Advertisement

“ನಾನೂ ಚೌಕಿದಾರ’: ಬಿಜೆಪಿ ಹೊಸ ಅಸ್ತ್ರ

12:30 AM Mar 17, 2019 | |

ನವದೆಹಲಿ: ಕಳೆದ ಲೋಕಸಭೆ ಚುನಾವಣೆಯಲ್ಲಿ “ಚಾಯ್‌ವಾಲಾ’ ಎಬ್ಬಿಸಿದ್ದ ಅಲೆಯು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಪಟ್ಟಕ್ಕೇರಿಸುವಲ್ಲಿ ನೆರವಾಗಿದ್ದು ಎಲ್ಲರಿಗೂ ನೆನಪಿದೆ. ಈ ಚುನಾವಣೆಯಲ್ಲೂ ಅಂಥದ್ದೇ ಮತ್ತೂಂದು ಅಲೆ ಏಳಬಹುದೇ ಎಂಬ ಅನುಮಾನ ಮೂಡಿದೆ. ಇದಕ್ಕೆ ಪುಷ್ಟಿ ನೀಡುವಂತೆ, ಪ್ರಧಾನಿ ನರೇಂದ್ರ ಮೋದಿಯವರೇ ಶನಿವಾರ “ಮೇ ಭಿ ಚೌಕಿದಾರ್‌'(ನಾನು ಕೂಡ ಕಾವಲುಗಾರ) ಎಂಬ ಅಭಿಯಾನವೊಂದಕ್ಕೆ ಚಾಲನೆ ನೀಡಿದ್ದಾರೆ. 

Advertisement

ಶನಿವಾರ ಈ ಕುರಿತು 3 ನಿಮಿಷಗಳ ವಿಡಿಯೋವೊಂದನ್ನು ಅವರು ಟ್ವೀಟ್‌ ಮಾಡಿದ್ದು, ಎಲ್ಲರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ. “ನಿಮ್ಮ ಚೌಕಿದಾರನು ದೃಢವಾಗಿ ನಿಂತಿದ್ದು, ದೇಶದ ಸೇವೆ ಮಾಡುತ್ತಿದ್ದಾನೆ. ಆದರೆ, ನಾನು ಏಕಾಂಗಿಯಲ್ಲ. ಭ್ರಷ್ಟಾಚಾರ, ಕೆಡುಕು, ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡುವ ಪ್ರತಿಯೊಬ್ಬನೂ ಚೌಕಿದಾರ, ಭಾರತದ ಪ್ರಗತಿಗಾಗಿ ಕೆಲಸ ಮಾಡುವ ಪ್ರತಿಯೊಬ್ಬನೂ ಚೌಕಿದಾರ, ಇಂದು ಪ್ರತಿಯೊಬ್ಬ ಭಾರತೀಯನೂ ಹೇಳುತ್ತಿದ್ದಾನೆ- ನಾನೂ ಚೌಕಿದಾರ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ. ಮಾ.31ರಂದು ನಡೆಯುವ ಪ್ರಧಾನಿ ಮೋದಿಯವರ “ಮೈ ಭಿ ಚೌಕಿದಾರ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡುವ ಮೂಲಕ ವಿಡಿಯೋ ಕೊನೆಯಾಗುತ್ತದೆ. ಪ್ರಧಾನಿ ವಿಡಿಯೋ ಕರೆ ನೀಡಿದ ಬೆನ್ನಲ್ಲೇ ಟ್ವಿಟರ್‌ನಲ್ಲಿ “ಮೈ ಭಿ ಚೌಕಿದಾರ್‌’ ಎಂಬ ಹ್ಯಾಷ್‌ಟ್ಯಾಗ್‌ ವಿಶ್ವಾದ್ಯಂತ ಟಾಪ್‌ ಟ್ರೆಂಡ್‌ ಆಗಿದೆ.

