Advertisement

ನನಗಿಲ್ಲವೇನು ಅಭಿವ್ಯಕ್ತಿ ಸ್ವಾತಂತ್ರ್ಯ?

01:46 PM Jul 21, 2017 | |

ಕಾಂಗ್ರೆಸ್‌ನವರು 3 ನಿಮಿಷದ ಟ್ರೇಲರ್‌ ನೋಡಿ ಪ್ರತಿಕ್ರಿಯಿಸುತ್ತಿದ್ದಾರೆ. ಮೊದಲು ಇವರೆಲ್ಲ ಪೂರ್ತಿ ಸಿನೆಮಾ ನೋಡಬೇಕು. ಆಗ ನಾನು ಹೊಸದೇನನ್ನೋ ಹೇಳಲು ಹೊರಟಿಲ್ಲ ಎನ್ನುವುದು ಅರ್ಥವಾಗುತ್ತದೆ.

Advertisement

ಜುಲೈ 28ಕ್ಕೆ ನನ್ನ ಹೊಸ ಸಿನೆಮಾ ಇಂದು ಸರ್ಕಾರ್‌ ಬಿಡುಗಡೆಯಾಗಲಿದೆ. ಇದಕ್ಕಾಗಿ ನನಗೆ ಒಂದೆಡೆ ಖುಷಿಯೂ ಆಗುತ್ತಿದೆ. ಇನ್ನೊಂದೆಡೆ ಒತ್ತಡವೂ ಎದುರಾಗುತ್ತಿದೆ. ಆದರೆ ಇದೇ ವೇಳೆಯಲ್ಲೇ ನನಗೆ ಹೆದರಿಕೆಯೂ ಆಗುತ್ತಿದೆ ಎನ್ನುವುದನ್ನು ಹೇಳಲು ಬಯಸುತ್ತೇನೆ. ಇಂದು ಸರ್ಕಾರ್‌ ಸಿನೆಮಾವನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳನ್ನು ನೋಡಿಯೇ ನನಗೆ ಈಗ ಹೆದರಿಕೆ ಆಗುತ್ತಿರುವುದು.   

ನಾನು ಇದನ್ನೆಲ್ಲ ನಿರೀಕ್ಷಿಸಿಯೇ ಇರಲಿಲ್ಲ (ಇಂದು ಸರ್ಕಾರ್‌ ಸಿನೆಮಾ ವಿಚಾರದಲ್ಲಿ ವಿವಾದ ಸೃಷ್ಟಿಯಾಗುತ್ತದೆ ಎಂದು). ನನ್ನ ಸಿನೆಮಾದಲ್ಲಿನ ಮುಖ್ಯ ಪಾತ್ರದ ಹೆಸರು ಇಂದು. ಆಕೆಯ ಸುತ್ತ ನಡೆಯುವ ಘಟನೆಗಳ ಬಗ್ಗೆ, ಇಂದು ಮತ್ತು ಆಕೆಯ ಪತಿಯ ಬಗ್ಗೆ, ಅವರ ಸಂಬಂಧದ ಬಗ್ಗೆ ಮತ್ತು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಏನಾಯಿತು ಎನ್ನುವುದರ ಬಗ್ಗೆ ಸುಂದರ ಕಥೆಯನ್ನು ಹೆಣೆದಿದ್ದೇನೆ. ಇದೇ ನನ್ನ ಸಿನೆಮಾದ ಕಥಾಹಂದರ. ಅಂದರೆ ಮಾನವ ಸಂಬಂಧಗಳ ಬಗೆಗಿನ ಕಥೆಯಿದು. ಸಿನೆಮಾದ ಮೂಲಕ ನಾನು ಹೇಳಲು ಉದ್ದೇಶಿಸಿರುವುದೂ ಇದೇ ಕಥೆಯನ್ನೇ. ಆದರೆ ಇಂದು ಸರ್ಕಾರ್‌ ಬಗ್ಗೆ ಈ ರೀತಿಯ ಪ್ರತಿಕ್ರಿಯೆ ಎದುರಾಗುತ್ತದೆ ಎಂದು ನನಗಂತೂ ಗೊತ್ತಿರಲಿಲ್ಲ. 

