Advertisement

ಹುಬ್ಬಳ್ಳಿಯಲ್ಲೊಬ್ಬ ವಜ್ರಕಾಯ!

03:28 AM Mar 02, 2019 | |

ಕಟ್ಟುಮಸ್ತಾದ ದೇಹ, ಹುರಿಮೈ ಕಲಿಗಳ ಕಸರತ್ತನ್ನು ಜಿಮ್‌ ಕಿಟಕಿಯಲ್ಲಿ ಇಣುಕಿ ನೋಡುತ್ತಿದ್ದ ಬಾಲಕನೊಬ್ಬ ತಾನೂ ಬಾಡಿ ಬಿಲ್ಡರ್‌ ಆಗಬೇಕು ಎಂದು ಕನಸು ಕಂಡಿದ್ದ. ಆ ಕನಸಿನ ಹಿಂದೆ ಬಿದ್ದು, ಅದಕ್ಕೆ ನಿಜರೂಪವನ್ನು ನೀಡಿ ಈಗ ವಜ್ರಕಾಯ ಪಡೆದುಕೊಂಡಿದ್ದಾನೆ. ಅಲ್ಲಿಗೆ ಕನಸೊಂದು ಸತ್ಯವಾಗಿದೆ. ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ ನಿವಾಸಿ ರಮೇಶ ಅಂಬಿಗೇರ ಬಾಡಿ ಬಿಲ್ಡಿಂಗನ್ನೇ ಪೂರ್ಣ ಪ್ರಮಾಣದ ಕಾಯಕವನ್ನಾಗಿಸಿಕೊಳ್ಳುವ ಮೂಲಕ ಜಿಮ್‌ ರಮೇಶ್‌ ಎಂದೇ ಹೆಸರು ಮಾಡಿದ್ದಾರೆ.

Advertisement

 ‘ನಿದ್ರೆಯಲ್ಲಿ ಕಾಣುವುದು ಕನಸಲ್ಲ; ನಿದ್ದೆ ಮಾಡಲು ಬಿಡದೆ ಕಾಡುವುದೇ ನಿಜವಾದ ಕನಸು’ ಎಂದು ಹೇಳಿದ್ದ ಡಾ. ಅಬ್ದುಲ್‌ ಕಲಾಂ ಅವರ ಮಾತಿನಂತೆ ಶಾಲಾ ದಿನದಲ್ಲಿ ತಾನೊಬ್ಬ ಬಾಡಿ ಬಿಲ್ಡರ್‌ ಆಗಬೇಕು ಎಂದು ಶಪಥಗೈದಿದ್ದ ರಮೇಶ, ಹಗಲಿರುಳು ಶ್ರಮಿಸಿ ಇಂದು ಸಾಧನೆ ಮೆಟ್ಟಿಲೇರುತ್ತ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.

7ನೇ ತರಗತಿ ಕಲಿಯುತ್ತಿದ್ದಾಗ ಶಾಲೆಗೆ ಹೋಗುವ ದಾರಿಯಲ್ಲಿದ್ದ ಜಿಮ್‌ಗೆ ಹೋಗಿ ನಿಲ್ಲುತ್ತಿದ್ದ, ಅಲ್ಲಿದ್ದವರು ಗದರಿದರೆ ಓಡಿ ಹೋಗಿ ಕಿಟಕಿಯಲ್ಲಿ ನಿಂತು ವ್ಯಾಯಾಮ ಮಾಡುವ ವಿಧಾನ ನೋಡುತ್ತಿದ್ದ. ಜಿಮ್‌ ಸೇರಲು ಅವಕಾಶ ನೀಡದ ಮಾಲಿಕ, ನೀನಿನ್ನೂ ಸಣ್ಣವನು. ಇಷ್ಟು ಬೇಗ ಜಿಮ್‌ ಪ್ರವೇಶ ನೀಡಲಾಗದು ಎಂದು ನಿರಾಕರಿಸಿದ್ದರು. ಮನೆಯಲ್ಲಾದರೂ ಸರಿ ಕಟ್ಟುಮಸ್ತು ದೇಹ ಬೆಳೆಸಿಕೊಳ್ಳಲೇಬೇಕು ಎಂದು ಹಠ ಹಿಡಿದ ಹುಡುಗ, ಕಲ್ಲು, ಇಟ್ಟಿಗೆ, ರಾಡ್‌ ಬಳಸಿ ವ್ಯಾಯಾಮ ಪ್ರಾರಂಭಿಸಿದ. ಕೆಲವೇ ದಿನದಲ್ಲಿ ಅಚ್ಚರಿಯ ಬದಲಾವಣೆ ಮಾಡಿಕೊಂಡು ಜಿಮ್‌ ಪ್ರವೇಶ ಪಡೆದ.

