Advertisement

ಹಟ್ಟಿ ಗೊಬ್ಬರ ಬಳಸಿ ಕೃಷಿ ಬೆಳೆವ ಮಹಾಬಲ ಭಟ್ಟರು!

08:10 AM Mar 20, 2018 | Karthik A |

ಬಹುತೇಕ ಕೃಷಿಕರು, ಗೋಸಾಕಾಣಿಕೆ ಮಾಡುವ ಮಂದಿ ಮಾತನಾಡುವುದು ದನದ ಹಾಲಿನ ಬಗ್ಗೆ. ದನ ಹಾಲೆಷ್ಟು ನೀಡುತ್ತದೆ. ಲಾಭ,  ನಷ್ಟ ಇತ್ಯಾದಿ ಲೆಕ್ಕಚಾರಗಳು. ಆದರೆ ಗುತ್ತಿಗಾರು ಗ್ರಾಮದ ವಳಲಂಬೆ ಮಹಾಬಲೇಶ್ವರ ಭಟ್ಟರು ಮೊದಲು ಕೇಳುವ ಪ್ರಶ್ನೆ ದನ ಎಷ್ಟು ಸೆಗಣಿ ಹಾಕುತ್ತದೆ ಎಂಬುದು. ನಮ್ಮ ಮನೆಯ ಎರಡು ದನ ದಿನಕ್ಕೆ ಹಾಕುವ ಸೆಗಣಿ 17 ಕೆಜಿ..!. ಇಲ್ಲಿಂದಲೇ ಅವರ ಮಾತು ಧಾಟಿ ಶುರುವಾಗುತ್ತದೆ.

Advertisement

ಅರ್ಚಕರಾದ ಮಹಾಬಲೇಶ್ವರ ಭಟ್ಟರು ಅನೇಕ ವರ್ಷಗಳಿಂದಲೂ ಸಾವಯವ ಕೃಷಿಕರಾಗಿದ್ದಾರೆ. ಅರ್ಚಕ ವೃತ್ತಿಯ ಜತೆಗೆ ಅಡಿಕೆ ಪ್ರಮುಖ ಬೆಳೆ. ಜತೆಗೆ ಕೊಕೋ, ಕಾಳುಮೆಣಸು, ಬಾಳೆ. ಆದರೆ ಇದೆಲ್ಲಾ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಾಣುತ್ತಿರಲಿಲ್ಲ. ತೋಟದ ನಡುನಡುವೆ ಅಡಿಕೆ ಮರದ ಸೋಗೆ ಕೆಂಪಾಗಿ ಎದ್ದು ಕಾಣುತ್ತಿತ್ತು. 

ಪರಿಹಾರ ಎಲ್ಲೂ ಸಿಕ್ಕಿರಲಿಲ್ಲ. ಆದರೆ ಈಗ ಅದೇ ತೋಟ ಹಚ್ಚ ಹಸುರಿನಿಂದ ನಳನಳಿಸುತ್ತಿದೆ. ಕಾಳುಮೆಣಸು ಸಹಿತ ಇತರೆಲ್ಲಾ ಕೃಷಿಗಳಿಗೆ ಮರುಜೀವ ಬಂದಿದೆ. ಇಂತಹ ಬದಲಾವಣೆ ಕಂಡದ್ದು, ಗೋವಿನ ಮೂಲಕ. ಅದೂ ದೇಸೀ ಗೋವಿನ ಕಾರಣದಿಂದ.

ತರಬೇತಿ ಪ್ರೇರಣೆ
ತಮ್ಮ ಅಡಿಕೆ ತೋಟದ ಸುಮಾರು 380 ಅಡಿಕೆ ಮರಗಳಿಗೆ ಕಂಪನಿಗಳಿಂದ ಸಾವಯವ ಗೊಬ್ಬರ ಖರೀದಿ ಮಾಡಿ ಹಾಕುತ್ತಿದ್ದರು. 17 ವರ್ಷಗಳಿಂದ ಇದೇ ರೀತಿ ಮಾಡುತ್ತಾ ಬಂದಿದ್ದರೂ ನಿರೀಕ್ಷಿತ ಫ‌ಲಿತಾಂಶ ಸಿಗಲಿಲ್ಲ. ಅದೊಂದು ದಿನ ಕೃಷಿ ಋಷಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಲ್ಲಿಂದ ವಿವಿಧ ಪ್ರಯೋಗ ಮಾಡುತ್ತಲೇ ಇದ್ದರು. ಬಳಿಕ ನೆಕ್ಕರಕಳೆಯ ಸುಬ್ರಹ್ಮಣ್ಯ ಪ್ರಸಾದ್‌ ಎಂಬ ಕೃಷಿಕರು  ನೀಡಿದ ಮಾಹಿತಿ ಆಧಾರದಲ್ಲಿ ತಾವೇ ಸ್ವತಃ ಗೊಬ್ಬರ ತಯಾರು ಮಾಡಲು ಶುರು ಮಾಡಿದರು. ಅದಕ್ಕಾಗಿಯೇ ದೇಸೀ ಗೋವನ್ನು ಸಾಕಲು ಆರಂಭಿಸಿದರು. ಅದುವರೆಗೆ ಇದ್ದ ವಿವಿಧ ತಳಿಯ ಗೋವುಗಳ ಸಾಕಾಣಿಗೆ ದೂರ ಮಾಡಿ ದೇಸೀ ತಳಿಯ ಗೋವನ್ನು ಸಾಕಿದರು. ಅದುವರೆಗೆ ಇದ್ದ ಗೋಬರ್‌ ಗ್ಯಾಸ್‌, ಸ್ಲರಿ ಪದ್ದತಿ ಬಿಟ್ಟರು. ಕೇವಲ ದೇಸೀ ಗೋವಿನ ಸೆಗಣಿ ಸಂಗ್ರಹಿಸಿ ಅದರ ಮೂಲಕವೇ ಗೊಬ್ಬರ ತಯಾರು ಮಾಡಿ ಅಡಿಕೆ ಮರ ಸಹಿತ ತಮ್ಮೆಲ್ಲಾ ಕೃಷಿಗೆ ಹಾಕಿದರು. ಕೆಲವೇ ಸಮಯದಲ್ಲಿ ಬದಲಾವಣೆ ಕಂಡರು. ಈಗ ಸೆಗಣಿಗಾಗಿಯೇ ಗೋವನ್ನು ಸಾಕಲು ಶುರು ಮಾಡಿದ್ದಾರೆ. ದನ ಹಾಲು ಕೊಡುವುದಕ್ಕಾಗಿಯೇ ಇರುವುದು ಎಂಬ ಭಾವವೇ ಇಲ್ಲ. ಹಾಲಿನಿಂದಲೇ ಲಾಭ ಅಲ್ಲ ಎಂಬ ಮನೋಭಾವ ಬೆಳೆಸಿದ್ದಾರೆ.

