Advertisement

ಕಟಪಾಡಿ: ಗಮನ ಬೇರಡೆ ಸೆಳೆದು ಸೊತ್ತು ಎಗರಿಸಿದ ಚೋರರು

12:03 AM Dec 10, 2021 | Team Udayavani |

ಕಾಪು: ಎರಡು ಪ್ರತ್ಯೇಕ ಘಟನೆಗಳಲ್ಲಿ ಗಮನ ಬೇರೆಡೆ ಸೆಳೆದು ಅಪರಿಚಿತರು ಚಿನ್ನಾಭರಣ ಮತ್ತು ಮೊಬೈಲ್‌ಅನ್ನು ಎಗರಿಸಿ ಪರಾರಿಯಾದ ಘಟನೆ ಬುಧವಾರ ಕಟಪಾಡಿಯಲ್ಲಿ ನಡೆದಿದೆ.

Advertisement

ಕಟಪಾಡಿ ಏಣಗುಡ್ಡೆ ಗ್ರಾಮದ ಮುಸ್ಲಿಂ ಸಮುದಾಯದ ಮನೆಯೊಂದಕ್ಕೆ ಆಗಮಿಸಿದ ಮೂವರು ನಕಲಿ ಫಕೀರರು ಮಹಿಳೆ ಮೇಲೆ ಧೂಪ ಮಿಶ್ರಿತ ಹೊಗೆಯನ್ನು ಪ್ರಯೋಗಿಸಿ ಅವರಿಂದ ಚಿನ್ನಾಭರಣವನ್ನು ಎಗರಿಸಿ ಪರಾರಿಯಾಗಿದ್ದರೆ, ಮತ್ತೂಂದು ಘಟನೆಯಲ್ಲಿ ಫರ್ಟಿಲೈಸರ್‌ ಅಂಗಡಿಗೆ ಭೇಟಿ ನೀಡಿದ ಅಪರಿಚಿತ ನಂಬಿಕನಂತೆ ನಟಿಸಿ, ಅಂಗಡಿ ಮಾಲಕನ ಮೊಬೈಲ್‌ ಎಗರಿಸಿ ಪರಾರಿಯಾಗಿದ್ದು, ಎರಡೂ ಘಟನೆಗಳು ಕಟಪಾಡಿ ಪರಿಸರದ ಜನರನ್ನು ದಿಗ್ಬ್ರಾಂತರನ್ನಾಗಿಸಿದೆ.

ಮೊದಲಿಗೆ ಕಟಪಾಡಿಯ ಮನೆಯೊಂದಕ್ಕೆ ತೆರಳಿದ ಮೂರು ಮಂದಿ ನಕಲಿ ಪಕೀರ ವೇಷಧಾರಿಗಳು ಮನೆಯ ಸುತ್ತಲೂ ಓಡಾಡಿ ಮನೆಮಂದಿಯನ್ನು ಹಾಡಿನ ಮೂಲಕ ಹೊರಗೆ ಬರುವಂತೆ ಮಾಡಿದ್ದು, ಹೊರಗೆ ಬಂದ ಮಹಿಳೆಯ ಮೇಲೆ ಬೂದಿ ಮಿಶ್ರಿತ ಹೊಗೆಯನ್ನು ಪ್ರಯೋಗಿಸಿದ್ದರು. ಈ ಸಂದರ್ಭ ಮಹಿಳೆ ತನ್ನ ಮೈಮೇಲಿನ ಚಿನ್ನಾಭರಣ ಮತ್ತು ಮನೆಯೊಳಗಿನಿಂದ ನಗದನ್ನು ತಂದು ಕೊಟ್ಟು ಪಕೀರರ ಜೋಳಿಗೆಯನ್ನು ತುಂಬಿಸಿದ್ದರು. ಮಹಿಳೆಯಿಂದ ಚಿನ್ನಾಭರಣ ಮತ್ತು ನಗದು ಪಡೆದ ಬಳಿಕ ಪಕೀರರು ಸ್ಥಳದಿಂದ ಕಾಲ್ಕಿತ್ತಿದ್ದು, ಮಹಿಳೆ ಎಚ್ಚರಗೊಂಡಾಗ ತಾನು ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ವೇಷಧಾರಿ ನಕಲಿ ಪಕೀರರ ಜೋಳಿಗೆಯನ್ನು ತಾನಾಗಿಯೇ ತುಂಬಿದ ಮಹಿಳೆ ತನ್ನ ಮೂಢತನದ ಬಗ್ಗೆ ತಾನೇ ಹಳಿದುಕೊಳ್ಳುವಂತಾಗಿದೆ. ಮನೆಗೆ ಬಂದ ಪಕೀರರು ಮನೆಯಂಗಳದಲ್ಲಿ ಓಡಾಡಿದ ಮತ್ತು ಪೇಟೆಯಲ್ಲಿ ನಡೆದಾಡಿದ ಫ‌ುಟೇಜ್‌ಗಳು ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು, ಆ ವೀಡಿಯೋ ಕ್ಲಿಪ್‌ಗಳು ಎಲ್ಲೆಡೆ ವೈರಲ್‌ ಆಗಿದೆ.