2014ರಲ್ಲಿ ಅಧಿಕಾರಕ್ಕೆ ಬರುವ ಮೊದಲು ಮೋದಿ, “ನಾನು ದೇಶದ ಚೌಕಿದಾರ. ಬೇರೆಯವರಿಗೆ ಭ್ರಷ್ಟಾಚಾರ ಮಾಡಲೂ ಬಿಡುವುದಿಲ್ಲ, ನಾನೂ ಮಾಡುವುದಿಲ್ಲ’ ಎಂದು ಘೋಷಿಸಿದ್ದರು. ಆದರೆ, ರಫೇಲ್‌ ಡೀಲ್‌ ಪ್ರಕರಣದಲ್ಲಿ ಉದ್ಯಮಿ ಅನಿಲ್‌ ಅಂಬಾನಿಗೆ ಮೋದಿ ನೆರವು ನೀಡಿದ್ದಾರೆ ಹಾಗೂ ವಿಜಯ ಮಲ್ಯ, ನೀರವ್‌ ಮೋದಿಯಂಥ ದೇಶಭ್ರಷ್ಟರಿಗೆ ಪರಾರಿಯಾ ಗಲು ಸಹಾಯ ಮಾಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಇತ್ತೀಚೆಗೆ ಎಲ್ಲ ಭಾಷಣಗಳಲ್ಲೂ “ಚೌಕಿದಾರ್‌ ಚೋರ್‌ ಹೈ'(ಕಾವಲುಗಾರನೇ ಕಳ್ಳ) ಎಂಬ ವಾಕ್ಯ ಬಳಸಿ ವಾಗ್ಧಾಳಿ ನಡೆಸುತ್ತಿದ್ದಾರೆ. ಈಗ ಇದನ್ನೇ ಎನ್‌ಕ್ಯಾಷ್‌ ಮಾಡಲು ಹೊರಟಿರುವ ಬಿಜೆಪಿ, ಮೈ ಭಿ ಚೌಕಿದಾರ್‌ ಅಭಿಯಾನ ಆರಂಭಿಸಿದೆ.

2014ರ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ನಾಯಕ ಮಣಿಶಂಕರ್‌ ಅಯ್ಯರ್‌ ಅವರ “ಚಾಯ್‌ವಾಲಾ’ ಹೇಳಿಕೆಯು ಬಿಜೆಪಿಗೆ ವರವಾಗಿ ಪರಿಣಮಿಸಿತ್ತು. ಪ್ರಧಾನಿ ಮೋದಿಯವರನ್ನು ಚಾಯ್‌ವಾಲಾ ಎಂದು ಟೀಕಿಸಿದ್ದನ್ನೇ ಚುನಾವಣಾ ದಾಳವಾಗಿ ಬಳಸಿಕೊಂಡಿದ್ದ ಬಿಜೆಪಿ, “ಚಾಯ್‌ ಪೇ ಚರ್ಚಾ’ದಂಥ ಕಾರ್ಯಕ್ರಮಗಳನ್ನು ಕೈಗೊಂಡು ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಅದು ದೊಡ್ಡ ಅಭಿಯಾನವಾಗಿಯೂ ರೂಪುಗೊಂಡಿತ್ತು. ಅಲ್ಲದೆ, ಪ್ರಧಾನಿ ಮೋದಿ ಅವರೂ ತಮ್ಮ ರ್ಯಾಲಿಗಳಲ್ಲಿ “ಚಹಾ ಮಾರುವವ’ ಪದವನ್ನು ಪದೇ ಪದೆ ಪ್ರಸ್ತಾಪಿಸುವ ಮೂಲಕ ಮತ ಬೇಟೆಯಾಡಿದ್ದರು.

