Advertisement

Ibbani Tabbida Ileyali Review; ತಾಜಾ ಪ್ರೀತಿಯ ಭಾವ ಲಹರಿ

10:31 AM Sep 06, 2024 | Team Udayavani |

ಕಾಲಿಂಗ್‌ ಬೆಲ್‌ ಸದ್ದು ಮಾಡುತ್ತದೆ. ಆಕೆ ಬಂದು ಬಾಗಿಲು ತೆರೆಯುತ್ತಾಳೆ. ಬಾಗಿಲ ಮುಂದೆ ನಿಂತಿರುವ ಆತನನ್ನು ನೋಡಿದ ಆಕೆಯ ಮುಖದಲ್ಲಿ ಒಮ್ಮೆಲೇ ಆಶ್ಚರ್ಯ, ಗೊಂದಲ, ಸಂಕಟ.. ಆದರೆ, ಬಾಗಿಲ ಒಳಗೆ ನಿಂತಿದ್ದ ಆಕೆಯ ಸ್ಥಿತಿ ಕಂಡು ಈತನಿಗೆ ನಿಂತ ಜಾಗವೇ ಕುಸಿದಂತಾಗುತ್ತದೆ. ಅದು ಆತನ ಬದುಕಿನ ಅತ್ಯಂತ ನೋವಿನ ಕ್ಷಣ… ಕಂಡ ಕನಸೊಂದು ಕೈ ಜಾರಿದಂತೆ… ಅಷ್ಟಕ್ಕೂ ಅದೇನು ಎಂಬುದನ್ನು ತೆರೆಮೇಲೆಯೇ ನೋಡಬೇಕು.

Advertisement

ಕನ್ನಡ ಚಿತ್ರರಂಗಕ್ಕೆ ಹೊಸದಾಗಿ ಬರುವ ಕೆಲವು ನಿರ್ದೇಶಕರು ತೆರೆಮೇಲೆ ಹೊಸ ಮ್ಯಾಜಿಕ್‌ ಮಾಡಲು ಪ್ರಯತ್ನಿಸುತ್ತಾರೆ. ರೆಗ್ಯುಲರ್‌ ಶೈಲಿ ಬಿಟ್ಟು, ಅದರಾಚಿನ ಸಾಧ್ಯತೆಗಳಿಗೆ ಕೈ ಬೀಸುತ್ತಾರೆ. ಈ ವಾರ ತೆರೆಕಂಡಿರುವ “ಇಬ್ಬನಿ ತಬ್ಬಿದ ಇಳೆಯಲಿ’ (ibbani tabbida ileyali) ಚಿತ್ರ ಕೂಡಾ ಇಂತ ಹುದೇ ಒಂದು ಪ್ರಯತ್ನ. ನಿರ್ದೇಶಕ ಚಂದ್ರಜಿತ್‌ ಬೆಳ್ಳಿಯಪ್ಪ ತಮ್ಮ ಚೊಚ್ಚಲ ಪ್ರಯತ್ನದಲ್ಲಿ ಒಂದು ಸರಳ ಸುಂದರ ತಾಜಾ ಪ್ರೇಮಕಥೆಯನ್ನ ಕಟ್ಟಿಕೊಟ್ಟಿದ್ದಾರೆ.

ಇಬ್ಬನಿ ತಬ್ಬಿದ ಇಳೆಯಲಿ ಒಂದು ಪರಿಶುದ್ಧ ಪ್ರೇಮಕಥೆ. ಈ ಕಥೆಗೆ ಅದೆಷ್ಟು ಭಾವನೆಗಳನ್ನು ತುಂಬಿ ಹೇಳಬಹುದಿತ್ತೋ, ಆ ಎಲ್ಲಾ ಸಾಧ್ಯತೆಗಳನ್ನು ನಿರ್ದೇಶಕರು ಮಾಡಿದ್ದಾರೆ. ಇಲ್ಲಿ ಕಾಲೇಜು ಕ್ಯಾಂಪಸ್‌ ಇದೆ, ಬೆಂಗಾಲಿ ಹುಡುಗಿಯ ಕನ್ನಡ ಪ್ರೀತಿ ಇದೆ,

