Advertisement

ಹುಬ್ಬಳ್ಳಿ -ದೆಹಲಿ ವಿಮಾನಯಾನಕ್ಕೆ ಇಂಡಿಗೋ ಸಜ್ಜು

10:08 AM Apr 28, 2022 | Team Udayavani |

ಹುಬ್ಬಳ್ಳಿ: ಇಂಡಿಗೋ ವಾಯುಯಾನ ಕಂಪನಿಯು ವಾಣಿಜ್ಯ ನಗರಿಯಿಂದ ದೇಶದ ರಾಜಧಾನಿಗೆ ವಿಮಾನಯಾನ ಸೇವೆ ಕಲ್ಪಿಸಲು ಮುಂದಾಗಿದ್ದು, ಅದಕ್ಕಾಗಿ ಈಗಾಗಲೇ ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಿದೆ.

Advertisement

ಇಂಡಿಗೋ ಕಂಪನಿಯು ಹುಬ್ಬಳ್ಳಿಯಿಂದ ನವದೆಹಲಿಗೆ ಒನ್‌ ಸ್ಟಾಪ್‌ ಕೊಟ್ಟು ವಿಮಾನಯಾನ ಸೇವೆಯನ್ನು ಮೇ ತಿಂಗಳಿನಿಂದ ಆರಂಭಿಸಲು ಯೋಜಿಸಿದ್ದು, ಅದಕ್ಕಾಗಿ ಪ್ರಸ್ತಾವನೆ ಸಹ ಸಲ್ಲಿಸಿದೆ. ಆದರೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ)ದಿಂದ ಅನುಮೋದನೆ ಸಿಗಬೇಕಿದೆ. ಅದು ದೊರೆತ ಕೂಡಲೇ ಬುಕ್ಕಿಂಗ್‌ ಆರಂಭಿಸಲು ಹಾಗೂ ವಿಮಾನಯಾನದ ದಿನಾಂಕ, ವೇಳಾಪಟ್ಟಿ ನಿಗದಿಗೊಳಿಸುವ ಬಗ್ಗೆ ಕೂಡ ಚಿಂತನೆ ನಡೆಸಿದೆ. ಕಾರಣ ಡಿಜಿಸಿಎದಿಂದ ಅನುಮತಿ ದೊರೆಯುವುದೊಂದೇ ಬಾಕಿ ಉಳಿದಿದೆ ಎಂದು ಮೂಲಗಳು ತಿಳಿಸಿವೆ.

ಮೇ 1ರಿಂದ ಮಂಗಳೂರು, 3ರಿಂದ ಮೈಸೂರಗೆ ನೇರ ವಿಮಾನ: ಇಂಡಿಗೋ ಕಂಪನಿ ಈಗಾಗಲೇ ಹುಬ್ಬಳ್ಳಿಯಿಂದ ಮುಂಬಯಿ, ಚೆನ್ನೈ, ಬೆಂಗಳೂರು, ಹೈದರಾಬಾದ್‌ಗೆ ವಿಮಾನಯಾನ ಸೇವೆ ಕಲ್ಪಿಸಿದ್ದು, ಮೇ 1ರಿಂದ ಮಂಗಳೂರಿಗೆ ವಾರದಲ್ಲಿ ನಾಲ್ಕು ದಿನ ಹಾಗೂ ಮೇ 3ರಿಂದ ಮೈಸೂರಿಗೆ ವಾರದಲ್ಲಿ ಮೂರು ದಿನ ತನ್ನ ಎಟಿಆರ್‌ ನೇರ ವಿಮಾನಯಾನ ಸೇವೆ ಕೂಡ ಆರಂಭಿಸುತ್ತಿದೆ. ಆ ನಿಟ್ಟಿನಲ್ಲಿ ಆನ್‌ಲೈನ್‌ ಬುಕ್ಕಿಂಗ್‌ ಸಹ ಆರಂಭಿಸಿದೆ.