ಪಶ್ಚಾತ್ತಾಪ ಆಯಿತೇ ಎಂದು ರಾಹುಲ್‌ ಪ್ರಶ್ನೆ: “ಮೈ ಭಿ ಚೌಕಿದಾರ್‌’ ಅಭಿಯಾನಕ್ಕೆ ಮೋದಿ ಕರೆ ನೀಡಿದ ಬೆನ್ನಲ್ಲೇ ರಾಹುಲ್‌ ಗಾಂಧಿ ಟ್ವಿಟರ್‌ನಲ್ಲಿ ಮತ್ತೆ ಪ್ರಧಾನಿ ಮೋದಿಯವರ ಕಾಲೆಳೆದಿದ್ದಾರೆ. “ಶ್ರೀಯುತ ಮೋದಿಯವರೇ, ರಕ್ಷಣಾತ್ಮಕ ಟ್ವೀಟ್‌ ಮಾಡಿದ್ದೀರಿ! ನಿಮಗೆ ಸ್ವಲ್ಪವಾದರೂ ಪಶ್ಚಾತ್ತಾಪ ಆಗಿದೆಯಲ್ಲವೇ’ ಎಂದು ಟ್ವೀಟ್‌ ಮಾಡಿದ್ದಾರೆ. ಜೊತೆಗೆ, ಮಲ್ಯ, ನೀರವ್‌,  ಚೋಕ್ಸಿ, ಅನಿಲ್‌ ಅಂಬಾನಿ ಹಾಗೂ ಗೌತಮ್‌ ಅದಾನಿ ಅವರೊಂದಿಗೆ ಪ್ರಧಾನಿ ಮೋದಿ ಫೋಟೋಗಳನ್ನು ಹಾಕಿ ಅಪ್‌ಲೋಡ್‌ ಮಾಡಿದ್ದಾರೆ. ಇದೇ ವೇಳೆ, “10 ಲಕ್ಷ ರೂ.ಗಳ ಸೂಟು ಧರಿಸುವ, ಬ್ಯಾಂಕ್‌ ವಂಚಕರಾದ ಮಲ್ಯ-ಮೆಹುಲ್‌-ನೀರವ್‌ಗೆ ಸಹಾಯ ಮಾಡುವ, ತಮ್ಮ ಸ್ವಂತ ಪ್ರಚಾರಕ್ಕಾಗಿ 52 ಸಾವಿರ ಕೋಟಿ ರೂ.ಗಳ ಸಾರ್ವಜನಿಕ ಹಣ ಪೋಲು ಮಾಡುವ, ಜನರ ಹಣದಲ್ಲಿ 84 ದೇಶಗಳ ಪ್ರವಾಸ ಮಾಡಲು 2,020 ಕೋಟಿ ರೂ. ವೆಚ್ಚ ಮಾಡುವ ಹಾಗೂ ರಫೇಲ್‌ ಜೆಟ್‌ ಡೀಲ್‌ನಲ್ಲಿ 30 ಸಾವಿರ ಕೋಟಿ ರೂ. ಲೂಟಿಗೆ ನೆರವಾದ, ಏಕೈಕ ಚೌಕಿದಾರನೇ ಕಳ್ಳ’ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುಜೇìವಾಲಾ ಟ್ವೀಟ್‌ ಮಾಡಿದ್ದಾರೆ.

Advertisement

ಯೋಜನೆಗಳ ವಿವರ: ಹಿಂದಿನ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ವಾಗ್ಧಾನ ಮಾಡಿದ್ದ ಅಂಶಗಳು ಮತ್ತು ಅವುಗಳ ಅನುಷ್ಠಾನದ ಬಗ್ಗೆ ಶೀಘ್ರದಲ್ಲಿಯೇ ಬಿಜೆಪಿ ವಿವರ ಬಿಡುಗಡೆ ಮಾಡಲಿದೆ. 549 ವಾಗ್ಧಾನಗಳ ಪೈಕಿ 520ನ್ನು ಈಡೇರಿಸಲಾಗಿದೆ. ಮೋದಿ ನೇತೃತ್ವದ ಸರ್ಕಾರ 2014ರಲ್ಲಿ ವಾಗ್ಧಾನ ಮಾಡಿದ್ದಂತೆ ಭರವಸೆ ಈಡೇರಿಸಿಲ್ಲ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಸೂಕ್ತ ರೀತಿ ಉತ್ತರಿಸಲು ಪಕ್ಷ ವಿವರಗಳನ್ನು ಬಿಡುಗಡೆ ಮಾಡಲಿದೆ.

