Advertisement

ಅಸ್ಥಿರತೆ, ಅನುಮಾನದ ಮಧ್ಯೆ ಎಚ್‌ಡಿಕೆ ಶತದಿನ

06:55 AM Aug 30, 2018 | Team Udayavani |

ಬೆಂಗಳೂರು: ಸರ್ಕಾರದ ಆಯುಷ್ಯ ಹಾಗೂ ಸ್ಥಿರತೆ ಬಗ್ಗೆ ಅನುಮಾನ, ಗೊಂದಲಗಳ ನಡುವೆಯೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಡಳಿತ “ಶತದಿನ’ ಪೂರೈಸಿದೆ.

Advertisement

ಕಾಂಗ್ರೆಸ್‌-ಜೆಡಿಎಸ್‌ ನಾಯಕರ ಗೊಂದಲದ ಹೇಳಿಕೆ, ವಿವಾದಗಳ ನಡುವೆಯೇ ಸಮ್ಮಿಶ್ರ ಸರ್ಕಾರ 100 ದಿನ ಪೂರ್ಣಗೊಳಿಸಿದೆ. ರೈತರ ಸಾಲ ಮನ್ನಾ, ಭತ್ತ ನಾಟಿ , ಕೃಷಿಯಲ್ಲಿ ಇಸ್ರೇಲ್‌ ತಂತ್ರಜ್ಞಾನ ಆಳವಡಿಕೆಗೆ ಕ್ರಮ, ಜನತಾದರ್ಶನ, ಆರೋಗ್ಯ ಕರ್ನಾಟಕ ಜಾರಿಯಂತಹ ಕ್ರಮಗಳ ಮೂಲಕ ಜನಸಾಮಾನ್ಯರಿಗೆ ಹತ್ತಿರವಾಗುವ ಪ್ರಯತ್ನ ಮಾಡಿದ್ದಾರೆ.

ರಾಜ್ಯದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ ಅನುದಾನ ಪಡೆಯಲು ದೆಹಲಿಗೆ ಹೋಗಿ ಪ್ರಧಾನಿ ಸೇರಿ ಕೇಂದ್ರ ಸಚಿವರನ್ನೂ ಭೇಟಿ ಮಾಡಿದ್ದು ಅಲ್ಲಿ ಉತ್ತಮ ಸ್ಪಂದನೆಯೂ ದೊರೆತಿದೆ. ಸಾಕಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬೆಂಗಳೂರಿನಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಸೇನಾ ಜಾಗ ಪಡೆಯುವ ವಿಚಾರವೂ ಖುದ್ದು ಕೇಂದ್ರ ರಕ್ಷಣಾ ಸಚಿವರೇ ರಾಜ್ಯಕ್ಕೆ ಒಂದು  ಒಪ್ಪಿಗೆ ಕೊಟ್ಟು ಹೋದರು.

ಮಳೆ ಪ್ರವಾಹ, ಗುಡ್ಡ ಕುಸಿತದಿಂದ ಸಂಕಷ್ಟಕ್ಕೊಳಗಾದ ಕೊಡಗು ಜಿಲ್ಲೆಯಲ್ಲಿ ಸಂತ್ರಸ್ತ್ರರಿಗೆ ಪರಿಹಾರ ಹಾಗೂ ಪುನರ್‌ನಿರ್ಮಾಣ ವಿಚಾರದಲ್ಲಿ  ತ್ವರಿತವಾಗಿ ಸ್ಪಂದಿಸಿದ್ದು ಎರಡು ದಿನ ಅಲ್ಲೇ ಇದ್ದು ಸಮಸ್ಯೆ ಆಲಿಸಿದ್ದು ಅಲ್ಲಿನ ಜನರಲ್ಲಿ ವಿಶ್ವಾಸ ಮೂಡಿಸಿತು.

