Advertisement

ಲೋಕಸಭೆಯಲ್ಲಿ 28ಕ್ಕೆ 28 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ

06:25 AM May 20, 2018 | |

ಗೌರವಾನ್ವಿತ ಸಭಾಧ್ಯಕ್ಷರೆ,ಸದಸ್ಯರೇ, 
ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ನನ್ನನ್ನು 2016ರ ಏ.14ರಂದು ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ದಿನ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದರು. 

Advertisement

ಅಂದಿನಿಂದ ಚುನಾವಣೆ ನಡೆಯುವವರೆಗೆ ನಿರಂತರವಾಗಿ 2 ವರ್ಷ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ, ಜನರ ಜ್ವಲಂತ ಸಮಸ್ಯೆಗಳನ್ನು ತಿಳಿದುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಜನರಿಗಾಗಿ ನಾನು ಪ್ರಾಣ ನೀಡಲೂ ಸಿದ್ಧ.

ನನ್ನ ಹೋರಾಟ, ಮೋದಿ ಅವರ 4 ವರ್ಷಗಳ ಜಗತ್ತೇ ಅಚ್ಚರಿಪಡುವಂತಹ ಆಡಳಿತ, ನಮ್ಮ ಐದು ವರ್ಷದ ಹಿಂದಿನ ಆಡಳಿತ, ಹಿಂದಿನ ಸರ್ಕಾರದ ವೈಫ‌ಲ್ಯತೆಗಳ ಹಿನ್ನೆಲೆಯಲ್ಲಿ ರಾಜ್ಯದ ಜನ ನಮಗೆ 104 ಕ್ಷೇತ್ರಗಳಲ್ಲಿ ಆಶೀರ್ವಾದ ಮಾಡಿದರು. 40 ಶಾಸಕರಿದ್ದವರು 104 ಶಾಸಕರಾದೆವು. ಆದರೆ,ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ ಹಿಂದೆ ಎಷ್ಟು ಶಾಸಕರಿದ್ದರೋ, ಅದಕ್ಕಿಂತ ಕಡಿಮೆ ಶಾಸಕರು ಆಯ್ಕೆಯಾದರು. ಜನಾದೇಶ ಕಾಂಗ್ರೆಸ್‌ಗೆ ಸಿಗಲಿಲ್ಲ, ಜೆಡಿಎಸ್‌ಗೂ ದಕ್ಕಲಿಲ್ಲ. ಪರಸ್ಪರ ಆರೋಪ-ಪ್ರತ್ಯಾರೋಪ, ಅವರಪ್ಪನಾಣೆ ನೀನು ಮುಖ್ಯಮಂತ್ರಿಯಾಗುವುದಿಲ್ಲ, ನಿನ್ನಪ್ಪನಾಣೆ ನೀನು ಮುಖ್ಯಮಂತ್ರಿಯಾಗುವುದಿಲ್ಲ ಎಂದು ಪದೇ ಪದೆ ಹೇಳಿದ ಈ ಮಾತುಗಳು ಜನರ ಕಿವಿಗೆ ಬಿದ್ದಿದ್ದವು. ಪರಿಣಾಮ,ಎರಡೂ ಪಕ್ಷಗಳು ಚುನಾವಣೆಯಲ್ಲಿ ಸೋತವು.

ಆದರೆ, ನಂತರ ಜನಾದೇಶದ ವಿರುದ್ಧ, ಅವಕಾಶವಾದಿ ರಾಜಕಾರಣದ ಮೂಲಕ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನ ಮಾಡಿದರು. ಆದರೂ,ದೇಶದ ಇತರ ರಾಜ್ಯಗಳಲ್ಲಿ ಹೇಗೆ ಅತಿ ದೊಡ್ಡ ಪಕ್ಷವನ್ನು ಸರ್ಕಾರ ರಚಿಸಲು ಆಹ್ವಾನಿಸಲಾಗುತ್ತದೋ ಅದೇ ರೀತಿ ಏಕೈಕ ದೊಡ್ಡ ಪಕ್ಷವಾದಂತಹ ಬಿಜೆಪಿಯನ್ನು ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡಿದರು.

