Advertisement

ಶಿರಹಟ್ಟಿಯಲ್ಲಿ ಮಾನವೀಯತೆ ಗೋಡೆ!

11:14 AM Aug 28, 2019 | Team Udayavani |

ಗದಗ: ಉಳ್ಳವರಿಗೆ ಬೇಡವಾದ ವಸ್ತುಗಳನ್ನು ಇಲ್ಲದವರಿಗೆ ತಲುಪಿಸುವ ನಿಟ್ಟಿನಲ್ಲಿ ಇಲ್ಲೊಂದು ‘ಮಾನವೀಯತೆಯ ಗೋಡೆ’ ಸದ್ದಿಲ್ಲದೇ ನಿರ್ಮಾಣವಾಗಿದೆ. ಯಾರು ಬೇಕಾದರೂ ತಮಗೆ ಬೇಡವಾದ ವಸ್ತುಗಳನ್ನು ಇಲ್ಲಿ ತಂದಿಡಬಹುದು. ಬೇಕಾದವರು ಅವುಗಳನ್ನು ಯಾರ ಹಂಗಿಲ್ಲದೇ ಉಚಿತವಾಗಿ ಕೊಂಡೊಯ್ಯಬಹುದು.

Advertisement

ಇಂಥಹದೊಂದು ವ್ಯವಸ್ಥೆ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿದೆ. ಕೆಲವರಿಗೆ ಮನೆಯಲ್ಲಿ ಯಾವುದೋ ವಸ್ತು ಬೇಡವಾಗಿ, ಹೆಚ್ಚುವರಿಯಾಗಿ ಮೂಲೆ ಸೇರುತ್ತಿರುತ್ತದೆ. ಅದನ್ನು ಯಾರಿಗಾದರೂ ನೀಡಬೇಕೆಂದರೂ ಹಿಂಜರಿಕೆ ಕಾಡುತ್ತಿರುತ್ತದೆ. ಅದರಂತೆ ಅದೆಷ್ಟೋ ಜನ ತಮಗೆ ಬೇಕಾದ ವಸ್ತು ಖರೀದಿಸುವಷ್ಟು ಆರ್ಥಿಕವಾಗಿ ಸದೃಢವಾಗಿರದೇ ಕೊರಗುತ್ತಿರುತ್ತಾರೆ. ಧರಿಸುವ ಬಟ್ಟೆ, ಹೊದಿಕೆ ಇಲ್ಲದೆ ಪರದಾಡುತ್ತಿರುತ್ತಾರೆ. ಇವರೆಲ್ಲ ಮತ್ತೂಬ್ಬರ ಬಳಿಯಿರುವ ನಿರುಪಯುಕ್ತ ವಸ್ತುವಿಗಾಗಿ ಕೈಚಾಚುವುದು ಹೇಗೆ ಎಂಬ ಕೊರಗು ಇರುತ್ತದೆ. ಅಂತವರಿಗಾಗಿ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಶಿರಹಟ್ಟಿ ತಹಶೀಲ್ದಾರ್‌ ಯಲ್ಲಪ್ಪ ಗೋಣೆಣ್ಣನವರ ನೆರವಾಗಿದ್ದಾರೆ.

