Advertisement

ಸಂಸ್ಕೃತದಲ್ಲಿ ವ್ಯವಹರಿಸಬಹುದು ಎಂಬ ಭಾವನೆ ಬಲಿತಿದೆ

10:15 PM Jan 28, 2017 | |

ಈ ಸಾಲಿನ ಪದ್ಮಶ್ರೀ ಪುರಸ್ಕೃತ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಡೆಕ್ಕಿಲ ಮನೆಯ ಚಕ್ರಕೋಡಿ ಮೂಡಂಬೈಲು ಕೃಷ್ಣ ಶಾಸ್ತ್ರಿ”ಚಮೂ ಕೃಷ್ಣ ಶಾಸ್ತ್ರಿ ಎಂದೇ ಖ್ಯಾತರು. ಬಹುಭಾಷಾ ಪರಿಣತರಾದ ಕೃಷ್ಣ ಶಾಸ್ತ್ರಿಗಳು ಸಂಸ್ಕೃತ ಭಾಷೆಯ ಬಳಕೆ ಮತ್ತು ಪ್ರಚಾರಕ್ಕಾಗಿ ಹೊಸ ಹಾದಿಯನ್ನೇ ಹಿಡಿದ ಶಿಕ್ಷಣತಜ್ಞರು. ಸಂಸ್ಕೃತ ಕಲಿಕೆಯ ಮಾರ್ಗವನ್ನು ಬದಲಿಸಿ, ಕ್ರಿಯಾರೂಪದ ಸಂಭಾಷಣೆಯ ಭಾಷೆಯಾಗಿ ಕಲಿಸುವ ಅಭಿಯಾನವನ್ನು ಚಮೂ ಅವರು ಯಶಸ್ವಿಯಾಗಿ ರೂಪಿಸಿ ಮುನ್ನಡೆಸಿದ್ದಾರೆ. ಉದಯವಾಣಿಗಾಗಿ ಲಕ್ಷ್ಮೀ ಮಚ್ಚಿನ ಜತೆಗೆ ಕೃಷ್ಣ ಶಾಸ್ತ್ರಿಗಳು ನಡೆಸಿದ ಸಂವಾದದ ಆಯ್ದ ಭಾಗ ಇಲ್ಲಿದೆ.

Advertisement

“ಸಂಸ್ಕೃತ ಭಾಷೆ ಆಧುನಿಕ ಕಾಲಘಟ್ಟಕ್ಕೆ ಸಂಗತಗೊಳ್ಳಬೇಕಿದೆ’ ಎನ್ನುತ್ತೀರಿ. ಸ್ವಲ್ಪ ವಿವರಿಸುವಿರಾ?
    ನನ್ನ ಪ್ರಕಾರ ಮೂರು ರೀತಿಯಲ್ಲಿ ಮಾಡಬಹುದು. ಪ್ರಾಚೀನ ಭಾರತದ ಅಪಾರ ಜ್ಞಾನಭಂಢಾರ ಸಂಸ್ಕೃತದಲ್ಲಿದೆ. ಗಣಿತ ಶಾಸ್ತ್ರ, ರಸಾಯನ ಶಾಸ್ತ್ರ, ವನಸ್ಪತಿ, ಅರ್ಥಶಾಸ್ತ್ರ, ಮನಶಾÏಸ್ತ್ರ, ಕೃಷಿ, ವೈದ್ಯಕೀಯ -ಹೀಗೆ ಜ್ಞಾನದ ಯಾವುದೇ ಶಾಖೆಗೆ ಹೋದರೂ ಅದರ ಕುರಿತು ವಿಸ್ತೃತ ಮಾಹಿತಿ ಸಂಸ್ಕೃತ ವಾಙ್ಮಯದಲ್ಲಿದೆ. ಅಂಥದ್ದನ್ನು ಹೊರಗೆ ತಂದು ಆಧುನಿಕ ಮಾಹಿತಿಯ ಜತೆಗೆ ಜೋಡಿಸುವ ಕೆಲಸವಾಗಬೇಕು. ಉದಾಹರಣೆಗೆ, ನಮ್ಮಲ್ಲಿ ಪಠ್ಯಪುಸ್ತಕಗಳಿವೆ. ಅವುಗಳಲ್ಲಿ 6ನೇ ತರಗತಿಯ ಗಣಿತದಲ್ಲಿ ಗಣಿತಶಾಸ್ತ್ರದಲ್ಲಿ ಭಾರತೀಯ ಕೊಡುಗೆ, ಶೂನ್ಯದ ಸಂಶೋಧನೆ ಇತ್ಯಾದಿ ಬಗ್ಗೆ ಐದು ಅಂಕಗಳಷ್ಟು ಮಾಹಿತಿ ನೀಡುವುದು. ಅನಂತರದ ತರಗತಿಗಳಲ್ಲಿ ಸ್ವಲ್ಪ ಹೆಚ್ಚು. ಹೀಗೆ ಎಂಎಸ್‌ಸಿ ಹಂತಕ್ಕಾಗುವಾಗ ಒಬ್ಬ ವಿದ್ಯಾರ್ಥಿ ಭಾರತೀಯ ಗಣಿತಶಾಸ್ತ್ರದ ಕುರಿತು ಸಾಕಷ್ಟು ಮಾಹಿತಿ ಅರಿಯಲು ಸಾಧ್ಯವಾಗುತ್ತದೆ. ಹೀಗೆ ಎಲ್ಲ ವಿಚಾರದಲ್ಲೂ ಮಾಡಿದರೆ ಭೂಯಿಷ್ಠ ಸಂಸ್ಕೃತ ಮಾಹಿತಿ ಜನಮಾನಸಕ್ಕೆ ತಲುಪುತ್ತದೆ. ಸಂಸ್ಕೃತದ ಮಾಹಿತಿ ಜತೆಗೆ ಆಧುನಿಕ ಮಾಹಿತಿಯ ಮಿಳಿತವಾಗಬೇಕು. ಸಂಶೋಧನೆಗಳು ನಡೆಯಬೇಕು.