ಬಿ.ಸಿ. ಖಂಡೂರಿ ಪುತ್ರ ಕಾಂಗ್ರೆಸ್‌ಗೆ ಸೇರ್ಪಡೆ
ದೇಶಾದ್ಯಂತ ಬೇರೆ ಬೇರೆ ಪಕ್ಷಗಳ ನಾಯಕ ರನ್ನು ತಮ್ಮತ್ತ ಸೆಳೆದುಕೊಳ್ಳುವ “ರಾಜಕೀಯ ಆಟ’ ಬಿರುಸಾಗಿಯೇ ಸಾಗಿದೆ. ಉತ್ತರಾಖಂಡದ ಬಿಜೆಪಿ ಹಿರಿಯ ನಾಯಕ ಬಿ.ಸಿ.ಖಂಡೂರಿ ಅವರ ಪುತ್ರ ಮನೀಷ್‌ ಖಂಡೂರಿ ಶನಿವಾರ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಬಿ.ಸಿ. ಖಂಡೂರಿ ಪ್ರತಿನಿಧಿಸಿದ್ದ ಪೌರಿ ಕ್ಷೇತ್ರದಿಂದಲೇ ಪುತ್ರ ಮನೀಷ್‌ರನ್ನು ಕಾಂಗ್ರೆಸ್‌ ಕಣಕ್ಕಿಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಮತ್ತೂಂದು ಬೆಳವಣಿಗೆಯಲ್ಲಿ, ಉತ್ತರಪ್ರದೇಶದ ಪ್ರಯಾಗ್‌ರಾಜ್‌ನ ಹಾಲಿ ಸಂಸದ ಶ್ಯಾಮ್‌ಚರಣ್‌ ಗುಪ್ತಾ ಬಿಜೆಪಿಗೆ ರಾಜೀನಾಮೆ ನೀಡಿದ್ದು, ಎಸ್‌ಪಿ ಟಿಕೆಟ್‌ನಲ್ಲಿ ಬಂದಾ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ. ಇನ್ನು ಒಡಿಶಾದಲ್ಲಿ ಬಿಜೆಡಿ ಸಂಸದ ಬಾಲಭದ್ರ ಮಾಝಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಒಡಿಶಾ ಘಟಕ ಅಧ್ಯಕ್ಷ ಬಸಂತ್‌ ಪಾಂಡಾ ಆಡಳಿತಾರೂಢ ಬಿಜೆಡಿಗೆ ಸೇರಿದ್ದಾರೆ. ಅಸ್ಸಾಂ ಬಿಜೆಪಿ ಸಂಸದ ರಾಮ್‌ ಪ್ರಸಾದ್‌ ಸರ್ಮಾಹ್‌ ರಾಜೀನಾಮೆ ನೀಡಿದ್ದಾರೆ. ಒಡಿಶಾದಲ್ಲಿ ಕಾಂಗ್ರೆಸ್‌ ಶಾಸಕ ಪ್ರಕಾಶ್‌ ಬೆಹೆರಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಪುಲ್ವಾಮಾ ದಾಳಿ ನಡೆಯುತ್ತಿದ್ದರೆ, ಮೋದಿ ಫೋಟೋಗೆ ಪೋಸ್‌ ಕೊಡುತ್ತಿದ್ದರು 
“ಅತ್ತ ಪುಲ್ವಾಮಾದಲ್ಲಿ ನಮ್ಮ ಯೋಧರ ಹತ್ಯೆಯಾಗುತ್ತಿದ್ದರೆ, ಇತ್ತ ಪ್ರಧಾನಿ ನರೇಂದ್ರ ಮೋದಿಯವರು ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನದಲ್ಲಿ ಸಾಕ್ಷ್ಯಚಿತ್ರಕ್ಕಾಗಿ ಫೋಟೋಗೆ ಪೋಸ್‌ ನೀಡುತ್ತಿದ್ದರು’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಉತ್ತರಾ ಖಂಡದ ಡೆಹ್ರಾಡೂನ್‌ನಲ್ಲಿ ಶನಿವಾರ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, “ಪುಲ್ವಾಮಾದಲ್ಲಿ 40 ಯೋಧರು ಹುತಾತ್ಮರಾದ ಸುದ್ದಿ ಕೇಳಿದ ತಕ್ಷಣ ನಾವು, ಸರ್ಕಾರಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದೆವು ಮಾತ್ರವಲ್ಲ, ಎಲ್ಲ ಕಾರ್ಯಕ್ರಮಗಳನ್ನೂ ರದ್ದು ಮಾಡಿದೆವು. ಆದರೆ, ಆ ಸಮಯದಲ್ಲಿ ಮೋದಿಯವರು ಏನು ಮಾಡುತ್ತಿದ್ದರು ಎಂಬುದು ನಿಮಗೆ ಗೊತ್ತಿರಬಹುದು. ನ್ಯಾಷನಲ್‌ ಜಿಯೋಗ್ರಾಫಿಕ್‌ ಡಾಕ್ಯುಮೆಂಟರಿಗಾಗಿ ಕ್ಯಾಮೆರಾ ಮುಂದೆ ಪೋಸ್‌ ಕೊಡುತ್ತಿದ್ದರು. ಇಷ್ಟೆಲ್ಲ ಮಾಡಿದ ಬಳಿಕವೂ ಅವರು ದೇಶಭಕ್ತಿಯ ಬಗ್ಗೆ ಮಾತನಾಡುತ್ತಾರೆ’ ಎಂದು ವಾಗ್ಧಾಳಿ ನಡೆಸಿದರು. ಇದೇ ವೇಳೆ, ರಫೇಲ್‌ ಡೀಲ್‌ ಕುರಿತು ನನ್ನ ಯಾವುದೇ ಪ್ರಶ್ನೆಗಳಿಗೂ ಪ್ರಧಾನಿ ಉತ್ತರಿಸಿಲ್ಲ ಎಂದೂ ರಾಹುಲ್‌ ಆರೋಪಿಸಿದ್ದಾರೆ.