ಇಂದು ಸರ್ಕಾರ ಸಿನೆಮಾ ಒಬ್ಬ ವ್ಯಕ್ತಿಯ ಕುರಿತಾದದ್ದಲ್ಲ, ಅದು ಒಂದು ರಾಜಕೀಯದ ಪಕ್ಷದ ಕುರಿತ ಸಿನೆಮಾ ಕೂಡ ಅಲ್ಲ. ಸಿನೆಮಾದಲ್ಲಿ ಅದೆಲ್ಲ ಕಥೆಯ ಹಿನ್ನೆಲೆಯಲ್ಲಿ ಬರುವಂಥದ್ದಷ್ಟೆ. ಒಂದು ಮಾತಂತೂ ನಿಜ. ಈ ಸಿನೆಮಾದ ಗುಣದಲ್ಲಿ ರಾಜಕೀಯವಿದೆ. ಹಾಗೆಂದು ಇದು ರಾಜಕೀಯದ ಸಿನೆಮಾ ಅಂತೂ ಖಂಡಿತ ಇಲ್ಲ. ಅಲ್ಲದೇ ಇದು ತುರ್ತುಪರಿಸ್ಥಿತಿಯ ಮೇಲೆ ನಿರ್ಮಾಣವಾದ ಡಾಕ್ಯುಮೆಂಟರಿ ಡ್ರಾಮಾ ಕೂಡ ಅಲ್ಲ.  

ಇನ್ನು, ಸೆನ್ಸಾರ್‌ ಬೋರ್ಡ್‌ ನಡೆದುಕೊಂಡ ರೀತಿಯನ್ನು ನೋಡಿ ಆಘಾತದ ಜೊತೆಗೆ ಅಚ್ಚರಿಯೂ ಆಯಿತು. ಟ್ರೇಲರ್‌ ವಿಷಯದಲ್ಲಿ ಸೆನ್ಸಾರ್‌ ಬೋರ್ಡ್‌ಗೆ ಯಾವುದೇ ಸಮಸ್ಯೆಯಾಗಲಿಲ್ಲ. ಅದನ್ನು ಸುಲಭವಾಗಿ ಪಾಸು ಮಾಡಿಬಿಟ್ಟಿತು. ಆದರೆ ಸಿನೆಮಾದ ವಿಚಾರದಲ್ಲಿ ಮಾತ್ರ ಅದು ಬೇರೆಯದ್ದೇ ಮಾನದಂಡ ಬಳಸಿದ್ದೇಕೆ ಎಂದು ನನಗಂತೂ ಅರ್ಥವಾಗುತ್ತಿಲ್ಲ. ಸತ್ಯವೇನೆಂದರೆ ಮೊದಲಿನಿಂದಲೂ ನನಗೆ, ಈ ಸೆನ್ಸಾರ್‌ ಬೋರ್ಡ್‌ ಯಾವ ಮಾನದಂಡಗಳನ್ನು ಅನುಸರಿಸುತ್ತದೆ ಎನ್ನುವುದಂತೂ ತಿಳಿದಿಲ್ಲ, ಆದರೆ ಅದರ ನಡೆಯನ್ನು ನೋಡಿ ನನಗೆ ಆಘಾತವಾಗಿದ್ದಂತೂ ಸುಳ್ಳಲ್ಲ. ಈ ಕಾರಣಕ್ಕಾಗಿಯೇ ನಾನು ಈ ವಿಚಾರದಲ್ಲಿ ಇನ್ನೊಂದು ಪೀಠದತ್ತ ತೆರಳಲಿದ್ದೇನೆ. 

