Advertisement

ಅಮಿತ್ ಶಾಗೆ ಮುಂದಿನ ಚುನಾವಣೆಯಲ್ಲಿ ಬುದ್ದಿ ಕಲಿಸುತ್ತೇನೆ: ಹೆಚ್.ಡಿ.ಕುಮಾರಸ್ವಾಮಿ

05:11 PM Jan 02, 2023 | Team Udayavani |

ಮೈಸೂರು : ”ದೇಶದಲ್ಲಿ‌ 800 ಕ್ಕೂ ಹೆಚ್ಚು ಶಾಸಕರನ್ನು ಖರೀದಿ ಮಾಡಿರುವ ಇತಿಹಾಸ ಇದ್ದರೆ ಅದು ಬಿಜೆಪಿಯದ್ದು. ಚುನಾವಣೆಗೂ ಮುನ್ನವೇ ಸಾಮರ್ಥ್ಯ ಇಲ್ಲದ ಕಡೆ ಖರೀದಿ ಮಾಡಲು ಈಗಾಗಲೇ ಹುನ್ನಾರ ನಡೆಸುತ್ತಿದೆ. ರಾಜ್ಯದಿಂದ ಬಿಜೆಪಿ ಪಕ್ಷವನ್ನು ಕಳುಹಿಸಲು ಜೆಡಿಎಸ್ ಪಣ ತೊಟ್ಟಿದೆ. ನನ್ನ ಪಕ್ಷವನ್ನು ಕೆಣಿಕಿದ್ದೀರಿ, ನಿಮ್ಮ ರಾಜಕಾರಣ ಉತ್ತರ ಭಾರತದಲ್ಲಿ ಇಟ್ಕೊಳ್ಳಿ, ಕರ್ನಾಟಕದಲ್ಲಿ ಅಲ್ಲ” ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಅಮಿತ್ ಶಾ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

Advertisement

ಸೋಮವಾರ ವೀರಶೈವ ಮುಖಂಡರ ಸಭೆ ಬಳಿಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ , ಕೇಂದ್ರ ಸಚಿವ ಅಮಿತ್ ಶಾ ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ ವೇಳೆ ನಡೆದ ಸಮಾವೇಶದಲ್ಲಿ ಜೆಡಿಎಸ್ ಕುರಿತು ಮಾಡಿರುವ ಟೀಕೆಗಳಿಗೆ ಆಕ್ರೋಶ ವ್ಯಕ್ತಪಡಿಸಿದರು.

ಹೊಂದಾಣಿಕೆ ಮಾಡಿಕೊಳ್ಳಲು ನಾವೇನು ಇವರ ಮನೆ ಬಾಗಿಲಿಗೆ ಹೋಗಿರಲಿಲ್ಲ.ಈ ಹಿಂದೆ ಸರ್ಕಾರ ರಚನೆ ವಿಚಾರದಲ್ಲಿ ಯಾರು ಯಾರ ಮನೆ ಬಾಗಿಲಿಗೆ ಬಂದಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ.ಅನ್ಯ ಪಕ್ಷದ ಶಾಸಕರನ್ನು ಖರೀದಿಸುವಲ್ಲಿ ಬಿಜೆಪಿ ದಾಖಲೆ ಮಾಡಿದೆ.ಚುನಾವಣೆಗೂ ಮುನ್ನವೇ ಶಾಸಕರ ಖರೀದಿಗೆ ಬಿಜೆಪಿ ಸಿದ್ದತೆ ನಡೆಸಿದೆ ಎಂದು ಕಿಡಿ ಕಾರಿದರು.

ಉತ್ತರ ಭಾರತದ ರಾಜಕೀಯ ಕರ್ನಾಟಕದಲ್ಲಿ ನಡೆಯುವುದಿಲ್ಲ. ನಮ್ಮನ್ನು ಬ್ಲಾಕ್ ಮೇಲ್ ಮಾಡುತ್ತಾರೆ ಎಂದು ಹೇಳಿರುವ ಅಮಿತ್ ಶಾರಿಗೆ ಮುಂದಿನ ಚುನಾವಣೆಯಲ್ಲಿ ಬುದ್ದಿ ಕಲಿಸುತ್ತೇನೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಶಾ ವಿರುದ್ಧ ಏಕ ವಚನದಲ್ಲೇ ವಾಗ್ದಾಳಿ ನಡೆಸಿ,”ಅಮಿತ್ ಶಾ ದೇವೇಗೌಡರ ಉಗುರಿಗೂ ಸಮರಲ್ಲ” ಎಂದು ಕಿಡಿ ಕಾರಿದರು.