ಕೊಡಗು ಮತ್ತೆ ಜೀವಕಳೆ ತುಂಬುವ ಹಾಗೆ ನಿರಾಶ್ರಿತರಿಗೆ ಶಾಶ್ವತ ಪುನರ್‌ವಸತಿ ಸೇರಿ ಅಲ್ಲಿನ ಅಭಿವೃದ್ಧಿಗೆ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಮುಖ್ಯಮಂತ್ರಿಯವರ ಕರೆಗೆ ಓಗೊಟ್ಟು ರಾಜ್ಯದ ಜನತೆ ದೊಡ್ಡ ಮನಸ್ಸಿನಿಂದ ಉದಾರವಾಗಿ ದೇಣಿಗೆ ನೀಡಿದ್ದಾರೆ. ಕೇಂದ್ರ ಸರ್ಕಾರಕ್ಕೂ ಮೂರು ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್‌ ನೀಡಲು ಗುರುವಾರ ದೆಹಲಿಯಲ್ಲಿ ಮನವಿ ಸಲ್ಲಿಸಲು ಸರ್ಕಾರ ಪ್ರಸ್ತಾವನೆ ಸಿದ್ಧಪಡಿಸಿದೆ.

Advertisement

ಇನ್ನು, ಹಿಂದಿನ ಸರ್ಕಾರದ ಅನ್ನಭಾಗ್ಯ ಸೇರಿ ಹಲವು ಯೋಜನೆ ಮುಂದುವರಿಸಿರುವ ರಾಜ್ಯ ಸರ್ಕಾರ ಕಳೆದ ಸರ್ಕಾರದಲ್ಲಿ ರೂಪಿಸಿದ್ದ ಸರ್ವರಿಗೂ ಆರೋಗ್ಯ ಸೇವೆ ಒದಗಿಸುವ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಳಿಸಿದೆ.
ರೈತರ ಸಾಲ ಮನ್ನಾ ವಿಚಾರದಲ್ಲಂತೂ ಗಟ್ಟಿ ನಿರ್ಧಾರ ಮಾಡಿ 40 ಸಾವಿರ ಕೋಟಿ ರೂ.ವರೆಗೆ ಸಹಕಾರಿ ಸಂಘ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಚಾಲ್ತಿ ಸಾಲ ಮನ್ನಾ ಘೊಷಣೆ ಮಾಡಿ ಆ ಕುರಿತು ಅಧಿಸೂಚನೆ ಹೊರಡಿಸಿದ್ದು ಪ್ರಮುಖ ಸಾಧನೆ ಎನ್ನಬಹುದು. ಜತೆಗೆ ಖಾಸಗಿ ಹಾಗೂ ಲೇವಾದೇವಿದಾರರ ಮೇಲೆ ನಿಯಂತ್ರಣಕ್ಕೆ ತಿದ್ದುಪಡಿ ಕಾಯ್ದೆ ಜಾರಿಗೊಳಿಸಲು ಮುಂದಾಗಿರುವುದು ಒಳ್ಳೆಯ ತಿರ್ಮಾನವೇ. ಆದರೆ, ಮುಂದಿನ ದಿನಗಳಲ್ಲಿ  ಈ ತೀರ್ಮಾನ ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ಕಾದು ನೋಡಬೇಕಾಗಿದೆ.

ಒಂದು ರೀತಿಯಲ್ಲಿ ಹೇಳಬೇಕಾದರೆ ಸಮ್ಮಿಶ್ರ ಸರ್ಕಾರಕ್ಕೆ  ಈ ನೂರು ದಿನಗಳಲ್ಲಿ ದೊಡ್ಡ ಮಟ್ಟದ ಸವಾಲುಗಳೇನೂ ಎದುರಾಗಿಲ್ಲ. ಆದರೆ, ಸರ್ಕಾರ ಜಾಸ್ತಿ ದಿನ ಉಳಿಯಲ್ಲ ಎಂಬ ಮಾತು ಮೊದಲ ದಿನದಿಂದಲೇ ಕೇಳಿಬರುತ್ತಲೇ ಇರುವುದರಿಂದ ಆಡಳಿತ ಯಂತ್ರ ಕುಮಾರಸ್ವಾಮಿಯವರ ನಿರೀಕ್ಷೆಗೆ ತಕ್ಕಂತೆ ಚುರುಕುಗೊಳ್ಳಲಿಲ್ಲ. ಅಧಿಕಾರ ವಲಯದಲ್ಲೂ ಸರ್ಕಾರ ಎಷ್ಟು ದಿನವೋ ಎಂಬ ಮನಸ್ಥಿತಿಯಿದೆ.

