Advertisement

ಮಂಗಳೂರು ಮಳೆ ಬಿಚ್ಚಿಟ್ಟ ಮಾನವೀಯ ಮುಖಗಳು…

05:15 PM May 31, 2018 | Karthik A |

ಕರಾವಳಿಯ ಜನಕ್ಕೆ ಮಳೆಯೇನೂ ಹೊಸತಲ್ಲ, ಮಾರ್ಚ್ ನಿಂದ ಪ್ರಾರಂಭವಾಗಿ ಮೇ ಅಂತ್ಯದವರೆಗಿನ ಈ ಎರಡು ತಿಂಗಳುಗಳಲ್ಲಿ ಮೈಯೆಲ್ಲಾಬೆವರಿಳಿಸಿಕೊಂಡು ‘ಭಾರೀ ಶೆಕೆ ಮಾರ್ರೆ…’ ಎಂದು ಹೇಳುತ್ತಲೇ, ಮದುವೆ ಕೋಲ, ನೇಮ, ಬ್ರಹ್ಮಕಳಶ, ಯಕ್ಷಗಾನವೇ ಮುಂತಾದ ಚಟುವಟಿಕೆಗಳಲ್ಲಿ ಮುಳುಗಿಹೋಗುವ ಕರಾವಳಿಗರು ಪತ್ತನಾಜೆಯ ದಿನ ನಾಲ್ಕು ಹನಿ ಮಳೆ ಸುರಿದರೆ ಮತ್ತೆ ಕೆಲವೇ ದಿನಗಳಲ್ಲಿ ಪ್ರಾರಂಭವಾಗುವ ಭರ್ಜರಿ ಮಳೆಗಾಲಕ್ಕೆ ಸಿದ್ಧತೆಯನ್ನು ಪ್ರಾರಂಭಿಸುತ್ತಾರೆ. ಇದು ಅನಾದಿ ಕಾಲದಿಂದಲೂ ತುಳುನಾಡಿನಾದ್ಯಂತ ನಡೆದುಕೊಂಡುಬಂದಿರುವ ಸಂಪ್ರದಾಯ. ಆದರೆ ಈ ಸಲ ಮಾತ್ರ ಬೇಸಗೆ ಮಳೆ ಕರಾವಳಿ ಜನರನ್ನು ಸ್ವಲ್ಪ ಹೆಚ್ಚೇ ಸತಾಯಿಸಿತು ಎನ್ನಬಹುದು. ಅದರಲ್ಲೂ ಮಂಗಳೂರು ನಗರದ ಜನ ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಉಂಟಾದ ಕೃತಕ ನೆರೆ ಪರಿಸ್ಥಿತಿಗೆ ಹೈರಾಣಾಗಿ ಹೋದರು. ಮೇ 28ರ ಸೋಮವಾರದಂದು ಸುರಿಯಲಾರಂಭಿಸಿದ ಮಳೆ ಮಂಗಳವಾರದ ಹೊತ್ತಿಗೆ ತನ್ನ ಬಿರುಸನ್ನು ಇನ್ನಷ್ಟು ಹೆಚ್ಚಿಸಿಕೊಂಡು ಮೊದಲೇ ಟೌನ್ ಪ್ಲ್ಯಾನಿಂಗ್ ವ್ಯವಸ್ಥೆಯಲ್ಲಿ ಗೊಂದಲದ ಗೂಡಾಗಿದ್ದ ಮಂಗಳೂರು ನಗರದೆಲ್ಲೆಡೆ ಕೃತಕ ನೆರೆ ಪರಿಸ್ಥಿತಿಯನ್ನು ಉಂಟುಮಾಡಿತ್ತು.

