Advertisement

ಐಎಂಎ: ಸಂತ್ರಸ್ತರಿಗೆ ಸಿಕ್ಕಿದ್ದು ಬರೀ 19 ಕೋಟಿ

03:34 PM May 17, 2023 | Team Udayavani |

ಬೆಂಗಳೂರು: ಐ ಮಾನಿಟರಿ ಎಡ್ವೈಸರಿ (ಐಎಂಎ) 1,400 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಸಂತ್ರಸ್ತರಿಗೆ ಇದುವರೆಗೆ ಕೇವಲ 19 ಕೋಟಿ ರೂ. ಹಂಚಿಕೆಯಾಗಿದ್ದು, ಇನ್ನೂ ಬರೋಬ್ಬರಿ 1,381 ಕೋಟಿ ರೂ. ಹಿಂತಿರುಗಿಸಲು ಬಾಕಿ ಇದೆ.

Advertisement

ರಾಷ್ಟ್ರ ಮಟ್ಟದಲ್ಲಿ ಭಾರಿ ಸದ್ದು ಮಾಡಿದ್ದ ಐಎಂಎ ವಂಚನೆ ಪ್ರಕರಣದಲ್ಲಿ ಬಹುತೇಕ ಸಂತ್ರಸ್ತರಿಗೆ ಅಸಲು ಹಣವೂ ಸಿಕ್ಕಿಲ್ಲ. ಸಕ್ಷಮ ಪ್ರಾಧಿಕಾರ ರಚನೆಯಾದ ಬಳಿಕ 50 ಸಾವಿರ ರೂ.ಗಿಂತ ಕಡಿಮೆ ಹೂಡಿಕೆ ಮಾಡಿರುವ 6 ಸಾವಿರ ಸಂತ್ರಸ್ತರಿಗೆ 19 ಕೋಟಿ ರೂ. ಸಮನಾಗಿ ಹಂಚಿಕೆಯಾಗಿದೆ. ಐಎಂಎ ವಂಚನೆ ಬೆಳಕಿಗೆ ಬಂದು 4 ವರ್ಷ ಕಳೆದರೂ ಹೂಡಿಕೆ ಮಾಡಿದ ಅಸಲು ಹಣ ಕೈ ಸೇರದ ಹಿನ್ನೆಲೆಯಲ್ಲಿ ಸಂತ್ರಸ್ತರು ನಿರಾಸೆಗೊಳಗಾಗಿದ್ದಾರೆ. ಇದನ್ನು ಮನಗಂಡಿರುವ ಐಎಂಎ ಸಕ್ಷಮ ಪ್ರಾಧಿಕಾರವು 75 ಕೋಟಿ ರೂ. ಅನ್ನು ಶೀಘ್ರದಲ್ಲೇ ಸಂತ್ರಸ್ತರಿಗೆ ಹಂಚಿಕೆ ಮಾಡಲು ಸಿದ್ಧತೆ ನಡೆಸಿದೆ ಎಂದು ಐಎಂಎ ಸಕ್ಷಮ ಪ್ರಾಧಿಕಾರದ ವಿಶೇಷ ಹಾಗೂ ಸಕ್ಷಮ ಅಧಿಕಾರಿ ಆದಿತ್ಯ ಆಮ್ಲನ್‌ ಬಿಸ್ವಾಸ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಕೋರ್ಟ್‌ ಅನುಮತಿಗೆ ಕಾದು ಕುಳಿತ ಪ್ರಾಧಿಕಾರ: ಐಎಂಎಗೆ ಸೇರಿದ 55 ಕೋಟಿ ರೂ. ಮೌಲ್ಯದ ವಜ್ರಾಭರಣ, ಚಿನ್ನ, 1.50 ಕೋಟಿ ರೂ. ಮೌಲ್ಯದ ರೇಂಜ್‌ ರೋವರ್‌, ಆಡಿ ಸೇರಿದಂತೆ ವಿವಿಧ ಕಾರುಗಳು, ಮೌಲ್ಯಯುತ ಪೀಠೊಪಕರಣ ಸೇರಿದಂತೆ ವಿವಿಧ ಬೆಲೆ ಬಾಳುವ ವಸ್ತುಗಳನ್ನು ಸಕ್ಷಮ ಪ್ರಾಧಿಕಾರ ಜಪ್ತಿ ಮಾಡಿತ್ತು. ಕೆಲ ದಿನಗಳ ಹಿಂದೆ ಹರಾಜು ಪ್ರಕ್ರಿಯೆ ನಡೆಸಿ 75 ಕೋಟಿ ರೂ. ಸಂಗ್ರಹಿಸಿದೆ. ಇದೀಗ ಈ ದುಡ್ಡನ್ನು ಹಂಚಿಕೆ ಮಾಡಲು ಅನುಮತಿ ನೀಡುವಂತೆ ಪ್ರಾಧಿಕಾರವು ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದೆ. ನ್ಯಾಯಾಲಯದಿಂದ ಅನುಮತಿ ಸಿಗುತ್ತಿದ್ದಂತೆ ಕಾನೂನು ಪ್ರಕಾರ ವಂಚನೆಗೊಳಗಾ ದವರಿಗೆ ಸಮನಾಗಿ ಹಣ ಹಂಚಿಕೆಯಾಗಲಿದೆ. ಆದರೆ, ಹಂಚಿಕೆಗೆ ಬಾಕಿ ಇರುವ 1,381 ಕೋಟಿ ರೂ. ಎಲ್ಲೆಲ್ಲಿ ಹೂಡಿಕೆಯಾಗಿದೆ ಎಂಬುದು ಪತ್ತೆ ಹಚ್ಚುವುದು ಸವಾಲಾಗಿದೆ.