ಕಾಂಗ್ರೆಸ್‌ಗೆ ಬೈದ ಮಾಧವನ್‌
ಇಸ್ರೋದ ಮಾಜಿ ವಿಜ್ಞಾನಿ ನಂಬಿ ನಾರಾಯಣನ್‌ ಜೀವನ ಕಥೆಯಾಧರಿತ “ರಾಕೆಟರಿ: ದಿ ನಂಬಿ ಎಫೆಕ್ಟ್’ ಸಿನಿಮಾ ನಿರ್ದೇಶಿಸುತ್ತಿರುವ ತಮಿಳು ನಟ ಆರ್‌. ಮಾಧವನ್‌ ಕಾಂಗ್ರೆಸ್‌ ವಿರುದ್ಧ ಟ್ವೀಟ್‌ ಮಾಡಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ. ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ವಿಡಿಯೋವೊಂದನ್ನು ತಿರುಚಿ ಕಾಂಗ್ರೆಸ್‌ ಟ್ವಿಟರ್‌ ಖಾತೆ ಟ್ವೀಟ್‌ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಮಾಧವನ್‌, ಇದು ಕೆಟ್ಟ ಅಭಿರುಚಿಯ ಟ್ವೀಟ್‌. ರಾಜಕೀಯ ದ್ವೇಷ ಏನೇ ಇದ್ದರೂ, ಈ ವಿಡಿಯೋ ಮೂಲಕ ನೀವು ದೇಶವನ್ನು ಹೀಗಳೆದಿದ್ದೀರಿ. ಈ ಖಾತೆಯಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಟ್ವೀಟ್‌ ಹೇಳಿದ್ದಾರೆ.

ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರು ಹಳೇ ವಿಚಾರಗಳೆತ್ತಿಕೊಂಡು ಪ್ರಚಾರ ಮಾಡುವ ಮೂಲಕ ಕೇಂದ್ರ ಸರ್ಕಾರದ ವೈಫ‌ಲ್ಯಗಳನ್ನು ಮುಚ್ಚಿಡುವ ಹಾಗೂ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಮಾಯಾವತಿ, ಬಿಎಸ್‌ಪಿ ನಾಯಕಿ

ಆಯುಷ್ಮಾನ್‌ ಭಾರತ್‌ನಿಂದ ಬಡಜನರಿಗೆ 5 ಲಕ್ಷ ರೂ.ಗಳವರೆಗೆ ಚಿಕಿತ್ಸೆ ಸಿಗುತ್ತದೆ ಎಂದು ಮೋದಿ ಹೇಳಿದ್ದು ಶುದ್ಧ ಸುಳ್ಳು. ಬಡವರಿಗೆ ಸಿಗುತ್ತಿರುವುದು ಕೇವಲ 50,000 ರೂ.ಗಳ ಪ್ರಯೋಜನ ಮಾತ್ರ. ಸರ್ಕಾರ ತುಂಬುತ್ತಿರುವುದು ಕೇವಲ 1,100 ವಾರ್ಷಿಕ ಪ್ರೀಮಿಯಂ. 
 ಜೈರಾಂ ರಮೇಶ್‌, ಕಾಂಗ್ರೆಸ್‌ ನಾಯಕ

ಬಾಲಕೋಟ್‌ನಲ್ಲಿ ಭಾರತೀಯ ವಾಯುಪಡೆ ನಡೆಸಿದ ವೈಮಾನಿಕ ದಾಳಿಯ ಬಗ್ಗೆ ಸಾಕ್ಷ್ಯಗಳನ್ನು ಕೇಳುವ ವಿರೋಧ ಪಕ್ಷಗಳು ಸ್ವಯಂ ಗೋಲು ದಾಖಲಿಸಿಕೊಳ್ಳುವ ಮೂಲಕ ಬಿಜೆಪಿಗೆ ಅನುಕೂಲ ಕಲ್ಪಿಸಿಕೊಟ್ಟಿವೆ. 
ಅರುಣ್‌ ಜೇಟ್ಲಿ, ಕೇಂದ್ರ ಹಣಕಾಸು ಸಚಿವ

