕ, ನಿಷೇಧಾರ್ಥಕ, ನಿಷೇಧಾತ್ಮಕ ಯೋಚನೆಗಳು ಉದಯಿಸಿದಾಗ ಅದಕ್ಕೆ ತದ್ವಿರುದ್ಧವಾದ ಅಂದರೆ ಧನಾತ್ಮಕ, ಶ್ಲಾಘ್ಯ ವಿಚಾರಗಳತ್ತ ಬಲವಂತವಾಗಿ ಚಿತ್ತವನ್ನು ಸಾಗಿಸಬೇಕು. ವಿವಿಧ ರಚನಾತ್ಮಕ ಕ್ರಿಯೆಗಳಲ್ಲಿ ಸಮಯವನ್ನು ಕಳೆದು, ಬದುಕಿನ ಸವಿ ಘಳಿಗೆಗಳನ್ನು ಆಸ್ವಾದಿಸಿ, ಪ್ರಫ‌ುಲ್ಲಿತರಾಗಿ ಜೀವಿಸಬೇಕು. ಯಾವುದೇ ಪರಿಸ್ಥಿತಿಯಲ್ಲಿ ನಿರಾಶಾದಾಯಕವಾದ ಚಿಂತನೆಗಳಿಂದ ಲಾಭವಿಲ್ಲ. ಎದೆಗುಂದದೆ ಪರಾಭವದ ಕಾರಣಗಳನ್ನು ವಿಶ್ಲೇಷಿಸಿ ಇರುಳಿನ ನಡುವೆ ಬೆಳಕು ಕಾಣುವಾತನೇ ಆಶಾವಾದಿ. ಸೋಲು ಗೆಲುವಿನ ಸೋಪಾನ ಎನ್ನುವುದು ಆತನ ಅಭಿಪ್ರಾಯ. ಬದುಕಿನಲ್ಲಿ ಸೋಲು, ನೋವುಗಳೆಂಬುದು ತಿರುವು ಮಾತ್ರ, ಅಂತ್ಯವಲ್ಲ ಎಂಬುದು ಅವನ ಅಭಿಮತ. ಕಡಲೂ ನಿನ್ನದೇ ಹಡಗೂ ನಿನ್ನದೇ ಮುಳುಗದಿರಲಿ ಬದುಕು ಎಂಬ ದೃಢ ವಿಚಾರ ಸರಣಿಗಳೊಂದಿಗೆ ಬಾಳುವ ವ್ಯಕ್ತಿ ಆತ.

ಕುಗ್ಗದಿರು ಬಗ್ಗದಿರು
ಬದುಕಿನಲ್ಲಿ ಯಾವ ರೀತಿಯಲ್ಲಿ ಪೆಟ್ಟು ಬಿದ್ದರೂ ಕುಂದದೆ ಕುಗ್ಗದೆ ನಮಗಿಂತ ಆರ್ತರಾದವರ ಸ್ಥಿತಿ-ಗತಿಗಳನ್ನು ಜ್ಞಾಪಿಸಿಕೊಂಡು ಸಮಾಧಾನಿಗಳಾಗಬೇಕು. ಬ್ರಹ್ಮ ಬರೆದ ಬರಹವನ್ನು ಬಯ್ಯದೆ, ಬಂದ ಭಾಗ್ಯವನ್ನು ನೆನೆಸಿಕೊಂಡು ಆನಂದದಿಂದ ಬಾಳಬೇಕು. ”ನಡೆಮುಂದೆ ನಡೆಮುಂದೆ ನುಗ್ಗಿ ನಡೆಮುಂದೆ ಕುಗ್ಗದೆಯೇ ಬಗ್ಗದೆಯೇ ಹಿಗ್ಗಿ ನಡೆಮುಂದೆ” ಎಂಬ ಮಂತ್ರಘೋಷವನ್ನು ನಮ್ಮದಾಗಿಸಿಕೊಳ್ಳಬೇಕು. ಇಂತಹ ನಿಲುವನ್ನು ಹೊಂದಿರುವವರನ್ನು ಯಾರೂ ಕಾಡಿಸಲಾಗದು, ಪೀಡಿಸಲಾಗದು. ಪ್ರತಿಯೊಬ್ಬ ಜೀವಿ ಆಶಾವಾದವೆಂಬ ಆಯುಧವನ್ನು ಧರಿಸಿ ಸಮರ ಗೆಲ್ಲುವ ಸರದಾರನಂತೆ ಮೆರೆಯುವುದು ಅತಿ ಹಿತಕರ.

”ನಾಳೆ ನಿನಗೆ ಪಟ್ಟಾಭಿಷೇಕ” ಎಂದು ದಶರಥ ಹೇಳಿದಾಗ ಸದ್ಗುಣಧಾಮನಾದಂತಹ ಸೀತಾರಾಮ ಹಿಗ್ಗಲಿಲ್ಲ. ”ಇಂದೇ ನೀನು ವನವಾಸಕ್ಕೆ ಹೊರಡು” ಎಂದು ಕೈಕೇಯಿ ಹೇಳಿದಾಗ ಆತ ಕುಗ್ಗಲಿಲ್ಲ. ವಿಭಿನ್ನವಾದ ಸಂದರ್ಭ ಸಂಗತಿಗಳನ್ನು ಸಮಾನ ಮನಸ್ಕರಾಗಿ ಸ್ವೀಕರಿಸಬೇಕು ಎಂಬುದು ಇದರ ಮರ್ಮ. ದಿನನಿತ್ಯದ ಕಷ್ಟಗಳಿಂದ ಕುಗ್ಗದೆ, ಬಗ್ಗದೆ ಸಂತಸದಿಂದ ಬಾಳುತ್ತಾ ನಗೆ ಹಂಚುವ ಪ್ರಯತ್ನ ಮಾಡಬೇಕು. ಪುರುಷ ಪ್ರಯತ್ನದಿಂದ, ಕ್ರಿಯಾಶೀಲತೆಯಿಂದ, ಛಲದಿಂದ ನಿರಂತರ ಪ್ರಯತ್ನದಿಂದ ಆಶಾವಾದವೆಂಬ ನೀತಿಯನ್ನು ಪಾಲಿಸುತ್ತಾ ಸಾರ್ಥಕ ಬದುಕನ್ನು ಬದುಕಿ ತೋರಿಸಬಹುದು. ಒಟ್ಟಿನಲ್ಲಿ ಆಶಾವಾದ ಎಂಬುದು ಒಂದು ಮಾನಸಿಕ ಸ್ಥಿತಿ. ಇಂತಹ ತತ್ತ ಬದ್ಧವಾದ ಬಾಳಿಗೆ ಎಂದೆಂದಿಗೂ ಒಂದು ನೆಲೆಯಿದೆ, ಬೆಲೆಯಿದೆ. ಈ ಆಶಾವಾದದ ಸಿದ್ಧಾಂತಗಳ ನೆಲೆಗಟ್ಟಿನ ಮೇಲೆ ಮಾದರಿಯಾದ ಬದುಕನ್ನು ರೂಪಿಸಿಕೊಂಡು, ನಿರಶಾರಾಗದೆ ಜೀವಿಸುವವರು ಸದಾ ಸುಖೀಗಳು ಎಂಬುದು ಜಗದ ಸಕಲ ಪಂಡಿತರ ಅಭಿಪ್ರಾಯ.

 ಶಿವಾನಂದ ಪಂಡಿತ, ಗೋವಾ

Advertisement

Udayavani is now on Telegram. Click here to join our channel and stay updated with the latest news.

Next