Advertisement

ವಿದ್ಯಾರ್ಥಿಗಳಿಂದ ಮಾನವ ಸರಪಳಿ

12:10 PM Nov 20, 2018 | Team Udayavani |

ಬೀದರ: ಶೌಚಾಲಯ ದಿನಾಚರಣೆ ಅಂಗವಾಗಿ ನಗರದ ನೆಹರೂ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳು ಏಕಕಾಲಕ್ಕೆ ಒಂದೆಡೆ ಸೇರಿ, ಮಾನವ ಸರಪಳಿ ನಿರ್ಮಿಸಿ, ಶೌಚಾಲಯ ನಿರ್ಮಾಣಕ್ಕೆ ಬದ್ಧರಾಗಿದ್ದೇವೆ ಎಂದು ಪ್ರತಿಜ್ಞಾವಿಧಿ ಸ್ವೀಕರಿಸಿದರು.

Advertisement

ಜಿಲ್ಲಾ ಪಂಚಾಯತ್‌ ಹಾಗೂ ಸ್ವತ್ಛ ಭಾರತ ಮಿಶನ್‌ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಗರದ ಬಹುತೇಕ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಾನವ ಸರಪಳಿ ನಿರ್ಮಿಸಿದ್ದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ ಪ್ರತಿಜ್ಞಾವಿಧಿ ಬೋಧಿಸಿದರು. “ನಾನು, ಈ ವಿಶ್ವ ಶೌಚಾಲಯ ದಿನದ ಸಂದರ್ಭದಲ್ಲಿ ಸ್ವತ್ಛ, ಆರೋಗ್ಯಕರ ವಾತಾವರಣ ನಿರ್ಮಾಣಕ್ಕಾಗಿ, ನನ್ನ ಸುತ್ತಲಿನ ಪರಿಸರವು ಸ್ವತ್ಛವಾಗಿರುವಂತೆ ಕಾಳಜಿ ವಹಿಸುತ್ತೇನೆ. ಬಯಲಿನಲ್ಲಿ ಶೌಚ ಮಾಡುವುದಿಲ್ಲ. ಶೌಚಾಲಯ ಬಳಸುತ್ತೇನೆ ಮತ್ತು ಸ್ವತ್ಛವಾಗಿಡುತ್ತೇನೆ. ನೀರನ್ನು ಮಿತವಾಗಿ ಬಳಸುತ್ತೇನೆ. ವ್ಯರ್ಥಮಾಡುವುದಿಲ್ಲ. ಮನೆಯಲ್ಲಿ ಹಸಿ ಕಸ ವಿಂಗಡಿಸಿ ಅಮೂಲ್ಯ ಗೊಬ್ಬರವನ್ನಾಗಿಸುತ್ತೇನೆ ಮತ್ತು ಈ ಮಹತ್ಕಾರ್ಯದಲ್ಲಿ ನನ್ನ ಬಂಧು-ಮಿತ್ರರು, ನೆರೆಹೊರೆಯವರು ಭಾಗವಹಿಸಲು ಅವರನ್ನು ಹುರಿದುಂಬಿಸುವ ಪ್ರಯತ್ನ ಮಾಡುತ್ತೇನೆ’ ಎಂದು ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ವಿಧಿ ಬೋಧಿಸಲಾಯಿತು.

ಈ ವೇಳೆ ಸಂಸದ ಭಗವಂತ ಖೂಬಾ ಮಾತನಾಡಿ, ನಮ್ಮ ದೇಶದಲ್ಲಿ ಶೌಚಾಲಯಗಳ ನಿರ್ಮಾಣ ವೇಗದ ಗತಿಯಲ್ಲಿ ನಡೆದಿದೆ. ಹೀಗೆ ಪ್ರತಿಯೊಂದು ಹಳ್ಳಿಗಳಲ್ಲಿ ಶೌಚಾಲಯಗಳು ನಿರ್ಮಾಣವಾಗಬೇಕು. ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಸಭೆ ನಡೆಸಿ ಜನರಲ್ಲಿ ಸ್ವತ್ಛತೆ, ಶೌಚಾಲಯ ನಿರ್ಮಾಣ ಮತ್ತು ಬಳಕೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಶಾಸಕ ರಹೀಂ ಖಾನ್‌ ಮಾತನಾಡಿ, ಇನ್ನೂ ಅನೇಕ ಗ್ರಾಮಗಳಲ್ಲಿ ಜನರು ಬಯಲು ಬಹಿರ್ದೆಸೆಗೆ ಹೋಗುತ್ತಾರೆ. ಅಂತಹ ಜನರಿಗೆ ಶೌಚಾಲಯ ಬಳಕೆ ಬಗ್ಗೆ ಮೇಲಿಂದ ಮೇಲೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷ ಡಾ| ಪ್ರಕಾಶ ಪಾಟೀಲ ಮಾತನಾಡಿ, ಮಕ್ಕಳು ನಮ್ಮ ದೇಶದ ಬಹುದೊಡ್ಡ ಸಂಪತ್ತು. ಅವರ ಮೂಲಕ ಕೂಡ ಜಾಗೃತಿ ಮೂಡಿಸಬೇಕಿದೆ. ಮಕ್ಕಳು ಮನೆಯಲ್ಲಿ ಶುಚಿತ್ವದ ಬಗ್ಗೆ ತಮ್ಮ ಪಾಲಕರಿಗೆ ತಿಳಿಸಬೇಕು. ಶೌಚಾಲಯ ನಿರ್ಮಾಣ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

Advertisement

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ ಪ್ರಾಸ್ತಾವಿಕ ಮಾತನಾಡಿ, ಸ್ವತ್ಛ ಭಾರತ ಅಭಿಯಾನವು ಇಡೀ ದೇಶದಲ್ಲಿಯೇ ಜನರ ಗಮನ ಸೆಳೆದಿದೆ. ಶೌಚಾಲಯಗಳನ್ನು ಬರೀ ನಿರ್ಮಿಸಿಕೊಳ್ಳುವುದಷ್ಟೇ ಅಲ್ಲ.  ಅವುಗಳನ್ನು ಬಳಸುವುದು ಅತೀ ಅವಶ್ಯವಿದೆ. ಬೀದರ ಜಿಲ್ಲೆಯಲ್ಲಿ ಶೌಚಾಲಯಗಳ ನಿರ್ಮಾಣದ ವೇಗ ಹೆಚ್ಚಿದೆ ಎಂದು ಹೇಳಿದರು.

ಬೀದರ ಸಹಾಯಕ ಆಯುಕ್ತ ಶಿವಕುಮಾರ ಶೀಲವಂತ, ಜಿಲ್ಲಾ ಪಂಚಾಯತ್‌ ಉಪ ಕಾರ್ಯದರ್ಶಿ ಹಾಗೂ ಸ್ವತ್ಛ ಭಾರತ ಮಿಶನ್‌ನ ನೋಡೆಲ್‌ ಅಧಿಕಾರಿ ಕಿಶೋರಕುಮಾರ ದುಬೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಇನಾಯತಲಿ ಶಿಂಧೆ, ಸ್ವತ್ಛ ಭಾರತ ಮಿಷನ್‌ನ ಸಹಾಯಕ ನೋಡೆಲ್‌ ಅಧಿಕಾರಿ ಗೌತಮ ಅರಳಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಸೇರಿದಂತೆ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next