Advertisement

ನನ್ನದು ವೈಟ್‌ ಕಾಲರ್‌ ಮನಃಸ್ಥಿತಿಯಲ್ಲ: ಡಾ| ಮಂಜುನಾಥ್‌

11:38 PM Apr 01, 2024 | Team Udayavani |

ಬೆಂಗಳೂರು: ನನ್ನದು ಬಡವರ ಕಣ್ಣೀರು ಒರೆಸುವ ಮನಸ್ಥಿತಿಯೇ ಹೊರತು ವೈಟ್‌ ಕಾಲರ್‌ ಮನಃಸ್ಥಿತಿಯಲ್ಲ ಎಂದು ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಡಾ| ಸಿ.ಎನ್‌.ಮಂಜುನಾಥ್‌ ಹೇಳಿದರು. ಮೊದಲ ಬಾರಿಗೆ ಪತ್ನಿ ಅನಸೂಯಾ ಜತೆ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದ ಅವರು, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್‌ಕುಮಾರ್‌ ಅವರನ್ನು ಭೇಟಿ ಮಾಡಿದರು.

Advertisement

ನಿಮ್ಮಂತಹ ವೈಟ್‌ ಕಾಲರ್‌ ರಾಜಕಾರಣಿಯ ಆವಶ್ಯಕತೆ ಬಗ್ಗೆ ಕಾಂಗ್ರೆಸ್‌ ನಾಯಕರು ಪ್ರಶ್ನಿಸುತ್ತಿದ್ದಾರೆ ಎಂದಿದ್ದಕ್ಕೆ ಉತ್ತರಿಸಿದ ಅವರು, ನನ್ನ ಸುದೀರ್ಘ‌ ಅವಧಿಯಲ್ಲಿ ಲಕ್ಷಾಂತರ ಬಡರೋಗಿಗಳಿಗೆ ಚಿಕಿತ್ಸೆ ಕೊಟ್ಟಿದ್ದೇನೆ. ನಾನು ಬಡವರು, ರೈತರು, ಕೂಲಿ ಕಾರ್ಮಿಕರಿಗೆ ಹತ್ತಿರವಿದ್ದೇನೆ. ಗ್ರಾಮೀಣ ಭಾಗದವರೇ ಹೆಚ್ಚು ಚಿಕಿತ್ಸೆ ಪಡೆದಿದ್ದಾರೆ. ನಿರ್ದೇಶಕನಿದ್ದಾಗ ಎಸಿ ಕೊಠಡಿಯಲ್ಲಿ ಕುಳಿತು ಕೆಲಸ ಮಾಡಲಿಲ್ಲ. ನನಗೆ ನಿತ್ಯ 10 ಸಾವಿರ ಹೆಜ್ಜೆಯನ್ನಾದರೂ ನಡೆಯುವ ಅಭ್ಯಾಸವಿದೆ. ಅದರಲ್ಲಿ ಕನಿಷ್ಠ 5 ಸಾವಿರ ಹೆಜ್ಜೆಯನ್ನಾದರೂ ಆಸ್ಪತ್ರೆಯಲ್ಲಿ ಓಡಾಡುತ್ತಿದ್ದೆ. ನಿತ್ಯ ಜನತಾ ದರ್ಶನ ಮಾಡುತ್ತಿದ್ದೆ. ಇದ್ಯಾವುದೂ ನನಗೆ ಹೊಸತಲ್ಲ. ಬಡವರ ಕಣ್ಣೀರು ಒರೆಸುವ ಮನಸ್ಥಿತಿ ದೊಡ್ಡ ಕಾಲರ್‌. ವೈಟ್‌ ಕಾಲರ್‌ ಅಲ್ಲ ಎಂದು ತಿರುಗೇಟು ನೀಡಿದರು.

ವಿಧಾನ ಪರಿಷತ್‌ ಸದಸ್ಯ ಕೇಶವ ಪ್ರಸಾದ್‌, ಬಿಜೆಪಿ ಮುಖಂಡ ಸುಬ್ಬನರಸಿಂಹ, ಜೆಡಿಎಸ್‌ ಮುಖಂಡ ಎ.ಪಿ. ರಂಗನಾಥ್‌ ಮತ್ತಿತರರು ಜತೆಗಿದ್ದರು. ಮಂಗಳವಾರ ಕೇಂದ್ರ ಸಚಿವ ಅಮಿತ್‌ ಶಾ ಅವರ ರಾಜ್ಯ ಪ್ರವಾಸದ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಿಜೆಪಿ-ಜೆಡಿಎಸ್‌ ಶಲ್ಯಗಳನ್ನು ಹೊದಿಸಿ ನಾಮಪತ್ರ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next