Advertisement

ನನಗೆ ಯಾರ ಮೇಲೂ ದ್ವೇಷವಿಲ್ಲ

06:00 AM Dec 01, 2018 | |

ಬೆಂಗಳೂರು: “ನನಗೆ ಡಾ.ವಿಷ್ಣುವರ್ಧನ್‌ ಅವರು ಬೇರೆ ಅಲ್ಲ. ಅವರಿಗಾಗಿ ಎರಡು ಸಿನಿಮಾಗಳನ್ನು ನಿರ್ಮಿಸಿದ್ದೇನೆ. ಸಿನಿಮಾಕ್ಕೆ ಅವರ ಸೇವೆ ಕೂಡ ಸಾಕಷ್ಟು ಇದೆ. ಅವರೂ ನಮ್ಮವರೇ…,’ ಇದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಾತುಗಳು.

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಚಿತ್ರೋದ್ಯಮ ಶುಕ್ರವಾರ ಆಯೋಜಿಸಿದ್ದ “ಅಂಬಿ ನಮನ’ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಾವುದೇ ಕೆಲಸ ಮಾಡಬೇಕಾದರೆ ಯೋಚನೆ ಮಾಡಬೇಕು. ಹಾಗೆಯೇ, ಪದಬಳಕೆಯೂ ಮುಖ್ಯವಾಗುತ್ತೆ. ನಾವು ಯಾರಿಗೂ ನೋವು ಕೊಡುವುದಿಲ್ಲ. ಯಾರನ್ನೂ ಅವಮಾನಿಸುವ ಉದ್ದೇಶವೂ ಇಲ್ಲ’ ಎಂದು ಅಭಿಪ್ರಾಯಪಟ್ಟರು.

ಡಾ.ರಾಜ್‌ಕುಮಾರ್‌ ಅವರ ವ್ಯಕ್ತಿತ್ವ ಒಂದು ಹಂತದಲ್ಲಿ ಮೇಲಿದ್ದರೆ, ಅಂಬರೀಶ್‌, ವಿಷ್ಣುವರ್ಧನ್‌ ಅವರ ವ್ಯಕ್ತಿತ್ವ ಕೂಡ ಒಂದೇ ರೀತಿ ಇದೆ. ಈ ಮೂವರು ದಿಗ್ಗಜರು ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಈ ಮೂವರನ್ನೂ ಸರ್ಕಾರ ಗೌರವಿಸಲಿದೆ. ನಮಗೆ ಯಾರ ಮೇಲೂ ದ್ವೇಷವಿಲ್ಲ, ಅಗೌರವಿಸುವ ಮಾತೂ ಇಲ್ಲ. ಈ ಹಿಂದೆ ನಾನು, ಅಂಬರೀಶ್‌, ವಿಷ್ಣುವರ್ಧನ್‌ ಅವರು ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಿ, ಅಂದಿನ ಪ್ರಧಾನಿ ದೇವೇಗೌಡ ಅವರ ಮನೆಯಲ್ಲಿ ಒಟ್ಟಿಗೆ ಊಟ ಮಾಡಿದ್ದ ನೆನಪು ಹೃದಯದಲ್ಲಿದೆ’ ಎಂದರು.

ಅಂಬರೀಶ್‌ ನನಗೆ ಅಣ್ಣ ಇದ್ದ ಹಾಗೆ:
“ಅಂಬರೀಶ್‌ ನನಗೆ ಅಣ್ಣನ ರೀತಿ ಇದ್ದರು. ನನ್ನ ವೈಯಕ್ತಿಕ ಜೀವನದಲ್ಲಿ ಬಡವರ ಮತ್ತು ತಾಯಂದಿರ ಬಗ್ಗೆ ಅಪಾರ ಪ್ರೀತಿ, ಕಾಳಜಿಯನ್ನು ಅಳವಡಿಸಿಕೊಳ್ಳಲು ಪ್ರೇರಣೆಯಾಗಿದ್ದು, ನನ್ನ ತಂದೆ, ತಾಯಿ ಬಿಟ್ಟರೆ, ಡಾ.ರಾಜಕುಮಾರ್‌ ಅವರ ಚಿತ್ರಗಳು. ಇನ್ನು, ಸ್ನೇಹ ಅಂದರೆ ಏನೆಂಬುದನ್ನು ಕಲಿತದ್ದು ಅಂಬರೀಶ್‌ ಅವರ ಜೊತೆಗಿನ ಒಡನಾಟದಿಂದ. ರಾಜ್‌ ಮತ್ತು ಅಂಬರೀಶ್‌ ಅವರು ನಾನು ಸಿಎಂ ಆಗಿದ್ದಾಗ ಅಗಲಿದ್ದು, ಲಕ್ಷಾಂತರ ಅಭಿಮಾನಿಗಳ ಜೊತೆಗೂಡಿ ಅವರ ಅಂತ್ಯಕ್ರಿಯೆ ನೆರವೇರಿಸುವಂತಹ ಕೆಲಸ ಸರ್ಕಾರಕ್ಕೆ ಸಿಕ್ಕಿದ್ದು, ಅದೃಷ್ಟವೋ, ದುರಾದೃಷ್ಟವೋ ಗೊತ್ತಿಲ್ಲ. 12 ವರ್ಷಗಳ ಹಿಂದೆ ಡಾ.ರಾಜ್‌ ನಿಧನರಾದಾಗ, ನಾನು ಸಿಎಂ ಆಗಿದ್ದೆ. ಆಗ ಒಂದಷ್ಟು ಗೊಂದಲವಾಗಿತ್ತು. ಆ ನೋವು ಈಗಲೂ ನನ್ನ ಮನಸ್ಸಲ್ಲಿದೆ. ಕಾರಣ, ಸರಿಯಾದ ಸಿದ್ಧತೆ ಮಾಡಿಕೊಳ್ಳಲು ಆಗಲಿಲ್ಲ. ಅದಕ್ಕೆ ಮೂಲ ಕಾರಣ ನಾನಲ್ಲ’ ಎಂದು ಹೇಳಿದರು.

ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಹೇಗೆ ಇಡಬೇಕೆಂಬ ಗೊಂದಲ ಆಯಿತು. ಇನ್ನು, ಕಂಠೀರವ ಸ್ಟುಡಿಯೋದಲ್ಲಿ ಜನಸ್ತೋಮದಿಂದಾಗಿ ಕುಟುಂಬದವರಿಗೂ ಸಹ ಹಿಡಿ ಮಣ್ಣು ಹಾಕಲು ಸಮಸ್ಯೆ ಎದುರಾಯಿತು. ಕೊನೇ ಘಳಿಗೆಯಲ್ಲಿ ಅವರಿಗೆ ಸರ್ಕಾರ ಸರಿಯಾಗಿ ಗೌರವ ಸಲ್ಲಿಸಲೂ ಆಗಲಿಲ್ಲ. ಅದು ಅಂಬರೀಶ್‌ ನಿಧನದ ವೇಳೆ ಮರುಕಳಿಸಬಾರದು ಅಂತ, ನಾನೇ ಖುದ್ದು ಸೂಚನೆ ಕೊಟ್ಟು, ವ್ಯವಸ್ಥೆ ಮಾಡಿ ಎಲ್ಲರಿಗೂ ದರ್ಶನ ಆಗುವಂತೆ, ಎಲ್ಲೂ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅವಕಾಶ ಸಿಕ್ಕಿತು. ರಾಜ್ಯವಷ್ಟೇ ಅಲ್ಲ, ದೇಶದಲ್ಲೇ ಇಷ್ಟೊಂದು ವ್ಯವಸ್ಥಿತವಾಗಿ ನಡೆದ ಕಲಾವಿದರೊಬ್ಬರ ಅಂತ್ಯಕ್ರಿಯೆ ಅದು ಎಂದು ಹೇಳಿಕೊಂಡರು.

Advertisement

ಅಂಬಿ ಸ್ನೇಹಜೀವಿ:
ಮಾಜಿ ಸಿಎಂ ಸಿದ್ಧರಾಮಯ್ಯ ಮಾತನಾಡಿ,”ಅಂಬರೀಶ್‌ 1973ರಿಂದ ಪರಿಚಿತರು. ಆಗ ನಾನು ವಕೀಲನಾಗಿದ್ದೆ. ಇಬ್ಬರ ಪರಿಚಯ ಆಗಿದ್ದು ಒಂದು ಹೋಟೆಲ್‌ನಲ್ಲಿ. ಅವರ ಮಾತು ಒರಟು. ಆದರೆ, ಅವರೊಂದಿಗೆ ಸ್ವಲ್ಪ ಸಮಯ ಕಳೆದರೆ, ಅವರ ಹೃದಯ ಎಂಥದ್ದು ಎಂಬುದು ಗೊತ್ತಾಗುತ್ತಿತ್ತು. ಅವರೊಬ್ಬ ಸ್ನೇಹ ಜೀವಿ. ದೊಡ್ಡವರಿರಲಿ, ಚಿಕ್ಕವರಿರಲಿ, ಶ್ರೀಮಂತರಾಗಲಿ, ಬಡವರಾಗಲಿ ತಾರತಮ್ಯ ಇಲ್ಲದೆ, ಸ್ನೇಹ ಸಂಪಾದಿಸುತ್ತಿದ್ದರು. ಸಿನಿಮಾ, ರಾಜಕೀಯ ಎರಡು ಕ್ಷೇತ್ರದಲ್ಲೂ ಎತ್ತರಕ್ಕೆ ಬೆಳೆದವರು. ಬಹುಶ: ಅವರಿಗೆ ವೈರಿಗಳೇ ಇರಲಿಲ್ಲ. ಚಿತ್ರರಂಗದಲ್ಲಿ ಯಾವುದೇ ಸಮಸ್ಯೆ ಬಂದರೂ, ಅದನ್ನು ಬಗೆಹರಿಸುವ ಮುಂದಾಳತ್ವ ವಹಿಸಿ, ಅಲ್ಲಿ ಸಮಸ್ಯೆಯನ್ನು ಇತ್ಯರ್ಥಪಡಿಸುತ್ತಿದ್ದರು ಎಂದು ನೆನಪಿಸಿಕೊಂಡರು.