Advertisement

ಈ ಆನಿರೀಕ್ಷಿತ ಪರಿಸ್ಥಿತಿಯ ಬಿಸಿ ತಟ್ಟಿದ್ದು ಮಾತ್ರ ನಗರದ ಜನಸಾಮಾನ್ಯರಿಗೆ. ಗಂಟೆಗಳು ಕಳೆದಂತೆ ಏರುತ್ತಾ ಹೋದ ನೀರಿನ ಪ್ರಮಾಣ ನೋಡನೋಡುತ್ತಲೇ ಮನೆಯೊಳಗೆ, ಅಂಗಡಿ ಮುಂಗಟ್ಟುಗಳಿಗೆ, ಪ್ರಾರ್ಥನಾ ಕೇಂದ್ರಗಳಿಗೆ ನುಗ್ಗಿಯಾಗಿತ್ತು. ಈ ಸಂದರ್ಭದಲ್ಲಿ ಮಂಗಳೂರಿನ ಜನತೆ ಮತ್ತು ಇಲ್ಲಿನ ಸಂಘ-ಸಂಸ್ಥೆಗಳು ತೋರಿದ ಸಮಯಪ್ರಜ್ಞೆ ಇದೀಗ ಸರ್ವತ್ರ ಪ್ರಶಂಸೆಗೆ ಪಾತ್ರವಾಗುತ್ತಿದೆ. ಇವುಗಳಲ್ಲಿ ಕೆಲವೊಂದು ಗಮನಾರ್ಹ ಮಾನವೀಯ ಚಟುವಟಿಕೆಗಳ ಘಟನೆಗಳನ್ನು ಈ ಲೇಖನದ ಮೂಲಕ ದಾಖಲಿಸುವ ಪ್ರಯತ್ನ ಇಲ್ಲಿದೆ.

ಸರ್ವಿಸ್ ಚಾರ್ಜ್ ರಹಿತವಾಗಿ ಔಷಧಿಗಳನ್ನು ಮನೆ-ಮನೆಗೆ ತಲುಪಿಸಿದ ಯುವಕರ ತಂಡ

ಯಾವುದೇ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಅಗತ್ಯವಾಗಿ ಬೇಕಾಗುವುದು ವೈದ್ಯಕೀಯ ಸಹಾಯ. ಅದರಲ್ಲೂ ಮನೆ ಅಂಗಳಕ್ಕೆ ಮಳೆ ನೀರು ನುಗ್ಗಿದಾಗ, ರಸ್ತೆಗಳೆಲ್ಲಾ ತೋಡುಗಳಾಗಿ ಮಾರ್ಪಟ್ಟಾಗ ತುರ್ತು ವೈದ್ಯಕೀಯ ಅಗತ್ಯತೆಗಳನ್ನು ಹೊಂದಿಸಿಕೊಳ್ಳುವುದು ಜನಸಾಮಾನ್ಯರಿಗೆ ಕಷ್ಟದ ಮಾತೇ ಸರಿ. ಈ ವಿಷಯವನ್ನು ಅರಿತುಕೊಂಡ 5 ಜನ ಯುವಕರ ತಂಡವು ಕಳೆದ ಎರಡು ದಿನಗಳಿಂದ ಮಂಗಳೂರು ನಗರವಾಸಿಗಳಿಗೆ ಅಗತ್ಯವಿರುವ ಔಷಧಿಗಳನ್ನು ಯಾವುದೇ ಕ್ಷಣದಲ್ಲಿ ಅವರ ಮನೆಬಾಗಿಲಿಗೆ ತಲುಪಿಸುವ ಮಾನವೀಯ ಕಾರ್ಯವನ್ನು ನಡೆಸಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಈ ಸಂದರ್ಭದಲ್ಲಿ ಮನೆಯವರಿಂದ ಅವರು ಪಡೆದುಕೊಳ್ಳುವುದು ಔಷಧಿ ವೆಚ್ಚವನ್ನು ಮಾತ್ರ.