Advertisement

ಸೆನ್ಸಾರ್‌ ಮಂಡಳಿಯು ಇಂದು ಸರ್ಕಾರ್‌ ಸಿನೆಮಾದಲ್ಲಿ ಅಜಮಾಸು ಎಲ್ಲವನ್ನು(ಪದಗಳನ್ನು) ತೆಗೆದುಹಾಕಲು ಬಯಸುತ್ತಿದೆ. “ಕಿಶೋರ್‌ ಕುಮಾರ್‌’ ಎನ್ನುವ ಪದವನ್ನು ತೆಗೆದುಹಾಕಿ ಎಂದು ಅದು ಸೂಚಿಸಿದೆ. ಇದಷ್ಟೇ ಅಲ್ಲದೇ “ಆರ್‌ಎಸ್‌ಎಸ್‌’, “ಕಮ್ಯುನಿಸ್ಟ್‌’, “ಅಕಾಲಿ’ ಮತ್ತು “ಪಿಎಂ’ ಪದಗಳೂ ಸಿನೆಮಾದಲ್ಲಿ ಇರಬಾರದಂತೆ. ಅಲ್ಲ, ಇಂದು ನಮ್ಮ ಮಾಧ್ಯಮಗಳು ಈ ಪದಗಳನ್ನು ನಿತ್ಯವೂ ಬಳಸುತ್ತಿಲ್ಲವೇ? ಅದ್ಹೇಗೆ ಈ ಪದಗಳನ್ನೆಲ್ಲ ನಾನು ಸಿನೆಮಾದಿಂದ ತೆಗೆದುಹಾಕಲಿ? ಸಿನೆಮಾದ ಸಾರವಿರುವುದೇ ಈ ಪದಗಳಲ್ಲಿ. 

ಈ ಪದಗಳನ್ನು ಬಳಸಿರುವುದಕ್ಕೆ ಕಾರಣವೆಂದರೆ ಕಥೆಗೆ ಅವೆಲ್ಲ ಪ್ರಸ್ತುತವಾಗಿವೆ ಎನ್ನುವುದು. ಭಾರತದ ಪ್ರಖ್ಯಾತ ಲೇಖಕರ ಪುಸ್ತಕಗಳಲ್ಲಿ, ಸಾಕ್ಷ್ಯಚಿತ್ರಗಳಲ್ಲಿ ಅಥವಾ ಶಾ ಸಮಿತಿಯ ವರದಿಯಲ್ಲಿ ಏನು ಬರೆಯಲಾಗಿದೆಯೋ ಅದನ್ನೇ ನಾನು ಇಂದು ಸರ್ಕಾರ್‌ ಸಿನೆಮಾದಲ್ಲಿ ಬಳಸಿರುವುದು. ನಾನು ಈ ಸಿನೆಮಾದಲ್ಲಿ ಇದನ್ನೇ ಚಿತ್ರಿಸಲು ಪ್ರಯತ್ನಿಸಿದ್ದೇನಷ್ಟೆ. ಆಗಲೇ ಹೇಳಿದಂತೆ ಇದೆಲ್ಲವೂ ಕಥೆಗೆ ಹಿನ್ನೆಲೆಯಾಗಿರುವ ಅಂಶಗಳೇ ಹೊರತು ಅವೇ ಕಥೆಯಲ್ಲ. ಹೀಗಾಗಿ ನನಗೆ ಈಗಲೂ ಅರ್ಥವಾಗದ ಅಂಶವೆಂದರೆ ಟ್ರೇಲರ್‌ ಅನ್ನು ಯಾವುದೇ ವಿರೋಧವಿಲ್ಲದೇ ಕ್ಲಿಯರ್‌ ಮಾಡಿದ ಸೆನ್ಸಾರ್‌ ಮಂಡಳಿ, ಸಿನೆಮಾದ ವಿಚಾರದಲ್ಲಿ ಮಾತ್ರ ಭಿನ್ನ ಮಾನದಂಡ ಬಳಸಿದ್ದೇಕೆ ಎನ್ನುವುದು. 

ಕಟ್‌ಗಳ ಪಟ್ಟಿಯನ್ನು ನೋಡಿ ನಾನು ಅವರಿಗೆ(ಸೆನ್ಸಾರ್‌ ಮಂಡಳಿಗೆ) ಕೇಳಿದೆ. “”ಕಿಶೋರ್‌ ಕುಮಾರ್‌ಗೆ ಪರ್ಯಾಯ ಪದ ಯಾವುದು ಬಳಸಬೇಕೋ ಹೇಳಿ?”. ಈ ಪ್ರಶ್ನೆ ಕೇಳಿ ಅವರಂದರು “”ಬರೀ ಕುಮಾರ್‌ ಅಂತ ಬಳಸಿ ಸಾಕು”. ಅವರ ಮಾತು ನನಗೆ ಹಾಸ್ಯಾಸ್ಪದವೆನಿಸಿತು.  

