Advertisement

ಮಾಹಿತಿ ಕೊರತೆ: ಋಣ ಮುಕ್ತಿಗೆ ಅರ್ಜಿದಾರರ ಸಾಲು

01:10 AM Oct 22, 2019 | Team Udayavani |

ಕುಂದಾಪುರ/ಕೋಟ: ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಸಮ್ಮಿಶ್ರ ಸರಕಾರದ ಕೊನೆಯ ದಿನಗಳಲ್ಲಿ ಜಾರಿಗೆ ತಂದ ಋಣಮುಕ್ತ ಕಾಯ್ದೆಯ ಫ‌ಲಾನುಭವಿಗಳಾಗಲು ಪ್ರತಿದಿನ ನೂರಾರು ಮಂದಿ ವಿವಿಧೆಡೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ. ಮಾಹಿತಿಯ ಕೊರತೆಯಿಂದಾಗಿ ತಾವು ಮಾಡಿದ ಕೈಸಾಲ, ಬೆಳೆಸಾಲ, ಚಿನ್ನಾಭರಣ ಸಾಲಗಳೆಲ್ಲ ಮನ್ನಾ ಆದೀತೆಂಬ ನಿರೀಕ್ಷೆಯಿಂದ ಬರುತ್ತಿರುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

Advertisement

ಈ ಕಾಯ್ದೆಯ ಫ‌ಲಾನುಭವಿಗಳು ಯಾರು ಎಂಬುದು ಬಹುತೇಕ ಸಾಲಗಾರರಿಗೆ ತಿಳಿದಿಲ್ಲ. ಈ ನಡುವೆ ಮಧ್ಯವರ್ತಿಗಳು ಅಮಾಯಕರನ್ನು ಸಾಲಮರು ಪಾವತಿಸದಂತೆ ಮಾಡಿಕೊಡುತ್ತೇವೆ ಎಂದು ವಂಚಿಸಿ ಹಣ ಪಡೆಯುತ್ತಿರುವ ಆರೋಪಗಳ ಕೇಳಿಬರುತ್ತಿವೆ. ಜತೆಗೆ ಹೈಕೋರ್ಟ್‌ ಈ ಕಾಯ್ದೆ ಅನುಷ್ಠಾನಕ್ಕೆ ತಾತ್ಕಾಲಿಕ ತಡೆ ನೀಡಿದ್ದು ಒಟ್ಟು ವ್ಯವಸ್ಥೆಯೇ ಗೋಜಲಾಗಿದೆ.

ಯಾರೆಲ್ಲ ಅರ್ಹರು?
ಖಾಸಗಿ ಲೇವಾದೇವಿಗಾರರು ಮತ್ತು ಸಂಸ್ಥೆಗಳಿಂದ ಪಡೆದ ಕೈಸಾಲ ಮನ್ನಾ ಮಾಡುವ ಕಾಯ್ದೆ ಇದಾಗಿದೆ. ಭೂಮಿ ಇಲ್ಲದ, 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಬಡರೈತರಿಗೆ ಅಥವಾ ವಾರ್ಷಿಕ 1.20 ಲಕ್ಷ ರೂ.ಗಿಃತ ಕಡಿಮೆ ಆದಾಯ ಇರುವವರಿಗೆ ಮಾತ್ರ ಇದು ಅನ್ವಯ. ರಿಸರ್ವ್‌ ಬ್ಯಾಂಕ್‌ ಅಧೀನದಲ್ಲಿ ಕಾರ್ಯನಿರ್ವಹಿಸುವ ಬ್ಯಾಂಕ್‌ಗಳು ಮತ್ತು ಸಹಕಾರಿ ಅಧಿನಿಯಮದಡಿ ನೋಂದಣಿಯಾಗಿರುವ ಸಹಕಾರಿ ಸಂಘಗಳು, ನೋಂದಾಯಿತ ಫೈನಾನ್ಸ್‌ಗಳು ಈ ಯೋಜನೆಗೆ ಒಳಪಡುವುದಿಲ್ಲ.

