Advertisement

ಐಸ್‌ಕ್ರೀಮ್‌ ಫಾರ್ಮರ್‌

09:54 AM Mar 31, 2020 | Suhan S |

ಉಪ್ಪಿನಂಗಡಿಗೆ ಸಮೀಪದಲ್ಲಿ ಮೂಲಿಕಾವನ ಎಂಬ ಮನೆ ಇದೆ. ಅಲ್ಲಿ ವಾಸಿಸುವ 62 ವರ್ಷದ ಗಣಪತಿ ಭಟ್ಟರು, ಕಳೆದ 12 ವರ್ಷಗಳಿಂದ ಗಿಡ ಮೂಲಿಕೆಗಳ ಔಷಧಿ ನೀಡುತ್ತಾ ಖ್ಯಾತರಾಗಿದ್ದಾರೆ. ಹಾಗೆಯೇ, 8 ಎಕರೆ ಕೃಷಿಭೂಮಿಯಲ್ಲಿ ಅಡಕೆ, ತೆಂಗು, ಬಾಳೆ, ಕೋಕೋ ಬೆಳೆದಿದ್ದಾರೆ. ಬೆಳೆಗಳಿಗೆ ಬೆಲೆಯಿಲ್ಲವೆಂದು ಭಟ್ಟರು ಕೈ ಕಟ್ಟಿಕೊಂಡು ಕುಳಿತಿಲ್ಲ. ಹಣ್ಣಿನಿಂದ ನ್ಯಾಚುರಲ್‌ ಐಸ್‌ಕ್ರೀಮ್‌ ತಯಾರಿಸುವ ಮೂಲಕ,ಆದಾಯ ಗಳಿಕೆಯ ಹೊಸ ಮಾರ್ಗ ಕಂಡು ಕೊಂಡಿದ್ದಾರೆ.

Advertisement

ಗಣಪತಿ ಭಟ್ಟರ ಜಮೀನಿನಲ್ಲಿ ನೂರಾರು ಹಲಸಿನಮರಗಳಿವೆ. ಮಳೆಗಾಲದಲ್ಲಿ ತಿನ್ನುವವರಿಲ್ಲದೆ ಬಿದ್ದು ಹಾಳಾಗುತ್ತಿದ್ದ ಅದರ ಹಣ್ಣುಗಳು, ಬೇಸಗೆಯಲ್ಲಿ ಬುಡದ ತುಂಬ ಹರಡುವ ಕಾಡುಮಾನ ಹಣ್ಣುಗಳು ಈಗ ಒಂದೂ ಹಾಳಾಗುವುದಿಲ್ಲ. ಎಲ್ಲವೂ ಕೈತುಂಬ ಆದಾಯ ತರುವ ಸಂಪತ್ತಿನ ಕಣಜಗಳಾಗುತ್ತಿವೆ. ಹೇಗೆ ಅಂದಿರಾ? ಅದು ನಿಸರ್ಗದತ್ತವಾದ ಹಣ್ಣುಗಳಿಂದ ತಯಾರಿಸುವ ರುಚಿಕರವಾದ ಐಸ್‌ ಕ್ರೀಮ್‌.

ತರಾವರಿ ಐಸ್‌ಕ್ರೀಮ್‌ಗಳನ್ನು ಅವರು ಮನೆಯಲ್ಲಿಯೇ ತಯಾರಿಸುತ್ತಾರೆ. ಅದಕ್ಕೆ ಬೇಕಾದ ಯಂತ್ರೋಪಕರಣಗಳಿವೆ. ಪೇಟೆಯಿಂದ ತಂದ ವಸ್ತು ಎಂದರೆ ಸಕ್ಕರೆ ಮಾತ್ರ. ಯಾವುದೇ ರಾಸಾಯನಿಕಗಳು, ಬಣ್ಣಗಳನ್ನು ಅವರು ಬಳಸುವುದಿಲ್ಲ. ಹಾಲು, ಹಣ್ಣುಗಳ ರಸ ಮತ್ತು ಇನ್ನಷ್ಟು ನೈಸರ್ಗಿಕ ವಸ್ತುಗಳಿಂದ ತಯಾರಾಗುವ ಈ ಐಸ್‌ಕ್ರೀಮುಗಳಲ್ಲಿ,ಅವರದೇ ಆದ ತಯಾರಿಕೆಯ ವೈಶಿಷ್ಟ್ಯಗಳಿವೆ.

