Advertisement

ನ್ಯಾಯಾಲಯದ ಆದೇಶ ಧಿಕ್ಕರಿಸಿ ಮದ್ಯ ಮಾರಾಟ

03:10 AM Jul 03, 2017 | Karthik A |

ನೆಲ್ಯಾಡಿ: ನೆಲ್ಯಾಡಿಯ ಹೃದಯ ಭಾಗದಲ್ಲಿ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಒಂದು ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಂತೇ ಇದ್ದು, ಎದುರುಗಡೆಯ ಬಾಗಿಲು ಮುಚ್ಚಿ ಹಿಂಬದಿ ಬಾಗಿಲು ತೆರೆದು ಎಂದಿನಂತೇ ವಹಿವಾಟು ನಡೆಸುತ್ತಿರುವುದರ ವಿರುದ್ಧ ನೆಲ್ಯಾಡಿಯ ಸಾರ್ವಜನಿಕರು ಇಲಾಖೆಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ. ಸುಪ್ರೀಂಕೋರ್ಟ್‌ ಈಗಾಗಲೇ ಹೆದ್ದಾರಿಯ ಅಂಚಿನಲ್ಲಿರುವ ಮದ್ಯದಂಗಡಿಗಳು ಹೆದ್ದಾರಿಯಿಂದ ಸುಮಾರು 500 ಮೀಟರ್‌ ದೂರಕ್ಕೆ ಸ್ಥಳಾಂತರಿಸಬೇಕೆಂದು ಕಟ್ಟುನಿಟ್ಟಿನ ಆದೇಶ ಜಾರಿ ಮಾಡಿದೆ. ಈ ಆದೇಶದನ್ವಯ ಈಗಾಗಲೇ ಬದಲಿ ವ್ಯವಸ್ಥೆ ಮಾಡಿಕೊಂಡಿರುವ ಮದ್ಯದಂಗಡಿಗಳ ಪರವಾನಿಗೆಯನ್ನು ಮಾತ್ರ ನವೀಕರಣಗೊಳಿಸಲಾಗಿದ್ದು ಈ ಪ್ರಕಾರ ಜಿಲ್ಲೆಯಲ್ಲಿ ಬಹುತೇಕ ಮದ್ಯದಂಗಡಿಗಳು ಜು.1ರಿಂದ ಬದಲಿ ಕಟ್ಟಡಕ್ಕೆ ಸ್ಥಳಾಂತರಗೊಳ್ಳಬೇಕು ಇಲ್ಲವೇ ವ್ಯವಹಾರ ಸ್ಥಗಿತಗೊಳಿಸಬೇಕು. ಆದರೆ ನೆಲ್ಯಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೇ ಇರುವ ಮದ್ಯದಂಗಡಿಗೆ ಈ ಯಾವ ಕಾನೂನುಗಳೂ ಅನ್ವಯವೇ ಆಗದಂತೆ ವ್ಯವಹರಿಸುತ್ತಿರುವುದು ಸಾರ್ವಜನಿಕರು ಹುಬ್ಬೇರಿಸುವಂತೆ ಮಾಡಿದೆ. ಹೆದ್ದಾರಿಗೆ ತಾಗಿಕೊಂಡಿರುವ ಮದ್ಯದಂಗಡಿಯನ್ನು ಸ್ಥಳದಲ್ಲೇ ಉಳಿಸಿಕೊಂಡು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಅಬಕಾರಿ ಇಲಾಖೆಯೂ ಇಲ್ಲಿ ಕೈಜೋಡಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

Advertisement

ಧಾರ್ಮಿಕ ಕೇಂದ್ರದ ಎದುರಿನಲ್ಲೇ ಬದಲಿ ಹಾದಿ
ಈ ಮದ್ಯದಂಗಡಿಗೆ ಈಗ ಬದಲಿ ಹಾದಿ ಮಾಡಿರುವುದು ಸ್ವಾಮಿ ಗುರುನಾರಾಯಣ ಮಂದಿರದ ಆವರಣದ ಬದಿಯಲ್ಲಿಯೇ. ಹೊಸ ಆದೇಶದ ಪ್ರಕಾರ ಪ್ರಾರ್ಥನಾ ಕೇಂದ್ರಗಳ ಆಸುಪಾಸಿನಿಂದಲೂ ಸಾಕಷ್ಟು ದೂರದಲ್ಲಿ ಮದ್ಯದಂಗಡಿಗಳಿರ‌ಬೇಕು ಅನ್ನುವ ಸ್ಪಷ್ಟ ನಿರ್ದೇಶವಿದ್ದರೂ ಅದನ್ನು ಇಲ್ಲಿ ಗಾಳಿಗೆ ತೂರಲಾಗಿದೆ ಎಂದು ದೇಗುಲದ ಭಕ್ತರು  ದೂರಿದ್ದಾರೆ.

