Advertisement

ತೀವ್ರ ಆಕ್ರೋಶ: ಸುಳ್ಳು ಸುದ್ದಿ ಆದೇಶ ಹಿಂಪಡೆದ ಕೇಂದ್ರ

05:30 AM Apr 04, 2018 | Team Udayavani |

ಹೊಸದಿಲ್ಲಿ: ಮಾಧ್ಯಮಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳ ಮೇಲೆ ನಿಯಂತ್ರಣ ಹೇರುವ ಉದ್ದೇಶದಿಂದ ಸೋಮವಾರವಷ್ಟೇ ತಾನು ಬಿಡುಗಡೆ ಮಾಡಿದ್ದ ಆದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಮೇರೆಗೆ ಕೇಂದ್ರ ಮಾಹಿತಿ ಮತ್ತು ಪ್ರಚಾರ ಖಾತೆ ಸಚಿವಾಲಯ (ಐಬಿ) ಮಂಗಳವಾರ ಹಿಂಪಡೆದುಕೊಂಡಿದೆ. ಸಚಿವಾಲಯದ ಆದೇಶಕ್ಕೆ ಅನೇಕ ರಂಗಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ, ಆದೇಶ ಹಿಂಪಡೆ ಯುಂತೆ ಪ್ರಧಾನಿ ಕಚೇರಿ (ಪಿಎಂಒ), ಸುಳ್ಳು ಸುದ್ದಿಗಳ ನಿಯಂತ್ರಣದ ಬಾಧ್ಯತೆಯನ್ನು ಸುದ್ದಿ ಸಂಸ್ಥೆಗಳಿಗೇ ವಹಿಸಲು ತೀರ್ಮಾನಿಸಿದೆ. ಅಲ್ಲದೆ, ಈ ವಿಚಾರವು ಪ್ರಸ್‌ ಕೌನ್ಸಿಲ್‌ ಆಫ್ ಇಂಡಿಯಾದಲ್ಲಿ ಚರ್ಚೆಯಾಗ ಲೆಂದು ಆಶಿಸಿದೆ. ಸರಕಾರದ ಈ ನಡೆಯನ್ನು ಸ್ವಾಗತಿಸಿರುವ ಕಾಂಗ್ರೆಸ್‌, ಇದು ಮಾಧ್ಯಮ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವಕ್ಕೆ ಸಂದ ಜಯ ಎಂದು ಬಣ್ಣಿಸಿದೆ.

Advertisement

ವ್ಯಾಪಕ ಟೀಕೆ: ಸೋಮವಾರ, ಸಚಿವಾಲಯದ ಆದೇಶ ಹೊರಬೀಳುತ್ತಿದ್ದಂತೆಯೇ ಟೀಕೆ ಮಾಡಿದ್ದ ಕಾಂಗ್ರೆಸ್‌ನ ಅಹ್ಮದ್‌ ಪಟೇಲ್‌, ಸರಕಾರಕ್ಕೆ ಮುಜುಗರ ತರುವಂಥ ವರದಿಗಳನ್ನು ಮಾಡುವುದರಿಂದ ಪತ್ರಕರ್ತರನ್ನು ಈ ಮೂಲಕ ನಿಯಂತ್ರಿಸಲಾಗುತ್ತಿದೆಯೇ ಎಂದು ಪ್ರಶ್ನಿಸಿದ್ದರು. ಕಾಂಗ್ರೆಸ್‌ನ ಮತ್ತೂಬ್ಬ ನಾಯಕ ರಣದೀಪ್‌ ಸುರ್ಜೆವಾಲಾ ಟ್ವೀಟ್‌ ಮಾಡಿ, ಮೋದಿ ಸರಕಾರದ ನಿರಂಕುಶ ಆಡಳಿತ ತಾರಕ್ಕಕೇರಿದ್ದು, ಈಗ ಸ್ವತಂತ್ರವಾಗಿ ಬರೆಯುವ ಹಕ್ಕನ್ನು ಕಸಿದುಕೊಳ್ಳಲು ಹೆಜ್ಜೆಯಿಟ್ಟಿದೆ ಎಂದು ಟೀಕಿಸಿದ್ದರು. ವಿಶ್ವ ಹಿಂದೂ ಪರಿಷತ್‌ ಮುಖ್ಯಸ್ಥ ಪ್ರವೀಣ್‌ ತೊಗಾಡಿಯಾ ಕೂಡ ಸಚಿವಾಲಯದ ನಡೆಯನ್ನು ‘ಅಘೋಷಿತ ತುರ್ತು ಪರಿಸ್ಥಿತಿ’ ಎಂದು ಬಣ್ಣಿಸಿದ್ದರು. ಸಿಪಿಎಂ ನಾಯಕ ಸೀತಾರಾಂ ಯೆಚೂರಿ, ಆಮ್‌ ಆದ್ಮಿ ಪಾರ್ಟಿಯ ಅಶುತೋಷ್‌ ಕೂಡ ಇದಕ್ಕೆ ದನಿಗೂಡಿಸಿದ್ದರು. ಅತ್ತ, ಪ. ಬಂಗಾಲ ಸಿಎಂ ಮಮತಾ ಬ್ಯಾನರ್ಜಿ, ಸಚಿವಾಲಯದ ನಡೆ ನಿರ್ಲಜ್ಜೆಯಿಂದ ಕೂಡಿರು ವಂಥದ್ದು ಎಂದರು.