ಗೋಡಂಬಿ- ಅಡಕೆ ಐಸ್‌ಕ್ರೀಮ್‌ :  ಸಂಶೋಧನೆಯ ಹಾದಿಯಲ್ಲಿ ಮುನ್ನಡೆದಿರುವ ಭಟ್ಟರು, ಗೋಡಂಬಿ ಹಣ್ಣು ಮತ್ತು ಒಣ ಅಡಕೆಗಳಿಂದ ಐಸ್‌ಕ್ರೀಮ್‌ ತಯಾರಿಸುವ ವಿಧಾನವನ್ನು ಕಂಡುಕೊಂಡಿದ್ದಾರೆ. ವಾರದ ಸಂತೆ, ಸಭೆ ಸಮಾರಂಭಗಳಿಗೆಲ್ಲಾ ಗಣಪತಿ ಭಟ್ಟರು ಐಸ್‌ಕ್ರೀಮ್‌ ಸರಬರಾಜು ಮಾಡುತ್ತಾರೆ. ಹಲಸಿನಹಣ್ಣಿನ ಐಸ್‌ಕ್ರೀಮಂತೂ ಇನ್ನಿಲ್ಲದ ಬೇಡಿಕೆಪಡೆದಿದೆ. ಈ ಉದ್ಯಮದಲ್ಲಿ ಅವರಿಗೆ ಜೊತೆಯಾಗಿರುವವರು, ಮಗ ಆದರ್ಶ ಸುಬ್ರಾಯ. ಬೆಂಗಳೂರಿನ ಪಿಇಎಸ್‌ಐಟಿ ಕಾಲೇಜಿನಲ್ಲಿ ಪದವಿ ಗಳಿಸಿದ ಆದರ್ಶ, ಮುಂಬೈ ಮತ್ತು ಬೆಂಗಳೂರಿನಲ್ಲಿ ನಾಲ್ಕು ವರ್ಷ ಐಟಿ ಕ್ಷೇತ್ರದಲ್ಲಿ ದುಡಿದ ಬಳಿಕ, ಮನೆಗೆ ಮರಳಿದ್ದಾರೆ. ಸಾವಯವ ಕೃಷಿ ಪ್ರಯೋಗದ ಮೂಲಕ ಅಧಿಕ ಲಾಭ ಗಳಿಸುವ ಹಾದಿಯಲ್ಲಿ ಮುನ್ನಡೆದಿದ್ದಾರೆ. ನೈಸರ್ಗಿಕ ಐಸ್‌ಕ್ರೀಮ್‌ ತಯಾರಿಕೆಯ ಕೌಶಲ ಅವರದೇ ಚಿಂತನೆ.

ಅಡಕೆ ನಡುವೆ ಹಲಸು:  ತಂದೆ- ಮಗ ಇಬ್ಬರೂ ಸೇರಿಕೊಂಡು ರಾಸಾಯನಿಕ ರಹಿತ ಕೃಷಿ ಮಾಡುತ್ತಿದ್ದಾರೆ. ಗಂಜಲ, ಸಗಣಿ, ಶೇಂಗಾ ಹಿಂಡಿ, ಬೆಲ್ಲ ಇತ್ಯಾದಿಗಳಿಂದ ತಯಾರಾಗುವ ಜೀವಾಮೃತವೇ ಗಿಡಗಳಿಗೆ ಜೀವನದಾಯಿ. ರೋಗ, ಕೀಟಗಳ ಬಾಧೆಗೆ ಬೇವಿನೆಣ್ಣೆ, ಹಿಂಗು ಇತ್ಯಾದಿಗಳಿಂದ ಪರಿಹಾರ. ಕೆಲವು ವಿಶಿಷ್ಟ ಸಸ್ಯಗಳು ಅವರ ತೋಟದಲ್ಲಿವೆ. ಗೊಂಚಲು ಗೊಂಚಲಾಗಿ ಕಾಯಿಗಳಿಂದ ಬಾಗುವ ಗೊಂಚಲು ಬದನೆ, ಅಧಿಕ ಕಬ್ಬಿಣ ಸತ್ವವಿರುವ ಕೆಂಪು ಬಸಳೆ, ಬೆಂಡೆ, ಸೋರೆ, ಟೊಮೇಟೊದಂತಿರುವ ಮರ ಬದನೆ, ಸೌತೆ, ಅಲಸಂದೆ, ಪಪ್ಪಾಯಿ, ನೇಂದ್ರ ಬಾಳೆ ಮುಂತಾದ ವೈವಿಧ್ಯಮಯ ಗಿಡಗಳನ್ನು ಅದರಿಂದಲೇ ಬೆಳೆದು, ಪ್ರತೀ ವಾರ ಮಂಗಳೂರಿನ ಸಾವಯವ ಸಂತೆಗೆ ಬರುವ ಗ್ರಾಹಕರಿಗೆ ಪೂರೈಸುತ್ತಾರೆ.

Advertisement

ಸಾಮಾನ್ಯವಾಗಿ, ಕರಾವಳಿಯಲ್ಲಿ ಬೆಳೆಯದ ತರಕಾರಿ ಕಾಲಿಫ್ಲವರ್‌ ಅವರ ಹಿತ್ತಲಿನಲ್ಲಿ ಬೆಳೆಯುತ್ತಿದೆ. ಅಡಕೆ ಗಿಡಗಳ ಜೊತೆಗ ಪಪ್ಪಾಯ ಬೆಳೆದು, ವಾರದಲ್ಲಿ ಐವತ್ತು ಕಿಲೋ ಹಣ್ಣು ಮಾರುತ್ತಾರೆ. ಅಡಕೆಯ 700 ಗಿಡಗಳ ನಡುವೆ ನೂರು ಹಲಸಿನ ಮರ ಬೆಳೆಸಿದ್ದಾರೆ. ಸಂಪರ್ಕ: 9483907376­

 

-ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next