ಅವರಿಗೆ ಕಲಾವಿದರ ಸಂಘದ ಕಟ್ಟಡ ನಿರ್ಮಿಸುವ ಆಸೆ ಬಹಳ ಇತ್ತು. ಒಮ್ಮೆ, ನನ್ನ ಬಳಿ ಬಂದು, “ಬಾಸ್‌ ನಾನು ನಿಮಗೊಂದು ಲೆಟರ್‌ ಕೊಡ್ತೀನಿ. ಆದರೆ, ದುಡ್ಡು ಕೊಡ್ತೀನಿ ಅಂದ್ರೆ ಮಾತ್ರ’ ಅಂದ್ರು. ಆಗ, ನಾನು ಸರಿ ಹೇಳಪ್ಪ, ಏನು, ಅಂದಾಗ, ಕಟ್ಟಡಕ್ಕೆ 5 ಕೋಟಿ ರೂ.ಅನುದಾನ ಕೊಡಿ ಅಂದ್ರು, ನಾನು ತಕ್ಷಣ 2 ಕೋಟಿ ರೂ.ಕೊಟ್ಟು, ಉಳಿದ ಹಣ ಆಮೇಲೆ ಬಿಡುಗಡೆ ಮಾಡ್ತೀನಿ ಅಂದೆ. ಅವರಿಗೆ ಸಂಘದ ಕಟ್ಟಡ ಕಟ್ಟಿಸಿ, ಅದನ್ನು ನನ್ನ ಕೈಯಿಂದಲೇ ಉದ್ಘಾಟನೆ ಮಾಡಿಸಬೇಕೆಂಬ ಆಸೆ ಇತ್ತು. ಕೊನೆಗೆ, ನನ್ನ ಕೈಯಿಂದಲೇ ಉದ್ಘಾಟನೆ ಮಾಡಿಸಿದರು ಎಂದು ಅಂಬಿ ಜೊತೆಗಿನ ನೆನಪನ್ನು ಮೆಲುಕು ಹಾಕಿದರು.

ನಿರ್ಮಲಾನಂದ ಶ್ರೀ, ಸುಮಲತಾ ಅಂಬರೀಶ್‌, ನಟರಾದ ಜಗ್ಗೇಶ್‌, ಶಿವರಾಜಕುಮಾರ್‌, ಹಿರಿಯ ನಟಿಯರಾದ ಸರೋಜಾದೇವಿ, ಜಯಂತಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ.ಚಿನ್ನೇಗೌಡ ಅಂಬರೀಶ್‌ ಅವರ ನೆನಪನ್ನು ಮೆಲುಕು ಹಾಕಿದರು. ಚಿತ್ರರಂಗದ ಕಲಾವಿದರು, ಉದ್ಯಮಿಗಳು, ನಿರ್ಮಾಪಕ, ನಿರ್ದೇಶಕರು ಹಾಜರಿದ್ದರು.

ಕರ್ನಾಟಕ ಸರ್ಕಾರ ಕಲಾವಿದರಿಗೆ ಗೌರವ ನೀಡಿದಷ್ಟು ಬೇರೆ ಯಾವ ರಾಜ್ಯ ಸರ್ಕಾರವೂ ನೀಡಿಲ್ಲ. ಇದು ಸರ್ಕಾರ ಕಲೆಗೆ, ಕಲಾವಿದರಿಗೆ ನೀಡುತ್ತಿರುವ ಪ್ರೋತ್ಸಾಹ.
– ಮುನಿರತ್ನ, ಶಾಸಕ, ನಿರ್ಮಾಪಕರ ಸಂಘದ ಅಧ್ಯಕ್ಷ.
 

Advertisement

Udayavani is now on Telegram. Click here to join our channel and stay updated with the latest news.

Next