150 ಕೋಟಿ ಮೌಲ್ಯದ ಆಸ್ತಿ ಜಪ್ತಿಗೆ ಇ.ಡಿ. ಅಡ್ಡಿ: ಐಎಂಎ ಸಂಸ್ಥೆಯ ಹೆಸರಿನಲ್ಲಿ ದೇಶಾದ್ಯಂತ ಸುಮಾರು 150 ಕೋಟಿ ರೂ. ಸ್ಥಿರ ಆಸ್ತಿಯಿದ್ದು, ಇವುಗಳನ್ನು ಮುಟ್ಟುಗೋಲು ಹಾಕಲು ಸಕ್ಷಮ ಪ್ರಾಧಿಕಾರ ಮುಂದಾಗಿತ್ತು. ಈ ಸಂಗತಿ ತಿಳಿದ ಐಎಂಎ ಮುಖ್ಯಸ್ಥ ಮನ್ಸೂರ್‌ ಅಲಿ ಖಾನ್‌, ಜಾರಿ ನಿರ್ದೇಶನಾಲಯಕ್ಕೆ (ಇಡಿ) ಜಪ್ತಿ ಮಾಡುವ ಅವಕಾಶವಿದ್ದು, ಇಡಿಗೆ ಮಾಹಿತಿ ನೀಡದೇ ಸಕ್ಷಮ ಪ್ರಾಧಿಕಾರವು ಆಸ್ತಿ ಜಪ್ತಿ ಮಾಡಬಾರದು ಎಂದು ಕೋರ್ಟ್‌ ಮೂಲಕ ತಡೆ ತಂದಿದ್ದಾರೆ. ಇದರಿಂದ ಐಎಂಎ ಹೆಸರಿನಲ್ಲಿರುವ ಜಮೀನು, ನಿವೇಶನ, ಪ್ಲ್ರಾಟ್‌ಗಳು, ಶಾಲೆ ಸೇರಿದಂತೆ ಇನ್ನಿತರ ಸ್ಥಿರ ಆಸ್ತಿ ಜಪ್ತಿ ಮಾಡಲು ಪ್ರಾಧಿಕಾರಕ್ಕೆ ತೊಡಕಾಗಿದೆ. ಇಡಿ ಆಸ್ತಿ ಜಪ್ತಿ ಮಾಡಿದರೆ ಕೇಂದ್ರ ಸರ್ಕಾರದ ಪಾಲಾಗಲಿದೆ. ಅದೇ ಸಕ್ಷಮ ಪ್ರಾಧಿಕಾರ ಜಪ್ತಿ ಮಾಡಿದರೆ ಸಂತ್ರಸ್ತರಿಗೆ ಸೇರಲಿದೆ. ಸ್ಥಿರ ಆಸ್ತಿ ಜಪ್ತಿ ಮಾಡಲು ಅವಕಾಶ ನೀಡುವಂತೆ ಸಕ್ಷಮ ಪ್ರಾಧಿಕಾರವು ನ್ಯಾಯಾಲಯಕ್ಕೆ ಮನವಿ ಮಾಡಲು ಮುಂದಾಗಿದೆ.