ಮೋದಿ ರಾಜ್ಯಕ್ಕೆ ಭೇದ ತೋರಲಿಲ್ಲ: ಪ್ರಧಾನಿ ಮೋದಿಯವರು ಇಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದಾಗ್ಯೂ ನೆರವಿನ ವಿಷಯದಲ್ಲಿ ಭೇದ ಭಾವ ತೋರಲಿಲ್ಲ. ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಮೆಟ್ರೋ ಎಲ್ಲದಕ್ಕೂ ಏನೇನು ಹಣಕಾಸು ನೆರವು ಬೇಕೋ ಅದನ್ನು ಕೊಟ್ಟರು. ಬೇರೆ ರಾಜ್ಯಗಳಿಗಿಂತ ಹೆಚ್ಚು ಅನುದಾನವನ್ನು ಕರ್ನಾಟಕಕ್ಕೆ ಕೊಟ್ಟರು. ನನ್ನಾಸೆಯಿತ್ತು, ಅಲ್ಲಿ ಮೋದಿಯವರ ಸರ್ಕಾರ, ಇಲ್ಲಿ ಯಡಿಯೂರಪ್ಪನ ಸರ್ಕಾರ ಇದ್ದು ಹೆಚ್ಚುವರಿ ಹಣ ತಂದು ರಾಜ್ಯವನ್ನು ಈ ದೇಶದಲ್ಲಿ ಮಾದರಿ ರಾಜ್ಯವಾಗಿ ಮಾಡಬೇಕು ಎಂದು.

Advertisement

ನಾನು ರಾಜ್ಯದ ಜನರಿಗೆ ಭರವಸೆ ಕೊಡುತ್ತೇನೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ 28ಕ್ಕೆ 28 ಕ್ಷೇತ್ರಗಳನ್ನು ಗೆದ್ದು ಪ್ರಧಾನಿ ಮೋದಿಯವರಿಗೆ ಕೊಡುಗೆಯಾಗಿ ಕೊಡಲು ಸಿದ್ಧನಿದ್ದೇನೆ. ಇನ್ನು ಐದು ವರ್ಷ ಕಾಲ, ಅಥವಾ ಮಧ್ಯದಲ್ಲಿ ಯಾವಾಗ ಚುನಾವಣೆ ಬರುತ್ತದೋ ಆಗ ಕರ್ನಾಟಕ ರಾಜ್ಯದಲ್ಲಿ ಮತ್ತೂಮ್ಮೆ 150ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಗೆದ್ದು ಇಡೀ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿಸುವ ಸಂಕಲ್ಪ ಮಾಡುತ್ತಿದ್ದೇನೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.

ನನಗೆ ಅಗ್ನಿಪರೀಕ್ಷೆ: ಇವತ್ತು ನನಗೆ ಅಗ್ನಿಪರೀಕ್ಷೆ ಅಂತ ಕಾಣುತ್ತದೆ. ಹಾಗೆ ನೋಡಿದರೆ, ನನ್ನ ಜೀವನದುದ್ದಕ್ಕೂ
ಅಗ್ನಿ ಪರೀಕ್ಷೆಯೆ. 2-4 ಜನ ಶಾಸಕರಿದ್ದಾಗ, ನಾಡಿನ ಉದ್ದಗಲಕ್ಕೂ ಓಡಾಟ ಮಾಡಿದಾಗ ಯಾವತ್ತೂ ಅಗ್ನಿಪರೀಕ್ಷೆ ಎದುರಿಸಿದ್ದೇನೆ. ರಾಜ್ಯದ ಜನ ನಮಗೆ 113 ಸ್ಥಾನ ಕೊಟ್ಟಿದ್ದರೆ ರಾಜ್ಯದ ಚಿತ್ರಣ ಬದಲಾಗುತ್ತಿತ್ತು, ಅಭಿವೃದ್ಧಿಯ ಚಿತ್ರಣ ಬದಲಾಗುತ್ತಿತ್ತು. ಆದರೆ, ದೈವೇಚ್ಛೆ ಬೇರೆ ಇರಬಹುದು.

ಈ ರಾಜ್ಯದ ಜನಾದೇಶವನ್ನು ಸಾಕಾರಗೊಳಿಸಲು, ಅದರ ಮುಖಾಂತರ ಸಮಗ್ರ ಅಭಿವೃದ್ಧಿ ಮಾಡುವ ಉದ್ದೇಶದಿಂದ ಶಾಸಕರಿಗೆ ಆತ್ಮಸಾಕ್ಷಿ ಮತ ಹಾಕಿ ಎಂದು ಹೇಳಿದ್ದು ನಿಜ. ಕೆಲವರನ್ನು ಮಾತನಾಡಿಸಿದ್ದೂ ನಿಜ. ಆದರೆ, ನೀವು ಶಾಸಕರನ್ನು ಕೂಡಿ ಹಾಕಿ, ಆ ಶಾಸಕರ ಕರ್ಮಕಾಂಡ ಏನಿತ್ತೋ, ಕುಟುಂಬದವರಿಗೆ ಮೊಬೈಲ್‌ನಲ್ಲಿ ಮಾತನಾಡಲೂ ಅವಕಾಶ ಕೊಡದೆ ನೋಡಿಕೊಂಡಿರಿ. ನಿಮಗೆ ನಿಮ್ಮ ಶಾಸಕರ ಬಗ್ಗೆಯೇ ವಿಶ್ವಾಸ ಇರಲಿಲ್ಲ ಎಂಬುದನ್ನು ಪ್ರತಿ ಕ್ಷಣ ನಾನು ಗಮನಿಸಿದ್ದೇನೆ. ಇವತ್ತು ಎಲ್ಲರೂ ಇಲ್ಲಿದ್ದಾರೆ.ಅವರ ಮನೆಯವರು, ಹೆಂಡತಿ ನೆಮ್ಮದಿಯಿಂದ ಇರಬಹುದೇನೋ?

