Advertisement

ಧೂಳು ಮುಕ್ತ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ: ಶೆಟ್ಟರ

11:06 AM Jan 07, 2019 | Team Udayavani |

ಹುಬ್ಬಳ್ಳಿ: ನಗರದಲ್ಲಿ ಧೂಳು ಮುಕ್ತ ರಸ್ತೆಗಳನ್ನು ನಿರ್ಮಿಸಬೇಕೆಂಬ ಕನಸಿಗೆ ಕೇಂದ್ರ ರಸ್ತೆ ನಿಧಿ (ಸಿಆರ್‌ಎಫ್) ಅನುದಾನ ಸಹಕಾರಿಯಾಗಿದ್ದು, ಮುಂದಿನ ದಿನಗಳಲ್ಲಿ ನಗರದ ಬಹುತೇಕ ರಸ್ತೆಗಳು ಕಾಂಕ್ರಿಟ್ ರಸ್ತೆಗಳಾಗಿ ಪರಿವರ್ತನೆಯಾಗಲಿವೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

Advertisement

ವಿದ್ಯಾನಗರದಲ್ಲಿ ಪಿಂಟೋ ವೃತ್ತ-ಅಂಬೇಶ ಹೋಟೆಲ್‌ವರೆಗೆ ಸಿಆರ್‌ಎಫ್ ಯೋಜನೆಯಲ್ಲಿ ನಿರ್ಮಾಣವಾಗಿರುವ ಒಂದು ಭಾಗದ ರಸ್ತೆಗೆ ರವಿವಾರ ಚಾಲನೆ ನೀಡಿ ಅವರು ಮಾತನಾಡಿದರು. ಮಹಾನಗರಕ್ಕೆ ಸಿಆರ್‌ಎಫ್ ಯೋಜನೆಯಲ್ಲಿ 467 ಕೋಟಿ ರೂ. ಮಂಜೂರಾಗಿದ್ದು ಇದು ರಾಜ್ಯದ ಇತಿಹಾಸದಲ್ಲಿ ಮೊದಲು. ರಾಜ್ಯ ಸರಕಾರ ನಿರ್ಲಕ್ಷ್ಯ ಹಾಗೂ ದುರುದ್ದೇಶದಿಂದ ಸಿಆರ್‌ಎಫ್ ಯೋಜನೆಗೆ ಅನುದಾನ ನೀಡುತ್ತಿಲ್ಲ. ಮಹಾನಗರ ಅಭಿವೃದ್ಧಿಯಾದರೆ ಜಗದೀಶ ಶೆಟ್ಟರ ಅವರಿಗೆ ಕ್ರೆಡಿಟ್ ಹೋಗಲಿದೆ ಎನ್ನುವ ಕಾರಣಕ್ಕೆ ಹಿಂದಿನ ಸರಕಾರ ಟೆಂಡರ್‌ ಅಗಿದ್ದರೂ ಕಾಮಗಾರಿಗೆ ಅವಕಾಶ ನೀಡಲಿಲ್ಲ. ಕೇಂದ್ರ ಸರಕಾರದಿಂದ ಸೂಕ್ತ ನಿರ್ದೇಶನ ಬಂದ ಹಿನ್ನೆಲೆಯಲ್ಲಿ ಇದೀಗ 200 ಕೋಟಿ ಮೊತ್ತದ ಕಾಮಗಾರಿಗಳು ನಡೆಯುತ್ತಿವೆ. ಉಳಿದಂತೆ ಟೆಂಡರ್‌ ಪ್ರಕ್ರಿಯೆ ನಡೆದಿದೆ. ಇದರಲ್ಲಿ ನಗರದ ನಿಲಿಜಿನ್‌ ರಸ್ತೆ, ಗಾಮನಗಟ್ಟಿ, ಸಿದ್ಧಾರೂಢ ಮಠ-ಆನಂದ ನಗರ ಸೇರಿದಂತೆ ಹಲವು ರಸ್ತೆಗಳು ಅಭಿವೃದ್ಧಿಗೊಳ್ಳಲಿವೆ. ಟೆಂಡರ್‌ ಶ್ಯೂರ್‌ ರಸ್ತೆ ಗುತ್ತಿಗೆದಾರ ಈಗಾಗಲೇ ಸುಮಾರು 20 ಕೋಟಿ ರೂ. ಕಾಮಗಾರಿ ನಿರ್ವಹಿಸಿದ್ದಾರೆ. ಇದುವರೆಗೂ ಗುತ್ತಿಗೆದಾರರಿಗೆ ರಾಜ್ಯ ಸರಕಾರ ಬಿಲ್‌ ಪಾವತಿ ಮಾಡದಿರುವುದು ವಿಳಂಬಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಜಿಲ್ಲೆಗೆ 1248 ಕೋಟಿ: ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಸಿಆರ್‌ಎಫ್ ಯೋಜನೆಯಲ್ಲಿ ಜಿಲ್ಲೆಗೆ 1248 ಕೋಟಿ ರೂ. ವೆಚ್ಚದ ಕಾಮಗಾರಿಗಳು ಮಂಜೂರಾಗಿದೆ. 1048 ಕೋಟಿ ರೂ. ಹು-ಧಾ ಮಹಾನಗರಕ್ಕೆ ಮಂಜೂರಾಗಿದೆ. ನಗರದಲ್ಲಿ 5 ಪ್ರಮುಖ ರಸ್ತೆಗಳ ಕಾಮಗಾರಿಗಳು ನಡೆಯುತ್ತಿವೆ. 3ನೇ ಹಂತದ ಸಿಆರ್‌ಎಫ್ ಯೋಜನೆಗೆ ಟೆಂಡರ್‌ ಕರೆಯಬೇಕಾಗಿದೆ. ಚನ್ನಮ್ಮ ವೃತ್ತದಲ್ಲಿ 314 ಕೋಟಿ ವೆಚ್ಚದಲ್ಲಿ ಫ್ಲೈಓವರ್‌ ನಿರ್ಮಾಣಕ್ಕೆ ರಾಜ್ಯದಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಒಂದು ತಿಂಗಳಲ್ಲಿ ಕೇಂದ್ರದಿಂದ ಕಾಮಗಾರಿಗೆ ಮಂಜೂರಾತಿ ಪಡೆಯುವುದಾಗಿ ಭರವಸೆ ನೀಡಿದರು. ಅಶ್ವತ್ಥ ನಾರಾಯಣ, ಲಿಂಗರಾಜ ಪಾಟೀಲ, ಮಲ್ಲಿಕಾರ್ಜುನ ಸಾವಕಾರ, ಲಕ್ಷ್ಮೀ ಉಪ್ಪಾರ, ಲಕ್ಷ್ಮಣ ಉಪ್ಪಾರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next