Advertisement

ಸಂಶೋಧನೆಯತ್ತ ಹೆಗ್ಗೇರಿ ಕಾಲೇಜು ದಾಪುಗಾಲು-ತಪ್ತಕಲ್ವ ಯಂತ್ರದ ಪೇಟೆಂಟ್‌ ಗೆ ಪ್ರಯತ್ನ

06:31 PM Jul 07, 2023 | Team Udayavani |

ಹುಬ್ಬಳ್ಳಿ: ಭಾರತೀಯ ವೈದ್ಯ ಪರಂಪರೆಯ ಆಯುರ್ವೇದ ಚಿಕಿತ್ಸೆ ಬಗ್ಗೆ ಜನರಲ್ಲಿ ಆಕರ್ಷಣೆ, ವಿಶ್ವಾಸ ಹೆಚ್ಚತೊಡಗಿದೆ. ಕೋವಿಡ್‌ ನಂತರದಲ್ಲಿ ಇದರ ಪ್ರಭಾವ ಇನ್ನಷ್ಟು ಹೆಚ್ಚಿದೆ. ಆಯುರ್ವೇದದಲ್ಲಿ ಸಂಶೋಧನೆಯೂ ಹೆಚ್ಚತೊಡಗಿದೆ. ಇದಕ್ಕೆ ಪೂರಕ ಎನ್ನುವಂತೆ ಉತ್ತರ ಕರ್ನಾಟಕದಲ್ಲೇ ಹಿರಿತನ ಖ್ಯಾತಿಯ ಇಲ್ಲಿನ ಹೆಗ್ಗೇರಿಯ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಗಮನಾರ್ಹ ಸಂಶೋಧನೆಗಳಿಗೆ ಮುಂದಾಗಿದೆ. ಉಪಯುಕ್ತ ಔಷಧ, ಉಪಕರಣಗಳೊಂದಿಗೆ ಪೇಟೆಂಟ್‌ ಪಡೆಯಲು ಮುಂದಾಗಿದೆ.

Advertisement

ಆಯುರ್ವೇದ ವೈದ್ಯಕೀಯ ಶಿಕ್ಷಣ, ಚಿಕಿತ್ಸೆ ಜತೆಗೆ ವಿದ್ಯಾರ್ಥಿ ಹಾಗೂ ಬೋಧಕರು ಸಂಶೋಧನೆಯಲ್ಲಿ ಹೆಚ್ಚು ಹೆಚ್ಚು ತೊಡಗಿಕೊಳ್ಳುವುದಕ್ಕೆ ಪೂರಕ ವಾತಾವರಣವನ್ನು ಸೃಷ್ಟಿಸಲಾಗಿದೆ. ಉಪಯುಕ್ತ ಸಂಶೋಧನೆಯೊಂದಿಗೆ ಯುವ ವಿಜ್ಞಾನಿ
ಪ್ರಶಸ್ತಿಯನ್ನು ಕಾಲೇಜು ಪಡೆದುಕೊಂಡಿದ್ದು, ಕಾಲೇಜು ವಿದ್ಯಾರ್ಥಿಯೊಬ್ಬರು ರೂಪಿಸಿದ ಉತ್ಪನ್ನವೊಂದರ ಪೇಟೆಂಟ್‌ ಪಡೆಯಲು ಮುಂದಾಗಿದೆ. ಸಂಶೋಧನೆಗಾಗಿ ವಿವಿಧ ಅನುದಾನ ಪಡೆಯುವ ಮೂಲಕ ಇನ್ನಷ್ಟು ಸಂಶೋಧನೆಗೆ ಇಳಿದಿದೆ.