ಎರಡನೆಯದಾಗಿ, ಸಂಸ್ಕೃತವನ್ನು ಮೌಖೀಕವಾಗಿ ಕಲಿಯುತ್ತಿದ್ದ ದಿನಗಳಿಂದ ನಾವು ಸಾಕಷ್ಟು ಮುಂದಿದ್ದು, ತಂತ್ರಜ್ಞಾನದ ಮೂಲಕ ಕಲಿಯಬೇಕು. ದೂರಶಿಕ್ಷಣದ ರೀತಿಯಲ್ಲಿ ತಲುಪಿಸುವುದು, ಇವತ್ತಿನ ಜನರಿಗೆ ಅರ್ಥವಾಗುವ ಮಾದರಿಯ ಉದಾಹರಣೆಗಳ ಮೂಲಕ ಸಂಸ್ಕೃತವನ್ನು ಕೈಗೆಟಕುವಂತೆ ಮಾಡುವುದು.

ಮೂರನೆಯದು, ಸಂಸ್ಕೃತದ ಕುರಿತು ಇರುವ ಮಿಥ್‌ಗಳನ್ನು ತೊಡೆದು ಹಾಕುವುದು. ನ ಸ್ತ್ರೀ ಸ್ವಾತಂತ್ರ್ಯಮರ್ಹತಿ ಎಂದರೆ ಸ್ತ್ರೀ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ಏಕೆಂದರೆ ಈಗ ಬಳಕೆಯಲ್ಲಿರುವ ಸ್ವಾತಂತ್ರ್ಯ ಪದ ಯುರೋಪ್‌ ಮೂಲಕ ಬಳಕೆಗೆ ಬಂದುದು. ಪಶ್ಚಿಮದ ಶಬ್ದಾವಳಿ, ಮಾನದಂಡ, ತಪ್ಪು ಅನುವಾದ, ವ್ಯಾಖ್ಯಾನ ಮೂಲಕ ಆದ ಅಪಚಾರವನ್ನು ಪುನರ್‌ವ್ಯಾಖ್ಯಾನ ಮೂಲಕ ಸರಿಪಡಿಸುವ ಕಾರ್ಯ ಆಗಬೇಕು. 