ರಾಜೀನಾಮೆ ನೀಡುತ್ತಿದ್ದೇನೆ: ಕಾಂಗ್ರೆಸ್‌ನ ಕುತಂತ್ರದಿಂದ ಜನಾದೇಶಕ್ಕೆ, ಪ್ರಜಾತಂತ್ರ ವ್ಯವಸ್ಥೆಗೆ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ವಿಶ್ವಾಸಮತ ಪ್ರಸ್ತಾಪ ಮುಂದುವರಿಸದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ. ಈ ಪ್ರಜಾತಂತ್ರ ವಿರೋಧಿ ವಿರುದ್ಧ ರಾಜ್ಯದ ಜನರ ಮುಂದೆ ಹೋಗುತ್ತೇನೆ. ಇನ್ನೂ ಕೈಕಾಲು ಗಟ್ಟಿ ಇದೆ. 10 ವರ್ಷ ಕಾಲ ರಾಜ್ಯದ ಉದ್ದಗಲಕ್ಕೂ ಓಡಾಟ ಮಾಡಿ ಈ ರಾಜ್ಯವನ್ನು ಮಾದರಿ ರಾಜ್ಯ ಮಾಡಲು ಪ್ರಯತ್ನ ಮಾಡುತ್ತೇನೆ. ಇಲ್ಲಿಂದ ನೇರವಾಗಿ ರಾಜ್ಯಪಾಲರ ಬಳಿ ಹೋಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ.

ಹೋರಾಟದ ಬದುಕು ನನ್ನದು
ಕಳೆದ 5 ವರ್ಷದಲ್ಲಿ ಅನೇಕ ಏಳು, ಬೀಳುಗಳನ್ನು ಕಂಡಿದ್ದೇನೆ. ರೈತರಿಗೆ ಅನ್ಯಾಯವಾದಾಗ, ರೈತರು ಕಣ್ಣೀರು ಹಾಕಿದಾಗ ಹೋರಾಟ ಮಾಡಿದೆ. ಈ ನಾಡಿಗೆ ಅನ್ನ ಕೊಡುವ ರೈತರು, ಕೃಷಿ ಕಾರ್ಮಿಕರು ಎದುರಿಸುತ್ತಿರುವ
ಕುಡಿಯುವ ನೀರಿನ ಸಮಸ್ಯೆ, ನೀರಾವರಿ ಅನನುಕೂಲ, ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗದೆ ಇರುವಂತದ್ದರ
ಪರಿಣಾಮ 3,750 ರೈತರು ಆತ್ಮಹತ್ಯೆ ಮಾಡಿಕೊಂಡಂತಹ ವಿಷಯ ದು:ಖ ತರುತ್ತಿವೆ. ಇಂತಹ ನೊಂದ, ಬೆಂದ ಈ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ನೀರಾವರಿ ಯೋಜನೆಗಳಿಗೆಆದ್ಯತೆ ಕೊಡಬೇಕು ಅಂದುಕೊಂಡಿದ್ದೆ.

ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿನ ರೈತರ, ನೇಕಾರರ ಒಂದು ಲಕ್ಷ ರೂ.ವರೆಗಿನ ಸಾಲ ಮನ್ನಾ
ಮಾಡಬೇಕು. ಒಂದೂವರೆ ಲಕ್ಷ ಕೋಟಿ ರೂ. ಒದಗಿಸಿ ನೀರಾವರಿಗೆ ಆದ್ಯತೆ ಕೊಡಬೇಕು. ಪರಿಶಿಷ್ಟ ಜಾತಿ,
ವರ್ಗ, ಹಿಂದುಳಿದವರು ನೆಮ್ಮದಿಯಿಂದ ಬದುಕುವಂತೆ ಮಾಡಬೇಕು ಎಂದುಕೊಂಡಿದ್ದೆ.

ಪ್ರಧಾನಿ ಮೋದಿಯವರ ಆಶಯದಂತೆ ಕರ್ನಾಟಕದಲ್ಲಿ ಆರು ನದಿಗಳ ಜೋಡಣೆಗೆ ಸಹಕರಿಸಬೇಕು ಎಂದುಕೊಂಡಿದ್ದೆ. ಇದಕ್ಕಾಗಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next