Advertisement

ಉಪ್ಪಿ ಮೊಗದಲ್ಲಿ ನಗು ತಂದ “ಐ ಲವ್‌ ಯು’

10:56 AM Jun 17, 2019 | Lakshmi GovindaRaj |

ಉಪೇಂದ್ರ ಮತ್ತೆ ಬಾ ಚಿತ್ರದ ನಂತರ ಉಪ್ಪಿ ಸಿನಿಮಾಕ್ಕಿಂತ ಪ್ರಜಾಕೀಯದಲ್ಲೇ ಹೆಚ್ಚು ಸುದ್ದಿಯಾದ ಕಾರಣ ಅವರ ಯಾವುದೇ ಚಿತ್ರಗಳು ತೆರೆಗೆ ಬಂದಿರಲಿಲ್ಲ. ಹೀಗಾಗಿ ಉಪ್ಪಿ ಅವರನ್ನ ಮತ್ತೆ ತೆರೆಮೇಲೆ ನೋಡೋದು ಯಾವಾಗ ಎಂದು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಈ ಬಾರಿ ಉಪ್ಪಿ ಸ್ಪೆಷಲ್‌ ಸರ್‌ಪ್ರೈಸ್‌ ನೀಡಿದ್ದಾರೆ.

Advertisement

ಹೌದು, ಸುಮಾರು ಎರಡು ವರ್ಷಗಳಿಂದ ತೆರೆಮೇಲೆ ಮಿಸ್‌ ಮಾಡಿಕೊಂಡಿದ್ದ ಅಭಿಮಾನಿಗಳಿಗೆ ಉಪ್ಪಿ ಐ ಲವ್‌ ಯು ಎನ್ನುತ್ತ ಮತ್ತೆ ಗ್ರ್ಯಾಂಡ್‌ ಎಂಟ್ರಿ ನೀಡಿದ್ದಾರೆ. ಉಪೇಂದ್ರ ಅಭಿನಯದ ಬಹುನಿರೀಕ್ಷಿತ ಚಿತ್ರ ಐ ಲವ್‌ ಯು ಇದೇ ಜೂ.14 ರಂದು ಅದ್ಧೂರಿಯಾಗಿ ತೆರೆಗೆ ಬಂದಿದೆ. ಬಹು ಕಾಲದ ನಂತರ ಥಿಯೇಟರ್‌ಗೆ ಬಂದಿರುವ ಉಪ್ಪಿಯನ್ನು ಫ್ಯಾನ್ಸ್‌ ಕೂಡ ಅತ್ಯಂತ ಅಭಿಮಾನದಿಂದ ಸ್ವಾಗತಿಸುತ್ತಿದ್ದಾರೆ.

ಇದೇ ಖುಷಿಯನ್ನು ಹಂಚಿಕೊಳ್ಳಲು ಐ ಲವ್‌ ಯು ಚಿತ್ರತಂಡ, ತೆರೆಕಂಡ ಮರುದಿನವೇ ಮಾಧ್ಯಮಗಳ ಮುಂದೆ ಬಂದು ಸಕ್ಸಸ್‌ಮೀಟ್‌ ಕೂಡ ನಡೆಸಿತು. ಸಕ್ಸಸ್‌ಮೀಟ್‌ನಲ್ಲಿ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಕಂ ನಿರ್ಮಾಪಕ ಆರ್‌. ಚಂದ್ರು, ಐ ಲವ್‌ ಯು ಚಿತ್ರವನ್ನು ವಿತರಕರು ಉತ್ತಮ ಮೊತ್ತಕ್ಕೆ ಕೊಂಡುಕೊಂಡಿದ್ದಾರೆ.

ಬಿಡುಗಡೆಗೂ ಮೊದಲೇ ಹೂಡಿದ ಹಣ ವಾಪಾಸ್‌ ಬಂದಿದೆ. ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ ಚಿತ್ರ ಹೌಸ್‌ಫ‌ುಲ್‌ ಕಲೆಕ್ಷನ್ಸ್‌ ಪಡೆದುಕೊಳ್ಳುತ್ತಿದೆ. ಚಿತ್ರವನ್ನು ನೋಡಿ ಎಲ್ಲರೂ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಚಿತ್ರವನ್ನು ಕೊಂಡುಕೊಂಡಿರುವುದಕ್ಕೆ ವಿತರಕರು ಕೂಡ ಖುಷಿಯಾಗಿದ್ದಾರೆ.

