Advertisement

ಕಿಂಗ್ ಅಲ್ಲ, ಕಿಂಗ್ ಮೇಕರ್ ಆಗುತ್ತೇನೆ : ಸಿ.ಎಂ.ಇಬ್ರಾಹಿಂ

02:45 PM Oct 24, 2022 | Team Udayavani |

ವಿಜಯಪುರ: ನಾನು ಕಿಂಗ್ ಆಗುವುದಕ್ಕಿಂತ ಕಿಂಗ್ ಮೇಕರ್ ಆಗಲು ಬಯಸಿದ್ದೇನೆ. ಹೀಗಾಗಿ ನಾನು ಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಬದಲಾಗಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಲು ಪಣ ತೊಟ್ಟಿದ್ದೇನೆ. ಹಾಗಂತ ಸೋಲಿನ ಭಯದಿಂದ ಸ್ಪರ್ಧಿಸಲು ಹಿಂಜರಿಯುತ್ತಿಲ್ಲ, ಸಿದ್ದರಾಮಯ್ಯ ಸೋತಿಲ್ಲವೇ ಎಂದು ಪ್ರಶ್ನಿಸಿದರು.

Advertisement

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಇಡಿ-ಸಿಡಿ ಇಲ್ಲದ ನನಗೆ ತಮ್ಮ ಪಕ್ಷದಲ್ಲಿ ನಾನು ಇರಲು ಅರ್ಹರಲ್ಲ ಎಂದು ನನನ್ನು ಹೊರ ಹಾಕಿದರು. ಕಾಂಗ್ರೆಸ್ ಸಿದ್ದರಾಮಯ್ಯಗೆ ಪ್ಯಾಂಟ್ ಕೊಟ್ಟ ಕಾಂಗ್ರೆಸ್ ಯು.ಟಿ.ಖಾದರ ಅವರಿಗೆ ನಿಕ್ಕರ್ ನೀಡಿದ್ದಾರೆ ಎಂದು ಜರಿದರು.

ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ನೀರಾವರಿಗೆ ಆದ್ಯತೆ, ಪಂಚಾಯತ್ ಮಟ್ಟದಲ್ಲೇ ಉಚಿತ ಆರೋಗ್ಯ ಸೇವೆ, ದೆಹಲಿಯಲ್ಲಿ ಆಪ್ ಮಾದರಿಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ, ಮಹಿಳಾ ಸಬಲೀಕರಣಕ್ಕಾಗಿ ಕಾರ್ಯಕ್ರಮ ರೂಪಿಸಿದ್ದು, ನಮ್ಮ ಸರ್ಕಾರ ರಚನೆ ಆದಲ್ಲಿ ಇಂಥ ಜನಪರ ಕಾರ್ಯಕ್ರಮ ಅನುಷ್ಠಾನಕ್ಕೆ ಬರಲಿವೆ. ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಮ್ಮ ಪಕ್ಷ ಬಲಿಷ್ಠ ಹೋರಾಟ ನೀಡುತ್ತಿದೆ ಎಂದರು.

ಇದನ್ನೂ ಓದಿ:ನೋ ವೇ ಕಾಪಿ ಮಾಡೋಕೆ ಚಾನ್ಸೇ ಇಲ್ಲ:‌ ಎಕ್ಸಾಂನಲ್ಲಿ ನಕಲು ತಡೆಯೋಕೆ ಮಾಡಿದ ತಂತ್ರ ವೈರಲ್

ಮೀಸಲು ವಿಷಯದಲ್ಲಿ ದೇವೇಗೌಡರ ಕಾಲದಲ್ಲಿ ಮುಸ್ಲಿಮರಿಗೆ ಶೇ.4 ಮೀಸಲು ಕಲ್ಪಿಸಿದ್ದು, ಪಕ್ಕಾ ಆರ್.ಎಸ್.ಎಸ್. ಹಿನ್ನೆಲೆಯ ಯಡಿಯೂರಪ್ಪ ಸರ್ಕಾರದಿಂದಲೇ ಮುಸ್ಲೀಮರ ಮೀಸಲು ರದ್ದು ಮಾಡಲು ಸಾಧ್ಯವಾಗಿಲ್ಲ. ಅರ್ಧಂಬರ್ಧ ಆರ್ ಎಸ್ಎಸ್ ಬಸವರಾಜ ಬೊಮ್ಮಾಯಿ ಅವರಿಂದ ಸಾಧ್ಯವಿಲ್ಲ. ಹೀಗಾಗಿ ಮುಸ್ಲಿಮರು ಆತಂಕ ಪಡುವ ಅಗತ್ಯವಿಲ್ಲ ಎಂದರು.

