Advertisement

ಇದೇ ಸ್ಪೀಡ್‌ ಇದ್ದರೆ ಒಂದೇ ವಾರಕ್ಕೆ ಸೇಫ್

12:00 PM Jan 26, 2018 | Team Udayavani |

“ಇದೇ ಸ್ಪೀಡ್‌ನ‌ಲ್ಲಿ ಹೋದರೆ ಈ ವಾರದ ಎಂಡ್‌ಗೆ ನಾನು ಫ‌ುಲ್‌ ಸೇಫ್ ಆಗ್ತಿನಿ…’
ಹೀಗೆ ತುಂಬಾ ವಿಶ್ವಾಸದಲ್ಲಿ ಖುಷಿಯಿಂದ ಹೇಳಿಕೊಂಡರು ನಿರ್ಮಾಪಕ ಸುರೇಶ್‌. “ಈ “ರಾಜು ಕನ್ನಡ ಮೀಡಿಯಂ’ಗೆ ಎಲ್ಲೆಡೆಯಿಂದ ಸಿಕ್ಕಾಪಟ್ಟೆ ಮೆಚ್ಚುಗೆ ಸಿಕ್ಕಿದೆ. ಒಂದು ಸಿನಿಮಾದಲ್ಲಿ ಮೂರು ಸಿನಿಮಾಗಳನ್ನು ನೋಡಿದ ಖುಷಿ ಪ್ರೇಕ್ಷಕರದ್ದು. ಹಾಗಾಗಿ, ನಾನು ಈಗಲೇ ಗಳಿಕೆ ಬಗ್ಗೆ ಹೇಳುವುದು ಕಷ್ಟ. ಆದರೆ ಒಂದಂತೂ ಸತ್ಯ. “ಮಿಸ್ಟರ್‌ ಅಂಡ್‌ ಮಿಸ್ಸಸ್‌ ರಾಮಾಚಾರಿ’,” ಮುಂಗಾರು ಮಳೆ’ ಮತ್ತು “ರಾಜಕುಮಾರ’ ಚಿತ್ರಗಳಂತೆ ಇದೂ ಆ ಸಾಲಿಗೆ ಸೇರುವ ಸಿನಿಮಾ ಆಗುತ್ತೆ ಎಂಬ ನಂಬಿಕೆ ನನ್ನದು. ಗೊತ್ತಿಲ್ಲ, ಈ ಮೂರು ಚಿತ್ರಗಳಲ್ಲಿ ಇದು ಯಾವ ರೀತಿಯ ಚಿತ್ರವಾಗುತ್ತೋ ಎಂಬುದು. ಇದೇ ಲೆವೆಲ್‌ನಲ್ಲಿ ಸಿನಿಮಾ ಹೋದರೆ, ದೊಡ್ಡ ಸಿನಿಮಾಗಳ ಲಿಸ್ಟ್‌ಗೆ ಸೇರುವುದು ಖಚಿತ’ ಎಂದು ಹೆಮ್ಮೆಯಿಂದ ಹೇಳಿಕೊಂಡರು ಸುರೇಶ್‌.

Advertisement

“ಆರಂಭದಲ್ಲಿ ಕಥೆ ಕೇಳಿ, ಸಿನಿಮಾ ಮಾಡುವುದು ಪಕ್ಕಾ ಆದಮೇಲೆ, ಚಿತ್ರ ಹೀಗೆಯೇ ಮಾಡಬೇಕು, ಹಾಗೇ ಜನರಿಗೆ ತಲುಪಿಸಬೇಕು, ಇಂತಿಷ್ಟು ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡಬೇಕು ಎಂಬ ಬಗ್ಗೆ ಸ್ಪಷ್ಟತೆ ಇಟ್ಟುಕೊಂಡು ಚಿತ್ರ ಮಾಡಿದೆವು. ನಮ್ಮ ಪ್ಲಾನ್‌ ಸಕ್ಸಸ್‌ ಆಯ್ತು. ಜನರು ಮೆಚ್ಚಿದರು. ಚಿತ್ರವೂ ಸಕ್ಸಸ್‌ ಆಯ್ತು. ಮೈಸೂರಿನಲ್ಲಿ ಈ ವಾರದಿಂದ ಚಿತ್ರಮಂದಿರ ಹೆಚ್ಚುತ್ತಿದೆ. ವಿದೇಶದಲ್ಲೂ ಎರಡು ವಾರಗಳ ಬಳಿಕ ತೆರೆ ಕಾಣುತ್ತಿದೆ. ವಿದ್ಯಾರ್ಥಿಗಳು ಮತ್ತು ಟೆಕ್ಕಿಗಳು ಗ್ರೂಪ್ಸ್‌ ಟಿಕೆಟ್‌ ಬುಕ್‌ ಮಾಡಿ ಚಿತ್ರ ವೀಕ್ಷಿಸುತ್ತಿದ್ದಾರೆ. ಐಎಂಡಿಬಿಯಲ್ಲಿ 9.1 ರೇಟಿಂಗ್‌ ಬಂದಿದೆ. ಕನ್ನಡ ಚಿತ್ರಕ್ಕೆ ಇಷ್ಟೊಂದು ರೇಟಿಂಗ್‌ ಸಿಕ್ಕಿದ್ದು ಇದೇ ಮೊದಲು ಎಂಬ ಖುಷಿ ಇದೆ. ಈ ಗೆಲುವಿನ ಹಿಂದೆ ಇಡೀ ತಂಡದ ಶ್ರಮವಿದೆ. ಇಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರ ಸಹಕಾರ ಮರೆಯುವುದಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೂ ಚಿತ್ರ ತೋರಿಸುವ ಯೋಚನೆ ಇದೆ. ಸರ್ಕಾರದ ಮಟ್ಟದಲ್ಲಿ ಪರ್ಮಿಷನ್‌ ಪಡೆದು ಆ ಬಗ್ಗೆ ಯೋಚಿಸುವುದಾಗಿ’ ಹೇಳಿದರು ಸುರೇಶ್‌.

