Advertisement

ಪ್ರಯತ್ನವಿಲ್ಲದಿದ್ದರೆ ಯಾವ ಕೆಲಸವೂ ಆಗಲ್ಲ

06:39 AM Apr 11, 2019 | Team Udayavani |

ಚಾಮರಾಜನಗರ: ಕೇಂದ್ರ ಸರ್ಕಾರವೇ ಅನುದಾನ ನೀಡಿದರೂ ಸಂಸದನ ಶ್ರಮ, ಸತತ ಪ್ರಯತ್ನ ಇಲ್ಲದಿದ್ದರೆ ಯಾವ ಯೋಜನೆಯೂ ಅನುಷ್ಠಾನಕ್ಕೆ ಬರುವುದಿಲ್ಲ. ತಾವು ಮಾಡಿರುವ ಅನೇಕ ಕೆಲಸಗಳನ್ನು ಬಿಜೆಪಿ ಸಂಸದರೇಕೆ ಮಾಡಿಲ್ಲ? ಎಂದು ಚಾ.ನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಸಂಸದ ಆರ್‌.ಧ್ರುವನಾರಾಯಣ ಪ್ರಶ್ನಿಸಿದರು.

Advertisement

ನಗರದದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಬುಧವಾರ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ನಾವು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸದೇ ಯಾವ ಕೆಲಸವೂ ಆಗುವುದಿಲ್ಲ. ಪ್ರಸ್ತಾವನೆ ಸಲ್ಲಿಸಿ, ಅದರ ಅನುಷ್ಠಾನಕ್ಕೆ ಸತತ ಓಡಾಟ, ಒತ್ತಡ, ಶ್ರಮ, ಕಚೇರಿಗೆ ಭೇಟಿ, ಸಚಿವರಿಗೆ ಮನವರಿಕೆ ಮಾಡದಿದ್ದರೆ ಅಭಿವೃದ್ಧಿ ಕೆಲಸಗಳು ನಡೆಯುವುದಿಲ್ಲ ಎಂದರು.

ಕೆಲಸಕ್ಕೆ ದೊರೆತ ಮನ್ನಣೆ: ನಮ್ಮ ಜಿಲ್ಲೆಗೆ ತಂದಿರುವ ಕೇಂದ್ರೀಯ ವಿದ್ಯಾಲಯ ಎಷ್ಟೋ ಜಿಲ್ಲೆಗಳಲ್ಲಿ ಇನ್ನೂ ಆಗಿಲ್ಲ. ಚಿತ್ರದುರ್ಗದಂತಹ ಹಳೆಯ ಜಿಲ್ಲೆಯಲ್ಲೇ ಕೇಂದ್ರೀಯ ವಿದ್ಯಾಲಯ ಇಲ್ಲ. ಬಿಜೆಪಿ ಸಂಸದರೇ ತಮ್ಮ ಅವಧಿಯಲ್ಲಿ ಮಾಡಿರುವಷ್ಟು ಕೆಲಸಗಳನ್ನು ಮಾಡಿಲ್ಲ. ಕೇಂದ್ರೀಯ ವಿದ್ಯಾಲಯ ಉದ್ಘಾಟನೆಗೆ ಬಂದಿದ್ದ ಅಂದಿನ ಕೇಂದ್ರ ಸಚಿವ ದಿ. ಅನಂತಕುಮಾರ್‌ ಅವರು, ಧ್ರುವನಾರಾಯಣ ತಾವು ಮೆಚ್ಚಿದ ಸಂಸದ ಎಂದು ಪ್ರಶಂಸಿಸಿದ್ದರು. ವಿಪಕ್ಷದವರೇ ಹೀಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ತಮ್ಮ ಕೆಲಸಕ್ಕೆ ದೊರೆತ ಮನ್ನಣೆಯಾಗಿದೆ ಎಂದರು.

ನಬಾರ್ಡ್‌ ಅನುದಾನ: ರಾಜ್ಯ ಸರ್ಕಾರದ ಯೋಜನೆಗಳಾದ ಕೃಷಿ ಕಾಲೇಜು, ಕಾನೂನು ಕಾಲೇಜುಗಳನ್ನು ಜಿಲ್ಲೆಗೆ ಮಂಜೂರು ಮಾಡಿಸಲು ಜಿಲ್ಲೆಯ ಸಂಸದನಾಗಿ ಸತತ ಪರಿಶ್ರಮ ಹಾಕಿದ್ದೇನೆ. ನಾನೊಬ್ಬ ಕೃಷಿ ಪದವೀಧರನಾಗಿ ಜಿಲ್ಲೆಯಲ್ಲಿ ಕೃಷಿ ಕಾಲೇಜು ಮಂಜೂರು ಮಾಡಿಸಬೇಕೆಂಬ ಕನಸು ಹೊತ್ತು, ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿ ಜಾರಿಗೊಳಿಸಿದ್ದೇನೆ. ಅದಕ್ಕೆ ನಬಾರ್ಡ್‌ ಅನುದಾನ ತಂದಿದ್ದೇನೆ ಎಂದು ತಿಳಿಸಿದರು.