ರೆಡ್ಡಿ ಸಾವಿನ ಸುತ್ತ ರಾಜಕೀಯ
ಸಂಶಯಾಸ್ಪದವಾಗಿ ಅಸುನೀಗಿರುವ ಮಾಜಿ ಸಚಿವ ವೈ.ಎಸ್‌. ವಿವೇ ಕಾನಂದ ರೆಡ್ಡಿ ಸಾವಿಗೆ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತ್ತು ಪುತ್ರ ನರಾ ಲೋಕೇಶ್‌ ಕಾರಣ ಎಂದು ವೈ.ಎಸ್‌.ಆರ್‌.ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಜಗನ್ಮೋಹನ ರೆಡ್ಡಿ ಆರೋಪಿಸಿದ್ದಾರೆ. ಹೀಗಾಗಿ, ಈ ಘಟನೆ ರಾಜಕೀಯ ವಿಚಾರವಾಗಿ ಪರಿವರ್ತನೆ ಗೊಂಡಿದೆ. ಜಗನ್‌ ಆರೋಪ ತಳ್ಳಿಹಾಕಿರುವ ಸಚಿವ ಆದಿನಾರಾಯಣ ರೆಡ್ಡಿ, ಚಿಕ್ಕಪ್ಪನ ಸಾವಿನ ವಿಚಾರದಿಂದ ರಾಜಕೀಯ ಲಾಭ ಪಡೆದು ಕೊಳ್ಳಲು ಜಗನ್‌ ಮುಂದಾಗಿದ್ದಾರೆ ಎಂದು ದೂರಿದ್ದಾರೆ.  ನಾಯ್ಡು ನೇತೃತ್ವದ ಸರ್ಕಾರ ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚನೆ ಮಾಡಿದೆ.

ಚುನಾವಣಾ  ಝಲಕ್‌
ಮತದಾರರ ಮೇಲೆ ಪ್ರಭಾವ ಬೀರದಂತೆ ತಡೆಯಲು ಎಲ್ಲ ಮಸೀದಿಗಳಲ್ಲೂ ವಿಶೇಷ ವೀಕ್ಷಕರನ್ನು ನೇಮಿಸಿ: ಮುಖ್ಯ ಚುನಾವಣಾ ಅಧಿಕಾರಿಗೆ ಬಿಜೆಪಿ ದೆಹಲಿ ಘಟಕ ಮನವಿ
ನೆಲ್ಲೂರು ಕ್ಷೇತ್ರದ ಟಿಡಿಪಿ ಅಭ್ಯರ್ಥಿ ಎಂದು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಮಾಜಿ ಸಚಿವ ಪ್ರಭಾಕರ ರೆಡ್ಡಿ ವೈಸ್ಸಾರ್‌ ಕಾಂಗ್ರೆಸ್‌ ಸೇರ್ಪಡೆ; ಟಿಡಿಪಿಗೆ ಶಾಕ್‌
ತೆಲಂಗಾಣದಲ್ಲಿ ಕಾಂಗ್ರೆಸ್‌ನ 6 ಶಾಸಕರು ಟಿಆರ್‌ಎಸ್‌ಗೆ ಪಕ್ಷಾಂತರ; ಸಂಕಷ್ಟದಲ್ಲಿ ಹಸ್ತ ಪಕ್ಷ
ತಮಿಳುನಾಡಿನಲ್ಲೇ ಸ್ಪರ್ಧಿಸುವಂತೆ ರಾಹುಲ್‌ಗಾಂಧಿಗೆ ರಾಜ್ಯ ಕಾಂಗ್ರೆಸ್‌ ಒತ್ತಾಯ