ಮೇ 1ರಿಂದ ಹುಬ್ಬಳ್ಳಿ-ಮಂಗಳೂರು ವಿಮಾನವು (6ಇ 7189) ಪ್ರತಿ ರವಿವಾರ, ಸೋಮವಾರ, ಬುಧವಾರ ಹಾಗೂ ಶುಕ್ರವಾರ ಸಂಜೆ 5:15 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 6:15 ಗಂಟೆಗೆ ಮಂಗಳೂರಿಗೆ ತಲುಪಲಿದೆ. ಮಂಗಳೂರು-ಹುಬ್ಬಳ್ಳಿ ವಿಮಾನವು (6ಇ 7191) ಸಂಜೆ 6:35 ಗಂಟೆಗೆ ಮಂಗಳೂರಿನಿಂದ ಹೊರಟು 7:40 ಗಂಟೆಗೆ ಹುಬ್ಬಳ್ಳಿ ತಲುಪಲಿದೆ. ಆರಂಭಿಕವಾಗಿ ಪ್ರಯಾಣ ದರ ಪ್ರತಿಯೊಬ್ಬರಿಗೆ 1,999ರೂ. ಆಗಿದೆ.

ಮೇ 3ರಿಂದ ಹುಬ್ಬಳ್ಳಿ-ಮೈಸೂರು ವಿಮಾನವು (6ಇ 7189) ಪ್ರತಿ ಮಂಗಳವಾರ, ಗುರುವಾರ ಹಾಗೂ ಶನಿವಾರ ಸಂಜೆ 4:55 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 6:05 ಗಂಟೆಗೆ ಮೈಸೂರು ತಲುಪಲಿದೆ. ಮೈಸೂರು-ಹುಬ್ಬಳ್ಳಿ ವಿಮಾನವು (6ಇ 7191) ಸಂಜೆ 6:25 ಗಂಟೆಗೆ ಮೈಸೂರಿನಿಂದ ಹೊರಟು 7:40 ಗಂಟೆಗೆ ಹುಬ್ಬಳ್ಳಿ ತಲುಪಲಿದೆ. ಈ ಸೇವೆಯಿಂದ ಪ್ರವಾಸೋಧ್ಯಮಕ್ಕೆ ಹೆಚ್ಚು ಆದ್ಯತೆ ನೀಡಿದಂತಾಗಿದೆ.

Advertisement

ಇಂದಿನಿಂದ ಹೈದರಾಬಾದ್‌ಗೆ ನೇರ ವಿಮಾನ ಆರಂಭ: ಏ.27ರಿಂದ ಹುಬ್ಬಳ್ಳಿಯಿಂದ ಹೈದರಾಬಾದ್‌ ಗೆ ವಾರದ ಏಳು ದಿನಗಳಂದು ಎಟಿಆರ್‌ ನೇರ ವಿಮಾನಯಾನ ಮತ್ತೆ ಆರಂಭಿಸಿದ್ದು, ಹುಬ್ಬಳ್ಳಿ- ಹೈದರಾಬಾದ್‌ ವಿಮಾನವು (6ಇ 7416) ಪ್ರತಿದಿನ ಬೆಳಗ್ಗೆ 8:00 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 9:10 ಗಂಟೆಗೆ ಹೈದರಾಬಾದ್‌ ತಲುಪಲಿದೆ. ಅದೇ ರೀತಿ ಹೈದರಾಬಾದ್‌-ಹುಬ್ಬಳ್ಳಿ ವಿಮಾನವು (6ಇ 7417) ಪ್ರತಿದಿನ ಬೆಳಗ್ಗೆ 9:40 ಗಂಟೆಗೆ ಹೈದರಾಬಾದ್‌ನಿಂದ ಹೊರಟು 11:00 ಗಂಟೆಗೆ ಹುಬ್ಬಳ್ಳಿ ತಲುಪಲಿದೆ.

ಮೊದಲ ದಿನವಾದ ಬುಧವಾರ ಹುಬ್ಬಳ್ಳಿಯಿಂದ ಹೈದರಾಬಾದ್‌ಗೆ 40 ಜನರು ಪ್ರಯಾಣಿಸಿದರು ಹಾಗೂ ಹೈದರಾಬಾದ್‌ನಿಂದ ಹುಬ್ಬಳ್ಳಿಗೆ 44 ಜನರು ಆಗಮಿಸಿದರು. ಹುಬ್ಬಳ್ಳಿಯಿಂದ ಇನ್ನಿತರೆ ನಗರಗಳಿಗೆ ವಿಮಾನಯಾನಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವುದರಿಂದ ಹಾಗೂ ಅಹ್ಮದಾಬಾದ್‌, ಗೋವಾ, ಕೊಚ್ಚಿ, ಕಣ್ಣೂರು ಸೇರಿದಂತೆ ಇನ್ನುಳಿದ ಪ್ರದೇಶಗಳಿಗೂ ವಿಮಾನಯಾನ ಸೇವೆಯ ಬೇಡಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಂಪನಿ ತನ್ನ ವಿಮಾನಯಾನ ಸೇವೆಯನ್ನು ದೇಶದ ಇನ್ನಿತರೆ ಪ್ರಮುಖ ನಗರಗಳಿಗೆ ವಿಸ್ತರಿಸಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಅಹ್ಮದಾಬಾದ್‌ಗೆ ಮತ್ತೆ ಯಾನ ಆರಂಭ?

