Advertisement

ನರೇಗಾಕ್ಕೆ ಅಸಮರ್ಪಕ ಅನುದಾನ; ಪ್ರಗತಿಗೆ ಹಿನ್ನಡೆ

01:31 AM Feb 13, 2019 | |

ವಿಧಾನಪರಿಷತ್‌: “ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಪ್ರಗತಿಯಲ್ಲಿ ರಾಜ್ಯಕ್ಕೆ ಹಿನ್ನಡೆ ಆಗುತ್ತಿದ್ದು, ಇದಕ್ಕೆ ಕೇಂದ್ರ ಸರ್ಕಾರ ಸಮರ್ಪಕ ಅನುದಾನ ನೀಡದಿರುವುದೇ ಕಾರಣ’ ಎಂದು ಗ್ರಾಮೀಣಾಭಿವೃದ್ಧಿ   ಸಚಿವ ಕೃಷ್ಣ ಬೈರೇಗೌಡ ನೀಡಿದ ಹೇಳಿಕೆಯು ವಿಧಾನ ಪರಿಷತ್ತಿನ ಕಲಾಪದಲ್ಲಿ ಮಂಗಳವಾರ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

Advertisement

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ ಸದಸ್ಯ ಆರ್‌. ಪ್ರಸನ್ನ ಕುಮಾರ್‌, ನರೇಗಾ ಯೋಜನೆ ಅಡಿ ಜಾಬ್‌ ಕಾರ್ಡ್‌ ಹೊಂದಿರುವ ಎಲ್ಲರಿಗೂ ಉದ್ಯೋಗ ನೀಡಲಾಗುತ್ತಿಲ್ಲ. ಜಾಬ್‌ ಕಾರ್ಡ್‌ ಹೊಂದಿರುವ ಗ್ರಾಪಂ ಸದಸ್ಯರಿಗೂ ಶಿವಮೊಗ್ಗದಲ್ಲಿ ಉದ್ಯೋಗ ನೀಡುವುದನ್ನು ಸರ್ಕಾರ ನಿಲ್ಲಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ ಈ ವರ್ಷ 8.5 ಕೋಟಿ ಮಾನವ ದಿನಗಳ ಸೃಜನೆಯ ಗುರಿ ಇದೆ. ಇದಕ್ಕಾಗಿ 3,739 ಕೋಟಿ ರೂ. ಅನುದಾನಕ್ಕೆ ಕೇಂದ್ರದ ಅನುಮೋದನೆ ದೊರಕಿದೆ. ಆದರೆ, ಕೇಂದ್ರದಿಂದ ಹಣ ಪಾವತಿ ಆಗುತ್ತಿಲ್ಲ. ಇದರಿಂದ ರಾಜ್ಯಕ್ಕೆ ಹಿನ್ನಡೆಯಾಗುತ್ತಿದೆ’ ಎಂದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಪಕ್ಷದ ಸದಸ್ಯರು, “ನಿಮ್ಮ ಎಲ್ಲ ತಪ್ಪುಗಳಿಗೂ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದೀರಿ. ಸರ್ಕಾರಕ್ಕೆ ಮನವರಿಕೆ ಮಾಡುವಲ್ಲಿ ಎಡವಿದ್ದೀರಿ’ ಎಂದರು.

ಆಗ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ, ಕೇವಲ ರಾಜ್ಯದಲ್ಲಿ ಅಲ್ಲ; ದೇಶಾದ್ಯಂತ 12,713 ಕೋಟಿ ರೂ.ಗಳನ್ನು ಕೇಂದ್ರ ಬಾಕಿ ಉಳಿಸಿಕೊಂಡಿದ್ದು, ಇದರಲ್ಲಿ ಕರ್ನಾಟಕಕ್ಕೆ 2,049 ಕೋಟಿ ರೂ. ಬಿಡುಗಡೆ ಆಗಬೇಕಾಗಿದೆ. 2014ರ ಡಿಸೆಂಬರ್‌ನಿಂದ ಪಾವತಿ ಆಗಿಲ್ಲ. ಅಷ್ಟಕ್ಕೂ ಇದು ನೇರವಾಗಿ ಕೂಲಿಕಾರರ ಖಾತೆಗೆ ಜಮೆ ಆಗುತ್ತದೆ. ಅಪ್‌ಲೋಡ್‌ ಮಾಡುವವರು ಆಯಾ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಅಧಿಕಾರಿಗಳು. ಹೀಗಿರುವಾಗ, “ಕನ್ವಿನ್ಸ್‌’ ಮಾಡುವ ಪ್ರಶ್ನೆಯೇ ಬರುವುದಿಲ್ಲ ಎಂದು ತಿರುಗೇಟು ನೀಡಿದರು.

ಮಧ್ಯಪ್ರವೇಶಿಸಿದ ಸಚಿವ ಡಿ.ಕೆ. ಶಿವಕುಮಾರ್‌, ಕೂಲಿ ಮಾಡಿದವರಿಗೆ ಕೂಲಿ ಕೊಡಲಿಕ್ಕಾಗದೆ ಯಾವ ರೀತಿ ಸರ್ಕಾರ ನಡೆಸುತ್ತಿರಾ? ದುಡಿಸಿಕೊಂಡು ಕೂಲಿ ಕೊಡಲಿಕ್ಕಾಗಲ್ವೇನ್ರಿ? ಎಂದು ಕಾಲೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next