ಗೊಂದಲಗಳಿಗೆ ಕಾರಣವೇನು ?
ನೋಡಲ್‌ ಅಧಿಕಾರಿ ಅರ್ಜಿ ಸ್ವೀಕರಿಸಲು ವಿಳಂಬಿಸಿದರೆ ಅಥವಾ ಅರ್ಹರಿಗೆ ನಿರಾಕರಿಸಿದರೆ ಶಿಕ್ಷಿಸುವ ಅವಕಾಶ ಈ ಕಾಯ್ದೆಯಲ್ಲಿದೆ. ಹಾಗಾಗಿ ಯಾರೇ ಅರ್ಜಿ ಸಲ್ಲಿಸಿದರೂ ಸ್ವೀಕರಿಸಲಾಗುತ್ತದೆ. ಸ್ವೀಕರಿಸಿದ ಮಾತ್ರಕ್ಕೇ ತಮ್ಮೆಲ್ಲ ಸಾಲ ಮನ್ನಾ ಆಗುತ್ತದೆಂದು ಭಾವಿಸಿ ಸಾಲಗಾರರು ಅರ್ಜಿ ಸಲ್ಲಿಸಲು ಮುಗಿಬೀಳುತ್ತಿದ್ದಾರೆ. ಪರಿಶೀಲನೆ ಹಂತದಲ್ಲಿ ಎಲ್ಲವನ್ನು ದೃಢಪಡಿಸಿ ಅರ್ಹ ಫ‌ಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸೂಕ್ತ ಪ್ರಮಾಣಪತ್ರಗಳನ್ನು ಪಡೆಯಲು ಜನರು ಗ್ರಾಮಲೆಕ್ಕಾಧಿಕಾರಿ ಕಚೇರಿ, ಆಟಲ್‌ ಜೀ ಜನಸ್ನೇಹಿ ಕೇಂದ್ರ ಕಚೇರಿಗಳಲ್ಲಿ ಮುಗಿಬೀಳುತ್ತಿದ್ದಾರೆ.

ಏನಿದು ಋಣ ಮುಕ್ತ ಕಾಯ್ದೆ?
ಉಪವಿಭಾಗಾಧಿಕಾರಿ ಈ ಕಾಯ್ದೆಯ ನೋಡಲ್‌ ಅಧಿಕಾರಿಯಾಗಿರುತ್ತಾರೆ. ಸಾಲಗಾರ 90 ದಿನಗಳ ಒಳಗೆ ದಾಖಲೆ ಸಮೇತ ಮಾಹಿತಿ ನೀಡಬೇಕು. ಪರಿಶೀಲನೆ ಬಳಿಕ ಅಡವಿಟ್ಟ ವಸ್ತು ಬಿಡುಗಡೆಗೆ ಆದೇಶ ನೀಡಲಾಗುತ್ತದೆ. ಸಾಲ ನೀಡಿದವರಿಗೆ ಸರಕಾರ ಪ್ರತಿಫ‌ಲ ಹಣ ನೀಡುವುದಿಲ್ಲ.

Advertisement

ಮಾಹಿತಿ ಕೊರತೆಯಿಂದಾಗಿ ಮುಗ್ಧ ರೈತರು ಹಾಗೂ ಜನಸಾಮಾನ್ಯರು ಅರ್ಜಿ ಹೆಸರಿನಲ್ಲಿ ಹಣ ಹಾಗೂ ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು.
– ಕೆ. ವಿಕಾಸ್‌ ಹೆಗ್ಡೆ,
ಉಡುಪಿ ಜಿಲ್ಲಾ ರೈತ ಸಂಘದ ವಕ್ತಾರ

ಅರ್ಜಿ ಸ್ವೀಕಾರಕ್ಕೆ
ಅ. 22ರ ವರೆಗೆ ಗಡುವು ಇದೆ. ಕಾಯ್ದೆ ಅನುಷ್ಠಾನಕ್ಕೆ ಹೈಕೋರ್ಟ್‌ನಿಂದ ತಾತ್ಕಾಲಿಕ ತಡೆ ಇರುವ ಕಾರಣ ಈವರೆಗೆ ಯಾವುದೇ ಸಾಲ ಮನ್ನಾ ಆಗಿಲ್ಲ. ಅರ್ಜಿಗಳನ್ನು ಪರಿಶೀಲಿಸಿ ಅರ್ಹತೆಯ ಆಧಾರದ ಮೇಲೆ ನ್ಯಾಯಾಲಯದ ಸೂಚನೆಯಂತೆ ಮುಂದುವರಿಯಲಾಗುವುದು.
– ಕೆ. ರಾಜು
ಸಹಾಯಕ ಕಮಿಷನರ್‌, ಕುಂದಾಪುರ

ಸಹಕಾರ ಸಂಸ್ಥೆಗಳಿಗೆ ಸಂಬಂಧಿಸಿದ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಎಲ್ಲರ ಅರ್ಜಿಗಳನ್ನೂ ಸ್ವೀಕರಿಸುತ್ತೇವೆ. ಪರಿಶೀಲಿಸಿ ನೋಂದಾಯಿತವಲ್ಲದ ಸಂಸ್ಥೆಗಳಲ್ಲಿ ಸಾಲ ಮಾಡಿದವರನ್ನು ಆಯ್ಕೆ ಮಾಡುತ್ತೇವೆ.
– ರವಿಚಂದ್ರ ನಾಯಕ್‌,
ಉಪವಿಭಾಗಧಿಕಾರಿ ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next