Advertisement

ಹುಣಸೂರು:  ವಾರದಲ್ಲಿ ಐದು ದಿನ ಸಂಪೂರ್ಣ ಲಾಕ್‌ಡೌನ್  

09:28 PM May 27, 2021 | Team Udayavani |

ಹುಣಸೂರು: ಕೋವಿಡ್ ನಿಯಂತ್ರಿಸಲು ಲಾಕ್ ಡೌನ್ ಘೋಷಣೆ ಮಾಡಿದ್ದು, ತಾಲೂಕಿನ ಜನತೆ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಸಹಕಾರ ನೀಡಬೇಕೆಂದು ಶಾಸಕ ಎಚ್.ಪಿ.ಮಂಜುನಾಥ್ ಮನವಿ ಮಾಡಿದರು.

Advertisement

ನಗರದ ಶಾಸಕರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಲೇ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿಗಳು  ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದು ವಾರಕ್ಕೆರಡು ದಿನ ಮಾತ್ರ ನಾಗರೀಕರಿಗೆ ಅವಶ್ಯ ಸಾಮಗ್ರಿ ಖರೀದಿಗೆ ಅವಕಾಶ ನೀಡಿದ್ದಾರೆ.

ರಾಜ್ಯಕ್ಕೆ ಮಾದರಿ: ಕೊವಿಡ್-೧೯ ನಿಯಂತ್ರಣ ವಿಚಾರದಲ್ಲಿ ಹುಣಸೂರು ಜಿಲ್ಲೆಯಲ್ಲೇ ಮುಂಚೂಣಿಯಲ್ಲಿದ್ದು, ತಹಸೀಲ್ದಾರ್ ಬಸವರಾಜು, ಇ.ಓ.ಗಿರೀಶ್ ನೇತೃತ್ವದಲ್ಲಿ ತಾಲೂಕು ಆಡಳಿತವು ಮನೆ-ಮನೆ ಸಮೀಕ್ಷೆ, ಔಷಧ ಬ್ಯಾಂಕ್ ಹಾಗೂ  ಗ್ರಾಮಪಂಚಾಯ್ತಿ ವಾರ್‌ರೂಂ ಸ್ಥಾಪನೆಯನ್ನು ರಾಜ್ಯದಲ್ಲೇ ಮೊದಲೇ ಸ್ಥಾಪಿಸಿರುವುದು. ಸಮೀಕ್ಷೆ ಕಾರ್ಯದಲ್ಲೂ ಸಿಬ್ಬಂದಿಗಳು ಶೇ.೭೫ರಷ್ಟು ಗುರಿ ಸಾಧನೆ ಮಾಡಿರುವುದು ತಾಲೂಕಿನ ಹೆಮ್ಮೆಯೂ ಆಗಿದೆ ಎಂದು ಪ್ರಶಂಸಿಸಿದರು.

ಎಲ್ಲವೂ ಬಂದ್ ಆಗಲಿದೆ, ಕಠಿಣ ಕ್ರಮ:

ತಾಲೂಕಿನಲ್ಲಿ ಶಾಸಕ ಎಚ್.ಪಿ.ಮಂಜುನಾಥ್ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೊರೋನಾ ನಿಯಂತ್ರಣಕ್ಕೆ ಹಲವು ರೀತಿಯ ಉಪಕ್ರಮ ಕೈಗೊಂಡಿದೆ. ನಿತ್ಯ ೨೦೦ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿದ್ದು. ಸಂಪೂರ್ಣ ನಿಯಂತ್ರಿಸುವ ಹಿನ್ನೆಲೆಯಲ್ಲಿ ಕಠಿಣ ಲಾಕ್‌ಡೌನ್ ಜಾರಿಗೊಳಿಸಿದ್ದು. ಸೋಮವಾರ ಮತ್ತು ಗುರುವಾರ ಮಾತ್ರ ಬೆಳಗ್ಗೆ ೬ರಿಂದ ೧೨ರವರೆಗೆ ಅಗತ್ಯವಸ್ತುಗಳನ್ನು ಖರೀದಿಸಲು ಅವಕಾಶ ನೀಡಲಾಗಿದೆ.  ಬ್ಯಾಂಕ್ ಹಾಗೂ ವಿಮಾ ಕಂಪನಿಗಳಿಗೆ ಬೆಳಗ್ಗೆ ೮ ರಿಂದ ೧೨ ರವರೆಗೆ ಅವಕಾಶವಿದೆ. ಉಳಿದಂತೆ ಹೋಟೆಲ್,ಬೇಕರಿ ಸೇರಿದಂತೆ ಎಲ್ಲ ವ್ಯವಹಾರಗಳು ಬಂದ್ ಆಗಲಿದೆ. ಹಾಲಿನ ಡೇರಿ, ವೈದ್ಯಕೀಯ ಸೇವೆ, ಮೆಡಿಕಲ್ಸ್‌ಸ್ಟೋರ್, ಹಾಪ್‌ಕಾಮ್ಸ್‌ನಡಿಯಲ್ಲಿ ಬರುವ ತರಕಾರಿ ಮತ್ತು ಹಣ್ಣಿನ ಅಂಗಡಿ, ಸರಕುಸಾಗಣೆ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ.  ಬಾರ್‌ಗಳು ಸಹ ಬಂದ್ ಆಗಲಿವೆ. ಅನಾವಶ್ಯಕವಾಗಿ ಓಡಾಡುವ ವಾಹನ ಸವಾರರ ವಿರುದ್ದ ವಿಪ್ಪತ್ತು ನಿರ್ವಹಣಾ ಕಾಯ್ದೆಯಡಿ ವಾಹನ ವಶಪಡಿಸಿಕೊಳ್ಳುವ ಜೊತೆಗೆ ಕಠಿಣ ಕ್ರಮಜರುಗಿಸಲಾಗುವುದೆಂದರು.

