Advertisement

Hubli; ಫಯಾಜ್ ತಂದೆ, ತಾಯಿ ವಿರುದ್ಧ ದೂರು ನೀಡಲಿರುವ ನೇಹಾ ಹೆತ್ತವರು

02:54 PM Apr 21, 2024 | Team Udayavani |

ಹುಬ್ಬಳ್ಳಿ: ಆರೋಪಿ‌ ಫಯಾಜ್ ತಂದೆ, ತಾಯಿ ಮತ್ತು ಸಹೋದರಿ ವಿರುದ್ಧ ದೂರು ನೀಡುವೆ ಎಂದು ಹತ್ಯೆಗೀಡಾದ ನೇಹಾಳ ತಂದೆ ನಿರಂಜನ ಹಿರೇಮಠ ಮತ್ತು ತಾಯಿ ಗೀತಾ ಹಿರೇಮಠ ಹೇಳಿದ್ದಾರೆ.

Advertisement

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇಹಾಳ ಕುರಿತು ಇಲ್ಲಸಲ್ಲದ ಪೋಟೋ, ವಿಡಿಯೋ ವೈರಲ್ ಮಾಡುತ್ತಿರುವವರ ವಿರುದ್ಧ ಸಹ ಸೈಬರ್ ಕ್ರೈಮ್‌ಗೆ ದೂರು ನೀಡುತ್ತೇವೆ. ನಮ್ಮ ಮಗಳ ಸಾವಿನ ದುಃಖದಲ್ಲಿ ನಾವು ಇದ್ದೇವೆ. ಆದರೆ ನಮ್ಮ ಕುಟುಂಬದ ಗೌರವ ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ. ಆರೋಪಿ‌ ಫಯಾಜ್ ತಂದೆ, ತಾಯಿ ಮತ್ತು ಸಹೋದರಿ ನೀಡುತ್ತಿರುವ ಹೇಳಿಕೆ ನೋಡಿದರೆ ಅವರ ಕುಟುಂಬದಿಂದಲೇ ಫಯಾಜ್‌ಗೆ ಕುಮ್ಮಕ್ಕು ಇದೆ. ಇದು ಫಯಾಜ್ ಮತ್ತು ಕುಟುಂಬದವರ ಒಳಸಂಚು ಅನ್ನಿಸುತ್ತಿದೆ ಎಂದು ಆರೋಪಿಸಿದರು.

ನನ್ನ ಮಗಳು ಸತ್ತಮೇಲೆ ಯಾರು ಪೋಟೋ ವೈರಲ್ ಮಾಡುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಫಯಾಜ್‌ಗೆ ಆಶ್ರಯ ಕೊಟ್ಟವರು ಯಾರು. ಇದೆಲ್ಲಾ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಮುಸ್ಲಿಂ ವಕೀಲರು ಫಯಾಜ್ ಪರ ವಕಾಲತ್ತು ವಹಿಸಬಾರದು

ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ದುರ್ದೈವದ ಸಂಗತಿ. ಹಂತಕನಿಗೆ 90ದಿನದೊಳಗೆ ಕಠಿಣ ಶಿಕ್ಷೆ ಆಗಬೇಕು ಎಂದು ಅಂಜುಮನ್ ಸಂಸ್ಥೆಯ ಅಧ್ಯಕ್ಷ ಎ.ಎಂ. ಹಿಂಡಸಗೇರಿ ಆಗ್ರಹಿಸಿದ್ದಾರೆ.

Advertisement

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕುರಿತು ಮುಖ್ಯಮಂತ್ರಿ, ಡಿಸಿಎಂ, ಗೃಹ ಮತ್ತು ಕಾನೂನು ಸಚಿವರಿಗೆ ಮನವಿ ಸಲ್ಲಿಸಲಾಗುವುದು.‌ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ತ್ವರಿತ ನ್ಯಾಯ ಒದಗಿಸಬೇಕು ಎಂದರು.

ಅಂಜುಮನ್ ಸಂಸ್ಥೆ ವತಿಯಿಂದ ಶುಕ್ರವಾರ ಸಮಾಜದ ಮುತುವಲ್ಲಿ, ಮೌಲ್ವಿಗಳು ಮತ್ತು ಮುಖಂಡತ್ವ ಸಭೆ ಸೇರಿ ಹುಬ್ಬಳ್ಳಿ ಮತ್ತು ಧಾರವಾಡದ ಯಾವೊಬ್ಬ ಮುಸ್ಲಿಂ ವಕೀಲರು ಫಯಾಜ್ ಪರ ವಕಾಲತ್ತು ವಹಿಸಬಾರದೆಂದು ಮನವಿ ಮಾಡಿದ್ದೇವೆ ಎಂದರು.