ಇನ್ನೊಂದು ಪ್ರಮುಖವಾದ ಅಂಶವೆಂದರೆ ಬೇಸಗೆಯಲ್ಲಿ ನೀರಿನ ಸಮಸ್ಯೆ ಇವರ ತೋಟಕ್ಕೆ ಇದೆ.ಆದರೆ ಈ ಬಾರಿ ನೀರು ಕಡಿಮೆಯಾದರೂ ತೊಂದರೆಯಾಗಿಲ್ಲ. ಕಳೆದ 8 ವರ್ಷಗಳಿಂದ ಅಡಿಕೆ ನಳ್ಳಿ ಬೀಳುತ್ತಿತ್ತು, ಈಗ ನಳ್ಳಿ ಬೀಳುವುದು ಕಡಿಮೆಯಾಗಿದೆ ಎಂದು ಹೇಳುವಾಗ ಮಹಾಬಲೇಶ್ವರ ಭಟ್ಟ ಮುಖದಲ್ಲಿ ಸಾರ್ಥಕತೆ ಕಾಣುತ್ತದೆ. ಈಗ 2 ಗೋವಿನ ಮೂಲಕ ವರ್ಷಕ್ಕೆ 2 ಬಾರಿ 4 ಕೆಜಿ ಗೊಬ್ಬರ ನೀಡಲು ಸಾಧ್ಯವಾಗುತ್ತದೆ. ಈಗ ಮಣ್ಣಿನಲ್ಲಿ ಬದಲಾವಣೆ ಕಂಡಿದೆ. ಎರೆಹುಳಗಳು ಸಾಕಷ್ಟು ಇವೆ. ಕಾಳುಮೆಣಸು ಬಳ್ಳಿಗೆ ಬರುವ ರೋಗ ನಿಯಂತ್ರಣದಲ್ಲಿದೆ ಎನ್ನುತ್ತಾ ಗೋವಿನ ಮೂಲಕ ಆದ ಕೃಷಿ ಬದಲಾವಣೆ, ಮಣ್ಣು ಜೀವ ಪಡೆದ ಬಗೆಯನ್ನು ಸೊಗಸಾಗಿ ವಿವರಿಸುತ್ತಾರೆ.

Advertisement

ಲಾಭ ಹೇಗೆ?
ದನದ ಸೆಗಣಿ ಹೇಗೆ ಲಾಭ ಎಂಬುದನ್ನೂ ಅವರೇ ವಿವರಿಸುತ್ತಾರೆ. ಅವರ 2 ದನಗಳು ದಿನಕ್ಕೆ 17 ಕೆಜಿ ಸೆಗಣಿ ಹಾಕುತ್ತದೆ. ಇವನೆಲ್ಲ ಸಂಗ್ರಹ ಮಾಡುತ್ತಾ ಸುಮಾರು 700 ಕೆಜಿ ಸೆಗಣಿ ಸಂಗ್ರಹವಾದ ಬಳಿಕ ಅದಕ್ಕೆ ಜೀವಾಮೃತ ಸಿಂಪಡಣೆ ಮಾಡಿ ಅನಂತರ 2 ತಿಂಗಳ ಕಾಲ ಮುಚ್ಚಿಡುತ್ತಾರೆ. ಅನಂತರ 700 ಕೆಜಿಗೆ ತಲಾ ಶೇ. 30 ರಂತೆ ಹೊಂಗೆ, ಹರಳಿಂಡಿ, ಬೇವಿನಹಿಂಡಿ ಹಾಗೂ ರಾಕ್‌ ಪಾಸ್ಪೇಟ್‌ನೊಂದಿಗೆ ಮಿಶ್ರಣ ಮಾಡಿ ಗೋಣಿಯಲ್ಲಿ ತುಂಬಿ ಕೃಷಿಗೆ ಅಳವಡಿಸುತ್ತಿದ್ದಾರೆ. ಈಗ ಅಡಿಕೆ ಮರದ ಸೋಗೆ, ಹಿಂಗಾರ ಉದ್ದ ಬರುತ್ತಿದೆ, ಹಳದಿಯಾಗಿಯೇ ಇರುತ್ತಿದ್ದ ಅಡಿಕೆ ಮರದ ಸೋಗೆ ಹಸುರಾಗಿದೆ.

— ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next