Advertisement

ನಮ್ಮ ಶಾಲೆ ನಮ್ಮ ಹೆಮ್ಮೆ; ಗ್ರಾಮೀಣ ಪ್ರದೇಶದ ಅಂಡಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

01:14 PM Nov 09, 2019 | mahesh |

ಅಜೆಕಾರು: ಕಾರ್ಕಳ ತಾಲೂಕಿನ ಅತ್ಯಂತ ಗ್ರಾಮೀಣ ಪ್ರದೇಶವಾದ ಅಂಡಾರಿನಲ್ಲಿ
ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಒಂದನೇ ಗುತ್ತಿನ ಅಂಮ್ಚ ಮನೆತನದವರು ದಾನವಾಗಿ ನೀಡಿದ ಸ್ಥಳದಲ್ಲಿ 1912ರಲ್ಲಿ ಶಾಲೆ ಆರಂಭಗೊಂಡು ಯಶಸ್ವಿ ಶತಮಾನ ಕಂಡು ಮುನ್ನಡೆಯುತ್ತಿದೆ.

Advertisement

ಅಂಡಾರು ಹಾಗೂ ಪರಿಸರದ ಗ್ರಾಮಗಳಲ್ಲಿ ಶಾಲೆಗಳು ಇಲ್ಲದೆ ಇರುವುದನ್ನು ಮನಗಂಡ ಸ್ಥಳೀಯರು ಸುಮಾರು 69 ಸೆಂಟ್ಸ್‌ ಜಾಗದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಆರಂಭಿಸಿದ್ದರು. ಸುಮಾರು 45 ವರ್ಷಗಳವರೆಗೆ ಕಿರಿಯ ಪ್ರಾಥಮಿಕ ಶಾಲೆಯಾಗಿಯೇ ಮುಂದುವರಿದು 1956-57ನೇ ಸಾಲಿನಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿ ಹೊಂದಿತ್ತು. ಶಾಲೆಯ ಮೊದಲ ಮುಖ್ಯ ಶಿಕ್ಷಕರಾಗಿ ಅನಂತರಾಜ ಹೆಗ್ಡೆ ಸೇವೆ ಸಲ್ಲಿಸಿದ್ದರು. ಶಾಲೆ ಆರಂಭವಾದ ದಿನಗಳಲ್ಲಿ ಅಂಡಾರು, ಶಿರ್ಲಾಲು, ಕಾಡುಹೊಳೆ, ಮಂಗಳನಗರ, ಬೊಂಡುಕುಮೇರಿ ಭಾಗಗಳಿಂದ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದರು. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಗೊಳ್ಳುತ್ತಾ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದರು.

ಪ್ರಸ್ತುತ ಶಾಲೆಯ ವ್ಯಾಪ್ತಿ ಕಡಿಮೆಗೊಂಡಿದ್ದು, ಹಿಂದೆ ಬರುತ್ತಿದ್ದ ವ್ಯಾಪ್ತಿಯ ಪ್ರದೇಶಗಳಾದ ‌ ಶಿರ್ಲಾಲುವಿನಲ್ಲಿ ಸೂರ್ಯತೊಕ್ಲು ಶಾಲೆ, ಅಂಡಾರು ಪೈತಾಳ ಕಿ. ಪ್ರಾ. ಶಾಲೆ, ಮಂಗಳನಗರ ಕಿ. ಪ್ರಾ. ಶಾಲೆ, ಬೊಂಡುಕುಮೇರಿ ಹಿ. ಪ್ರಾ. ಶಾಲೆ, ಕಾಡುಹೊಳೆ ಕಿ.ಪ್ರಾ. ಶಾಲೆ ಸೇರಿದಂತೆ ಒಟ್ಟು 5 ಹೊಸ ಶಾಲೆಗಳು ಅನಂತರದ ದಿನಗಳಲ್ಲಿ ಆರಂಭಗೊಂಡವು. ಪ್ರಸ್ತುತ ಅಂಡಾರು ಶತಮಾನ ಕಂಡ ಶಾಲೆಯಲ್ಲಿ ಬಾಲಕರು 48, ಬಾಲಕಿಯರು 55 ಸೇರಿದಂತೆ 103 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ.