1954ರಲ್ಲಿ ಶುದ್ಧ ಆಯುರ್ವೇದ ಸೇವಾ ಸಮಿತಿ ಸಂಸ್ಥೆ ಹೆಸರಲ್ಲಿ ವೈದ್ಯರಾದ ದಾಮೋದರ ಅನಂತ ಹಲಸಿಕರ ಅವರ ಮುಂದಾಳತ್ವದಲ್ಲಿ ಹುಬ್ಬಳ್ಳಿಯ ಗಣೇಶಪೇಟೆಯಲ್ಲಿ ಆರಂಭವಾಗಿದ್ದ ಆಯುರ್ವೇದ ಕಾಲೇಜು ನಂತರ ಹೆಗ್ಗೇರಿಗೆ
ಸ್ಥಳಾಂತರಗೊಂಡಿತ್ತು. ಆಯುರ್ವೇದ ಕಾಲೇಜು-ಆಸ್ಪತ್ರೆ, ಬಿಎಎಂಸ್‌ ಪದವಿ ಕೋರ್ಸ್‌ ಜತೆಗೆ, ಸ್ನಾತಕೋತ್ತರ ವಿಭಾಗದಲ್ಲಿ ಕಾಯ ಚಿಕಿತ್ಸೆ, ಶಲ್ಯ ತಂತ್ರ, ರೋಗನಿಧಾನ, ರಸಶಾಸ್ತ್ರ, ಪಂಚಕರ್ಮ, ಮೌಲಿಕ ಸಿದ್ಧಾಂತ, ಶಾರೀರ ರಚನಾ ವಿಭಾಗಗಳಲ್ಲಿ, ಪಿಎಚ್‌ಡಿಯಲ್ಲಿ ಕಾಯಚಿಕಿತ್ಸೆ, ಭೃಷಜ್ಯ ಕಲ್ಪನಾ ಹಾಗೂ ಶಲ್ಯಶಾಸ್ತ್ರ ಇನ್ನಿತರ ವಿಭಾಗಗಳಲ್ಲಿ ಬೋಧನೆ ಮಾಡುತ್ತಿದೆ.

ತಪ್ತಕಲ್ವ ಯಂತ್ರ ಅಭಿವೃದ್ಧಿ: ಆಯುರ್ವೇದ ಶಾಸ್ತ್ರದಲ್ಲಿ ಔಷಧ ತಯಾರಿಸಲು ಗಿಡಮೂಲಿಕೆಗಳನ್ನು ಅರೆಯಲು
ಅದರದ್ದೇಯಾದ ಸೂತ್ರವಿದೆ. ಸಾಂಪ್ರದಾಯಿಕವಾಗಿ ಔಷಧ ಅರೆಯಲು ಇಂತಹದ್ದೇ ಮಾದರಿ ಉಪಕರಣ ಇರಬೇಕು,
ಅರೆಯುವಾಗ ಇಂತಿಷ್ಟೆ ಪ್ರಮಾಣದ ಉಷ್ಣಾಂಶ ಹೊಂದಿರಬೇಕು ಎಂಬ ನಿಯಮವಿದೆ. ಕೈಯಿಂದ ಅರೆಯುವಷ್ಟೇ ರೀತಿಯಲ್ಲಿ ಹಾಗೂ ಉಷ್ಣತೆ ನಿಯಂತ್ರಣದೊಂದಿಗೆ ಔಷಧ ತಯಾರಿಕೆಯ ಯಂತ್ರವೊಂದನ್ನು ಹೆಗ್ಗೇರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ವಿದ್ಯಾರ್ಥಿಯೊಬ್ಬರು ಸಂಶೋಧಿಸಿದ್ದು, ಪೇಟೆಂಟ್‌ ಪಡೆಯುವ ಯತ್ನ ನಡೆಯುತ್ತಿದೆ.

