Advertisement

ಕೋಲಾರ ಟೊಮೆಟೊಗೆ ಭಾರೀ ಬೇಡಿಕೆ: ಬಾಂಗ್ಲಾದೇಶಕ್ಕೆ ರಫ್ತು

07:27 AM Jun 26, 2023 | Team Udayavani |

ಬೆಂಗಳೂರು: ನೆರೆಯ ಬಾಂಗ್ಲಾದೇಶ, ಒಡಿಶಾ, ಛತ್ತೀಸ್‌ಗಡ, ಕೋಲ್ಕತಾ ಸಹಿತ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಟೊಮೆಟೊಗೆ ಬೇಡಿಕೆ ಸೃಷ್ಟಿಯಾಗಿದ್ದು, ಆ ಹಿನ್ನೆಲೆಯಲ್ಲಿ ರಾಜ್ಯದ ಮಾರುಕಟ್ಟೆಗಳಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ.

Advertisement

ಕೋಲಾರದ ಹೋಲ್‌ಸೇಲ್‌ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ 15 ಕೆ.ಜಿ. ಬಾಕ್ಸ್‌ನ ಟೊಮೆಟೊ 900ರೂ.ದಿಂದ 1100 ರೂ. ವರೆಗೂ ಮಾರಾಟವಾಗುತ್ತಿದೆ. ಹೊರ ದೇಶ ಮತ್ತು ಹೊರ ರಾಜ್ಯಗಳಲ್ಲಿ ಉತ್ತಮ ಗುಣಮಟ್ಟದ ಟೊಮೆಟೊಗೆ ಸಾಕಷ್ಟು ಬೇಡಿಕೆಯಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಟೊಮೆಟೊ ಮತ್ತಷ್ಟು ದುಬಾರಿಯಾಗುವ ನಿರೀಕ್ಷೆಯಿದೆ.

ಕೆ.ಆರ್‌.ಮಾರುಕಟ್ಟೆ ಸಹಿತ ನಗರದ ಹಲವು ಮಾರುಕಟ್ಟೆಯಲ್ಲಿ ಚೆಲ್ಲರೆ ಮಾರಾಟದಲ್ಲಿ ಪ್ರತಿ ಕೆ.ಜಿಗೆ.30 ರೂ.ಗೆ ಖರೀದಿಯಾಗುತ್ತಿದ್ದ ಟೊಮೆಟೊ ಈಗ 50ರಿಂದ 55 ರೂ.ಗೆ ಮಾರಾಟವಾಗುತ್ತಿದೆ.

ಸಕಾಲಕ್ಕೆ ಮಳೆ ಬಾರದಿರುವುದು, ಬೆಳೆಗಳಿಗೆ ನುಸಿರೋಗ ಕಾಣಿಸಿಕೊಂಡಿರುವುದು ಮತ್ತು ತಮಿಳುನಾಡು ಸಹಿತ ಕೆಲವು ರಾಜ್ಯಗಳಲ್ಲಿ ಟೊಮೆಟೊ ಬೆಳೆ ನಾಶವಾಗಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಈಗ ಬೇಡಿಕೆಗೆ ತಕ್ಕಷ್ಟು ಟೊಮೆಟೊ ಸಿಗುತ್ತಿಲ್ಲ. ಆ ಹಿನ್ನೆಲೆಯಲ್ಲಿ ಬೆಲೆಯಲ್ಲಿ ಹೆಚ್ಚಳವಾಗಿದೆ ಎಂದು ಜಾಲಹಳ್ಳಿಯ ಟೊಮೆಟೊ ವ್ಯಾಪಾರಿ ಜಯಣ್ಣ ಹೇಳುತ್ತಾರೆ.

ಬಾಂಗ್ಲಾದೇಶಕ್ಕೆ ರಫ್ತು
ತಮಿಳುನಾಡಿನಲ್ಲಿ ಹೇರಳ ಪ್ರಮಾಣದಲ್ಲಿ ಟೊಮೆಟೊ ಬೆಳೆಯಲಾಗುತ್ತಿದ್ದು, ಈ ಬಾರಿ ಅಲ್ಲೂ ಬೆಳೆ ನಾಶವಾಗಿದೆ. ಕೋಲ್ಕತಾ ಭಾಗದಲ್ಲಿ ಬೆಳೆಯಲಾಗುತ್ತಿದ್ದ ಟೊಮೆಟೊ ಬಾಂಗ್ಲಾದೇಶಕ್ಕೆ ರಫ್ತಾಗುತ್ತಿತ್ತು. ಆದರೆ ಈ ಬಾರಿ ಅಲ್ಲೂ ಬೆಳೆ ಕಡಿಮೆಯಾಗಿದೆ. ಆ ಹಿನ್ನೆಲೆಯಲ್ಲಿ ರಾಜ್ಯದ ಕೋಲಾರ ಮಾರುಕಟ್ಟೆಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಹೊರ ಜಿಲ್ಲೆಗಳಿಂದ ವರ್ತಕರು ಇಲ್ಲಿಗೆ ಬಂದು ಖರೀದಿಸುತ್ತಿದ್ದಾರೆ ಎಂದು ಕೋಲಾರದ ವರ್ತಕ ಪುಟ್ಟರಾಜು ಮಾಹಿತಿ ನೀಡುತ್ತಾರೆ.