ಶಾಲೆಯಲ್ಲಿ ಸಂಸ್ಕೃತ ಕಲಿಕೆ ಕಡ್ಡಾಯ ಬೇಡ ಎನ್ನುವುದು ನಿಮ್ಮ ಅಭಿಪ್ರಾಯವಲ್ಲವೆ? ಯಾಕೆ? 
    ಸಂಸ್ಕೃತವಷ್ಟೇ ಅಲ್ಲ, ಯಾವುದೇ ಭಾಷೆಯ ಕಲಿಕೆಯನ್ನು ಕಡ್ಡಾಯ ಮಾಡಬಾರದು ಎನ್ನುವುದು ನನ್ನ ಅನಿಸಿಕೆ. ಕಡ್ಡಾಯ ಮಾಡಿದಾಗ ಇತರ ಭಾಷೆಗಳನ್ನು ಕಡ್ಡಾಯ ಮಾಡುವಂತೆ ಆಯಾ ಭಾಷಾಭಿಮಾನಿಗಳಿಂದ ಒತ್ತಡ ಬರುತ್ತದೆ. ಹಾಗಂತ ದೇಶದ ಅಷ್ಟೂ ಭಾಷೆಗಳನ್ನು ಕಡ್ಡಾಯ ಮಾಡಲಾದೀತೇ? ಕಡ್ಡಾಯ ಮಾಡಿದಾಗ ಹೇರಿದಂತಾಗುತ್ತದೆ. ವಿದ್ಯಾರ್ಥಿಗಳು ಪ್ರೌಢರಿದ್ದಾರೆ. ವಿದ್ಯಾರ್ಥಿಗಳು ಎಲ್ಲ ಭಾಷೆಯನ್ನೂ ಕಲಿಯಬೇಕು. ಅವರಿಗೆ ಆಯ್ಕೆಯ ಸ್ವಾತಂತ್ರ್ಯ ಕೊಡಬೇಕು. ಕಡ್ಡಾಯ ಮಾಡುವ ಆವಶ್ಯಕತೆಯಿದ್ದರೆ ಆಯಾ ಪ್ರಾಂತ್ಯದ, ರಾಜ್ಯದ ಭಾಷೆಯನ್ನಷ್ಟೇ ಕಡ್ಡಾಯ ಮಾಡಲಿ. ನಾವು ಗಮನ ಕೊಡಬೇಕಾದದ್ದು, ಸಂಸ್ಕೃತ ಕಬ್ಬಿಣದ ಕಡಲೆ ಎಂಬ ಮಿಥ್ಯೆಯನ್ನು ಹೋಗಲಾಡಿಸಿ ಅದು ಎಲ್ಲರಿಗೂ ಸೇರಿದ ಸರಳ ಸುಂದರ ಭಾಷೆ ಎಂಬ ಪ್ರೀತಿಯನ್ನು ಸ್ಥಾಪಿಸುವತ್ತ. ಸಂಸ್ಕೃತದಲ್ಲಿ ಅಡಗಿರುವ ಜ್ಞಾನ ಖಜಾನೆಯನ್ನು ತೆರೆದು ತೋರಿಸುವ ಕೆಲಸ ಆಗಬೇಕಾಗಿದೆ.

Advertisement

“ಸಂಸ್ಕೃತ ಪ್ರಮೋಶನ್‌ ಫೌಂಡೇಶನ್‌’ನಲ್ಲಿ ಈಗ ಕೆಲಸ ಮಾಡುತ್ತಿದ್ದೀರಿ. ಅದರ ಕಾರ್ಯೋದ್ದೇಶಗಳನ್ನು ವಿವರಿಸುತ್ತೀರಾ? 
    ಕಳೆದ 35 ವರ್ಷಗಳಿಂದ ಸಂಸ್ಕೃತದ ಕುರಿತಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. 10 ದಿನಗಳಲ್ಲಿ ಸಂಸ್ಕೃತವನ್ನು ಸಂಭಾಷಣಾ ಭಾಷೆಯಾಗಿ ಕಲಿಸುವ ಶಿಬಿರಗಳು ರೂಪುಗೊಂಡು ಈವರೆಗೆ 90 ಲಕ್ಷಕ್ಕೂ ಹೆಚ್ಚು ಜನರಿಗೆ ಸಂಭಾಷಣಾ ಸಂಸ್ಕೃತವನ್ನು ಕಲಿಸಲಾಗಿದೆ. ಅವರ ಪ್ರಯತ್ನಗಳಿಂದ ಹಲವು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಂಸ್ಕೃತಕ್ಕಾಗಿ ಸಂವಹನಾ ಶಿಕ್ಷಣ ವಿಧಾನಗಳನ್ನು ರೂಪಿಸಲಾಗಿದೆ. 

