Advertisement

ದೇವೇಗೌಡರು ಪ್ರಧಾನಿಯಾಗಿ ಮುಂದುವರಿದಿದ್ದರೆ ಕಾಶ್ಮೀರ ವಿವಾದ ಇತ್ಯರ್ಥ: ಪೇಜಾವರ ಶ್ರೀ

11:25 PM May 14, 2019 | Lakshmi GovindaRaj |

ಉಡುಪಿ: “ಎಚ್‌.ಡಿ.ದೇವೇಗೌಡ ಅವರು ಪ್ರಧಾನಿಯಾಗಿ ಮುಂದುವರಿದಿದ್ದರೆ ಕಾಶ್ಮೀರ ಸಮಸ್ಯೆ ಕೂಡ ಬಗೆಹರಿಯುತ್ತಿತ್ತು’ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಮಂಗಳವಾರ ದೇವೇಗೌಡ ದಂಪತಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಅನಂತರ ಉಡುಪಿ ಗೋವಿಂದ ಕಲ್ಯಾಣಮಂಟಪದಲ್ಲಿ ಜನ್ಮನಕ್ಷತ್ರ ಸಮಾರಂಭದಲ್ಲಿ ಪಾಲ್ಗೊಂಡ ಸಂದರ್ಭ ಪೇಜಾವರ ಶ್ರೀಗಳು ಆಶೀರ್ವಚನ ನೀಡಿದರು.

“ದೇವೇಗೌಡ ಅವರು ಹಲವು ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಅವರು ರಾಜ್ಯದ ಪ್ರಾಮಾಣಿಕ, ಹೆಮ್ಮೆಯ ರಾಜಕಾರಣಿ. ಅವರು ಪ್ರಧಾನಿಯಾಗಿದ್ದಾಗ ಹೊಸದಿಲ್ಲಿಯಲ್ಲಿ ಮಠಕ್ಕೆಂದು ಒಂದು ಎಕರೆ ಜಾಗವನ್ನು ಕಡಿಮೆ ಬೆಲೆಗೆ ನೀಡಿದ್ದರು. ಅದರಲ್ಲಿ ಮಠ ಆಗಿದೆ. ಜುಲೈನಲ್ಲಿ ಸಂಶೋಧನಾ ಕೇಂದ್ರ ಆರಂಭಗೊಳ್ಳಲಿದೆ’ ಎಂದು ಶ್ರೀಗಳು ಹೇಳಿದರು. ದಂಪತಿಗೆ ಶ್ರೀಕೃಷ್ಣ ಪೂರ್ಣ ಅನುಗ್ರಹ ನೀಡಲಿ ಎಂದು ಹರಸಿದರು.

ಮಂತ್ರಾಕ್ಷತೆ ಪಡೆದು ಜೈಲಿಗೆ: “ತುರ್ತುಪರಿಸ್ಥಿತಿ ಸಂದರ್ಭ ಹೊಳೆನರಸೀಪುರದಲ್ಲಿ ದೇವೇಗೌಡರು ಜೈಲಿಗೆ ಹೋಗುವ ಮೊದಲು ನನ್ನಿಂದ ಮಂತ್ರಾಕ್ಷತೆ ಪಡೆದುಕೊಂಡಿದ್ದರು. ನಾನು ಕೂಡ ತುರ್ತುಪರಿಸ್ಥಿತಿ ವಿರುದ್ಧ ಇಂದಿರಾ ಗಾಂಧಿ ಅವರಿಗೆ ಉಗ್ರವಾಗಿ ಪತ್ರ ಬರೆದಿದ್ದೆ. ನನ್ನನ್ನೂ ಬಂಧಿಸುತ್ತಾರೆ ಎನ್ನಲಾಗುತ್ತಿತ್ತು. ಆದರೆ ಹಾಗಾಗಲಿಲ್ಲ. ನಾನು ತುರ್ತುಪರಿಸ್ಥಿತಿ ವಿರುದ್ಧ ಗುಪ್ತವಾಗಿಯೂ ಪ್ರವಚನ ನೀಡುತ್ತಿದ್ದೆ ಎಂದು ಪೇಜಾವರ ಶ್ರೀಗಳು ಸ್ಮರಿಸಿಕೊಂಡರು.

ಉಡುಪಿ ಶ್ರೀ ಗೋವಿಂದ ಕಲ್ಯಾಣಮಂಟಪದಲ್ಲಿ ವಿಶ್ವೇಶತೀರ್ಥ ಶ್ರೀಪಾದರ ಜನ್ಮ ನಕ್ಷತ್ರ ಸಮಾರಂಭದ ಪ್ರಯುಕ್ತ ಪೂಜೆಯಲ್ಲಿ ಪಾಲ್ಗೊಂಡ ದೇವೇಗೌಡ ದಂಪತಿ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು. ಶ್ರೀಗಳು ಶಾಲು, ಹಾರ ಹಾಕಿ ಆಶೀರ್ವಚಿಸಿದರು.