ರಾಜೀವಗಾಂಧಿ ಆರೋಗ್ಯ ವಿವಿಯಿಂದ ಸಂಶೋಧನೆ ಅನುದಾನದೊಂದಿಗೆ 2012- 2015ರ ಅವಧಿಗೆ ಡಾ| ನಿತಿನ್‌ ಎಂಬ ವಿದ್ಯಾರ್ಥಿ ಔಷಧಿ ಅರೆಯುವ ವಿಧಾನಕ್ಕೆ ಯಾಂತ್ರೀಕರಣ ಸ್ಪರ್ಶ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಕಾಲೇಜು ಪ್ರಾಧ್ಯಾಪಕ ಡಾ| ಪ್ರದೀಪ ಅಗ್ನಿಹೋತ್ರಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡು ಯಂತ್ರ ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಔಷಧಿಯನ್ನು ಆಯುರ್ವೇದ ಸೂತ್ರದಡಿಯೇ ಅರೆಯುವ ಯಂತ್ರ ಇದಾಗಿದ್ದು, ಔಷಧ ಅರೆಯುವಾಗ ನಿಗದಿಗಿಂತ ಹೆಚ್ಚಿನ ಉಷ್ಣಾಂಶ ಉಂಟಾದರೆ ಯಂತ್ರ ತಾನಾಗಿಯೇ ಬಂದ್‌ ಆಗಿಬಿಡುತ್ತದೆ. ಕೈಯಿಂದ ಅರೆದಷ್ಟೇ ಉತ್ಕೃಷ್ಟ ಗುಣಮಟ್ಟದ ಔಷಧ
ಅರೆಯಲಿದೆ. ಪ್ರಸ್ತುತ 150ರಿಂದ 250 ಗ್ರಾಂ ತೂಕದಷ್ಟು ಔಷಧವನ್ನು ಈ ಯಂತ್ರದಲ್ಲಿ ಅರೆಯಬಹುದಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು 40-50 ಕೆಜಿ ಸಾಮರ್ಥ್ಯದ ಯಂತ್ರವನ್ನಾಗಿಸಲು ಯೋಜಿಸಲಾಗಿದೆ. ಪ್ರಸ್ತುತ ತಯಾರಿಸಿದ ಯಂತ್ರಕ್ಕೆ 24 ಸಾವಿರ ರೂ. ವೆಚ್ಚವಾಗಿದೆ.

ಅನುಮೋದನೆ-ಅನುದಾನವಷ್ಟೇ ಬಾಕಿ ಧೂಪಯಂತ್ರ ಸಂಶೋಧನೆ ಯತ್ನಕ್ಕೂ ಆಯುರ್ವೇದ ಕಾಲೇಜು-ಆಸ್ಪತ್ರೆ
ಮುಂದಾಗಿದೆ. ಆಯುರ್ವೇದ ಚಿಕಿತ್ಸೆಯಲ್ಲಿ ಗಿಡಮೂಲಿಕೆ, ಔಷಧಗಳನ್ನು ಸುಟ್ಟು ಅದರ ಹೊಗೆ ಮೂಲಕವೂ ಚಿಕಿತ್ಸೆ ನೀಡಲಾಗುತ್ತದೆ. ಗಿಡಮೂಲಿಕೆ ಸುಡಲು ಹಾಗೂ ಉತ್ತಮ ರೀತಿಯಲ್ಲಿ ರೋಗಿಗಳಿಗೆ ನಳಿಕೆ ಮೂಲಕ ಹೊಗೆ ದೊರೆಕುವಂತಾಗಲು ಧೂಪಯಂತ್ರ ಸಂಶೋಧನೆಗೆ ಸಿದ್ಧಪಡಿಸಿಕೊಳ್ಳಲಾಗಿದ್ದು, ರಾಜೀವಗಾಂಧಿ ಆರೋಗ್ಯ ವಿವಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ, ಅನುದಾನ ದೊರೆತರೆ ಆ ಯಂತ್ರವೂ ರೂಪುಗೊಳ್ಳಲಿದೆ. ಅದೇ ರೀತಿ ವಿದ್ಯಾರ್ಥಿಯೊಬ್ಬರು ಗಾಯ
ಸ್ವಚ್ಛಗೊಳಿಸುವ ಯಂತ್ರ ಅಭಿವೃದ್ಧಿಪಡಿಸಿದ್ದಾರೆ.