ಕ್ರಿಕೆಟಿಗನಾಗಬೇಕೆಂಬ ಕನಸೊಂದು ಕೈ ಜಾರುವ ಸನ್ನಿವೇಶವಿದೆ, ಹೆಣ್ಣೊಬ್ಬಳ ಹಸೆಮಣೆ ಕನಸೊಂದು ದೊಪ್ಪನೇ ಕುಸಿದು ಬೀಳುವ ಸಂಕಟವಿದೆ, ಜೊತೆಗೆ ಅವೆಲ್ಲವನ್ನು ಮೀರಿ ನಗೆ ಬೀರುವ ಮಾನವೀಯ ಗುಣವಿದೆ.. ಇವೆಲ್ಲದರ ಒಟ್ಟು ಸಮ್ಮಿಲನವೇ “ಇಬ್ಬನಿ ತಬ್ಬಿದ ಇಳೆಯಲಿ’. ಚಿತ್ರದ ಶೀರ್ಷಿಕೆಯಂತೆ ಇಡೀ ಸಿನಿಮಾ ಸುಂದರವಾಗಿದೆ. ಸಿನಿಮಾವೆಂದರೆ ಕಮರ್ಷಿಯಲ್‌, ಎಲ್ಲವನ್ನು ಬೇಗನೇ ಹೇಳಬೇಕು ಎಂಬ ಯಾವ ಮುಲಾಜಿಗೂ ಬೀಳದೇ ಇಡೀ ಸಿನಿಮಾವನ್ನು ಒಂದು ಕಾಡುವ ಕಾವ್ಯದಂತೆ ಕಟ್ಟಿಕೊಡಲಾಗಿದೆ.

ಒಂದೊಳ್ಳೆಯ ಕಥೆ ಹೇಳಲು ಅಷ್ಟೇ ಸುಂದರವಾದ ಪರಿಸರ ಕೂಡಾ ಮುಖ್ಯ ಎಂಬ ಮಾತಿದೆ. ಈ ನಿಟ್ಟಿನಲ್ಲಿ “ಇಬ್ಬನಿ’ಯ ಪರಿಸರ, ವಾತಾವರಣ ಕಥೆಗೆ ಮತ್ತಷ್ಟು ಬಲ ತುಂಬಿದೆ. ತಣ್ಣಗೆ ಸುರಿಯುವ ಮಳೆಗೆ ಮೈಯೊಡ್ಡಿದಾಗ ಸಿಗುವಂತಹ ಅನುಭವವನ್ನು ಈ ಸಿನಿಮಾ ನೀಡುತ್ತದೆ. ನಿರೂಪಣೆ ವಿಚಾರದಲ್ಲೂ ಪ್ರೇಕ್ಷಕರನ್ನು ಏಕತಾನತೆಯಿಂದ ಮುಕ್ತವಾಗಿಸಿದ ಚಿತ್ರವಿದು. ನಾನ್‌ ಲೀನಿಯರ್‌ ಎನ್ನಬಹುದಾದ ನಿರೂಪಣಾ ಶೈಲಿ ಇಲ್ಲಿದೆ. ನಾಯಕನ ಬಾಲ್ಯ, ಆತನ ಕಾಲೇಜು, ಪ್ರೇಮದ ಆರಂಭ, ಡ್ರೈವರ್‌ ಹೇಳುವ ಪ್ರೀತಿ ಕಥೆ.. ಎಲ್ಲವನ್ನು ಫ್ಲ್ಯಾಶ್‌ಬ್ಯಾಕ್‌ ಮೂಲಕ ಹೇಳುತ್ತಾ ಹೋಗಿದ್ದಾರೆ. ಹಾಗಂತ ಇವೆಲ್ಲವೂ ಒಂದೇ ಹಂತದಲ್ಲಿ ಸಾಗುವುದಿಲ್ಲ. ಹಲವು ಮಗ್ಗುಲುಗಳನ್ನು ಬದಲಿಸುತ್ತಾ, ನಗು, ಅಳು, ಪ್ರೀತಿ, ಸಂಕಟಗಳೊಂದಿಗೆ ಕಥೆ ಪಯಣಿಸುತ್ತದೆ. ಮಳೆ, ರಾಧೆ, ಅನಾಹಿತಾ, ಮ್ಯಾಜಿಕ್‌… ಹೀಗೆ ಹಲವು ಚಾಪ್ಟರ್‌ಗಳ ಮೂಲಕ ಸಿನಿಮಾ ಹೊಸ ಬಣ್ಣಗಳನ್ನು ಪಡೆಯುತ್ತದೆ. ಈ ಸಿನಿಮಾದ ಮತ್ತೂಂದು ಪ್ಲಸ್‌ ಎಂದರೆ ಕಥೆಯಂತೆ ಇಲ್ಲಿನ ಕಲಾವಿದರು ಕೂಡಾ ಬಹುತೇಕ ಹೊಸ ಮುಖಗಳೇ. ಹಾಗಾಗಿ, ಇಡೀ ಸಿನಿಮಾಕ್ಕೊಂದು “ಫ್ರೆಶ್‌ನೆಸ್‌’ ಪ್ರಾಪ್ತಿಯಾಗಿದೆ! ದೀರ್ಘ‌ ಅವಧಿಯ ಸಿನಿಮಾವಾದರೂ ನೋಡಿಸಿಕೊಂಡು ಹೋಗುವ ಗುಣವೂ ಇದೆ.