ನಂಬಿಕಸ್ಥನಂತೆ ವ್ಯವಹಾರ:

ಮತ್ತೂಂದು ಘಟನೆಯಲ್ಲಿ ಆದಿ ಶಕ್ತಿ ಫರ್ಟಿಲೈಸರ್‌ ಅಂಗಡಿಗೆ ಬಂದ ವ್ಯಕ್ತಿಯೋರ್ವ ಮಾಲಕರ ಜೊತೆಗೆ ನಂಬಿಕಸ್ಥನಂತೆ ನಟಿಸಿ, ಅಂಗಡಿಯಲ್ಲಿ 1,000 ರೂ.ಗೂ ಮಿಕ್ಕಿದ ವ್ಯಾಪಾರ ನಡೆಸಿದ್ದ. ಅನಂತರ ಮಳಿಗೆಯ ಮಾಲಕರ ಜತೆಗೆ ಪರಿಚಿತನಂತೆ ನಟಿಸಿ ನಂಬಿಕೆ ಬರಿಸಿದ್ದು, ತನ್ನ ವಾಟ್ಸ್‌ ಆ್ಯಪ್‌ ನಂಬರ್‌ ಅಪ್‌ಡೇಟ್‌ ಆಗಿದೆ. ಮೆಡಿಕಲ್‌ನಿಂದ ಬೇರೊಂದು ಮದ್ದು ತರಲು ಇದೆ. ನಿಮ್ಮ ವಾಟ್ಸ್‌ ಆ್ಯಪ್‌ ನಂಬರ್‌ಗೆ ಅದರ ಸ್ಲಿಪ್‌ ಕಳುಹಿಸಲು ಕಳುಹಿಸಲು ತಿಳಿಸುತ್ತೇನೆ ಎಂದು ಹೇಳಿದ್ದನು. ಇದನ್ನು ಸತ್ಯವೆಂದೇ ನಂಬಿದ ಅಂಗಡಿಯ ಮಾಲಕ ಉದಯ ಶೆಟ್ಟಿ ತನ್ನ ವಾಟ್ಸ್‌ ಆ್ಯಪ್‌  ನಂಬರ್‌ಅನ್ನು ಆತನಿಗೆ ನೀಡಿದ್ದು, ಆತ ಅದಕ್ಕೆ ಔಷಧದ ಚೀಟಿಯನ್ನೂ ತರಿಸಿಕೊಂಡಿದ್ದ. ಬಳಿಕ ಅಂಗಡಿ ಮಾಲಕರಿಂದ ಮೊಬೈಲ್‌ ಪಡೆದು ಮೆಡಿಕಲ್‌ಗೆ ಹೋದ ವ್ಯಕ್ತಿ ದಿಢೀರ್‌ ಕಣ್ಮರೆಯಾಗಿದ್ದು, ಆಗಷ್ಟೇ ತಾನು ಮೋಸ ಹೋಗಿರುವ ವಿಚಾರ ಅಂಗಡಿಯ ಮಾಲಕರಿಗೆ ತಿಳಿದುಬಂದಿದೆ. ಅವರು ಎಚ್ಚೆತ್ತುಕೊಳ್ಳುವಷ್ಟರಲ್ಲೇ 18 ಸಾವಿರ ರೂ. ಮೌಲ್ಯದ ಮೊಬೈಲ್‌ ಅನ್ನು ಪಡೆದುಕೊಂಡಿದ್ದ ಆತ ಪರಾರಿಯಾಗಿದ್ದ.

Advertisement

ಎರಡೂ ಘಟನೆಗಳು ಒಂದೇ ದಿನ, ಒಂದೇ ಸಮಯದಲ್ಲಿ ಕಟಪಾಡಿಯಲ್ಲಿ ನಡೆದಿದ್ದು ಚಿನ್ನಾಭರಣ, ನಗದು ಮತ್ತು ಮೊಬೈಲ್‌ ದೋಚಿ ಪರಾರಿಯಾದವರಿಗಾಗಿ ಸ್ಥಳೀಯರು ಮತ್ತು ಪೊಲೀಸರು ತೀವ್ರ ಹುಡುಕಾಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸರಿಗೆ ದೂರು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next