“ಸಂಸ್ಕೃತ ಮನೆಗಳು’, “ಸಂಸ್ಕೃತ ಮಾತೃಭಾಷಾ ಮಕ್ಕಳು’  ಈ ಪ್ರಯೋಗಗಳೂ ಅಪಾರ ಯಶಸ್ಸನ್ನು ಕಂಡಿವೆ. ಅವರು ಸಂಸ್ಕೃತ ಪ್ರಚಾರಕ್ಕಾಗಿ ಒಂದು ದೊಡ್ಡ ಕಾರ್ಯಪಡೆಗೇ ಸ್ಫೂರ್ತಿಯಾಗಿದ್ದಾರೆ. ಈ ಕಾರ್ಯಕರ್ತರು ಈಗ ಹಲವು ರಾಜ್ಯಗಳಲ್ಲಿ ಸಕ್ರಿಯರಾಗಿದ್ದಾರೆ. ಸಂಸ್ಕೃತ ಭಾರತಿಯು ನೀಡುತ್ತಿರುವ ಹಲವು ಸಂಸ್ಕೃತ ಭಾಷಾ ಕಲಿಕೆ ಕೋರ್ಸುಗಳನ್ನು ಸಾವಿರಾರು ಜನರು ಕಲಿಯುತ್ತಿದ್ದಾರೆ. ಅಮೆರಿಕದಲ್ಲಿ ಎಸ್‌ಎಎಫ್‌ಎಲ್‌ ಎಂಬುದು ಅಲ್ಲಿನ ಭಾರತೀಯ ಮೂಲದ ಮಕ್ಕಳಲ್ಲಿ ತುಂಬಾ ಜನಪ್ರಿಯವಾಗಿರುವ  ಕೋರ್ಸ್‌. 1983ರಲ್ಲಿ ಸಂಸತ್‌ ಸದಸ್ಯರಿಗೆ ಸಂಸತ್‌ ಭವನದಲ್ಲಿ ಹಿರಿಯ ಸಂಸದರಾದ ಎಲ್‌. ಕೆ. ಆಡ್ವಾಣಿ, ಡಾ| ಬಲರಾಂ ಜಾಖಡ್‌, ಡಾ| ಕರಣ್‌ ಸಿಂಗ್‌ ಮುಂತಾದವರು ಭಾಗವಹಿಸಿದ್ದ 10 ದಿನಗಳ ಸಂಸ್ಕೃತ ಸಂಭಾಷಣಾ ತರಗತಿಗಳನ್ನು ನಡೆಸಿಕೊಟ್ಟಿದ್ದೇನೆ.  

ಸಂಭಾಷಣಾ ಸಂಸ್ಕೃತದಲ್ಲಿ ಪರಿಣತರಾಗುವಂತೆ ಒಂದು ಲಕ್ಷಕ್ಕೂ ಹೆಚ್ಚು ಸಂಸ್ಕೃತ ಶಿಕ್ಷಕರಿಗೆ ತರಬೇತಿ ನೀಡುವಲ್ಲಿ ಪಾತ್ರವನ್ನು ನಿರ್ವಹಿಸಲಾಗಿದೆ. ಸಂಸ್ಕೃತದಲ್ಲಿ “ಸಂಭಾಷಣಾ ಸಂದೇಶ’ ಎಂಬ ಬಹುವರ್ಣದ ನಿಯತಕಾಲಿಕ ಆರಂಭಿಸಿದ್ದು, ಚಂದಮಾಮ ಸಂಚಿಕೆಗಳ ಸಂಸ್ಕೃತ ಆವೃತ್ತಿ ಪ್ರಕಟಿಸಲಾಗುತ್ತಿದೆ. ವಿವಿಧ ಭಾಷೆಗಳಿಂದ ಸುಮಾರು 1,000ಕ್ಕೂ ಹೆಚ್ಚು ಸಮಕಾಲೀನ ಸಾಹಿತ್ಯ ಕೃತಿಗಳನ್ನು ಸಂಸ್ಕೃತಕ್ಕೆ ಅನುವಾದ ಮಾಡುವ “ಸರಸ್ವತೀ ಸೇವಾ ಯೋಜನೆ’ಯನ್ನು ಆರಂಭಿಸಿದ್ದೇವೆ. 10 ಭಾರತೀಯ ಭಾಷೆಗಳಲ್ಲಿ ಸಂಸ್ಕೃತ ಸಂಭಾಷಣಾ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ಸಂಸ್ಕೃತದಲ್ಲಿ ಸೃಜನಶೀಲ ಬರವಣಿಗೆ ಮತ್ತು ಅನುವಾದಗಳನ್ನು ಕೈಗೊಳ್ಳುವುದಕ್ಕಾಗಿ ಸುಮಾರು 20 ಕಾರ್ಯಾಗಾರಗಳನ್ನು ನಡೆಸಲಾಗಿದೆ. ಅಮೆರಿಕ, ಕೆನಡಾ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ನೇಪಾಳ, ಯುಎಇ, ನೆದರ್ಲಂಡ್‌, ಬೆಲ್ಜಿಯಂ, ಥೈಲಂಡ್‌ ದೇಶಗಳಲ್ಲಿ ಸರಕಾರದ ನೆರವಿಲ್ಲದೆಯೇ ಸಂಸ್ಕೃತ ಕಲಿಕೆ ಕುರಿತಂತೆ ಸಂಕಿರಣ ಮತ್ತು ಕಾರ್ಯಾಗಾರಗಳನ್ನು ನಡೆಸಿದ್ದೇವೆ. ಈ ದೇಶಗಳಲ್ಲಿ ಸಂಸ್ಕೃತ ಕಲಿಸುವ ಸ್ವಯಂಸೇವಾ ಗುಂಪುಗಳನ್ನು ಸ್ಥಾಪಿಸಲಾಗಿದೆ. 