ವಿಧಾನಸಭೆ ಚುನಾವಣೆಯಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ದ ಕಾಂಗ್ರೆಸ್‌-ಜೆಡಿಎಸ್‌ ಫ‌ಲಿತಾಂಶದ ನಂತರ ಬದಲಾದ ಪರಿಸ್ಥಿತಿಯಲ್ಲಿ ಜತೆಗೂಡಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿತು. ಒಂದಷ್ಟು ಆಂತರಿಕ ಭಿನ್ನಾಭಿಪ್ರಾಯವೂ ಎರಡೂ ಪಕ್ಷಗಳಲ್ಲಿ ಇರುವುದರಿಂದ ಸಹಜವಾಗಿ ಸರ್ಕಾರದ ಸ್ಥಿರತೆ ಬಗ್ಗೆ ಅನುಮಾನಗಳಿವೆ.
ಆದರೆ, ಮುಂದಿನ ದಿನಗಳಲ್ಲಿ ಗೊಂದಲ, ಅನುಮಾನಗಳಿಗೆ ಅವಕಾಶ ಇಲ್ಲದೆ, ಯಾವುದೇ ವಿವಾದಗಳಿಗೆ ಆಸ್ಪದ ನೀಡದೆ ಸರ್ಕಾರ ಮುನ್ನಡೆಸಬೇಕಿದೆ. ಜಿಲ್ಲಾ ಹಾಗೂ ತಾಲೂಕು ಮಟ್ಟದಿಂದ ವಿಧಾನಸೌಧದವರೆಗೆ ಆಡಳಿತ ಯಂತ್ರ ಚುರುಕುಗೊಳಿಸಬೇಕಿದೆ.

ಕಾಡಿದ ವಿವಾದಗಳು
ಉತ್ತರ ಕರ್ನಾಟಕ ಪ್ರತ್ಯೇಕ ವಿಚಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದ ಹೇಳಿಕೆ ವಿವಾದದ ಸ್ವರೂಪ ಪಡೆಯಿತು. ವಿಧಾನಸೌಧ ಪ್ರವೇಶ ನಿರ್ಬಂಧ ಹೇರುವ ವಿಚಾರ ವಿವಾದಕ್ಕೆ ಕಾರಣವಾಯಿತು. ಮುಖ್ಯಮಂತ್ರಿಯಾಗಿ ಎಷ್ಟು ದಿನ  ಇರ್ತೇನೋ ಗೊತ್ತಿಲ್ಲ, ಇದ್ದಷ್ಟು ದಿನ ಒಳ್ಳೆಯ ಕೆಲಸ ಮಾಡ್ತೇನೆ ಎಂದು ಕುಮಾರಸ್ವಾಮಿ ನೀಡಿದ್ದ ಹೇಳಿಕೆ ಹಾಗೂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗ್ತಾರೆ ಎಂಬ ಬಗ್ಗೆ ಸಚಿವರು-ಶಾಸಕರ ಮಾತುಗಳು ಗೊಂದಲ ಮೂಡಿಸಿತು. ಕುಮಾರಸ್ವಾಮಿಯವರು ಮುಖ್ಯಮಂತ್ರಿ ದೇವಾಲಯಗಳ ಭೇಟಿ ಮಾಡುತ್ತಿದ್ದಾಗ ಮಡಿಕೇರಿಯಲ್ಲಿ ಮಳೆಯ ಪ್ರವಾಹಕ್ಕೆ ಸಂಕಷ್ಟಕ್ಕೊಳಗಾದ ಬಾಲಕ ಮುಖ್ಯಮಂತ್ರಿಯವರೇ ನಮ್ಮ ಸಮಸ್ಯೆ ಕೇಳಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿದ್ದು ವೈರಲ್‌ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next