ಹೆಲ್ತ್ – ಇ (Health-E) ಹೆಸರಿನ ಸ್ಟಾರ್ಟಪ್ ಕಂಪೆನಿ ಜನರ ಪಾಲಿಗೆ ಆಪದ್ಭಾಂಧವನಾಯಿತು!

Advertisement

ನೀರಜ್ ಭಂಡಾರಿ, ವರುಣ್ ಶೆಣೈ, ಧೀರಜ್ ನಾಯಕ್ ಮತ್ತು ವಿಘ್ನೇಶ್ ಶೆಣೈ ಮತ್ತು ನಿಖಿಲ್ ಭಂಡಾರಿ ಎಂಬ ಉತ್ಸಾಹಿ ಯುವಕರ ತಂಡವು ಮಂಗಳೂರು ನಗರದಲ್ಲಿ ಮನೆ ಮನೆಗೆ ಔಷಧಿಗಳನ್ನು ಹಾಗೂ ಇನ್ನಿತರೇ ಆರೋಗ್ಯ ಪಾಲನಾ ಉತ್ಪನ್ನಗಳನ್ನು ಒದಗಿಸುವ start up ಕಂಪೆನಿಯೊಂದನ್ನು ಪ್ರಾರಂಭಿಸಲು ಯೋಚಿಸಿ ಇದಕ್ಕೆ ಅಗತ್ಯವಾಗಿರುವ ಎಲ್ಲಾ ನೋಂದಣಿ ಪ್ರಕ್ರಿಯೆಗಳನ್ನು ಕಳೆದ ಮಾರ್ಚ್ ನಲ್ಲಿ ಮುಗಿಸಿ ಜೂನ್ ನಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸುವ ಉದ್ದೇಶವನ್ನು ಇರಿಸಿಕೊಂಡಿದ್ದರು. ಆದರೆ ಇದ್ದಕ್ಕಿದ್ದ ಹಾಗೇ ಅನಿರೀಕ್ಷಿತ ವಿಪತ್ತಿಗೆ ಮಂಗಳೂರು ನಗರ ಸಿಲುಕಿಬಿದ್ದ ಇಂತಹ ತುರ್ತು ಸಂದರ್ಭದಲ್ಲಿ ತಮ್ಮ ಈ ಸೇವೆ ಜನರಿಗೆ ಅಗತ್ಯ ಎಂದು ಭಾವಿಸಿದ ಯುವಕರ ತಂಡ ಸತತ ಎರಡು ದಿನಗಳ ಕಾಲ ನಗರವಾಸಿಗಳಿಗೆ ಅಗತ್ಯವಿರುವ ಔಷಧಿ ಮತ್ತು ಇತರೇ ವೈದ್ಯಕೀಯ ಸೇವೆಗಳನ್ನು ಸೇವಾ ಶುಲ್ಕ ರಹಿತವಾಗಿ ನೀಡಲು ನಿರ್ಧರಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಈ ಮಾಹಿತಿಯನ್ನು ಶೇರ್ ಮಾಡುತ್ತಾರೆ. ಇವರ ಈ ಸದುದ್ದೇಶಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸುತ್ತದೆ. ಮಂಗಳವಾರ ಒಂದೇ ದಿನ ಈ ಯುವಕರ ತಂಡವು ಸುಮಾರು 18 ರಿಂದ 20 ಕರೆಗಳನ್ನು ಸ್ವೀಕರಿಸಿ ಅವರಿಗೆ ಅಗತ್ಯವಿದ್ದ ಔಷಧಿಗಳನ್ನು ಅವರ ಮನೆ ಬಾಗಿಲಿಗೆ ಕ್ಲಪ್ತ ಸಮಯಕ್ಕೆ ತಲುಪಿಸಿ ಸೇವಾ ಸಾರ್ಥಕ್ಯವನ್ನು ಮೆರೆದಿದೆ.


