Advertisement

ಆನ್‌ಲೈನ್‌ ಕಂದಾಯ ಪಾವತಿ ಅನುಷ್ಠಾನಗೊಳಿಸಿ

09:01 PM Jun 07, 2019 | Lakshmi GovindaRaj |

ಮೈಸೂರು: ನಗರಪಾಲಿಕೆ ವ್ಯಾಪ್ತಿಯಲ್ಲಿ ಸೋಮವಾರದಿಂದಲೇ ಕುಡಿಯುವ ನೀರಿಗೆ ಆನ್‌ಲೈನ್‌ ಮೂಲಕ ಬಿಲ್‌ ಪಾವತಿ ಮಾಡುವ ವ್ಯವಸ್ಥೆ ಜಾರಿಯಾಗಲಿದ್ದು, ಕಂದಾಯವನ್ನೂ ಆನ್‌ಲೈನ್‌ನಲ್ಲಿ ಕಟ್ಟಿಸಿಕೊಳ್ಳುವ ಪ್ರಕ್ರಿಯೆಯೂ ಶೀಘ್ರ ಅನುಷ್ಠಾನಗೊಳಿಸುವುದರ ಬಗ್ಗೆ ಕೌನ್ಸಿಲ್‌ನಲ್ಲಿ ತೀರ್ಮಾನಿಸಲಾಯಿತು.

Advertisement

ಶುಕ್ರವಾರ ನಗರಪಾಲಿಕೆಯ ನಾಲ್ವಡಿ ಸಭಾಂಗಣದಲ್ಲಿ ನಡೆದ ಕೌನ್ಸಿಲ್‌ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ವಿಸ್ತತ ಚರ್ಚೆ ನಡೆಯಿತು. ಕುಡಿಯುವ ನೀರಿನ ಬಿಲ್ಲನ್ನು ಆನ್‌ಲೈನ್‌ನಲ್ಲಿ ಕಟ್ಟಿಸಿಕೊಳ್ಳುವ ಮಾದರಿಯಲ್ಲೇ ಕಂದಾಯ ಕಟ್ಟಿಸಿಕೊಳ್ಳುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಪಾಲಿಕೆ ಸರ್ವ ಸದಸ್ಯರು ಒತ್ತಾಯಿಸಿದರು. ಈಗಾಗಲೇ ಬೆಂಗಳೂರು, ಮಂಗಳೂರು, ಶಿವಮೊಗ್ಗ ಹುಬ್ಬಳ್ಳಿ-ಧಾರವಾಡ ಸೇರಿ ಮೊದಲಾದ ಕಡೆ ಆನ್‌ಲೈನ್‌ನಲ್ಲಿ ಕಂದಾಯ ಪಾವತಿ ಮಾಡಿಸಿಕೊಳ್ಳಲಾಗುತ್ತಿದೆ. ಹೀಗಾಗಿ ನಗರಪಾಲಿಕೆಯಲ್ಲೂ ಜಾರಿಗೊಳಿಸಲು ಕ್ರಮವಹಿಸುವಂತೆ ಒತ್ತಾಯಿಸಿದರು.

ಅಗತ್ಯ ಕ್ರಮ: ಮೇಯರ್‌ ಪುಷ್ಪಲತಾ ಜಗನ್ನಾಥ್‌ ಮಾತನಾಡಿ, ಸೋಮವಾರ ಆನ್‌ಲೈನ್‌ನಲ್ಲಿ ನೀರಿನ ಬಿಲ್‌ ಪಾವತಿಗೆ ಚಾಲನೆ ನೀಡಲಾಗುವುದು. ಕಂದಾಯ ಪಾವತಿ ಆನ್‌ಲೈನ್‌ ಮಾಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು ಎಂದರು. ಆಯುಕ್ತೆ ಶಿಲ್ಪನಾಗ್‌ ಮಾತನಾಡಿ, ಇದಕ್ಕೆ ಒಂದೂವರೆ ವರ್ಷ ಸಮಯಾವಕಾಶ ಹಿಡಿಯಲಿದ್ದು, ಅದಾದ ಬಳಿಕ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಹೇಳಿದರು.