ನಿರ್ದೇಶಕ ನರೇಶ್‌ ಕುಮಾರ್‌ಗೆ ಇದು ಎರಡನೇ ಗೆಲುವು. “ಪಿಆರ್‌ಓ ನಾಗೇಂದ್ರ ಅವರ ಸಹಕಾರದಿಂದ ಈ ಚಿತ್ರ ಮಾಡೋಕೆ ಸಾಧ್ಯವಾಯ್ತು. ಅವರು ಸುರೇಶ್‌ ಬಳಿ ಕಥೆ ಹೇಳಲು ಕಳುಹಿಸದಿದ್ದರೆ, ಈ ಚಿತ್ರ ಮಾಡಲು ಆಗುತ್ತಿರಲಿಲ್ಲ. ಒಳ್ಳೆಯ ಚಿತ್ರವನ್ನು ಯಾವತ್ತೂ ಕನ್ನಡಿಗರು ಕೈ ಬಿಟ್ಟಿಲ್ಲ ಎಂಬುದಕ್ಕೆ ಈ ಚಿತ್ರ ಸಾಕ್ಷಿಯಾಗಿದೆ. ಇಲ್ಲಿ ಪ್ರತಿಯೊಬ್ಬರು ನನ್ನ ಕನಸಿಗೆ ಬಣ್ಣ ತುಂಬಿದ್ದಾರೆ. ಶೇಖರ್‌ ಚಂದ್ರ, ಕಿರಣ್‌, ಗಿರಿ ಎಲ್ಲರೂ ಅವರವರ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದರು. ಎಲ್ಲಕ್ಕಿಂತ ಹೆಚ್ಚಾಗಿ ನಿರ್ಮಾಪಕರು, ದೊಡ್ಡ ಮಟ್ಟದಲ್ಲಿ ಚಿತ್ರ ತಯಾರಿಸಿ, ರಿಲೀಸ್‌ ಮಾಡಿದರು. ಏನು ಕೇಳಿದರೂ ಇಲ್ಲ ಎನ್ನದೆ, ಅದ್ಧೂರಿಯಾಗಿ ಸಿನಿಮಾ ಮಾಡಿದ್ದಾರೆ. ಸಿಎಂಗೆ ತೋರಿಸುವಾಸೆ ಇದೆ. ಅವರು ನೋಡುವ ಭರವಸೆ ಕೊಟ್ಟಿದ್ದಾರೆ. ಆರ್‌.ಅಶೋಕ್‌ ನೋಡಿ ಮೆಚ್ಚಿದ್ದಾರೆ. ಉಳಿದಂತೆ ಸದಾನಂದಗೌಡರು, ಯಡಿಯೂರಪ್ಪ ಅವರಿಗೆ ತೋರಿಸುವ ಆಸೆ ಇದೆ’ ಎಂದರು ನರೇಶ್‌ಕುಮಾರ್‌.

ಗುರುನಂದನ್‌ಗೆ ಮೊದಲು ನಿರ್ದೇಶಕರು ಕಥೆ ಹೇಳಿದಾಗ, ರಿಸ್ಕ್ ಸಬ್ಜೆಕ್ಟ್ ಇದು ಜನ ಒಪ್ಪುತ್ತಾರಾ ಎಂಬ ಪ್ರಶ್ನೆ ಎದ್ದಿತ್ತಂತೆ. ಕೊನೆಗೆ ನಿರ್ಮಾಪಕರು ರಿಸ್ಕ್ ಕಥೆಯನ್ನೇ ಮಾಡೋಣ ಅಂದಾಗ, ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದರಿಂದ ಈ ಸಕ್ಸಸ್‌ ಸಿಕ್ಕಿದೆ. ಇದು ಒಬ್ಬಿಬ್ಬರ ಗೆಲುವಲ್ಲ. ಇಡೀ ತಂಡ ಹಗಲಿರುಳು ಕೆಲಸ ಮಾಡಿದ್ದರಿಂದ ಈ ಗೆಲುವು ಸಿಕ್ಕಿದೆ. ಹೈದರಾಬಾದ್‌, ಪೂನಾ, ಮುಂಬೈನಿಂದ ನನ್ನ ಫ್ರೆಂಡ್ಸ್‌ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಅಂದರು ಗುರುನಂದನ್‌. ಕಿರಣ್‌ ರವೀಂದ್ರನಾಥ್‌ ಅವರಿಗೆ ಚಿತ್ರದ ಹಾಡುಗಳನ್ನು ಜನರು ಮೆಚ್ಚಿದ ಹಾಗೆ, ಚಿತ್ರವನ್ನೂ ಒಪ್ಪಿದ್ದಾರೆ. ಕಾನ್ಸೆಪ್ಟ್ ಬೇಸ್ಡ್ ಸಿನಿಮಾ ಮಾಡಿದರೆ, ಸಕ್ಸಸ್‌ ಗ್ಯಾರಂಟಿ ಎಂಬುದಕ್ಕೆ ಈ ಚಿತ್ರ ಉದಾಹರಣೆ ಅಂದರು ಕಿರಣ್‌.

Advertisement

Udayavani is now on Telegram. Click here to join our channel and stay updated with the latest news.

Next