ತಮ್ಮ ಈ ಕೆಲಸದ ಕುರಿತಾಗಿ ಹೆಲ್ತ್ – ಇ ಸಂಸ್ಥೆಯ ಸಿ.ಇ.ಒ. ನೀರಜ್ ಭಂಡಾರಿ ಹೇಳುವುದು ಹೀಗೆ…
, ‘ನಾವು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ Whats App ಸಂಖ್ಯೆಯನ್ನು ನೀಡುವ ಮೂಲಕ ವೈದ್ಯಕೀಯ ನೆರವಿನ ಅಗತ್ಯವಿರುವವರು ಆ ವಿವರಗಳನ್ನು ಮೆಡಿಕಲ್ ಪ್ರಿಸ್ಕ್ರಿಪ್ಷನ್ ಸಹಿತ ನಮಗೆ ಕಳುಹಿಸಿದ ತಕ್ಷಣ ಅಥವಾ ನಮಗೆ ಕರೆ ಮಾಡಿ ಔಷಧಿ ವಿವರಗಳನ್ನು ನೀಡಿದ ಕೂಡಲೇ ಅವುಗಳನ್ನು ನಾವು ದಾಖಲಿಸಿಕೊಂಡು ನಮ್ಮ ಐದು ಜನರ ತಂಡ ತಕ್ಷಣವೇ ಕಾರ್ಯಪ್ರವೃತ್ತರಾಗುತ್ತಿದ್ದೆವು. ಹತ್ತಿರದ ಮೆಡಿಕಲ್ ಶಾಪ್ ನಿಂದ ಔಷಧಿಯನ್ನು ಖರೀದಿಸಿ (ರಾತ್ರಿಯಾದರೆ 24 ಗಂಟೆ ಕಾರ್ಯನಿರ್ವಹಿಸುವ ಮೆಡಿಕಲ್ ಶಾಪ್ ನಿಂದ) ಕರೆ ಮಾಡಿದವರ ಮನೆಗೆ ಟೂ ವ್ಹೀಲರ್ ಮೂಲಕ ಔಷಧಿಯನ್ನು ನೀಡಿ ಅವರಿಂದ ಔಷಧಿ ವೆಚ್ಚವನ್ನು ಮಾತ್ರವೇ ಪಡೆದುಕೊಂಡು ಬರುತ್ತಿದ್ದವು. ಈ ರೀತಿಯಾಗಿ ನಮಗೆ ನಗರದ ಕೊಡಿಯಾಲ್ ಗುತ್ತಿನಿಂದ ಹೆಚ್ಚಿನ ಕರೆಗಳು ಬಂದಿವೆ ಅದು ಬಿಟ್ಟರೆ ಕೋಡಿಕಲ್ ಭಾಗದಿಂದಲೂ ಕೆಲವೊಂದು ಕರೆಗಳು ಬಂದಿದ್ದು, ಎಲ್ಲಾ ಕಡೆಗೂ ಸಕಾಲದಲ್ಲಿ ಔಷಧಿಗಳನ್ನು ತಲುಪಿಸಿದ ತೃಪ್ತಿ ನಮ್ಮ ತಂಡಕ್ಕಿದೆ…’ ಎನ್ನುತ್ತಾರೆ ನೀರಜ್ ಅವರು.