Advertisement

ಕೆಲವು ದಿನಗಳ ಹಿಂದೆ ಕೋಲಾರ ಮಾರುಕಟ್ಟೆಯಲ್ಲಿ 15 ಕೆ.ಜಿ. ಬಾಕ್ಸ್‌ ಟೊಮೆಟೊ 300-400 ರೂ.ಗೆ ಖರೀದಿಯಾಗುತ್ತಿತ್ತು. ಇತ್ತೀಚೆಗಷ್ಟೇ ಅದು 700ರಿಂದ 800 ರೂ.ಗೆ ಏರಿತ್ತು¤. ಈಗ ಅದು 900-1100 ರೂ.ಗೆ ಹೆಚ್ಚಾಗಿದೆ. ಬಾಂಗ್ಲಾದೇಶ ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ಟೊಮೆ ಟೊಗೆ ಬೇಡಿಕೆಯಿದ್ದು, ಬೆಲೆ ಮತ್ತಷ್ಟು ಏರಿದೆ.

ಮಹಾರಾಷ್ಟ್ರದಿಂದ ಕ್ಯಾರೆಟ್‌ ಪೂರೈಕೆ
ಸಿಲಿಕಾನ್‌ ಸಿಟಿ ಬೆಂಗಳೂರಿಗೆ ರಾಜಧಾನಿಯ ಸುತ್ತಮುತ್ತಲಿನ ಪ್ರದೇಶಗಳಿಂದ ಕ್ಯಾರೆಟ್‌ ಪೂರೈಕೆ ಆಗುತ್ತಿತ್ತು. ಆದರೆ ಬೇಡಿಕೆಯಿರುವಷ್ಟು ಬೆಳೆ ಪೂರೈಕೆಯಾಗದ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಮಾರುಕಟ್ಟೆಗೆ ಮಹಾರಾಷ್ಟ್ರದಿಂದ ಕ್ಯಾರೆಟ್‌ ಪೂರೈಕೆ ಆಗುತ್ತಿದೆ. ಪ್ರತಿ ದಿನ 600ರಿಂದ 700 ಚೀಲ ಕ್ಯಾರೆಟ್‌ ಮಹಾರಾಷ್ಟ್ರದಿಂದ ರಾಜಧಾನಿಗೆ ಪೂರೈಕೆ ಆಗುತ್ತಿದೆ ಎಂದು ಕಲಾಸಿಪಾಳ್ಯದ ಹೋಲ್‌ಸೇಲ್‌ ವ್ಯಾಪಾರಿ ರವಿರಾಜ್‌ ಹೇಳುತ್ತಾರೆ. ಜತೆಗೆ ಉತ್ತಮ ಗುಣಮಟ್ಟದ ಕ್ಯಾರೆಟ್‌ ಊಟಿಯಿಂದಲೂ ಪ್ರತಿ ದಿನ ಪೂರೈಕೆ ಆಗುತ್ತಿದೆ. ಪ್ರತಿ ಕೆ.ಜಿ 60ರಿಂದ 70 ರೂ.ಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಖರೀದಿಯಾಗುತ್ತಿದೆ. ಮಳೆ ಕೊರತೆ, ಬೆಳೆರೋಗ, ಕೆಲವು ರಾಜ್ಯಗಳಲ್ಲಿ ಬೆಳೆ ಹಾನಿಯಾಗಿರುವುದು ತರಕಾರಿಗಳ ಬೆಲೆಯಲ್ಲಿ ಏರಿಕೆಗೆ ಕಾರಣವಾಗಿದೆ ಎನ್ನುತ್ತಾರೆ.
– ಪುಟ್ಟರಾಜು, ಟೊಮೆಟೊ ವರ್ತಕರು ಕೋಲಾರ

-ದೇವೇಶ ಸೂರಗುಪ್ತ

Advertisement

Udayavani is now on Telegram. Click here to join our channel and stay updated with the latest news.

Next