ಏನಿದು ಪ್ರಕರಣ?: ಐಎಂಎ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದರೆ ಭಾರಿ ಲಾಭಾಂಶ ನೀಡುವುದಾಗಿ 1 ಲಕ್ಷ ಜನರಿಂದ 2,900 ಕೋಟಿ ರೂ. ಹೂಡಿಕೆ ಮಾಡಿಸಲಾಗಿತ್ತು. ಈ ಪೈಕಿ 1,500 ರೂ. ಅನ್ನು ಸಂತ್ರಸ್ತರಿಗೆ ಹಿಂತಿರುಗಿಸಲಾಗಿತ್ತು. 1,400 ಕೋಟಿ ರೂ. ಹಿಂತಿರುಗಿಸಲು ಬಾಕಿಯಿದ್ದಾಗ ಐಎಂಎ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು. ಇದಾದ ಬಳಿಕ ಐಎಂಎ ಸಂತ್ರಸ್ತರಿಗೆ ಹಣ ಹಿಂತಿರುಗಿಸುವ ನಿಟ್ಟಿನಲ್ಲಿ ಸಕ್ಷಮ ಪ್ರಾಧಿಕಾರ ರಚಿಸಲಾಗಿತ್ತು. ಸಕ್ಷಮ ಪ್ರಾಧಿಕಾರವು ಐಎಂಎ ಸಂಸ್ಥೆಯ ಒಂದೊಂದೇ ಆಸ್ತಿ ಮುಟ್ಟುಗೋಲು ಹಾಕಿ ಹರಾಜು ಪ್ರಕ್ರಿಯೆ ನಡೆಸಿ ಅದರಿಂದ ಬಂದ ದುಡ್ಡನ್ನು ಸಂತ್ರಸ್ತರಿಗೆ ಹಂಚಿಕೆ ಮಾಡುವ ಕೆಲಸದಲ್ಲಿ ತೊಡಗಿದೆ.

Advertisement

ರೋಷನ್‌ ಬೇಗ್‌ಗೆ ಮತ್ತೆ ಸಂಕಷ್ಟ?: ಐಎಂಎಗೆ ಸೇರಿದ ಕೋಟ್ಯಂತರ ರೂ. ಮಾಜಿ ಶಾಸಕ ರೋಶನ್‌ ಬೇಗ್‌ ಖಜಾನೆ ಸೇರಿರುವುದಕ್ಕೆ ಸಂಬಂಧಿಸಿದಂತೆ ಕೋರ್ಟ್‌ ಪ್ರಕರಣ ರದ್ದುಗೊಳಿಸಿದೆ. ಸಕ್ಷಮ ಪ್ರಾಧಿಕಾರವು ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಲು ನಿರ್ಧರಿಸಿದೆ. ರೋಷನ್‌ ಬೇಗ್‌ಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ. ಇತ್ತ ಇಡಿ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದೆ.

ಸಂತ್ರಸ್ತರಿಗೆ ಆದಷ್ಟು ಬೇಗ ಅವರು ಹೂಡಿಕೆ ಮಾಡಿದ ಹಣ ಸಿಗುವಂತಾಗಬೇಕು ಎಂಬ ನಿಟ್ಟಿನಲ್ಲಿ ಸಕ್ಷಮ ಪ್ರಾಧಿಕಾರ ಕಾರ್ಯ ನಿರ್ವಹಿಸುತ್ತಿದೆ. ಕೋರ್ಟ್‌ನಿಂದ ಅನುಮತಿ ಸಿಗುತ್ತಿದ್ದಂತೆ 75 ಕೋಟಿ ರೂ. ಹಂಚಿಕೆ ಮಾಡಲು ಕ್ರಮ ಕೈಗೊಳ್ಳುತ್ತೇವೆ. -ಆದಿತ್ಯ ಆಮ್ಲನ್‌ ಬಿಸ್ವಾಸ್‌, ಐಎಂಎ ಸಕ್ಷಮ ಪ್ರಾಧಿಕಾರದ ವಿಶೇಷ ಹಾಗೂ ಸಕ್ಷಮ ಅಧಿಕಾರಿ

-ಅವಿನಾಶ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next