Advertisement

ನಾಯಕ ವಿಹಾನ್‌ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಾತಿನ ಹುಡುಗ ಮಾತು ನಿಲ್ಲಿಸಿದಾಗ ಹೇಗಿರುತ್ತದೆ ಎನ್ನುವತ್ತಾ ಅವರ ಪಾತ್ರ ಸಾಗಿದೆ. ಆದರೆ, ಈ ಸಿನಿಮಾದ ನಿಜವಾದ ಅಚ್ಚರಿ ಅಂಕಿತಾ ಅಮರ್‌. ನಾಯಕಿ ಎಂದರೆ ಗ್ಲಾಮರ್‌, ಕಲರ್‌ಫ‌ುಲ್‌ ಹಾಡು ಎಂಬ ಮನಸ್ಥಿತಿಯ ಕೆಲವು ನಾಯಕಿಯರ ನಡುವೆ ಭಿನ್ನವಾಗಿ ನಿಲ್ಲುವ ಪ್ರತಿಭೆ ಅಂಕಿತಾ. ಆಕೆ ಮಾಡಿರುವ ಪಾತ್ರವಿದೆಯಲ್ಲ, ಅದು ತೆರೆಮೇಲೆ ಮತ್ತು ತೆರೆಯಾಚೆ ಸವಾಲಿನದ್ದು. ಆದರೆ, ಅದನ್ನು ತುಂಬಾ ಸಲೀಸಾಗಿ, ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ ಅಂಕಿತಾ. ಅವರ ಪಾತ್ರವೇ ಒಂದು ಭಾವ ಲಹರಿ. ಅದನ್ನು ಸಮರ್ಥವಾಗಿಸುವ ಮೂಲಕ ಭವಿಷ್ಯದ ಭರವಸೆ ಮೂಡಿಸಿದ್ದಾರೆ. ಮತ್ತೂಬ್ಬ ನಾಯಕಿ ಮಯೂರಿ ನಟರಾಜ್‌ ಅವರದ್ದು ತೂಕದ ನಟನೆ. ಕಡ್ಡಿಮುರಿದಮಾತು, ಪ್ರಾಕ್ಟಿಕಲ್‌ ಜೀವನ.. ಉಳಿದಂತೆ ಗಿರಿಜಾ ಶೆಟ್ಟರ್‌ ಹಾಗೂ ಇತರ ಪಾತ್ರಗಳು ಗಮನ ಸೆಳೆಯುತ್ತವೆ. ಗಗನ್‌ ಬಡೇರಿಯಾ ಅವರ ಹಿನ್ನೆಲೆ ಸಂಗೀತ ಸಿನಿಮಾಕ್ಕೊಂದು ಹೊಸ ಬಣ್ಣ ನೀಡಿದೆ. ಹೊರಗೂ ಮಳೆ, ಒಳಗೂ ಮಳೆ, ಜೊತೆಗೊಂದು ಕಾಡುವ ಸಿನಿಮಾ.. ಇದನ್ನು ಬಯಸುವವರಿಗೆ “ಇಬ್ಬನಿ’ ಒಳ್ಳೆಯ ಆಯ್ಕೆ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next