ಈ ಪ್ರಕರಣದ ಹಿಂದೆ ಯಾರಾದರು ಭಾಗಿಯಾಗಿದ್ದರೆ ಮತ್ತು ಪ್ರೋತ್ಸಾಹಿಸಿದ್ದಾರೆ ಅವರ ಮೇಲೂ ಸೂಕ್ತ ಕ್ರಮಕೈಗೊಳ್ಳಬೇಕು. ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಮುಸ್ಲಿಂ ಸಮಾಜವು ಪ್ರಕರಣ ಇತ್ಯರ್ಥ ಗೊಳ್ಳುವವರೆಗೂ ನಿರಂಜನ ಹಿರೇಮಠ ಕುಟುಂಬದವರೊಂದಿಗೆ ಇರುತ್ತದೆ ಎಂದರು.

ತೀವ್ರವಾಗಿ ಖಂಡಿಸುತ್ತೇನೆ: ಶಾಸಕ ಶ್ರೀನಿವಾಸ ಮಾನೆ

ನೇಹಾ ಹಿರೇಮಠ ನಂಬಲಾರದ ಘಟನೆಗೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ರವಿವಾರ ಮೃತ ನೇಹಾಳ ನಿವಾಸಕ್ಕೆ ಭೇಟಿಕೊಟ್ಟು ತಂದೆ-ತಾಯಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಇಂತಹ ಘಟನೆಗಳು ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಕಾನೂನು ತಿದ್ದುಪಡಿ ಮಾಡಿ ಸೂಕ್ತ ಕಾನೂನು ಜಾರಿಯಾಗಬೇಕು. ಆ ಮೂಲಕ ಅಪರಾಧ ಮಾಡುವ ಮನಸ್ಸುಗಳನ್ನು ಅಧೈರ್ಯಗೊಳಿಸಬೇಕಿದೆ. ಸೂಕ್ತ ವೇದಿಕೆಯಲ್ಲಿ ಪ್ರಸ್ತಾಪ ಮಾಡಿ, ಘಟನೆ ನಡೆಯದಂತೆ ತಡೆಯಬೇಕಿದೆ ಎಂದರು.

ಚುನಾವಣೆ ಹತ್ತಿರದಲ್ಲಿದೆ, ಘಟನೆಯಲ್ಲಿ ಅನ್ಯ ಕೋಮಿನ ವ್ಯಕ್ತಿ ಭಾಗಿಯಾಗಿದ್ದಾನೆ. ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ನಾವೆಲ್ಲ ಕುಟುಂಬದ ಜೊತೆ ಶಕ್ತಿಯಾಗಿ ನಿಲ್ಲಬೇಕು. ಕುಟುಂಬದ ದುಃಖವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದರು.

ವೈಯಕ್ತಿಕ ಕಾರಣಕ್ಕೆ ಇಂತಹ ಘಟನೆಗಳು ನಡೆಯುತ್ತವೆಂದು ಸಿಎಂ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವೈಯಕ್ತಿಕವೆಂದರೆ ಒಬ್ಬ ವ್ಯಕ್ತಿಯ ಕಡೆಯಿಂದ ಆಗಿರಬಹುದು. ಆತ ತನ್ನ ಆಸೆ ಈಡೇರಿಸಿಕೊಳ್ಳಲು ಹೀಗೆ ಆಗಿರಬಹುದು ಎಂದರು.

ರಕ್ತದ ಪ್ರತಿ ಕಣದಲ್ಲಿ ಬಸವ ತತ್ವವಿದೆ. ವಿಕೃತ ಮನಸ್ಸು ಇರುವವರು ಕಾಂಗ್ರೆಸ್‌ ಪಕ್ಷದಿಂದ ಹೊರಗೆ ಇರುತ್ತಾರೆ. ಅಂಜುಮನ್ ಸಂಸ್ಥೆ ಕೂಡ ನೇಹಾ ಕುಟುಂಬದ ಪರ ನಿಂತಿದೆ. ಯಾವ ನ್ಯಾಯವಾದಿಗಳು ಆತನ ಪರವಾಗಿ ವಕಾಲತ್ತು ಹಾಕಬಾರದು. ಅಪರಾಧ ಮಾಡಿದರೆ ಉಳಿಸುವವರು ಯಾರೂ ಇಲ್ಲ ಅನ್ನುವ ಭಾವನೆ ಬರಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next