ತಹಶೀಲ್ದಾರ್‌ ಕಚೇರಿ ಮುಂಭಾಗದಲ್ಲಿ ಸುಮಾರು 6 ಅಡಿ ಎತ್ತರ ಹಾಗೂ 7 ಅಡಿ ಅಗಲದಷ್ಟು ಗೋಡೆ ಹಾಗೂ ಅದರಲ್ಲಿ 2*2 ಅಳತೆಯ 14 ಗೂಡುಗಳನ್ನು ನಿರ್ಮಿಸಿ, ‘ಮಾನವೀಯತೆ ಗೋಡೆ’ ‘ನಿಮ್ಮಲ್ಲಿರುವ ಹೆಚ್ಚಾದ ಉಪಯುಕ್ತ ವಸ್ತುಗಳನ್ನು ಇಲ್ಲಿ ಇಡಿರಿ. ಇಲ್ಲಿರುವ ನಿಮಗೆ ಅವಶ್ಯವಿರುವ ವಸ್ತುಗಳನ್ನು ಒಯ್ಯಿರಿ’ ಎಂಬ ಫ್ಲೆಕ್ಸ್‌ನ್ನೂ ತೂಗು ಹಾಕಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಆ. 15ರಂದು ಆರಂಭಗೊಂಡಿರುವ ‘ಮಾನವೀಯತೆಯ ಗೋಡೆ’ ಪ್ರಯತ್ನಕ್ಕೆ ಪಟ್ಟಣದ ಸಾರ್ವಜನಿಕರು ಹಾಗೂ ವರ್ತಕರು, ಬಡವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಾರ್ವಜನಿಕರು ತಾವು ಬಳಸಿರುವ ಹೊಸ-ಹಳೆ ಬಟ್ಟೆ, ಚಳಿ ಮತ್ತು ಮಳೆಗಾಲದ ಉಡುಪುಗಳು, ಹೊದಿಕೆ, ಚಾಪೆ, ಪಾತ್ರೆ, ಹಳೆಯ ಪಠ್ಯ ಪುಸ್ತಕ, ಭಾಗಶಃ ಖಾಲಿ ಉಳಿದಿರುವ ನೋಟ್ಬುಕ್‌ಗಳು ಸೇರಿದಂತೆ ಹಲವು ವಸ್ತುಗಳನ್ನು ಸ್ವಚ್ಛಗೊಳಿಸಿಯೇ ತಂದು ಇಡುತ್ತಿದ್ದಾರೆ.

ಜೊತೆಗೆ ಸ್ಥಳೀಯ ಬಟ್ಟೆ ವ್ಯಾಪಾರಿಗಳು, ಟೇಲರ್‌ಗಳು ತಮ್ಮ ಬಳಿ ಗ್ರಾಹಕರು ಕೊಂಡೊಯ್ಯದ ಹೊಸ ಅಂಗಿ, ಪ್ಯಾಂಟ್‌ಗಳನ್ನೂ ತಂದಿಡುತ್ತಿದ್ದಾರೆ. ಅವು ದಿನವಿಡೀ ಮಾನವೀಯತೆ ಗೋಡೆಯ ಕಪಾಟುಗಳಲ್ಲಿದ್ದರೂ ಬೆಳಗಾಗುವುದರೊಳಗೆ ಖಾಲಿಯಾಗಿರುತ್ತವೆ ಎಂಬುದು ಗಮನಾರ್ಹ. ಬೆಳಗಿನ ಸಮಯದಲ್ಲಿ ಈ ವಸ್ತುಗಳನ್ನು ಕೊಂಡೊಯ್ಯಲು ಕೆಲವರಿಗೆ ಮುಜುಗರ ಎನಿಸಬಹುದು. ಆದರೆ, ತಮಗೆ ಬೇಡವಾದ ವಸ್ತುಗಳನ್ನು ಅಲ್ಲೇ ಬಿಟ್ಟಿರುತ್ತಾರೆ ಎನ್ನುತ್ತಾರೆ ಸ್ಥಳೀಯ ವರ್ತಕರಾದ ಶೇಖಣ್ಣ ಶಿರಹಟ್ಟಿ ಹಾಗೂ ಅಜಾರುದ್ದೀನ್‌ ಹೆಸರೂರು. ಇದು ಬಹುತೇಕರಿಗೆ ಉಪಯುಕ್ತವಾಗಿದೆ. ಅದರಲ್ಲೂ ಬಟ್ಟೆ ಹಾಗೂ ಹಳೆ ಪುಸ್ತಕಗಳನ್ನು ತಂದಿಡುವವರೇ ಹೆಚ್ಚು ಎನ್ನಲಾಗುತ್ತದೆ. ಒಟ್ಟಾರೆ, ತಹಶೀಲ್ದಾರ್‌ ಅವರ ಸಾಮಾಜಿಕ ಕಳಕಳಿಯಿಂದ ತಲೆ ಎತ್ತಿರುವ ಮಾನವೀಯತೆ ಗೋಡೆ ಹಲವರಿಗೆ ನೆರವಾಗುತ್ತಿದೆ.

 

Advertisement

•ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next