ಬೆಂಗಳೂರು: ನನ್ನ ರಾಜಕೀಯ ಲಾಭಕ್ಕಾಗಿ ಬೇರೆಯವರ ಜೀವನ ಹಾಳು ಮಾಡುವಷ್ಟು ಸ್ವಾರ್ಥಿ ನಾನಲ್ಲ ಎನ್ನುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅರ್ಥ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಆಳಂದ ಶಾಸಕ ಸುಭಾಷ್ ಗುತ್ತೆದಾರ್ ಅವರಿಗೆ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದರೆಂಬ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ಆಳಂದ ಶಾಸಕ ಸುಭಾಷ್ ಗುತ್ತೇದಾರ್ ಅರ್ಜಿ ಕೊಡಲು ನನ್ನ ಬಳಿ ಬಂದಿದ್ದರು. ‘ನನ್ನೊಂದಿಗೆ ಶಾಸಕರಾಗಿದ್ದರು. ನನ್ನ ಪಕ್ಷದಲ್ಲಿಯೇ ಇದ್ದಿದ್ದರೆ, ಮಂತ್ರಿಯಾಗಿ ನೀನೇ ಬೇರೆಯವರಿಗೆ ಆದೇಶ ನೀಡುತ್ತಿದ್ದೆ’ ಎಂದು ಹೇಳಿದ್ದೆ. ಅದು ಪಕ್ಷಕ್ಕೆ ಬಾ ಎಂದು ಕರೆದಂತೆಯೇ? ನನ್ನ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಶಾಸಕರಿಗೆ ನನ್ನ ಪಕ್ಷಕ್ಕೆ ಬಂದು ಅಧಿಕಾರ ಉಳಿಸಿ ಎಂದು ಕೇಳಿಕೊಂಡಿಲ್ಲ. ನನ್ನ ಬಳಿ ಬಂದವರಿಗೆ ಅವರ ರಾಜಕೀಯ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ಹೇಳಿದ್ದೇನೆ ಎಂದರು.
ಯಡಿಯೂರಪ್ಪ ನನ್ನ ವಿರುದ್ಧ ಸದನದಲ್ಲಿ ಅದ್ಯಾವುದೋ ಹಳೆಯ ಸರಕು ತೆಗೆದುಕೊಂಡು ಬರುತ್ತಿದ್ದಾರಂತೆ. ಬರಲಿ ಎಲ್ಲವನ್ನೂ ಚರ್ಚಿಸಲು ಸಿದ್ಧನಿದ್ದೇನೆ. ನಾನು ದುಡ್ಡು ಕೇಳಿ ದ್ದೇನಾ. ನನ್ನ ಬಳಿಯಂತೂ ಹಣವಿಲ್ಲ. ನನ್ನ ಪಕ್ಷದ ಶಾಸಕರು ಸಾಲಸೋಲ ಮಾಡಿ ಚುನಾವಣೆ ಎದುರಿಸಿದ್ದಾರೆ. ಅವೆಲ್ಲಾ ಇರುತ್ತವೆ. ಅದು ಪಕ್ಷದೊಳಗೆ ನಡೆದಿರುವ ಮಾತುಕತೆ. ನಾನು ಮುಖ್ಯಮಂತ್ರಿಯಾಗಿ ಬೇರೆ ಪಕ್ಷದವರನ್ನು ಕರೆದು ಯಾರಿಗಾ ದರೂ ಸ್ವೇಚ್ಛಾಚಾರವಾಗಿ ದುಡ್ಡು ಕೊಡುತ್ತೇನೆಂದು ಹೇಳಿದ್ದೇ ನೆಯೇ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಅವರ ಬಳಿ ಲೂಟಿ ಮಾಡಿದ ಹಣ ಇದೆ ಅವರು ಕೊಡುತ್ತಾರೆ. ನನ್ನ ಬಳಿ ಹಣ ಇಲ್ಲ. ನಾನು ಎಲ್ಲಿಂದ ಹಣ ಕೊಡಲಿ. ನಾನು ಅವರಿವರ ಬಳಿ ಭಿಕ್ಷೆ ಬೇಡಿ ಪ್ರಾದೇಶಿಕ ಪಕ್ಷ ನಡೆಸಬೇಕು. ಹಣದ ಪ್ರಕರಣವನ್ನು ಆಗಲೇ ವಿಧಾನಸಭೆಯಲ್ಲಿ ಚರ್ಚಿಸಲು, ಪ್ರಸ್ತಾಪ ಮಾಡಲು ಮುಂದಾಗಿದ್ದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಯವರು ಹುಬ್ಬಳ್ಳಿಯಲ್ಲಿ ಪಾಲ್ಗೊಳ್ಳುತ್ತಿರುವ ಕಾರ್ಯಕ್ರಮಕ್ಕೆ ತಮಗೆ ಆಹ್ವಾನ ನೀಡಿರಲಿಲ್ಲ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳಿಗೆ ರಾಜ್ಯ ಸರ್ಕಾರವೂ ಹಣ ನೀಡುತ್ತದೆ. ಆದರೆ, ಆ ಕಾರ್ಯಕ್ರಮಕ್ಕೆ ಆಹ್ವಾನ ನೀಡದೆ, ಪ್ರಧಾನಿ ಮೋದಿ ಕೀಳು ಮಟ್ಟದ ರಾಜಕಾರಣ ಮಾಡಿದ್ದಾರೆ ಎಂದು ಕುಮರಸ್ವಾಮಿ ಆರೋಪಿಸಿದ್ದಾರೆ.