Advertisement

ಪತ್ನಿಯ ಕೊಂದು ಪೊಲೀಸರಿಗೆ ಶರಣಾದ ಪತಿ

12:17 PM Nov 28, 2017 | Team Udayavani |

ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ಶೀಲ ಶಂಕಿಸಿ ಪತಿಯೇ ಕತ್ತು ಹಿಸುಕಿ ನಂತರ ಚಾಕುವಿನಿಂದ ಇರಿದು ಕೊಂದ ಘಟನೆ ಪದ್ಮನಾಭನಗರದಲ್ಲಿ ಭಾನುವಾರ ತಡರಾತ್ರಿ ನಡೆದಿದ್ದು, ಆರೋಪಿ ತಾನೇ ಠಾಣೆಗೆ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ.

Advertisement

ಪದ್ಮನಾಭನಗರದ ಇಂದಿರಾ (34) ಕೊಲೆಯಾದವರು. ಮಲ್ಲೇಶ್‌ ಪೊಲೀಸರಿಗೆ ಶರಣಾದ ಆರೋಪಿ. ಪತ್ನಿಯ ಅನೈತಿಕ ಸಂಬಂಧದ ಬಗ್ಗೆ ಪ್ರಶ್ನಿಸಿ ಆಕೆ ಜತೆ ಭಾನುವಾರ ರಾತ್ರಿ ಜಗಳ ಮಲ್ಲೇಶ್‌ ಜಗಳ ತೆಗೆದಿದ್ದು, ಜಗಳ ವಿಕೋಪಕ್ಕೆ ಹೋಗಿ ಕೊಲೆಗೈದಿದ್ದು, ನಂತರ ತನ್ನ ತಪ್ಪಿನ ಅರಿವಾಗಿ ಬನಶಂಕರಿ ಠಾಣೆ ಪೊಲೀಸರಿಗೆ ಶರಣಾಗಿದ್ದಾನೆ.

ಪ್ರೀತಿಸಿ ಮದುವೆಯಾಗಿದ್ದರು: ಹನ್ನೆರಡು ವರ್ಷಗಳ ಹಿಂದೆ ಮಲ್ಲೇಶ್‌ ಮತ್ತು ಇಂದಿರಾ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದು, ಇವರಿಗೆ 7 ವರ್ಷದ ಹೆಣ್ಣು ಮಗು ಇದೆ. ಮಲ್ಲೇಶ್‌, ಏರ್‌ಟೆಲ್‌ ಸಿಮ್‌ ಸೇಲ್ಸ್‌ ಎಕ್ಸಿಕ್ಯೂಟಿವ್‌ ಆಗಿದ್ದು, ಇಂದಿರಾ ಕೂಡ ಖಾಸಗಿ ಕಂಪನಿಯ ಸೇಲ್ಸ್‌ ಎಕ್ಸಿಕ್ಯೂಟಿವ್‌ ಆಗಿದ್ದರು.

ಈ ಮಧ್ಯೆ ಪತ್ನಿ ನಡವಳಿಕೆಯಲ್ಲಿ ಬದಲಾವಣೆ ಗಮನಿಸಿದ್ದ ಮಲ್ಲೇಶ್‌, ಆಕೆ ಕಂಪನಿಯ ಅಧಿಕಾರಿಯೊಬ್ಬನ ಜತೆ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಶಂಕಿಸಿ ನಿತ್ಯ ಜಗಳ ಮಾಡುತ್ತಿದ್ದ. ಇಂದಿರಾ ಮತ್ತು ಕಂಪನಿಯ ಅಧಿಕಾರಿ ನಿರಂತರ ವಾಟ್ಸ್‌ಆ್ಯಪ್‌ ಚಾಟ್‌ ಮಾಡುತ್ತಿದ್ದರು. ಹೀಗೆ ಚಾಟ್‌ ಮಾಡಿದ್ದರ ವಿವರವನ್ನು ಅಧಿಕಾರಿಯ ಪತ್ನಿ, ಭಾನುವಾರ ಮಲ್ಲೇಶ್‌ಗೆ ವಾಟ್ಸ್‌ಆ್ಯಪ್‌ ಮಾಡಿದ್ದರು.

ಇದರಿಂದ ಆಕ್ರೋಶಗೊಂಡ ಮಲ್ಲೇಶ್‌, ಮನೆಗೆ ಬಂದು ಇಂದಿರಾ ಜತೆ ಜಗಳ ತೆಗೆದಿದ್ದಾನೆ. ನಂತರ ಆಕೆ ಮೇಲೆ ಹಲ್ಲೆ ನಡೆಸಿ, ಕುತ್ತಿಗೆ ಹಿಸುಕಿದ್ದಾನೆ. ಈ ವೇಳೆ ಅಸ್ವಸ್ಥಳಾದ ಇಂದಿರಾ ನೆಲಕ್ಕೆ ಬಿದ್ದಾಗ ಚಾಕುವಿನಿಂದ ಹೊಟ್ಟೆ ಹಾಗೂ ಇತರ ಭಾಗಗಳಿಗೆ ಮನಸೋ ಇಚ್ಚೆ ಇರಿದು ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಶವದೊಂದಿಗೆ ಇಡೀ ರಾತ್ರಿ ಕಳೆದ: ಭಾನುವಾರ ತಡರಾತ್ರಿ ಪತ್ನಿಯನ್ನು ಕೊಂದ ಆರೋಪಿ ಮಲ್ಲೇಶ್‌, ಪತ್ನಿಯ ಶವದೊಂದಿಗೆ ಇಡೀ ರಾತ್ರಿ ಕಳೆದಿದ್ದಾನೆ. “ಪೊಲೀಸರಿಗೆ ಶರಣಾಗುವುದಾ, ಬೇಡವಾ ಎಂಬ ಬಗ್ಗೆ ರಾತ್ರಿಯೆಲ್ಲಾ ಯೋಚಿಸಿರುವ ಆರೋಪಿ, ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಬನಶಂಕರಿ ಪೊಲೀಸ್‌ ಠಾಣೆಗೆ ಹಾಜರಾಗಿ ಪತ್ನಿಯನ್ನು ಕೊಂದಿರುವುದಾಗಿ ತಿಳಿಸಿ ಶರಣಾಗಿದ್ದಾನೆ. ನಂತರ ಸ್ಥಳಕ್ಕೆ ತೆರಳಿದ ಪೊಲೀಸರು, ಮಹಜರು ಮಾಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next