ಶಾಶ್ವತ ಕುಡಿಯುವ ನೀರು ಯೋಜನೆ: ಎಡಬೆಟ್ಟದ ಬಳಿ 70 ಎಕರೆ ಜಾಗ ದೊರಕಿಸಿಕೊಟ್ಟಿದ್ದೇನೆ. ರಾಮನಗರ ಬಿಟ್ಟರೆ ಈ ಕಡೆ ಕಾನೂನು ಕಾಲೇಜಿರಲಿಲ್ಲ. ಸಚಿವರಿಗೆ ಮನವಿ ಮಾಡಿ ಜಿಲ್ಲೆಗೆ ಕಾನೂನು ಕಾಲೇಜು ಮಂಜೂರು ಮಾಡಿಸಿದ್ದೇನೆ. ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಯೋಜನೆಗೆ ಶೇ. 50ರಷ್ಟು ಕೇಂದ್ರ ಸರ್ಕಾರದ ಅನುದಾನ ತಂದಿದ್ದೇನೆ ಎಂದರು.

Advertisement

ಪುನರಾಯ್ಕೆ ಮಾಡುತ್ತಾರೆಂಬ ವಿಶ್ವಾಸ: ಕಳೆದ 10 ವರ್ಷಗಳಿಂದ ಕ್ಷೇತ್ರಕ್ಕೆ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮಾನದಂಡವಾಗಿಟ್ಟುಕೊಂಡು ತಮಗೆ ಮತ ಹಾಕಿ ಎಂದು ಮತದಾರರಲ್ಲಿ ಕೇಳುತ್ತಿದ್ದೇನೆ. ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನದ ಬಗ್ಗೆ ನಿಯಮಿತವಾಗಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದೇನೆ. ಕೇಂದ್ರೀಯ ವಿದ್ಯಾಲಯ, ಏಕಲವ್ಯ ಶಾಲೆ, ರಾಷ್ಟ್ರೀಯ ಹೆದ್ದಾರಿ 209, 212ರ ಅಭಿವೃದ್ಧಿ 97 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಯ ಪಟ್ಟಣದೊಳಗಿನ ರಸ್ತೆಗಳ ಅಭಿವೃದ್ಧಿ, ನಂಜನಗೂಡು-ಚಾಮರಾಜನಗರ ರಾಜ್ಯ ಹೆದ್ದಾರಿ,

ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ, ಭರಚುಕ್ಕಿ ಪ್ರದೇಶಾಭಿವೃದ್ಧಿ, ಸಂಸದರ ಅನುದಾನ ಸಮರ್ಪಕ ಬಳಕೆ, ಸಂಸದರ ಆದರ್ಶ ಗ್ರಾಮ ಯೋಜನೆಯಲ್ಲಿ 2 ಗ್ರಾಮಗಳ ಅಭಿವೃದ್ಧಿ, ಪಾಸ್‌ಪೋರ್ಟ್‌ ಸೇವಾಕೇಂದ್ರ, ರೈಲ್ವೆ ಇಜ್ಜತ್‌ ಪಾಸ್‌, ನಂಜನಗೂಡಿನವರೆಗೆ ಮಾತ್ರ ಇದ್ದ ಗೂಡ್ಸ್‌ ರೈಲು ಸೇವೆ, ಚಾಮರಾಜನಗರದವರೆಗೂ ವಿಸ್ತರಣೆ ಇಂಥ ಅನೇಕಾರು ಅಭಿವೃದ್ಧಿ ಕೆಲಸಗಳನ್ನು ಸಂಸದನಾಗಿ ಕೈಗೊಂಡಿದ್ದೇನೆ ಎಂದು ಧ್ರುವನಾರಾಯಣ ವಿವರಿಸಿದರು.

ಹೀಗಾಗಿ ಮತದಾರರು ತಾವು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿ ತಮ್ಮನ್ನು ಪುನರಾಯ್ಕೆ ಮಾಡುತ್ತಾರೆಂಬ ದೃಢವಿಶ್ವಾಸ ತಮ್ಮಲ್ಲಿದೆ ಎಂದು ಅವರು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಇ. ಮಂಜುನಾಥ್‌, ಪ್ರಧಾನ ಕಾರ್ಯದರ್ಶಿ ದೇವರಾಜು ಕಪ್ಪಸೋಗೆ ಇದ್ದರು.

ಪ್ರಸಾದ್‌ರನ್ನು ಅಂಬೇಡ್ಕರ್‌ಗೆ ಹೊಲಿಸುವುದು ಹಾಸ್ಯಾಸ್ಪದ
ಚಾಮರಾಜನಗರ: ಮಾಜಿ ಸಚಿವ ಬಿ. ಶ್ರೀರಾಮುಲು ಅವರು ವಿ. ಶ್ರೀನಿವಾಸಪ್ರಸಾದ್‌ ಅವರನ್ನು ಡಾ.ಅಂಬೇಡ್ಕರ್‌ ಅವರಿಗೆ ಹೋಲಿಸಿರುವುದು ಹಾಸ್ಯಾಸ್ಪದ. ಅಂಬೇಡ್ಕರ್‌ ಅವರನ್ನು ಯಾರಿಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ಅಭ್ಯರ್ಥಿ ಧ್ರುವನಾರಾಯಣ ಟೀಕಿಸಿದರು.

ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದೂ ಕೋಡ್‌ ಮಸೂದೆಯನ್ನು ಮಂಡಿಸಲು ಅವಕಾಶ ನೀಡದ ಕಾರಣ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಹೊರಬಂದ ಡಾ. ಅಂಬೇಡ್ಕರ್‌ ಅವರೆಲ್ಲಿ? ಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಪಕ್ಷ ಬಿಟ್ಟ ಇವರೆಲ್ಲಿ? ಎಂದು ಪ್ರಶ್ನಿಸಿದರು.

ಪಕ್ಷದಲ್ಲಿರುವವರೆಗೂ ನನ್ನನ್ನು ಪ್ರಸಾದ್‌ ಹಾಡಿ ಹೊಗಳುತ್ತಿದ್ದರು. ತಮ್ಮ ಉತ್ತರಾಧಿಕಾರಿ ಧ್ರುವನಾರಾಯಣ ಎಂದು ಹೇಳುತ್ತಿದ್ದರು. 2013ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಒತ್ತಡ ತಂದು, ನನ್ನ ಗೆಲುವಿಗೆ ಶ್ರಮಿಸಿದವನು ಧ್ರುವ ಎಂದು ಹೇಳುತ್ತಿದ್ದರು. ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಬೇಕು ಎಂದು ನಾನು ಶಕ್ತಿಮೀರಿ ಪ್ರಯತ್ನಿಸಿದೆ.

ಪಕ್ಷ ಬಿಡದಂತೆ ಮನವಿ ಮಾಡಿದೆ. ಆದರೂ ಅವರು ಪಕ್ಷ ಬಿಟ್ಟು, ಈಗ ನನ್ನನ್ನು ಟೀಕಿಸುತ್ತಿದ್ದಾರೆ. ಪಕ್ಷಾಂತರಿಯಾದರೂ, ತತ್ವಾಂತರಿಯಲ್ಲ ಎನ್ನುತ್ತಾರೆ. ಹಾಗಾದರೆ ತಿ. ನರಸೀಪುರ ಮತ್ತು ವರುಣಾದಲ್ಲಿ ತಮ್ಮ ಪಕ್ಷವಾದ ಬಿಜೆಪಿಗೆ ಠೇವಣಿ ಇಲ್ಲದಂತೆ ಮಾಡಿ ಜೆಡಿಎಸ್‌ ಅಭ್ಯರ್ಥಿ ಗೆಲ್ಲಿಸುತ್ತಾರೆ. ಇದು ತತ್ವವೇ? ಎಂದು ಧ್ರುವ ಪ್ರಶ್ನಿಸಿದರು.

ಉಮ್ಮತ್ತೂರು ಗ್ರಾಮದಲ್ಲಿ ನನ್ನ ಭಾಷಣದ ಸಂದರ್ಭದಲ್ಲಿ ಅಡಚಣೆ ಮಾಡಿದವರು 8-10 ಮಂದಿ ಬಿಜೆಪಿ ಕಾರ್ಯಕರ್ತರು. ನಾನು ಮತಯಾಚನೆಗೆ ಬಂದಿದ್ದೇನೆ. ಪ್ರಶ್ನೆಗಳಿದ್ದರೆ ಕೇಳಿ ಎಂದೆ. ಆದರೂ ಬೇಕಂತಲೇ ಮೋದಿ, ಮೋದಿ ಎಂದು ಕೂಗುತ್ತಾ ಅಡಚಣೆ ಉಂಟುಮಾಡಿದರು. ಅವರು ಜನಸಾಮಾನ್ಯರಲ್ಲ, ಬಿಜೆಪಿ ಕಾರ್ಯಕರ್ತರು ಎಂದು ಅವರು ಸ್ಪಷ್ಟನೆ ನೀಡಿದರು.

ಉಮ್ಮತ್ತೂರು ಗ್ರಾಮವನ್ನು ಶಾಸಕನಾಗಿದ್ದಾಗ ಮೊದಲ ಸುವರ್ಣಗ್ರಾಮ ಯೋಜನೆಗೆ ಆಯ್ಕೆ ಮಾಡಿ ಅಭಿವೃದ್ಧಿ ಕೆಲಸ ಮಾಡಿಸಿದ್ದೇನೆ. ಉಮ್ಮತ್ತೂರು ಕೆರೆಗೆ ನೀರು ತುಂಬಿಸುವ ಯೋಜನೆಗೆ ಗ್ರಾಮದ ಕೆರೆ ಸೇರಿಸಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಗ್ರಾಮಕ್ಕೆ ಕುಡಿಯುವ ನೀರು ಸೌಲಭ್ಯ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next