ಅಬಕಾರಿ ಅಧಿಕಾರಿಗಳಿಂದ ತಪ್ಪು ಮಾಹಿತಿ
ಈ ಮದ್ಯದಂಗಡಿಗೆ ಯಾವುದೇ ತೊಂದರೆ ಇಲ್ಲದೆ ಪಾನಪ್ರಿಯರು ಎಂದಿನಂತೆ ಹೋಗಿದ್ದಾರೆ. ಇದೇ ಕಟ್ಟಡಕ್ಕೆ ಸುತ್ತುಬಳಸಿ ಹೊಸ ಹಾದಿಯನ್ನು ದಿಢೀರ್‌ ಆಗಿ ಜೂನ್‌ 30ರಂದು ನಿರ್ಮಿಸಲಾಗಿದೆ. ಈ ಹಾದಿಯಲ್ಲಿ ಚರಂಡಿಯೊಂದು ಇದ್ದು ಅದಕ್ಕೆ ಅಡ್ಡಲಾಗಿ ಅಡಕೆ ಮರದ ತುಂಡುಗಳನ್ನು ಹಾಕಿ ಸಂಕ ನಿರ್ಮಿಸಲಾಗಿದೆ. ಹೆದ್ದಾರಿ ಬದಿಯಲ್ಲೇ ಈ ರೀತಿ ರಾಜಾರೋಷವಾಗಿ ಮದ್ಯದ ವ್ಯಾಪಾರ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರು ಅಬಕಾರಿ ಇಲಾಖಾಧಿಕಾರಿಗಳನ್ನು ಕೇಳಿದಾಗ ಅಂಗಡಿಯವರು ಈ ಹಿಂದೆಯೇ ನಿರ್ದಿಷ್ಟ ದೂರದಲ್ಲಿ ಇರುವುದನ್ನು ಖಚಿತ ಪಡಿಸಿ ಪರವಾನಿಗೆ ಪಡೆಯಲು ಅರ್ಜಿ ನೀಡಿದ್ದಾರೆ ಅನ್ನುವ ಸಬೂಬುಗಳನ್ನು ಹೇಳುತ್ತಿದ್ದಾರೆ.

ಈ ಬಗ್ಗೆ ನೆಲ್ಯಾಡಿ ಮತ್ತು ಆಸುಪಾಸಿನ ಗ್ರಾಮಸ್ಥರು, ಮಹಿಳೆಯರೂ, ವಿವಿಧ ಸಂಘಟನೆಗಳು ಸಾರ್ವಜನಿಕವಾಗಿ ದೂರನ್ನು ಸಂಬಂದಪಟ್ಟ ಇಲಾಖೆಗೆ ಮತ್ತು ಸರಕಾರಕ್ಕೆ ನೀಡಲು ನಿರ್ಧರಿಸಿದ್ದಾರೆ. ಸೂಕ್ತ ಸ್ಪಂದನೆ ಕೂಡಲೇ ದೊರೆಯದಿದ್ದಲ್ಲಿ ಬೀದಿಗಿಳಿದು ಪ್ರತಿಭಟಿಸುವ ನಿರ್ಧಾರವನ್ನು ಅವರು ಕೈಗೊಂಡಿದ್ದಾರೆ. ಪುತ್ತೂರು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಪದ್ಮನಾಭ ಶೆಟ್ಟಿ , ನೆಲ್ಯಾಡಿ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ರವಿಚಂದ್ರ ಗೌಡ ಹೊಸವೊಕ್ಲು, ನೆಲ್ಯಾಡಿ ವಲಯ ಹಿಂದೂ ಜಾಗರಣಾ ವೇದಿಕೆ ಸಂಚಾಲಕರು ರವಿಪ್ರಸಾದ್‌ ಶೆಟ್ಟಿ ಬಾರ್‌ ಮಾಲಕರು ನ್ಯಾಯಾಲಯದ ಆದೇಶವನ್ನು ಪಾಲಿಸಬೇಕಾಗಿದೆ ಅಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next