ಯಾರೇ ಆಡಳಿತದಲ್ಲಿರಲಿ, ಮೊದಲಿನಿಂದಲೂ ಸೆಂಟ್ರಲ್‌ ಬೋರ್ಡ್‌ ಆಫ್ ಫಿಲ್ಮ್ ಸರ್ಟಿಫಿಕೇಶನ್‌(ಸಿಬಿಎಫ್ಸಿ)ಗೆ ಈ ಸಮಸ್ಯೆ ಇದ್ದೇ ಇದೆ. ನಾನು ಚಾಂದನಿ ಬಾರ್‌ ಸಿನೆಮಾ ಮಾಡಿದಾಗಲೂ ಇಂಥ ಸಂಕಷ್ಟವನ್ನುಎದುರಿಸಿದ್ದೇನೆ. ಅದಾದ ನಂತರ ಬಂದ ನನ್ನ ಪೇಜ್‌ 3, ಕಾರ್ಪೊರೇಟ್‌, ಫ್ಯಾಷನ್‌ ಮತ್ತು ಹೀರೋಯಿನ್‌ ಸಿನೆಮಾಗಳೂ ಕೂಡ ಸಿಬಿಎಫ್ಸಿ ಸನ್ನಿಧಾನದಲ್ಲಿ ಇಂಥದ್ದೇ ಕಟ್‌ಗಳನ್ನು ಎದುರಿಸಿವೆ. ಹೀಗಾಗಿ ಈಗ ಇದೆಲ್ಲ ನನಗೆ ಹೊಸ ವಿಚಾರವೇನೂ ಅಲ್ಲ. ಸಿನೆಮಾ ನಿರ್ದೇಶನ ಆರಂಭಿಸಿದ ದಿನದಿಂದ ಎದುರಿಸಿದ ಕಷ್ಟವನ್ನೇ ಈಗಲೂ ಎದುರಿಸುತ್ತಿದ್ದೇನಷ್ಟೆ.  ಇನ್ನು ಇಂದು ಸರ್ಕಾರ್‌ ವಿಚಾರಕ್ಕೆ ಬರೋಣ.  ಪ್ರಿಯಾ ಸಿಂಗ್‌ ಪೌಲ್‌ ಎಂಬ ಮಹಿಳೆ ಈ ಸಿನೆಮಾದ ವಿರುದ್ಧ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದಾಳೆ. ಈ ಪ್ರಿಯಾ ಸಿಂಗ್‌ ತಾನು ಸಂಜಯ್‌ ಗಾಂಧಿಯ ರಹಸ್ಯ ಮಗಳು ಎಂದು ಹೇಳಿಕೊಳ್ಳುತ್ತಾಳೆ. ಹೀಗಾಗಿ ಇಂದು ಸರ್ಕಾರ್‌ ಸಿನೆಮಾದಲ್ಲಿ ತನ್ನ ಕುಟುಂಬವನ್ನು ನೆಗೆಟಿವ್‌ ಆಗಿ ತೋರಿಸುವುದಕ್ಕೆ ಅವಕಾಶ ಮಾಡಿಕೊಡಬಾರದು ಎನ್ನುವುದು ಪ್ರಿಯಾ ಸಿಂಗ್‌ ವಾದ. ಆಕೆಯ ನೋಟೀಸ್‌ಗೆ ನಾವು ಸರಿಯಾಗಿಯೇ ಉತ್ತರಿಸಿದ್ದೇವೆ. ನಮ್ಮ ಕಾನೂನು ತಂಡ ಈ ವಿಚಾರದಲ್ಲಿ ಕೆಲಸ ಮಾಡುತ್ತಿದೆ. ಆದರೆ ವಿರೋಧ ವ್ಯಕ್ತಪಡಿಸುವವರಿಗೆಲ್ಲ ವಿಶೇಷ ಸ್ಕ್ರೀನಿಂಗ್‌ ಏರ್ಪಡಿಸಿ ಸಿನೆಮಾ ತೋರಿಸುವುದರಲ್ಲಿ ಅರ್ಥವಿಲ್ಲ ಎಂದೇ ನನಗನಿಸುತ್ತದೆ. 