ಸದ್ಯ ಉಪೇಂದ್ರ ಬೇರೆ ಚಿತ್ರಗಳಲ್ಲಿ ಬ್ಯುಸಿಯಾಗುತ್ತಿರುವುದರಿಂದ, ಅವರ ಸಮಯ ನೋಡಿಕೊಂಡು ಬಿಡುಗಡೆಯಾದ ಮರುದಿನವೇ ಸಕ್ಸಸ್‌ಮೀಟ್‌ ಆಯೋಜಿಸಲಾಯಿತು. ಚಿತ್ರದ ಇಂಥದ್ದೊಂದು ಯಶಸ್ಸಿಗೆ ಕಾರಣವಾದವರಿಗೆ ಧನ್ಯವಾದಗಳು ಎಂದರು.

Advertisement

ಚಿತ್ರದ ಬಿಡುಗಡೆಯ ನಂತರದ ಬೆಳವಣಿಗೆಗಳ ಬಗ್ಗೆ ಮಾತನಾಡಿದ ನಟ ಉಪೇಂದ್ರ, ನಾನು ಕೂಡ ಡಬ್ಬಿಂಗ್‌ ಆದ ಮೇಲೆ ಐ ಲವ್‌ ಯು ಸಿನಿಮಾ ನೋಡಿರಲಿಲ್ಲ. ರಿಲೀಸ್‌ ಆದ ಮೇಲೆ ಎಲ್ಲರ ಜೊತೆ ನೋಡಿದೆ. ಆಡಿಯನ್ಸ್‌ ಕಡೆಯಿಂದ ಬರುತ್ತಿರುವ ರೆಸ್ಪಾನ್ಸ್‌ ನೋಡಿ ಖುಷಿಯಾಯ್ತು. ಯಾವ ಸಿನಿಮಾ ಗೆಲ್ಲುತ್ತೆ, ಯಾವುದು ಗೆಲ್ಲೋದಿಲ್ಲ ಅಂತ ಯಾರಿಗೂ ಹೇಳ್ಳೋಕೆ ಆಗೋದಿಲ್ಲ.

ಅಣ್ಣಾವ್ರು ಹೇಳುತ್ತಿದ್ದಂತೆ ಸಕ್ಸಸ್‌ ಅನ್ನೋದು ಚಿದಂಬರ ರಹಸ್ಯ. ಆದ್ರೆ ಒಂದು ಒಳ್ಳೆಯ ಸಿನಿಮಾ ಆಗೋದಕ್ಕೆ, ಸಕ್ಸಸ್‌ ಆಗೋದಕ್ಕೆ ಎಲ್ಲರ ಪರಿಶ್ರಮ ಅಂತೂ ಇದ್ದೇ ಇರುತ್ತದೆ. ಐ ಲವ್‌ ಯು ಸಿನಿಮಾದ ಸಬ್ಜೆಕ್ಟ್ ಮೇಲೆ ನಂಬಿಕೆ ಇತ್ತು. ಹಾಗಾಗಿ ಎಲ್ಲರೂ ಅದರ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡಿದ್ದಾರೆ. ಈಗ ಎಲ್ಲರ ಪರಿಶ್ರಮಕ್ಕೆ ಫ‌ಲ ಸಿಗುತ್ತಿದೆ ಎಂದರು.

ಸಕ್ಸಸ್‌ಮೀಟ್‌ನಲ್ಲಿ ಐ ಲವ್‌ ಯು ಚಿತ್ರದ ಹಂಚಿಕೆದಾರರಾದ ಮೋಹನ್‌, ಮೋಹನ್‌ ದಾಸ್‌ ಪೈ, ಛಾಯಾಗ್ರಹಕ ಸುಜ್ಞಾನ್‌, ಸಂಗೀತ ನಿರ್ದೇಶಕ ಕಿರಣ್‌, ನಿರ್ಮಾಪಕ ಕೆ.ಪಿ ಶ್ರೀಕಾಂತ್‌ ಮೊದಲಾದವರು ಹಾಜರಿದ್ದು, ಚಿತ್ರದ ಬಗ್ಗೆ ತಮ್ಮ ಅನಿಸಿಕೆ, ಅನುಭವಗಳನ್ನು ಹಂಚಿಕೊಂಡರು. ಇದೇ ವೇಳೆ ಚಿತ್ರತಂಡ ಕೇಕ್‌ ಕತ್ತರಿಸಿ ಐ ಲವ್‌ ಯು ಚಿತ್ರದ ಸಕ್ಸಸ್‌ ಖುಷಿಯನ್ನು ಹಂಚಿಕೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next