ಮುತ್ತಲ ಬೇರು-ಬಾಳೆ ಗಡ್ಡೆ ಮದ್ದು ಹುಬ್ಬಳ್ಳಿಯ ಆಯುರ್ವೇದ ಕಾಲೇಜು ಪೈಲ್ಸ್‌ ಮತ್ತು ಫಿಸ್ಟಲ್‌ ವ್ಯಾಧಿಗೆ ಶಸ್ತ್ರಚಕಿತ್ಸೆ ರಹಿತ ಚಿಕಿತ್ಸೆಗೆ ಸಾಂಪ್ರದಾಯಿಕವಾಗಿ ಬಳಕೆ ಮಾಡುತ್ತಿದ್ದ ಗಿಡಮೂಲಿಕೆ ಬದಲಾಗಿ ಇತರೆ ಗಿಡಮೂಲಿಕೆ ಬಳಕೆಯನ್ನು ಸಂಶೋಧಿಸಿದೆ. ಸಾಮಾನ್ಯವಾಗಿ ಪೈಲ್ಸ್‌ಗೆ ಆಯುರ್ವೇದ ಚಿಕಿತ್ಸೆಯಲ್ಲಿ ಉತ್ತರಾಣಿಯನ್ನು ಕ್ಷಾರಸೂತ್ರದಡಿ ಬಳಕೆ ಮಾಡಲಾಗುತ್ತದೆ. ಉತ್ತರಾಣಿ ಗಿಡ ಎಲ್ಲ ಕಾಲದಲ್ಲಿಯೂ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಇದಕ್ಕೆ ಪರ್ಯಾಯವಾಗಿ ಯಾವ ಗಿಡಮೂಲಿಕೆ ಬಳಕೆ ಸಾಧ್ಯ ಎಂಬ ಸಂಶೋಧನೆಗಿಳಿದ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕರು ಮುತ್ತಲ ಬೇರು ಹಾಗೂ ಬಾಳೆಗಿಡದ ಗಡ್ಡೆಯ ಕ್ಷಾರದಿಂದಲೂ ಇದಕ್ಕೆ ಚಿಕಿತ್ಸೆ ನೀಡಬಹುದಾಗಿದೆ ಎಂಬುದನ್ನು ಸಂಶೋಧಿಸಿದ್ದಾರೆ.

ಇದರ ಕ್ಲಿನಿಕಲ್‌ ಪ್ರಯೋಗವನ್ನು ಕೈಗೊಳ್ಳಲಾಗಿದ್ದು, ಎರಡು ಔಷಧಗಳ ಬಳಕೆಗೆ ತಲಾ 25 ಜನರ ಮೇಲೆ ಪ್ರಯೋಗ ನಡೆಸಿದ್ದು,
ಮುತ್ತಲ ಗಿಡದ ಬೇರಿನ ಕ್ಷಾರ ಉತ್ಕೃಷ್ಟ ಫಲಿತಾಂಶ ನೀಡಿದೆಯಂತೆ. ಹುಬ್ಬಳ್ಳಿಯ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಶುದ್ಧ
ಆಯುರ್ವೇದವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ವಿವಿಧ ಕ್ರಮ ಹಾಗೂ ಹೊಸತನದ ತುಡಿತದೊಂದಿಗೆ ಹಲವು ಸಂಶೋಧನೆಗೆ ಮುಂದಾಗಿದೆ. ಇತರೆ ಆಸ್ಪತ್ರೆಗಳಿಗೆ ಕಡಿಮೆ ಇಲ್ಲದಂತೆ ನಿತ್ಯ 10-12 ಶಸ್ತ್ರ ಚಿಕಿತ್ಸೆಯನ್ನು ಕೈಗೊಳ್ಳುತ್ತಿದೆ. ವಿಶೇಷವಾಗಿ ಹಲವು ವ್ಯಾಧಿಗಳಿಗೆ ಶಸ್ತ್ರ ಚಿಕಿತ್ಸೆ ರಹಿತ ಚಿಕಿತ್ಸೆ ನೀಡುತ್ತಿದೆ.

ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಡಳಿತ ಮಂಡಳಿ ಸಹಕಾರ, ರಾಜೀವಗಾಂಧಿ ಆರೋಗ್ಯ ವಿವಿ ಹಾಗೂ ಕೇಂದ್ರ ಸರಕಾರದ ಅನುದಾನಡಿ ಹಲವು ಸಂಶೋಧನೆಗಳನ್ನು ಕೈಗೊಳ್ಳಲಾಗುತ್ತಿದೆ. ಕಾಲೇಜಿನ ಬೋಧಕರು ಹಾಗೂ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ಹೆಚ್ಚಿನ ಆಸಕ್ತಿಯೊಂದಿಗೆ ಗಮನ ಸೆಳೆಯಬಹುದಾದ ಪಯುಕ್ತ ಉಪಕರಣಗಳ ಸಂಶೋಧನೆಗೆ ಮುಂದಾಗಿರುವುದು ಹೆಮ್ಮೆಯ ಸಂಗತಿ. ಸರಕಾರ ಹಾಗೂ ದಾನಿಗಳಿಂದ ಇನ್ನಷ್ಟು ಅನುದಾನ ದೊರೆತಲ್ಲಿ ಮತ್ತಷ್ಟು ಸಂಶೋಧನೆಗೆ ಸಹಕಾರಿ ಆಗಲಿದೆ.
ಡಾ| ಎ.ಎಸ್‌. ಪ್ರಶಾಂತ,
ಪ್ರಾಂಶುಪಾಲರು, ಆಯುರ್ವೇದ ಕಾಲೇಜು-ಆಸ್ಪತ್ರೆ ಹುಬ್ಬಳ್ಳಿ

ತಪ್ತ ಕಲ್ವ ಯಂತ್ರವನ್ನು ಸುಮಾರು 40-50 ಕೆಜಿ ಸಾಮರ್ಥ್ಯದೊಂದಿಗೆ ತಯಾರಿಸಿ ಅದನ್ನು ದೇಶದಲ್ಲಿನ ಆಯುರ್ವೇದ ಔಷಧ ತಯಾರಿಕೆ ವಿವಿಧ ಕಂಪೆನಿಗಳಿಗೆ ನೀಡಲು ಯೋಜಿಸಲಾಗಿದೆ. ಈ ನಿಟ್ಟಿನಲ್ಲಿ ಪೇಟೆಂಟ್‌ಗೆ ಯತ್ನಿಸಲಾಗುತ್ತಿದೆ. ಈ ಯಂತ್ರದ ಸಹಾಯದಿಂದ ಉತ್ಕೃಷ್ಟ ಗುಣಮಟ್ಟದ ಆಯುರ್ವೇದ ಔಷಧ ತಯಾರಿಕೆಗೂ ಸಹಕಾರಿ ಆಗಲಿದೆ. ನಮ್ಮ ವಿದ್ಯಾರ್ಥಿ ತಯಾರಿಸಿದ ಯಂತ್ರವನ್ನು ನಮ್ಮ ಕಾಲೇಜು-ಆಸ್ಪತ್ರೆಯಲ್ಲಿ ಬಳಕೆ ಮಾಡಲಾಗಿದ್ದು, ಉತ್ತಮ ಫಲಿತಾಂಶ ನೀಡಿದೆ.
ಡಾ| ಪ್ರದೀಪ ಅಗ್ನಿಹೋತ್ರಿ, ಹಿರಿಯ
ಪ್ರಾಧ್ಯಾಪಕರು, ಆಯುರ್ವೇದ ಕಾಲೇಜು-ಆಸ್ಪತ್ರೆ

Advertisement

Udayavani is now on Telegram. Click here to join our channel and stay updated with the latest news.

Next