ನಾವೇನು ಯಾರ ಮನೆ ಬಾಗಿಲಿಗೂ ಹೋಗಿಲ್ಲ, ಅಧಿಕಾರ ಪಡೆಯಲು ಎರಡೂ ರಾಜಕೀಯ ಪಕ್ಷಗಳ ನಾಯಕರು ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ಜೆಡಿಎಸ್ 30 ಕ್ಷೇತ್ರ ಗೆದ್ದು ಬ್ಲಾಕ್ ಮೇಲ್ ಮಾಡುತ್ತದೆ ಎಂದಿದ್ದಾರೆ. ಆದರೆ ನಾವು 130ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರ ಹಿಡಿಯುತ್ತೇವೆ ಎಂದರು.

Advertisement

ಮಂಡ್ಯ ಜಿಲ್ಲೆಗೆ ಬಿಜೆಪಿ ಕೊಡುಗೆ ಏನೆಂದು ತಿಳಿಸಲಿ. ಮಂಡ್ಯದಲ್ಲಿ ನಡೆದ ಬಿಜೆಪಿ ಸಮಾವೇಶಕ್ಕೆ ಹಣಕೊಟ್ಟು ಜನರನ್ನು ಕರೆದುಕೊಂಡು ಬಂದಿದ್ದರು. ಆದರೆ ನಾನು ಹೋದೆಡೆಯೆಲ್ಲಾ ಜನರು ಸ್ವಯಂ ಪ್ರೇರಣೆಯಿಂದ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಮೇಲುಗೈ ಸಾಧಿಸಲು ಸಾಧ್ಯವಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬರುವುದಿಲ್ಲ. ನಾನು ಚಾಲೆಂಜ್ ಮಾಡಿ ಹೇಳುತ್ತೀನಿ, ಮುಂದಿನ ಚುನಾವಣೆಯಲ್ಲಿ ಕನ್ನಡಿಗರ ಪಕ್ಷ ಜೆಡಿಎಸ್ ಬಹುಮತ ಪಡೆಯಲಿದೆ ಎಂದರು.

ಯಾವುದೇ ಕಾರಣಕ್ಕೂ ಅತಂತ್ರ ಫಲಿತಾಂಶ ಬರುವುದಿಲ್ಲ. ರಾಜ್ಯದ ಜ‌ನರು ಜೆಡಿಎಸ್ ಗೆ ಅಧಿಕಾರ ನೀಡಲಿದ್ದಾರೆ‌. ಮುಂದಿನ ಸಂಕ್ರಾಂತಿ ನಂತರ ಎರಡು ಪಟ್ಟಿ ಬಿಡುಗಡೆ ಮಾಡುತ್ತೇವೆ‌.ನಾಲ್ಕೈದು ಕ್ಷೇತ್ರಗಳ ಪಟ್ಟಿ ಬಿಡುಗಡೆ ಸಂಬಂಧ ಪ್ರಮುಖರ ಸಭೆ ಕರೆದು ತೀರ್ಮಾನ ಮಾಡುತ್ತೇನೆ.ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮಂಡ್ಯಕ್ಕೆ ಬಂದು ಸಾರ್ವಜನಿಕವಾಗಿ ಟೀಕೆ ಮಾಡಿದ್ದಾರೆ. ರಾಜ್ಯ ನಮ್ಮ‌ ಕುಟುಂಬದ ಎಟಿಎಂ ಎಂದಿದ್ದಾರೆ. ಯಾವುದಾದರೂ ಪ್ರಕರಣದಲ್ಲಿ ದೇವೇಗೌಡ ಅವರು ಪ್ರಧಾನಿ ಆಗಿದ್ದಾಗ, ನಾನು ಸಿಎಂ ಆಗಿದ್ದಾಗ ಸರ್ಕಾರದ ಖಜಾನೆ ಲೂಟಿ ಮಾಡಿದ ಒಂದೇ ಒಂದು ಪ್ರಕರಣ ತೋರಿಸಲಿ.ಇಂದು ಬಿಜೆಪಿ ಲೂಟಿ ಮಾಡುತ್ತಿರೋದು ಎಲ್ಲರಿಗೂ ಗೊತ್ತಿದೆ ಎಂದರು.