ಈ ವಿಷಯ ಕಾಂಗ್ರೆಸ್‌ಗೂ ಅನ್ವಯವಾಗುತ್ತದೆ. ಈ ದೇಶದಲ್ಲಿ ಪರ್ಯಾಯ ಸೆನ್ಸಾರ್‌ ಬೋರ್ಡ್‌ ಇರುವುದಕ್ಕೆ ಸಾಧ್ಯವಿಲ್ಲ. ಇವತ್ತು ಒಂದು ಪಕ್ಷದವರು, “ರಿಲೀಸ್‌ಗೂ ಮುನ್ನ ನಮಗೆ ಸಿನೆಮಾ ತೋರಿಸಿ’ ಎಂದು ಕೇಳುತ್ತಾರೆ. ಅವರ ಮಾತು ಕೇಳಿದರೆ, ನಾಳೆ ಇನ್ನೊಂದು ಪಕ್ಷದವರೂ ತಾವು ಈ ಸಿನೆಮಾ ನೋಡಬೇಕು ಎನ್ನುತ್ತಾರೆ. ಅಲ್ಲ, ಅದೆಷ್ಟು ಬಾರಿ ಸಿನೆಮಾ ತೋರಿಸುತ್ತಾ ಕೂಡೋದು? ಹೀಗೆ ಮಾಡುತ್ತಾ ಹೋದರೆ ನಿಜಕ್ಕೂ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗುತ್ತದೆ.  

ಕಾಂಗ್ರೆಸ್‌ನವರು 3 ನಿಮಿಷದ ಟ್ರೇಲರ್‌ ನೋಡಿ ಪ್ರತಿಕ್ರಿಯಿಸುತ್ತಿದ್ದಾರೆ. ಹಿಂದೆ ಮುಂದೆ ಯೋಚಿಸದೇ ವರ್ತಿಸಿಬಿಡುವ ಗುಣ ಅವರಲ್ಲಿದೆ. ನಾನು ಹೇಳುವುದೇನೆಂದರೆ, ಮೊದಲು ಇವರೆಲ್ಲ ಪೂರ್ತಿ ಸಿನೆಮಾ ನೋಡಬೇಕು. ಆಗ ನಾನು ಹೊಸದೇನನ್ನೋ ಹೇಳಲು ಹೊರಟಿಲ್ಲ ಎನ್ನುವುದು ಅರ್ಥವಾಗುತ್ತದೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಏನಾಯಿತು ಎನ್ನುವುದನ್ನು ದೇಶದಲ್ಲಿ ದಾಖಲಿಸಲಾಗಿದೆ, ಆ ಬಗ್ಗೆ ಬಹಳ ವರ್ಷಗಳಿಂದ ಮಾತನಾಡುತ್ತಾ ಬರಲಾಗಿದೆ, ಮಾಧ್ಯಮಗಳು ಆಗಿನ ಘಟನೆಗಳನ್ನು ಮರುಸೃಷ್ಟಿಸುತ್ತಲೇ ಇರುತ್ತವೆ. ನಾನು ಇಂದು ಸರ್ಕಾರ್‌ ಸಿನೆಮಾದಲ್ಲಿ ತೋರಿಸಲು ಹೊರಟಿರುವುದೂ ಇದೇ ವಿಷಯಗಳನ್ನೇ. ಈ ವಿಷಯವಾಗಿ ಜನರಿಗೆ ಪುಸ್ತಕಗಳನ್ನು ಬರೆಯುವ ಸ್ವಾತಂತ್ರ್ಯ ಇದೆ ಎಂದಾದರೆ, ಒಬ್ಬ ಸಿನೆಮಾ ನಿರ್ದೇಶಕನಾಗಿ ನನಗೆ ಈ ಬಗ್ಗೆ ಮಾತನಾಡಲು ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲವೇನು? ಪುಸ್ತಕಗಳಿಗೆ ಒಪ್ಪಿಗೆ ಸಿಗುತ್ತದೆಂದಾದರೆ, ಸಿನೆಮಾವನ್ನು ಏಕೆ ಒಪ್ಪಬಾರದು? ಅದೇಕೆ ನೀವು ಇಂದು ಸರ್ಕಾರ್‌ ಸಿನೆಮಾಕ್ಕೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದ್ದೀರಿ?

ಮಧುರ್‌ ಭಂಡಾರ್ಕರ್‌ ಖ್ಯಾತ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next