Advertisement

ಶೇ.೭೫ರಷ್ಟು ಮನೆ-ಮನೆ ಸಮೀಕ್ಷೆ: ತಾ.ಪಂ.ಇ.ಓ.ಗಿರೀಶ್ ಮಾತನಾಡಿ ಗ್ರಾಮೀಣ ಬಾಗದಲ್ಲಿ ಕೊರೋನಾ ಹೆಚ್ಚಿರುವ ೪೩ ಗ್ರಾಮಗಳನ್ನು ಕಂಟೋನ್ಮೆಂಟ್ ಝೋನ್ ಮಾಡಲಾಗಿ ಆ ಹಳ್ಳಿಗಳಲ್ಲಿ ನಿಯಂತ್ರಣಕ್ಕೆ ಬಂದಿದೆ. ಈಗಾಗಲೆ ಮೂರು ಬಾರಿ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿದೆ. ಆಶಾ-ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾ.ಪಂ.ಸಿಬ್ಬಂದಿಗಳು ನಡೆಸುತ್ತಿರುವ ಮನೆ-ಮನೆ ಸಮೀಕ್ಷೆ ಮುಕ್ತಾಯಹಂತದಲ್ಲಿದ್ದು. ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ತಾಲೂಕಿನಲ್ಲಿ ೫೮,೫೬೭(ಶೇ.೭೫) ಮನೆ-ಮನೆ ಸಮೀಕ್ಷೆ ಕಾರ್ಯಮುಗಿದಿದ್ದು. ೧೩೮೧ ಕೊರೋನಾ ಲಕ್ಷಣಉಳ್ಳವರು ಪತ್ತೆಯಾಗಿದ್ದು, ಸೂಕ್ತ ವೈದ್ಯಕೀಯ ಸಲಹೆ ನೀಡಲಾಗಿದೆ ಎಂದರು.

೫೬,೮೫೩ ಮಂದಿಗೆ ಲಸಿಕೆ: ಪ್ರಭಾರ ಟಿ.ಎಚ್.ಓ.ಡಾ.ಉಮೇಶ್ ತಾಲೂಕಿನಲ್ಲಿ ಕೋವಿಡ್‌ಮಿತ್ರ ಯಶಸ್ವಿಯಾಗಿದೆ. ಪಿ.ಎಚ್.ಸಿ.ಗಳಲ್ಲಿ ರ್‍ಯಾಪಿಡ್‌ಟೆಸ್ಟ್ ನಡೆಸಲಾಗುತ್ತಿದೆ. ತಾಲೂಕಿನಲ್ಲಿ ೫೬,೮೫೩ಮಂದಿ ಪ್ರಥಮ ಹಾಗೂ ೮೫೪೮ ಮಂದಿ ಸೆಕೆಂಡ್ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಕೋವಿಶೀಲ್ಡ್ ಕೇಂದ್ರದ ೬೮೦ ಹಾಗೂ ರಾಜ್ಯದ ೨೫೦ ಡೋಸ್ ಹಾಗೂ ಕೋವಾಕ್ಸಿನ್ ೨೦ ಡೋಸ್ ದಾಸ್ತಾನಿದೆ. ಕೊರೋನಾ ವಾರಿಯರ್ಸ್‌ಗಳಾದ ಅರಣ್ಯ,ಶಿಕ್ಷಣ,ಸಾರಿಗೆಸಂಸ್ಥೆ, ಚೆಸ್ಕಾಂ ಹಾಗೂ ಅಗ್ನಿಶಾಮಕದಳದವರು ವ್ಯಾಕ್ಸಿನ್‌ಗಾಗಿ ಮನವಿ ಮಾಡಿಕೊಂಡಿದ್ದು, ಜಿಲ್ಲಾಡಳಿತಕ್ಕೆ ಪತ್ರಬರೆಯಲಾಗಿದೆ. ಕೊವಿಡ್ ಆಸ್ಪತ್ರೆಯಲ್ಲಿ ೨೦೯ಮಂದಿ ಚಿಕಿತ್ಸೆ ಪಡೆದಿದ್ದು, ೧೩೩ಮಂದಿ ಬಿಡುಗಡೆಯಾಗಿದ್ದು. ೨೬ಮಂದಿ ಸಾವನ್ನಪ್ಪಿದ್ದರೆ, ಪ್ರಸ್ತುತ ೪೬ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ, ೩೨೮ಮಂದಿ ಐದುಕಡೆಯ ಕೇರ್‌ಸೆಂಟರ್‌ನಲ್ಲಿ ದಾಖಲಾಗಿದ್ದಾರೆಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next