Advertisement

ಪರಿಶಿಷ್ಟ ಸಮುದಾಯಗಳ ಮೀಸಲು ಪ್ರಮಾಣ ಹೆಚ್ಚಳ ಕೇವಲ ರಾಜಕೀಯ ಗಿಮಿಕ್ ಮಾತ್ರ. ಈ ಸರ್ಕಾರಕ್ಕೆ ನಿಜಕ್ಕೂ ಮೀಸಲು ವಿಷಯದಲ್ಲಿ ಬದ್ಧತೆ ಇದ್ದಲ್ಲಿ ಮೀಸಲಾತಿಗೆ ಆಗ್ರಹಿಸುತ್ತಿರುವ ಎಲ್ಲ ಸಮುದಾಯಗಳ ಸಮೀಕ್ಷೆ ನಡೆಸಲಿ. ಇದಕ್ಕಾಗಿ ಸಮಿತಿ ರಚಿಸಲಿ ಎಂದು ಆಗ್ರಹಿಸಿದರು.

25 ವರ್ಷಗಳ ಬಳಿಕ ವಿಜಯಪುರ ಜೆಡಿಎಸ್ ಕಛೇರಿಗೆ ಆಗಮಿಸಿದ್ದೇನೆ. ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್ ಕಾಲದಲ್ಲಿ ಪಕ್ಷದಲ್ಲಿದ್ದ ಐಕ್ಯತೆ ಮರುಸ್ಥಾಪಿಸಲು ನಾವು ಬೆಳೆಸಿದ ಪಕ್ಷದ ಸಂಘಟನೆಗಾಗಿ ದೇವೇಗೌಡರೊಂದಿಗೆ ಬಸವ ಆಶಯದ ಸರ್ಕಾರ ರಚನೆಗೆ ಶ್ರಮಿಸುತ್ತಿದೇನೆ ಎಂದರು.

ಆರ್ ಎಸ್ಎಸ್ ಸಂಘಟನೆ ನಿಷೇಧಿಸಲು ಆಗ್ರಹಿಸುವುದಿಲ್ಲ. ಜಗನ್ನಾಥರಾವ್ ದೇಸಾಯಿ ಸೇರಿದಂತೆ ಹಲವು ಅತ್ಯುತ್ತಮ ಮಹಾನ್ ನಾಯಕರಿದ್ದ ಸಂಘಟನೆ ಅದು. ಕಾಂಗ್ರೆಸ್ ನಾಯಕರು ತಮ್ಮ ಈಗ ಆರ್ ಎಸ್ಎಸ್ ನಿಷೇಧಿಸಬೇಕು ಎಂದು ಆಗ್ರಹಿಸುತ್ತಿದ್ದು, ತಮ್ಮ ಸರ್ಕಾರ ಇದ್ದಾಗ ಈ ಕೆಲಸ ಮಾಡಲಿಲ್ಲವೇಕೆ ಎಂದು ಪ್ರಶ್ನಿಸಿದರು.

ಪಿಎಫ್‍ಐ ನಿಷೇಧಿಸಿದ್ದನ್ನು ಸ್ವಾಗತ ಎನ್ನುವವರು, ಸಿಂದಗಿ ಪಟ್ಟಣದಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ ರಾಮಸೇನೆ ಸಂಘಟನೆಯವರೇನು ಚಿಕ್ಕಪ್ಪನ ಮಕ್ಕಳಾ, ಗುಂಡಾಗಳು ಸತ್ತರೆ 5 ಲಕ್ಷ ಪರಿಹಾರ ಕೊಡುವ ಬಿಜೆಪಿ ಪಕ್ಷದವರು, ಸಾವಿನಲ್ಲೂ ರಾಜಕೀಯ ಮಾಡುತ್ತಾರೆ ಎಂದು ಹರಿಹಾಯ್ದರು.

ಶಾಸಕ ದೇವಾನಂದ ಚವ್ಹಾಣ, ಮಾಜಿ ಶಾಸಕ ಬಿ.ಎಸ್.ಪಾಟೀಲ ಹಲಸಂಗಿ, ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ಸವರಾಜ ಹೊನವಾಡ, ರಿಯಾಜ್ ಫಾರೂಕಿ, ರಾಜು ಹಿಪ್ಪರಗಿ, ಮಲ್ಲಿಕಾರ್ಜುನ ಯಂಡಿಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next