ಲಕ್ನೋ : ಭಾರತೀಯ ಸೇನೆಯನ್ನು ಅವಹೇಳನ ಮಾಡುವ ರೀತಿಯಲ್ಲಿ ನಾನು ಕೊಟ್ಟಿರುವೆನೆಂಬ ಹೇಳಿಕೆಯನ್ನು ಖಂಡಿಸುವಲ್ಲಿ ಬಿಜೆಪಿ ನನ್ನ ಘನತೆ-ಗೌರವಗಳಿಗೆ ಚ್ಯುತಿ ತರುವ ರೀತಿಯಲ್ಲಿ ಟೀಕೆಗಳನ್ನು ಮಾಡುತ್ತಿದೆ ಎಂದಿರುವ ಹಿರಿಯ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ಅವರು “ನಾನೀಗ ಬಿಜೆಪಿಯ ಐಟಂ ಗರ್ಲ್’ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
“ನಾನೀಗ ಬಿಜೆಪಿಯ ಐಟಂ ಗರ್ಲ್; ಅವರಿಗೆ ಮಾತನಾಡಲು ಬೇರೆ ಯಾರೂ ಸಿಗುತ್ತಿಲ್ಲ. ಅವರು ಇಲ್ಲಿ ಚುನಾವಣೆಗಳನ್ನು ಗೆದ್ದಿರುವುದೇ ನನ್ನನ್ನು ಗುರಿ ಇರಿಸಿಕೊಂಡು’ ಎಂದು ಆಜಂ ಖಾನ್ ಹೇಳಿದ್ದಾರೆ.
ಭಾರತೀಯ ಸೇನೆಯ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿ ವ್ಯಾಪಕ ಟೀಕೆ, ಖಂಡನೆಗೆ ಗುರಿಯಾದ ಒಂದು ದಿನದ ತರುವಾಯ ಆಜಂ ಖಾನ್ ಅವರು ಬಿಜೆಪಿ ತನ್ನ ವಿರುದ್ಧ ಮಾಡುತ್ತಿರುವ ಅಪಪ್ರಚಾರದಿಂದ ಕೆರಳಿ “ನಾನೀಗ ಬಿಜೆಪಿಗೆ ಐಟಂ ಗರ್ಲ್ ಆಗಿದ್ದೇನೆ’ ಎಂದು ಎಎನ್ಳ ಸುದ್ದಿ ಸಂಸ್ಥೆ ಜತೆಗೆ ಮಾತನಾಡುತ್ತಾ ಆಕ್ರೋಶದಿಂದ ಹೇಳಿದ್ದಾರೆ.
ಈ ಮೊದಲು ತಮ್ಮ ಭದ್ರ ಕೋಟೆಯಾಗಿರುವ ರಾಮಪುರದಲ್ಲಿ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಉ.ಪ್ರ.ದ ಮಾಜಿ ಸಚಿವರೂ ಆಗಿರುವ ಅಜಂ ಖಾನ್, “ಗಡಿಯಲ್ಲಿ ಯುದ್ದ ನಡೆಯುತ್ತಿದೆ; ಆದರೆ ಒಂದು ಸ್ಥಳದಲ್ಲಿ ಹೆಂಗಸೊಬ್ಬಳು ಸೈನಿಕರನ್ನು ಕೊಂದಿದ್ದಾಳೆ. ಆಕೆಯ ಈ ಕೃತ್ಯದ ಹಿಂದೆ ಯಾವುದೋ ಕಾರಣ ಇರಬೇಕೆಂದು ಆಲೋಚಿಸುವಂತೆ ಈ ಘಟನೆ ಮಾಡುತ್ತಿದೆ. ಮಹಿಳಾ ಭಯೋತ್ಪಾದಕರು ಜವಾನರ ಗುಪ್ತಾಂಗಗಳನ್ನು ಕತ್ತರಿಸುತ್ತಾರೆ; ಯಾಕೆಂದರೆ ಸೈನಿಕರ ಈ ನಿರ್ದಿಷ್ಟ ಅಂಗದ ಬಗ್ಗೆ ಅವರಿಗೆ ದೂರು ಇದೆ ಎಂಬುದು ಸ್ಪಷ್ಟವಿದೆ; ಇಡಿಯ ಭಾರತಕ್ಕೆ ಇದೊಂದು ಕಠಿನವಾದ ಸಂದೇಶವಾಗಿದೆ; ಈ ಬಗ್ಗೆ ಇಡಿಯ ದೇಶವೇ ನಾಚಿಕೆಪಡಬೇಕಾಗಿದೆ’ ಎಂದು ಹೇಳಿದ್ದರು.
ಮಾಧ್ಯಮದವರು ಆಜಂ ಖಾನ್ ಅವರಿಗೆ ಈ ಹೇಳಿಕೆಯ ಬಗ್ಗೆ ಕೇಳಿದಾಗ ಅವರು “ನನ್ನ ಹೇಳಿಕೆಗಳನ್ನು ಮಾಧ್ಯಮದವರು ತಪ್ಪಾಗಿ ಗ್ರಹಿಸಿ ವರದಿ ಮಾಡಿದ್ದಾರೆ’ ಎಂದು ನುಣುಚಿಕೊಂಡರು.