ಪ್ರಚಾರಕ್ಕೆ ಪರ್ರಿಕರ್‌ ಇಲ್ಲ
1994ರಿಂದಲೂ ಗೋವಾದಲ್ಲಿ ಬಿಜೆಪಿ ಪ್ರಚಾರದ ಮುಂಚೂಣಿಯ ಲ್ಲಿದ್ದ ಸಿಎಂ ಮನೋಹರ್‌ ಪರ್ರಿಕರ್‌ರನ್ನು ಈ ಬಾರಿ ಗೋವಾ ಜನತೆ ಮಿಸ್‌ ಮಾಡಿಕೊಳ್ಳುತ್ತಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಅವರು ಈ ಚುನಾವಣೆ ವೇಳೆ ಪ್ರಚಾರದಿಂದ ದೂರ ಉಳಿಯಲಿದ್ದಾರೆ. ರಾಜ್ಯ ಬಿಜೆಪಿಯ ಸಾಮಾನ್ಯ ಶಾಸಕರಾಗಿದ್ದ ಪರ್ರಿಕರ್‌ 2000ನೇ ಇಸವಿಯಿಂದ ಈವರೆಗೆ 4 ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಈಗ ಅವರ ಗೈರುಹಾಜರಿಯಿಂದ ಪಕ್ಷಕ್ಕೆ ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಶಂಕೆ ಮೂಡಿದೆ. ಆದರೆ, ಇದನ್ನು ಅಲ್ಲಗಳೆದಿರುವ ಬಿಜೆಪಿ, ನಾವು ಅವರ ಮಾರ್ಗದರ್ಶನದಲ್ಲೇ ಚುನಾವಣೆ ಎದುರಿಸುತ್ತಿದ್ದೇವೆ ಎಂದಿದೆ.

ಮುಲಾಯಂ ಪರ ಮಾಯಾ ಪ್ರಚಾರ
ಉತ್ತರ ಪ್ರದೇಶದ ಮೈನ್‌ಪುರಿಯಿಂದ ಎಸ್‌ಪಿ ಅಭ್ಯರ್ಥಿಯಾಗಿರುವ ಮುಲಾಯಂ ಸಿಂಗ್‌ ಯಾದವ್‌ ಪರ ಬಿಎಸ್‌ಪಿ ನಾಯಕಿ ಮಾಯಾವತಿ ಪ್ರಚಾರ ನಡೆಸಲಿದ್ದಾರೆ. ಏ.19ರಂದು ಬಿಎಸ್‌ಪಿ ವರಿಷ್ಠೆ ಪ್ರಚಾರ ನಡೆಸುವ ಮೂಲಕ ಇತಿಹಾಸ ಸೃಷ್ಟಿಸಲಿದ್ದಾರೆ. ಪುತ್ರ ಅಖೀಲೇಶ್‌ ಯಾದವ್‌ ಬಿಎಸ್‌ಪಿ ಜತೆಗೆ ಸ್ಥಾನ ಹೊಂದಾಣಿಕೆ ಮತ್ತು ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಿರ್ಧಾರ ಪ್ರಕಟಿಸಿದಾಗ ಮುಲಾಯಂ ಬಹಿರಂಗವಾಗಿಯೇ ಆಕ್ಷೇಪ ಮಾಡಿದ್ದರು. ಎರಡು ದಶಕಗಳಿಗೂ ಹೆಚ್ಚು ಕಾಲ ಎಸ್‌ಪಿ-ಬಿಎಸ್‌ಪಿ ನಾಯಕರು ಮುಖ ನೋಡಿಕೊಂಡದ್ದೇ ಇಲ್ಲ. ಹೀಗಿದ್ದಾಗಿಯೂ ಮುಲಾಯಂ ಪರ ಮಾಯಾವತಿ ಹೇಗೆ ಪ್ರಚಾರ ಮಾಡಲಿದ್ದಾರೆ ಎನ್ನುವುದೇ ಕುತೂಹಲ. ಬಿಎಸ್‌ಪಿಯ ಸ್ಥಳೀಯ ನಾಯಕರು ಹೇಳುವ ಪ್ರಕಾರ ಏ.19ರ ಮಾಯಾವತಿ ಕಾರ್ಯಕ್ರಮ ನಿಗದಿಯಾಗಿದ್ದು, ಮೈನ್‌ಪುರಿಯ ಸ್ಥಳೀಯ ಘಟಕಕ್ಕೆ ಅದರ ಮಾಹಿತಿಯೂ ರವಾನೆಯಾಗಿದೆ. ಮಾಯಾವತಿ ಕೂಡ ಮುಲಾಯಂ ಸಿಂಗ್‌ ಯಾದವ್‌ರನ್ನು ಪ್ರಚಾರದ ವೇಳೆ ಗೌರವದಿಂದ ಕಾಣಬೇಕು ಎಂದು ಕಟ್ಟಪ್ಪಣೆ ಹೊರಡಿಸಿದ್ದಾರೆ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next