ಬಳ್ಳಾರಿ: “ಡಿಸಿಎಂ ಹುದ್ದೆಗೆ ಸಂಬಂಧಿ ಸಿದಂತೆ ಸದ್ಯಕ್ಕೆ ನನಗೆ ಯಾವುದೇ ಸ್ಪಷ್ಟತೆಯಿಲ್ಲ. ಆದರೆ, ಸಮಯ ಬಂದಾಗ ಉಪ ಮುಖ್ಯಮಂತ್ರಿ ಆಗೇ ಆಗುತ್ತೇನೆ’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, “ಈ ವಿಚಾರವಾಗಿ ಶಾಸಕರಿಗೆ ಮಾತನಾಡಲು ಸ್ವಾತಂತ್ರವಿದೆ. ಆದರೆ, ಪಕ್ಷಕ್ಕೆ ಮುಜುಗರ ಮಾಡುವ ಕೆಲಸ ಆಗಬಾರದು.
ಪಕ್ಷದ ರಾಜ್ಯ ಉಪಾಧ್ಯಕ್ಷನಾಗಿ, ಸರ್ಕಾರದಲ್ಲಿ ಆರೋಗ್ಯ, ಹಿಂದುಳಿದ ಇಲಾಖೆ ಸಚಿವನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು, ಸಮಯ ಬಂದಾಗ ಉಪಮುಖ್ಯ ಮಂತ್ರಿ ಆಗುವೆ’ ಎಂದರು. ಶಾಸಕ ಜಿ.ಸೋಮಶೇಖರ ರೆಡ್ಡಿ ಸೇರಿದಂತೆ ಹಲವು ಶಾಸಕರಿಗೆ ನನ್ನ ಮೇಲೆ ಅಭಿಮಾನ ಇರಬಹುದು. ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ, ಮಂಗಳೂರು ಭಾಗ ದಲ್ಲಿ ನನ್ನ ಮೇಲೆ ಅಭಿಮಾನವಿದೆ ಎಂದರು.
ಗವಿಯಪ್ಪ ಮನವೊಲಿಕೆಗೆ ಯತ್ನ: ಮಾಜಿ ಶಾಸಕ ಎಚ್.ಆರ್.ಗವಿಯಪ್ಪ ಅವರಿಗೆ ಪಕ್ಷ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಿದೆ. ಮುಂದಿನ 3 ವರ್ಷ ಸರ್ಕಾರ ಉಳಿಸಿಕೊಳ್ಳುವ ಸಲುವಾಗಿ ವಿಜಯನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಅವರನ್ನು ಗೆಲ್ಲಿಸಿಕೊಳ್ಳಬೇಕು. ಇಂಥ ಸಂದರ್ಭದಲ್ಲಿ ಪಕ್ಷ ನೀಡಿದ ಸ್ಥಾನಮಾನವನ್ನು ಸ್ವೀಕರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಿಗಮ-ಮಂಡಳಿ ಹುದ್ದೆ ಸ್ವೀಕರಿಸುವಂತೆ ಅವರ ಮನವೊಲಿಸಲು ಪ್ರಯತ್ನಿಸಲಾಗುವುದು ಎಂದರು.
ಹಂಪಿ ಉತ್ಸವ ಸರಳ ಆಚರಣೆ: ಹಂಪಿ ಉತ್ಸವ ಆಚರಣೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ, ಸಿಎಂ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗಿದೆ. ಕಳೆದ ವರ್ಷ ಎರಡು ದಿನಗಳ ಕಾಲ ಸರಳವಾಗಿ ಆಚರಿಸಲಾಗಿದ್ದು, ಈ ಬಾರಿಯೂ ಎರಡು ದಿನಗಳ ಕಾಲ ಆಚರಿಸುವಂತೆ ಸಿಎಂ ಸೂಚಿಸಿದ್ದಾರೆ. ಹೀಗಾಗಿ, ಶೀಘ್ರದಲ್ಲೇ ದಿನಾಂಕ ನಿಗದಿ ಸೇರಿ ಇನ್ನಿತರ ವಿಷಯಗಳ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಶ್ರೀರಾಮುಲು ತಿಳಿಸಿದರು.