Advertisement

ಅನ್ನಪ್ರಸಾದ ಸ್ವೀಕಾರ: ದೇವೇಗೌಡರು ಪೇಜಾವರ ಶ್ರೀಗಳ ಜತೆಗೆ ಸುಮಾರು 10 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಕಲ್ಯಾಣ ಮಂಟಪದಲ್ಲಿಯೇ ಪೂರಿ, ಬೆಳ್ತಿಗೆ ಅನ್ನ, ಮೊಸರು, ಒಂದೆರಡು ಬಗೆಯ ಸಿಹಿ ತಿನಿಸುಗಳನ್ನೊಳಗೊಂಡ ಅನ್ನಪ್ರಸಾದ ಸ್ವೀಕರಿಸಿದರು.

ಇದಕ್ಕಿಂತ ಒಂದು ತಾಸು ಮೊದಲು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಅವರು ಅಲ್ಲಿಯೂ ಶ್ರೀಕೃಷ್ಣನ ಪ್ರಸಾದ ರೂಪವಾಗಿ ಅನ್ನ, ಸಾರು, ಮಜ್ಜಿಗೆ, ಪಾಯಸ, ಸ್ವಲ್ಪ ಸಿಹಿತಿನಿಸು ಸೇವಿಸಿದರು. ಪೇಜಾವರ ಶ್ರೀಗಳ ಮೇಲಿನ ಗೌರವದಿಂದ ದೇವೇಗೌಡರು ಮಧ್ಯಾಹ್ನ ಎರಡನೇ ಬಾರಿ ಪ್ರಸಾದ ರೂಪದ ಭೋಜನ ಸ್ವೀಕರಿಸಿದರು ಎಂದು ತಿಳಿದುಬಂದಿದೆ.

ರಾಜಕೀಯ ಮಾತನಾಡಿಲ್ಲ: ದೇವೇಗೌಡರು ಆಶೀರ್ವಾದ ಪಡೆದು ತೆರಳಿದ ಅನಂತರ ಪೇಜಾವರ ಶ್ರೀಗಳನ್ನು ಪತ್ರಕರ್ತರು ಮಾತನಾಡಿಸಿದಾಗ, “ನಾವಿಬ್ಬರೂ ರಾಜಕೀಯದ ಬಗ್ಗೆ ಮಾತನಾಡಿಲ್ಲ. ಕಲಿಯುಗದಲ್ಲಿ ಕೃಷ್ಣ ವಿಶೇಷ. ಮಧ್ವಾಚಾರ್ಯರ ಬಗ್ಗೆ ಬನ್ನಂಜೆ ಗೋವಿಂದಾಚಾರ್ಯ ಅವರು ಬರೆದ ಪುಸ್ತಕವನ್ನು ಓದುತ್ತಿದ್ದೇನೆ ಎಂದು ದೇವೇಗೌಡ ತಿಳಿಸಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ಪೇಜಾವರ ಶ್ರೀಗಳಿಂದ ಆಶೀರ್ವಾದ ಪಡೆದು ಹಿಂದಿರುಗುವ ವೇಳೆ ಸುದ್ದಿಗಾರರು ದೇವೇಗೌಡ ಅವರನ್ನು ಮಾತನಾಡಿಸಲು ಯತ್ನಿಸಿದರು. ಆದರೆ ಅವರು, ನಾನು ಪೇಜಾವರ ಶ್ರೀಗಳಿಗೆ ಗೌರವ ಅರ್ಪಿಸಿ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದಷ್ಟೆ ಪ್ರತಿಕ್ರಿಯಿಸಿ ತೆರಳಿದರು.

ಶ್ರೀಕೃಷ್ಣ ಮಠಕ್ಕೆ ಭೇಟಿ: ದೇವೇಗೌಡ ದಂಪತಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ದೇವರ ದರ್ಶನ ಮಾಡಿ ಪರ್ಯಾಯ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದು ಶ್ರೀಕೃಷ್ಣ ಪ್ರಸಾದ ಸ್ವೀಕರಿಸಿದರು. ಶ್ರೀಪಾದರ ಕಾರ್ಯದರ್ಶಿ ಗಿರೀಶ್‌ ಉಪಾಧ್ಯಾಯ, ಮಠದ ಪಿಆರ್‌ಒ ಶ್ರೀಶ ಕಡೆಕಾರ್‌, ಜೆಡಿಎಸ್‌ ಮುಖಂಡ ವಾಸುದೇವ ರಾವ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next