ತುರ್ತು ಔಷಧಿಗಾಗಿ ಸುಮಾರು 62 ವರ್ಷದ ವ್ಯಕ್ತಿಯೊಬ್ಬರು ಕರೆ ಮಾಡಿದ ಸಂದರ್ಭದಲ್ಲಿ ಆ ಮನೆಯಲ್ಲಿ ವೃದ್ಧ ದಂಪತಿ ಮಾತ್ರ ಇರುವುದನ್ನು ನೋಡಿ ಅವರಿಗೆ ಅಗತ್ಯವಿದ್ದ ಕೆಲವೊಂದು ಆಹಾರ ಸಾಮಾಗ್ರಿಗಳನ್ನೂ ಈ ತಂಡ ಅಂಗಡಿಯಿಂದ ಖರೀದಿಸಿ ನೀಡಿದೆ. ಇನ್ನು ಸಣ್ಣ ಮಗುವೊಂದಕ್ಕೆ ರಾತ್ರಿ ವೇಳೆಯಲ್ಲಿ ಕಿವಿನೋವು ಪ್ರಾರಂಭವಾದಾಗ ಮನೆಯರ ಕರೆಯನ್ನು ಸ್ವೀಕರಿಸಿ ಆ ಮಗುವಿಗೆ ಅಗತ್ಯವಿದ್ದ ಔಷಧಿಯನ್ನು ತಲುಪಿಸಿದ ಘಟನೆಯನ್ನು ನೀರಜ್ ನೆನಪಿಸಿಕೊಳ್ಳುತ್ತಾರೆ.

ಒಟ್ಟಿನಲ್ಲಿ, ಮನೆ ಬಾಗಿಲಿಗೆ ಔಷಧಿ ಮತ್ತು ಆರೋಗ್ಯ ಪಾಲನೆಯನ್ನು ಒದಗಿಸುವ ವ್ಯವಹಾರವನ್ನು ಪ್ರಾರಂಭಿಸಲು ತಯಾರಾಗಿದ್ದ ಈ ಯುವಕರ ತಂಡಕ್ಕೆ ನಗರಕ್ಕೆ ಅನಿರೀಕ್ಷಿತವಾಗಿ ಆಘಾತ ನೀಡಿದ ಈ ಕೃತಕ ನೆರೆ ಪರಿಸ್ಥಿತಿಯ ಕಠಿಣ ಸಂದರ್ಭದಲ್ಲಿ ತಮ್ಮ ಉದ್ದೇಶಿತ ವ್ಯವಹಾರದ ಮೂಲಕವೇ ಸೇವೆ ಸಲ್ಲಿಸುವಂತಾಗಿದ್ದು ಇವರ ವ್ಯವಹಾರದ ಪ್ರಾರಂಭಕ್ಕೆ ಶುಭಸೂಚಕವೆಂದೇ ಹೇಳಬಹುದು.

ದೈವಸ್ಥಾನ ಆವರಣದಲ್ಲಿ ತುಂಬಿದ್ದ ಮಳೆ ನೀರನ್ನು ಹೊರಹಾಕಿದ ಮುಸ್ಲಿಂ ಯುವಕರು:

ನಗರದ ಪಾಂಡೇಶ್ವರದಲ್ಲಿರುವ ಕೊರಗಜ್ಜ ದೈವಸ್ಥಾನದ ಒಳ ಆವರಣಕ್ಕೆ ಭಾರೀ ಮಳೆಯಿಂದಾಗಿ ನೀರು ನುಗ್ಗಿತ್ತು. ಇದನ್ನು ಗಮನಿಸಿದ ಆ ಭಾಗದ ಮುಸ್ಲಿಂ ಯುವಕರ ತಂಡವೊಂದು ರಾತ್ರಿ ವೇಳೆಯಲ್ಲಿಯೇ ಮೊಬೈಲ್ ಲೈಟ್ ಗಳ ಸಹಾಯದಿಂದ ಬಕೆಟ್ ಮೂಲಕ ನೀರನ್ನು ಹೊರಹಾಕಿ ಪ್ರಶಂಸಾರ್ಹ ಕಾರ್ಯವನ್ನು ಮಾಡಿದ್ದಾರೆ. ಹಾಶಿರ್ ಮೊಯ್ದೀನ್, ರಮೀಝ್, ಶಾಬಾಝ್, ಹಸ್ಸನ್ ಕೆ. ಮುಂತಾದವರಿದ್ದ ಯುವಕರ ತಂಡವು ಈ ಕೆಲಸವನ್ನು ಮಾಡಿದ್ದು ಮಂಗಳೂರಿನ ಜನ ಸರ್ವಧರ್ಮ ಸಮಭಾವದ ಮೂಲಕ ಸೌಹಾರ್ಧತೆಯನ್ನು ಬಯಸುವವರು ಎಂಬುದನ್ನು ಹೊರಜಗತ್ತಿಗೆ ತೋರಿಸಿಕೊಟ್ಟಿದೆ. ಈ ಯುವಕರ ಕಾರ್ಯ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗುತ್ತಿದೆ.