ಇಂಡಿಗೋ ಕಂಪನಿ ಕೆಲ ಕಾರಣಾಂತರಗಳಿಂದ ಹುಬ್ಬಳ್ಳಿಯಿಂದ ಅಹ್ಮದಾಬಾದ್‌ಗೆ ಒದಗಿಸುತ್ತಿದ್ದ ವಿಮಾನಯಾನ ಸೇವೆ ಸ್ಥಗಿತಗೊಳಿಸಿತ್ತು. ಈಗ ಮರು ಆರಂಭಿಸಲು ವಿಮಾನಯಾನ ಸಚಿವಾಲಯಕ್ಕೆ ಈ ಮಾರ್ಗದ ಪ್ರಸ್ತಾವನೆ ಸಹ ಸಲ್ಲಿಸಿದ್ದು, ಅನುಮತಿಗಾಗಿ ಕಾಯುತ್ತಿದೆ. ಅಹ್ಮದಾಬಾದ್‌ನಲ್ಲಿ ರನ್‌ವೇ ಕಾಮಗಾರಿ ನಡೆಯುತ್ತಿದ್ದು, ಕಂಪನಿ ಹುಬ್ಬಳ್ಳಿಯಿಂದ ಅಹ್ಮದಾಬಾದ್‌ಗೆ ಬೆಳಗಿನ ಸಮಯದಲ್ಲಿ ತನ್ನ ವಿಮಾನಯಾನ ಸೇವೆ ಒದಗಿಸಲು ಯೋಜಿಸಿದೆ. ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರು ಅಹ್ಮದಾಬಾದ್‌ಗೆ ಹೋಗಿ ಬರಲು, ಇಲ್ಲವೇ ಅಹ್ಮದಾಬಾದ್‌ನಿಂದ ದೇಶ-ವಿದೇಶಗಳಿಗೆ ತೆರಳಲು ಅನುಕೂಲವಾಗುತ್ತದೆ ಎಂದು ಯೋಚಿಸಿದೆ. ಅದು ಪೂರ್ಣಗೊಂಡ ಬಳಿಕ ತನ್ನ ವಿಮಾನಯಾನ ಸೇವೆ ಆರಂಭಿಸಲಿದೆ ಎಂದು ಮೂಲಗಳು ತಿಳಿಸಿವೆ.

ಉತ್ತರ ಕರ್ನಾಟಕ ಭಾಗದ ಜನರು ಹುಬ್ಬಳ್ಳಿಯಿಂದ ದೇಶದ ರಾಜಧಾನಿ ದೆಹಲಿಗೆ ಪ್ರಯಾಣಿಸಲು ವಿಮಾನಯಾನ ಆರಂಭಿಸಲು,ಅಹ್ಮದಾಬಾದ್‌ಗೆ ಪುನಃ ಆರಂಭಿಸಲು ಯೋಜಿಸಲಾಗಿದೆ. ಆ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ. ಡಿಜಿಸಿಎದಿಂದ ಅನುಮತಿ ದೊರೆಯುವುದು ಬಾಕಿಯಿದೆ. ಅದೇ ರೀತಿ ಅಹ್ಮದಾಬಾದ್‌ನಲ್ಲಿ ರನ್‌ವೇ ಕಾಮಗಾರಿ ನಡೆದಿದ್ದು, ಅದು ಪೂರ್ಣಗೊಂಡು ಪರವಾನಗಿ ಸಿಕ್ಕ ಕೂಡಲೇ ಮತ್ತೆ ಆರಂಭಿಸಲಾಗುವುದು. -ಮನೋಜ ಪ್ರಭು, ಇಂಡಿಗೋ ಕಂಪನಿ ಉತ್ತರ ಕರ್ನಾಟಕ ಸೇಲ್ಸ್‌ ಇನ್‌ಚಾರ್ಜ್‌

-ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next