ಸಂಸ್ಕೃತ ಮೃತ ಭಾಷೆ ಎಂದು ಭಾವಿಸುವವರು ಈಗಲೂ ಇದ್ದಾರಲ್ಲ? 
    ಅದು ಹಳೆಯ ವ್ಯಾಖ್ಯಾನ. ಅಜ್ಜ ನೆಟ್ಟ ಆಲದ ಮರಕ್ಕೆ ಜೋತುಬಿದ್ದಂತೆ ಈಗಲೂ ಅಂತಹ ಹಳವಂಡಗಳನ್ನು ಹೇಳಿಕೊಳ್ಳುವುದರಲ್ಲಿ ಅರ್ಥವಿಲ್ಲ. ಏಕೆಂದರೆ, ಈಗ ಸಂಸ್ಕೃತ ಮತ್ತೆವ್ಯಾಪಕವಾಗುತ್ತಿದೆ. ಹಿಂದೆ ಮೊಗಲರ ಕಾಲದಲ್ಲಿ ಉರ್ದು
ರಾಜಭಾಷೆಯಾಗಿತ್ತು.  ಅನಂತರ ಬ್ರಿಟಿಷರ ಕಾಲದಲ್ಲಿ ಇಂಗ್ಲಿಷ್‌ ರಾಜಭಾಷೆಯಾಗಿತ್ತು. ಉಳಿದಂತೆ ಜಾತಿ,ಪ್ರಾಂತ್ಯ, ವರ್ಣ ಮೊದಲಾದ ಸಾಮಾಜಿಕ ಕಾರಣಗಳಿಂದಾಗಿ ಸಂಸ್ಕೃತದ ಬಳಕೆಯಾದ ಕಡಿಮೆಯಾದ ಕಾರಣಬ್ರಿಟಿಷರು ಹಾಗೆ ಕರೆದರು. ಈಗ ಅಂತಹ ವಾತಾವರಣ ಇಲ್ಲ. ನೂರಾರು ಶಾಲೆಗಳಲ್ಲಿ, ಸಾವಿರಾರು ಕಡೆಗಳಲ್ಲಿ ಸಂಸ್ಕೃತ ಕಲಿಸಲಾಗುತ್ತಿದೆ. ಲಕ್ಷಾಂತರ ಜನ ವ್ಯಾವಹಾರಿಕವಾಗಿಯೂ ಸಂಸ್ಕೃತದಲ್ಲಿ ಸಂಭಾಷಿಸುತ್ತಿದ್ದಾರೆ. ಫೋನ್‌, ಯಾತ್ರೆ ಸಂದರ್ಭದಲ್ಲೂ ಸಂಸ್ಕೃತದ ಬಳಕೆ ಮಾಡುತ್ತಿದ್ದು ಸಂಸ್ಕೃತ ವನ್ನು ಸಂವಹನ, ಸಂವಾದಕ್ಕೆ ಉಪಯೋಗಿಸಬಹುದು ಎಂಬ ಧೈರ್ಯದ ತೀರ್ಮಾನಕ್ಕೆ ಬಂದಿದ್ದಾರೆ.