ಮಂಗಳೂರು ನಗರ ಕೃತಕ ನೆರೆ ನೀರಿನಿಂದ ಆವೃತಗೊಂಡು ದ್ವೀಪ ಸದೃಶ ವಾತಾವರಣ ಸೃಷ್ಟಿಯಾಗಿದ್ದ ಸಂದರ್ಭದಲ್ಲಿ ದೂರದ ಊರುಗಳಿಂದ ಮಂಗಳೂರಿಗೆ ಬಂದು ವಾಪಾಸು ಹೋಗಲಾಗದೆ ಸಿಕ್ಕಿಹಾಕಿಕೊಂಡವರಿಗಾಗಿ ನಗರದ ಮಣ್ಣಗುಡ್ಡದಲ್ಲಿರುವ ಸಂಘನಿಕೇತನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಶ್ರಯದಲ್ಲಿ ಉಚಿತ ವಸತಿ ಮತ್ತು ಆಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು.


ಇನ್ನು ಪಾಂಡೇಶ್ವರ ಪರಿಸರದಲ್ಲಿ ನೆರೆ ನೀರಿನಿಂದ ಬಾಧಿತವಾಗಿ ಕುಡಿಯುವ ನೀರಿಗೆ ಪರದಾಡುತ್ತಿದ್ದ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ಕ್ಯಾನ್ ಗಳ ಮೂಲಕ ಶುದ್ಧ ಕುಡಿಯುವ ನೀರನ್ನು ಪೂರೈಸುವ ಮೂಲಕ ಪಾಪ್ಯುಲರ್ ಫ್ರಂಟ್ ಸಂಘಟನೆಯ ಯುವಕರು ಆ ಭಾಗದ ಸಾರ್ವಜನಿಕರಿಂದ ಭೇಷ್ ಹೇಳಿಸಿಕೊಳ್ಳುವ ಕಾರ್ಯವನ್ನು ಮಾಡಿ ಮಾದರಿಯಾದರು.

ಇಷ್ಟು ಮಾತ್ರವಲ್ಲದೇ ವೈಯಕ್ತಿಕವಾಗಿ ಹಲವಾರು ವ್ಯಕ್ತಿಗಳೂ, ಸಂಘ ಸಂಸ್ಥೆಗಳೂ ಸಹ ಈ ಸಂಕಷ್ಟದ ಕಾಲದಲ್ಲಿ ವಿವಿಧ ರೀತಿಯ ನೆರವಿನ ಹಸ್ತವನ್ನು ಚಾಚುವುದರ ಮೂಲಕ ಮಂಗಳೂರಿಗರು ನಾವೆಲ್ಲಾ ಒಂದು ಎಂಬ ಭಾವವನ್ನು ಪ್ರದರ್ಶಿಸಿದ್ದು,  ಕರಾವಳಿ ಎಂದರೆ ಸದಾ ಕೋಮು ಸಂಬಂಧಿ ವಿಷಯಗಳಿಗೆ ಸುದ್ದಿಯಾಗುತ್ತಿದ್ದ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಮಾನವೀಯ ಮುಖಗಳ ಅನಾವರಣ ಕರಾವಳಿ ಭಾಗದ ಮಟ್ಟಿಗೆ ಒಂದು ಆಶಾದಾಯಕ ಬೆಳವಣಿಗೆಯೇ ಸರಿ.

Advertisement

Udayavani is now on Telegram. Click here to join our channel and stay updated with the latest news.

Next