ಪ್ರಸ್ತುತ 7 ಖಾಯಂ ಶಿಕ್ಷಕರು ಹಾಗೂ ಒಬ್ಬರು ಇಂಗ್ಲಿಷ್‌ ಸ್ಪೀಕಿಂಗ್‌ ಶಿಕ್ಷಕಿ ಸೇರಿದಂತೆ 2 ಗೌರವ ಶಿಕ್ಷಕಿಯರು ಸೇವೆ ಸಲ್ಲಿಸುತ್ತಿದ್ದಾರೆ. ಶಾಲೆಯು 2009-10ನೇ ಸಾಲಿನಿಂದ 8ನೇ ತರಗತಿಯನ್ನು ಒಳಗೊಂಡಿದ್ದು, ಪ್ರತೀ ವರ್ಷ ಶಾಲೆಯ 7 ಮತ್ತು 8ನೇ ತರಗತಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 3 ವಿದ್ಯಾರ್ಥಿಗಳಿಗೆ ಶಾಲೆಯ ಹಳೆ ವಿದ್ಯಾರ್ಥಿಗಳು ಪ್ರೋತ್ಸಾಹದಾಯಕ ಬಹುಮಾನ ನೀಡುತ್ತಿದ್ದಾರೆ.

ಶಾಲೆಯು 67 ಸೆಂಟ್ಸ್‌ ಪ್ರದೇಶದಲ್ಲಿ ಕಟ್ಟಡ ಹೊಂದಿದ್ದು, ಕೆಲವೇ ಅಂತರದಲ್ಲಿ 4.57 ಎಕ್ರೆ ಪ್ರದೇಶದಲ್ಲಿ ವಿಶಾಲವಾದ ಆಟದ ಮೈದಾನ ಹೊಂದಿದೆ. ಶಾಲೆಯಲಿ Éಕಲಿತ ನೂರಾರು ವಿದ್ಯಾರ್ಥಿಗಳು ಇಂದು ಶಿಕ್ಷಕರಾಗಿ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಡಾಕ್ಟರ್‌, ಇಂಜಿನಿಯರ್‌ ಸೇರಿದಂತೆ ವಿವಿ« ‌ಉನ್ನತ ಹುದ್ದೆಯಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳು ಸೇವೆ ಸಲ್ಲಿಸುತ್ತಿದ್ದಾರೆ.

Advertisement

ಪ್ರಸ್ತುತ ಶಾಲೆಯು ಸಾಕಷ್ಟು ತರಗತಿ ಕೊಠಡಿಯನ್ನು ಹೊಂದಿದ್ದು, ಶಾಲಾ ಆವರಣ ಗೋಡೆ, ಕುಡಿಯುವ ನೀರಿನ ಬಾವಿ, ಅಕ್ವಾಗಾರ್ಡ್‌, ಅಡುಗೆ ಕೋಣೆ, ಸುಸಜ್ಜಿತ ಸಭಾಂಗಣ, ಪ್ರೊಜೆಕ್ಟರ್‌ ಸಹಿತ ಎಜ್ಯುಸ್ಯಾಟ್‌, ರಂಗಮಂದಿರ, ಶೌಚಾಲಯ ಸೇರಿದಂತೆ ಮೂಲ ಅವಶ್ಯಕತೆಗಳನ್ನು ಶಾಲೆ ಒಳಗೊಂಡಿದೆ.

ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಸಹಭಾಗಿತ್ವದಲ್ಲಿ ತರಕಾರಿತೋಟ, ಹೂ ತೋಟ ನಿರ್ಮಿಸಲಾಗಿದ್ದು, ಸ್ವತ್ಛತೆ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಲಾಗುತ್ತಿದೆ. “ನಲಿದು ಕಲಿಯೋಣ ಬದುಕು ರೂಪಿಸೋಣ’ ಧ್ಯೇಯ ವಾಕ್ಯವನ್ನು ಶಾಲೆಯಲ್ಲಿ ಅಳವಡಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಕಳೆದ 100 ವರ್ಷಗಳಿಂದಲೂ ಕಾಯ್ದುಕೊಂಡು ಬರಲಾಗಿದೆ.

2012ರಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೇರಿ ಶತಮಾನೋತ್ಸವನ್ನು ವಿಜೃಂಭಣೆಯಿಂದ ಆಚರಿಸಿದ್ದಾರೆ. ಈ ಸಂದರ್ಭ ಶಾಲೆಗೆ ಅಗತ್ಯವಿರುವ ಸಭಾಭವನ, ರಂಗಮಂದಿರ ಸೇರಿದಂತೆ ಬಹುತೇಕ ಮೂಲ ಸೌಕರ್ಯಗಳನ್ನು ನಿರ್ಮಾಣ ಮಾಡಲಾಗಿದೆ. ಶಾಲೆಯ ವಿದ್ಯಾರ್ಥಿಗಳು ಕ್ರೀಡೆ ಹಾಗೂ ಪ್ರತಿಭಾ ಕಾರಂಜಿಗಳಲ್ಲಿ ಪ್ರತೀ ವರ್ಷ ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಿ ಬಹುಮಾನ ಪಡೆಯುತ್ತಿದ್ದಾರೆ.

ಗುಣಮಟ್ಟದ ಶಿಕ್ಷಣ
ಶಿಕ್ಷಣ ವಂಚಿತರಾಗುತ್ತಿದ್ದ ಗ್ರಾಮೀಣ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಶಾಲೆಯ ಸ್ಥಾಪನೆಯಾಗಿದ್ದು, ಗುಣ ಮಟ್ಟದ ಶಿಕ್ಷಣವನ್ನು ಶಿಕ್ಷಕರು ನೀಡುತ್ತಾ ಬಂದಿರುವ ಪ್ರತಿಫ‌ಲವಾಗಿ ಕಳೆದ 108 ವರ್ಷಗಳಿಂದ ಶಾಲೆಯಲ್ಲಿ ಮಕ್ಕಳ ಕಲರವ ಇರುವಂತಾಗಿದೆ. ಗ್ರಾಮಸ್ಥರ ಪರಿಪೂರ್ಣ ಸಹಕಾರದೊಂದಿಗೆ ಶಾಲೆ ಮೂಲ ಸೌಕರ್ಯ ಒಳಗೊಂಡಿದೆ.
-ಅಂಡಾರು ಮಹಾವೀರ ಹೆಗ್ಡೆ, ಹಳೆ ವಿದ್ಯಾರ್ಥಿ (ಖ್ಯಾತ ಉದ್ಯಮಿ)

ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಭರಾಟೆಯ ನಡುವೆಯೂ ನಮ್ಮ ಶಾಲೆ ಸಾಕಷ್ಟು ವಿದ್ಯಾರ್ಥಿಗಳನ್ನು ಒಳಗೊಂಡಿದ್ದು, ಗ್ರಾಮಸ್ಥರ ಸಹಕಾರ ಹಾಗೂ ಕೊಡುಗೆಗಳಿಂದ ಶಾಲೆ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ.
– ಕೆ.ಎಂ. ಹರಿಣಿ ಶೆಟ್ಟಿ, ಮುಖ್ಯ ಶಿಕ್ಷಕರು

-  ಜಗದೀಶ ಅಜೆಕಾರು

Advertisement

Udayavani is now on Telegram. Click here to join our channel and stay updated with the latest news.

Next