ಆದೇಶದಲ್ಲಿ ಏನಿತ್ತು?: ಸುಳ್ಳು ಸುದ್ದಿ ನಿಯಂತ್ರಿ ಸುವ ಉದ್ದೇಶದಿಂದ ಸಚಿವಾಲಯವು, ಪತ್ರಕರ್ತರ ಪಿಐಬಿ (ಪ್ರಸ್‌ ಇನ್ ಫಾರ್ಮೇಶನ್‌ ಬ್ಯೂರೋ) ಮಾನ್ಯತೆಗಾಗಿ ನಿಗದಿಗೊಳಿಸಲಾಗಿರುವ ನೀತಿ ಸಂಹಿತೆಯನ್ನು ಬದಲಿಸಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಅದರಂತೆ, ಪತ್ರಕರ್ತನೊಬ್ಬ, ಮೊದಲ ಬಾರಿಗೆ ಯಾವುದೇ ಸುಳ್ಳು ಸುದ್ದಿ ಸೃಷ್ಟಿಸಿದರೆ ಅಥವಾ ಹರಡಿದರೆ, ಆತನ ಮಾನ್ಯತೆಯನ್ನು 6 ತಿಂಗಳವರೆಗೆ ಅಮಾನತುಗೊಳಿಸುವಂತೆ ಸೂಚಿಸಲಾಗಿತ್ತು. 2ನೇ ಬಾರಿ ಇಂಥ ತಪ್ಪು ಮಾಡಿದರೆ 1 ವರ್ಷದವರೆಗೆ, 3ನೇ ಬಾರಿ ತಪ್ಪೆಸಗಿದರೆ ಶಾಶ್ವತವಾಗಿ ಮಾನ್ಯತೆ ರದ್ದುಗೊಳಿಸಲು ಸೂಚಿಸಲಾಗಿತ್ತು.

ಮಲೇಷ್ಯಾದಲ್ಲಿದೆ
ಭಾರತದಲ್ಲಿ ಸುಳ್ಳು ಸುದ್ದಿಗಳನ್ನು ಕಟ್ಟಿಹಾಕುವ ಪ್ರಯತ್ನಕ್ಕೆ ಹಿನ್ನಡೆಯಾಗಿದ್ದರೂ ಮಲೇಷ್ಯಾದಲ್ಲಿ ಅಲ್ಲಿನ ಸರಕಾರ ಈ ನಿಟ್ಟಿನಲ್ಲಿ ಇಟ್ಟಿದ್ದ ಹೆಜ್ಜೆ ಸಫ‌ಲವಾಗಿದೆ. ಅಲ್ಲಿನ ಪ್ರಧಾನಿ ನಜೀಬ್‌ ರಜಾಕ್‌ ನೇತೃತ್ವದ ಸರಕಾರ ಮಂಡಿಸಿದ್ದ ಸುಳ್ಳು ಸುದ್ದಿ ನಿಗ್ರಹ ಮಸೂದೆಯನ್ನು ಮಲೇಷ್ಯಾ ಸಂಸತ್ತು ಅನುಮೋದಿಸಿದೆ. ಮಸೂದೆಯ ಪ್ರಕಾರ, ಸುಳ್ಳು ಸುದ್ದಿ ಹರಡುವವರಿಗೆ ಆರು ವರ್ಷಗಳವರೆಗೆ ಕಠಿನ ಶಿಕ್ಷೆ ವಿಧಿಸುವ ಬಗ್ಗೆ ಪ್ರಸ್ತಾವಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next