ಬೈಲಾದಂತೆ ಜಾಹೀರಾತು: ಸರ್ಕಾರಕ್ಕೆ ಕಳುಹಿಸಿರುವ ಬೈಲಾ ನಿಯಮದಂತೆಯೇ ನಗರಪಾಲಿಕೆ ಜಾಹೀರಾತು ಪಡೆದುಕೊಳ್ಳಲು ಅನುಮತಿ ನೀಡುವ ಮೂಲಕ ಪಾಲಿಕೆಗೆ ಬರುವ 25 ಕೋಟಿ ರೂ. ಆದಾಯದ ಕುರಿತು ನಿರ್ಧಾರ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಸದಸ್ಯರಿಂದ ಸಲಹೆ: ಒಂದೂವರೆ ವರ್ಷದ ಹಿಂದೆ ಜಾಹೀರಾತು ಸ್ವೀಕರಿಸಲು ಹೊಸ ಬೈಲಾ ಒಂದನ್ನು ಸಿದ್ಧಪಡಿಸಿ ಸರ್ಕಾರದ ಅನುಮತಿಗೆ ಕಳುಹಿಸಿಕೊಡಲಾಗಿದೆ. ಆದರೆ, ಇದುವರೆಗೂ ಅನುಮತಿ ಸಿಗದ ಹಿನ್ನೆಲೆಯಲ್ಲಿ ಜಾಹೀರಾತನ್ನೇ ಸ್ವೀಕರಿಸಲು ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೈಲಾ ಅನುಗುಣವಾಗಿ ಜಾಹೀರಾತು ಸ್ವೀಕರಿಸಿದರೆ ವಾರ್ಷಿಕ ನಗರಪಾಲಿಕೆ ಸಾಕಷ್ಟು ಕೋಟಿ ಹಣ ಸಂದಾಯವಾಗಲಿದೆ ಸದಸ್ಯರು ಸಲಹೆ ನೀಡಿದರು.

Advertisement

ಪಕ್ಕಾ ಮನೆ ನಿರ್ಮಿಸಿ: ಕಂದಾಯ ಬಡಾವಣೆಗಳಲ್ಲಿ ಬಡವರಿಗೆ ಪಕ್ಕಾ ಮನೆಯನ್ನು ಪಾಲಿಕೆ ವತಿಯಿಂದ ನಿರ್ಮಿಸಿಕೊಡಬೇಕು. ಈ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳುವಂತೆ ಸದಸ್ಯರೊಬ್ಬರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್‌ ಪುಷ್ಪಲತಾ, ಕಂದಾಯ ಭೂಮಿಗಳಲ್ಲಿ ಪಕ್ಕಾ ಮನೆಗಳನ್ನು ಹೇಗೆ, ಯಾವ ರೀತಿ ಕಟ್ಟಬಹುದು ಹಾಗೂ ಸರ್ಕಾರದ ನಿರ್ದೇಶನ ಏನಿದೆ ಎಂಬುದನ್ನು ನೋಡಿ, ಒಂದು ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು.

ಪಾಲಿಕೆ ಆಯುಕ್ತೆ ಶಿಲ್ಪಾನಾಗ್‌ ಪ್ರತಿಕ್ರಿಯಿಸಿ, ಸರ್ಕಾರದ ನಿರ್ದೇಶನ ಪ್ರಕಾರವೇ ಪಕ್ಕಾ ಮನೆ ನಿರ್ಮಾಣ ಯೋಜನೆಯನ್ನು ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು. ನಗರಪಾಲಿಕೆ ವತಿಯಿಂದ ಬಿಪಿಎಲ್‌ ಕಾರ್ಡುದಾರರಿಗೆ ನೀಡುವ ವೈದ್ಯಕೀಯ ಪ್ರೋತ್ಸಾಹ ಧನಕ್ಕೆ ಜಾತಿ ದೃಢೀಕರಣವನ್ನು ಅಧಿಕಾರಿಗಳು ಕೇಳುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಜಾತಿ ದೃಢೀಕರಣ ಕೇಳದಂತೆ ಸಭೆಯಲ್ಲಿ ನಿರ್ಣಯ ಮಾಡುವಂತೆ ಮನವಿ ಮಾಡಿದರು.