ಅಮಿತ್ ಶಾ ಅವರ ಮಗನಿಗೆ ಬಿಸಿಸಿಐ ನ ಹುದ್ದೆ ಕೊಟ್ಟರು. ಯಾವ ಆಧಾರದ ಮೇಲೆ ಕೊಟ್ಟಿರಿ. ಕೋರ್ಟ್ ಆದೇಶಗಳಾದರೂ ಕೊಟ್ಟಿರಿ ಎಂದು ಪ್ರಶ್ನಿಸಿದರು.

ಇದು ಕನ್ನಡಿಗರ, 6.5 ಕೋಟಿ ಕನ್ನಡಿಗರ ಎಟಿಎಂ.ಹೊಂದಾಣಿಕೆ ಮಾಡಿಕೊಳ್ಳಲು ನಾನು ಬಿಜೆಪಿಯವರ ಮನೆ ಬಾಗಿಲಿಗೆ ಹೋಗಿಲ್ಲ. ನಾನು ಅಮಿತ್ ಶಾ ಮನೆಗೆ ಹೋಗಿದ್ದೀನಾ.ಹೊಂದಾಣಿಕೆ ಬಗ್ಗೆ ಯಾಕೆ ಮಾತನಾಡುತ್ತೀರಿ. ನಾನು ಪಂಚರತ್ನ ಯಾತ್ರೆ ಮಾಡ್ತಿರೋದು ಯಾರ ಮನೆ ಬಾಗಿಲಿಗೂ ಹೋಗಲು ಅಲ್ಲ.ಮಾರ್ಚ್ 20 ರವರೆಗೆ ಪಂಚರತ್ನ ಯಾತ್ರೆ ಮಾಡಲಿದ್ದೇನೆ ಎಂದರು.

ಶಾ ಅವರು ಹೆಚ್.ಡಿ. ದೇವೇಗೌಡರನ್ನು ಗೆಜ್ಜಲಗೆರೆಯಲ್ಲಿ ಹಾಡಿ ಹೊಗಳಿದ ಬಳಿಕ ಮಂಡ್ಯದಲ್ಲಿ ಟೀಕಿಸಿದ್ದಾರೆ.ದೇವೇಗೌಡರ ವಿರುದ್ದವೂ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಅಮಿತ್ ಶಾ ರ ಇಂತಹ ಹೇಳಿಕೆಗಳೇ ಕರ್ನಾಟಕದಲ್ಲಿ ಬಿಜೆಪಿ ಪತನಕ್ಕೆ ಕಾರಣವಾಗಲಿದೆ. ಕರ್ನಾಟಕದಿಂದಲೇ ಬಿಜೆಪಿಯ ಪತನ ಆರಂಭವಾಗಲಿದೆ ಎಂದರು.

ವೀರಶೈವ ಲಿಂಗಾಯತ ಸಮುದಾಯವನ್ನು ಬಿಜೆಪಿ ದುರುಪಯೋಗ ಮಾಡಿಕೊಂಡಿದೆ. ಬಿಜೆಪಿ ಕಟ್ಟಿ ಬೆಳೆಸಿದ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗಿದೆ. ಬಸವರಾಜ ಬೊಮ್ಮಾಯಿ ಹೆಸರಿಗಷ್ಟೇ ಮುಖ್ಯಮಂತ್ರಿ ಆಗಿದ್ದಾರೆ. ಮಂತ್ರಿಗಳನ್ನು ನೇಮಕ ಮಾಡಿಕೊಳ್ಳಲು ಬಸವರಾಜ ಬೊಮ್ಮಾಯಿಗೆ ಸಾಧ್ಯವಾಗ್ತಿಲ್ಲ. ಎಲ್ಲವೂ ದೆಹಲಿ ಬಿಜೆಪಿ ನಾಯಕರ ಅಣತಿಯಂತೆ ನಡೆಯುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next