ಸಂಸ್ಕೃತ ಕಲಿಕೆಯ ಕಿರು ಅವಧಿಯ ಕೋರ್ಸ್‌ಗಳನ್ನು ಪ್ರಚುರಪಡಿಸಿದ್ದೀರಿ. ಇಂತಹ ಕಿರು ಅವಧಿಯ ಕೋರ್ಸ್‌ಗಳಿಂದ ಸಂಸ್ಕೃತದ ಪೂರ್ಣ ಜ್ಞಾನ ಗಳಿಸುವುದು ಸಾಧ್ಯವೆ?
    ಇಂತಹ ಕೋರ್ಸ್‌ಗಳ ಉದ್ದೇಶವೇ ಸೀಮಿತ, ಪರಿಪೂರ್ಣ ಸಂಸ್ಕೃತ ಪಂಡಿತರಾಗಿಸುವುದು ಅಲ್ಲ. ಯಾವುದೇ ಭಾಷೆಯಾಗಲಿ, ಮೊದಲು ಅದನ್ನು ಉಪಯೋಗಿಸಿ ಮಾಡನಾಡಲು ಕಲಿಯಬೇಕು. ವ್ಯಾಕರಣವೇ ಆದಿಯಾಗಿ ಭಾಷೆಯ ನಿಯಮಗಳ ಕಲಿಕೆ, ಪರಿಪೂರ್ಣತೆ ಆಮೇಲಿನ ಹಂತ. ಭಾಷಾ ಕಲಿಕೆಯ ಆಸಕ್ತಿ ಪ್ರಾರಂಭವಾಗುವುದು ಮೊತ್ತಮೊದಲು ಆಗಬೇಕಾದ ಕಾರ್ಯ. ಭಾಷೆಯ ಬಗ್ಗೆ ಉತ್ಸಾಹ ಬರಬೇಕು. ಭಾಷೆ ಬಳಸಲು ಯೋಗ್ಯ ಎಂಬ ನಿರ್ಣಯ ಬರುವಂತಾಗಬೇಕು. ಕಠಿನ ಎಂಬ ಮನೋಭಾವ ಹೋಗಬೇಕು. ಭಾಷೆಯ ಮೂಲಕ ವ್ಯಾಕರಣ ಕಲಿಸುತ್ತಿದ್ದೇವೆ. ಇಂಗ್ಲಿಷ್‌ ಭಾಷಾ ಪ್ರೇಮದಿಂದಾಗಿ ಜನರಿಗೆ ಸಂಸ್ಕೃತದ ಮೇಲೆ ಅಸಡ್ಡೆ ಉಂಟಾಗಿತ್ತು. ಈಗ ಸಂಸ್ಕೃತ ಸರಳ ಎಂಬ ಭಾವ ಬಂದಿದೆ. ಸರಳ ಸಂಸ್ಕೃತ ಪ್ರಯೋಗದಿಂದಾಗಿ ನಮ್ಮ ಭಾಷೆ ಎಂಬ ಅಭಿಮಾನ ಬರುತ್ತಿದೆ. ಅದು ಮತ್ತೆ ವ್ಯಾವಹಾರಿಕ ಭಾಷೆಯಾಗಬಲ್ಲದು ಎಂಬ ಆಶಾಭಾವವಿದೆ. 200 ವರ್ಷಗಳ ಹಿಂದೆ ಬಂದ ಇಂಗ್ಲಿಷ್‌ ಇಂದು ಈ ಪರಿಯಲ್ಲಿ ವ್ಯಾಪಿಸಿ ಅಸ್ತಿತ್ವ ಪಡೆದಿದೆ ಎಂದಾದರೆ ಅದಕ್ಕೂ ಹಿಂದೆ ಇಲ್ಲಿ ಇದ್ದ ಸಂಸ್ಕೃತದ ಮರುಸ್ಥಾಪನೆ ಅಸಾಧ್ಯವೇ? ಅಂಚೆ ತೆರಪಿನ ಶಿಕ್ಷಣ, ಭಗವದ್ಗೀತಾ, ರಾಮಾಯಣ ಹೀಗೆ ಅನೇಕ ವಿಷಯಗಳ ಮೂಲಕ ಜನರಿಗೆ ಸಂಸ್ಕೃತ ಕಲಿಯಲು ನೆರವಾಗುತ್ತಿದ್ದೇವೆ.

– ಚಮೂ ಕೃಷ್ಣಶಾಸ್ತ್ರಿ ಶಿಕ್ಷಣತಜ್ಞ

Advertisement

Udayavani is now on Telegram. Click here to join our channel and stay updated with the latest news.

Next