ತುಂಡು ಭೂಮಿ ಮಾರಾಟ ಮಾಡಿ: ಪಾಲಿಕೆ ವ್ಯಾಪ್ತಿಯಲ್ಲಿ ಸಾಕಷ್ಟು ತುಂಡು ಭೂಮಿಗಳಿವೆ. ಆ ತುಂಡು ಭೂಮಿಯನ್ನು ಅಕ್ಕಪಕ್ಕದ ಮನೆಯವರಿಗೆ, ಈಗಿರುವ ದರದಲ್ಲಿ ಮಾರಾಟ ಮಾಡಿದರೆ ಪಾಲಿಕೆ ಆದಾಯ ವೃದ್ಧಿಸಲಿದೆ ಎಂದು ಸದಸ್ಯರೊಬ್ಬರು ಸಲಹೆ ನೀಡಿದರು. ಸಭೆಯಲ್ಲಿ ಉಪಮೇಯರ್‌ ಶಫಿ ಆಹಮದ್‌ ಸೇರಿದಂತೆ ಸದಸ್ಯರು ಇದ್ದರು.

ಎಲ್‌ಇಡಿ ನಗರ ಕುರಿತು ಚರ್ಚೆ: ಮೈಸೂರನ್ನು ಎಲ್‌ಇಡಿ ನಗರವನ್ನಾಗಿಸಲು ಸರ್ಕಾರ ಸರ್ವೆ ನಡೆಸಿ ಅಂದಾಜು 24960 ಬಲ್ಬ್ಗಳ ಬದಲಾವಣೆಗೆ ಹಣ ಬಿಡುಗಡೆಗೊಳಿಸಿದ್ದು, ಈ ಸಂಬಂಧ ಸಭೆ ಅನುಮತಿ ಮೇರೆಗೆ ಟೆಂಡರ್‌ ಕರೆಯಲಾಗುವುದು ಎಂದು ಆಯುಕ್ತೆ ಶಿಲ್ಪಾನಾಗ್‌ ಹೇಳಿದರು.

ಪಾಲಿಕೆ ಸದಸ್ಯ ಆರೀಫ್ ಹುಸೇನ್‌ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನಗರದಲ್ಲಿ ಅಂದಾಜಿಸಿರುವ ಬಲ್ಬ್ಗಳ ಪಟ್ಟಿಯಲ್ಲಿ ವ್ಯತ್ಯಾಸವಿವೆ. ಈ ಸಂಬಂಧ ಮರು ಪರಿಶೀಲನೆಗೆ ಮನವಿ ಸಲ್ಲಿಸುವಂತೆ ಆಗ್ರಹಿಸಿದರು. ಇದಕ್ಕೆ ದನಿಗೂಡಿಸಿದ ರಾಮಪ್ರಸಾದ್‌, ಶಿವಕುಮಾರ್‌, ಸರ್ಕಾರ ಸಂಪೂರ್ಣವಾಗಿ ಎಲ್‌ಇಡಿ ಬಲ್ಬ್ ಅಳವಡಿಸುವುದು ಯಾವಾಗ ಎಂದು ಪ್ರಶ್ನಿಸಿದರು.

ಅಲ್ಲದೆ ಬಲ್ಬ್ ನೆಪದಲ್ಲಿ ದಸರಾ ವೇಳೆಗೆ ನಗರವನ್ನು ಕತ್ತಲು ಗೊಳಿಸುವ ಬದಲಿಗೆ ದಸರೆಗೂ ಮುನ್ನವೇ ಕಾರ್ಯಗತಗೊಳಿಸುವಂತೆ ಸಭೆ ಮೂಲಕ ಆಗ್ರಹಿಸಿದರು. ಸಭೆ ಮೂಲಕ ಮತ್ತೂಮ್ಮೆ ಸರ್ವೆ ನಡೆಸಿ ಮತ್ತಷ್ಟು ಬಲ್ಬ್ಗಳನ್ನು ಅಳವಡಿಸುವಂತೆ ಮನವಿ ಸಲ್ಲಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಬದಲಾವಣೆಗೆ ಟೆಂಡರ್‌ ಪ್ರಕ್ರಿಯೆಯನ್ನು ದಸರೆ ಒಳಗೆ ಮುಗಿಸಲು ಕ್ರಮ ವಹಿಸುವ ಭರವಸೆಯನ್ನು ಆಯುಕ್ತರು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next