ಮಗನಿಗಾಗಿ ತಾಯಿಯ ತ್ಯಾಗ: ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ  ಸ್ತ್ರೀ ಇರುತ್ತಾಳೆ ಎನ್ನುವ ಮಾತು ಸಾರ್ವಕಾಲಿಕ ಸತ್ಯ. ಅದು ಜಿಮ್‌ ರಮೇಶನ ಯಶಸ್ವಿ ಬದುಕಿಗೂ ಅನ್ವಯಿಸುತ್ತದೆ. ರೈಲ್ವೆ ಇಲಾಖೆಯಲ್ಲಿ ಲೋಕೋ ಫೈಲೆಟ್‌ ಆಗಿದ್ದ ತಂದೆಯ ಅಕಾಲಿಕ ನಿಧನದ ಬಳಿಕ ತಾಯಿ ಕಸ್ತೂರಿಗೆ ಬರುವ ಪಿಂಚಣಿ ಹಣದಿಂದ ಮನೆ ನಡೆಸುತ್ತ ಮಕ್ಕಳಿಗೆ ಬದುಕು ಕಟ್ಟಿಕೊಟ್ಟಿದ್ದಾರೆ. ಅದರಲ್ಲಿ ಉಳಿದ ಹಣ ಕೂಡಿಟ್ಟು ರಮೇಶನ ಬಾಡಿ ಬಿಲ್ಡಿಂಗ್‌ಗೆ ಖರ್ಚು ಮಾಡುತ್ತಿದ್ದಾರೆ.

ಮಾಂಸಾಹಾರವನ್ನೇ ಸೇವಿಸದ ತಾಯಿ ಮಗನಿಗಾಗಿ ನಿತ್ಯ ಮಾಂಸಾಹಾರ ಅಡುಗೆ ಮಾಡಿ ಬಡಿಸುತ್ತಿದ್ದಾರೆ. ಮಾಂಸಾಹಾರಿಗಳು ಸಸ್ಯಾಹಾರ ಅಡುಗೆ ಮಾಡುವುದು ಸಾಮಾನ್ಯ. ಆದರೆ, ಸಸ್ಯಾಹಾರಿಗಳಾಗಿದ್ದೂ ಮಾಂಸಾಹಾರ ಅಡುಗೆ ಮಾಡುವುದು ಕಠಿಣ ಕಾರ್ಯ. ತನ್ನ ಮಗನನ್ನು ಮಿ. ಇಂಡಿಯಾ ಮಾಡಲೇಬೇಕು ಎಂದು ಹಠ ಹಿಡಿದಿರುವ ತಾಯಿ ರಮೇಶನಿಗೆ ತನು, ಮನ, ಧನ ಜತೆಗೆ ಸಾಥ್‌ ನೀಡುತ್ತಿದ್ದಾರೆ. 
ಮೂರು ತಾಸಿನ ಚಿತ್ರವಲ್ಲ; ಅದೊಂದು ತಪಸ್ಸು: ಸಲ್ಮಾನ್‌ ಖಾನ್‌, ಅಮೀರ್‌ ಖಾನ್‌, ಹೃತಿಕ್‌ ರೋಶನ್‌, ದುನಿಯಾ ವಿಜಿ ಸೇರಿದಂತೆ ಕಟ್ಟುಮಸ್ತು ದೇಹ ಬೆಳೆಸಿಕೊಂಡಿರಯವ ನಾಯಕರ ಚಲನಚಿತ್ರ ಬಿಡುಗಡೆಯಾದ ಕೆಲ ದಿನಗಳು ಜಿಮ್‌ಗಳೆಲ್ಲ ಹೌಸ್‌ ಫ‌ುಲ್‌! ನಾಯಕ ನಟರಂತೆ ನಾವೂ ದೇಹ ಬೆಳೆಸಿಕೊಳ್ಳಬೇಕು, ಹೀರೋಗಳಂತೆ ಕಾಣಬೇಕು ಎನ್ನುವ ಹುಮ್ಮಸ್ಸು ಯುವಕರನ್ನು ಜಿಮ್‌ನತ್ತ ಎಳೆತರುವುದು ಸಾಮಾನ್ಯ. ಆದರೆ, ಅವರ ಜೋಶ್‌ ಒಂದು ವಾರವೂ ಇರದು. ಯಾಕೆಂದರೆ ಜಿಮ್‌ ಮಾಡಿ ಬಾಡಿ ಬಿಲ್ಡ್‌ ಮಾಡುವುದು ಎಂದರೆ ಮೂರು ತಾಸಿನ ಫಿಲ್ಮ್ ಅಲ್ಲ. ಅದೊಂದು ತಪಸ್ಸು. ಜೀವನ ಶೈಲಿಯನೇ° ಬದಲಾಯಿಸಿಕೊಂಡು ಶ್ರಮಿಸಬೇಕಿರುತ್ತದೆ. ಬಾಡಿ ಬಿಲ್ಡಿಂಗ್‌ ಮಾಡಲು ಅದರದೇªಯಾದ ಕೆಲವು ನಿಯಮಗಳಿವೆ. 

Advertisement

ದೈಹಿಕ ಕಸರತ್ತಿಗೆ ಅಡ್ಡದಾರಿ ಬೇಡ: ಇಂದಿನ ಯುವಕರಿಗೆ ಶೀಘ್ರದಲ್ಲಿ ಬದಲಾವಣೆ ಬೇಕು ಎಂಬ ಹುಂಬತನದಿಂದ ಪೂರಕ ಔಷಧಗಳು, ಉದ್ದೀಪನಗಳಂಥ ಹಾನಿಕಾರಕ ಜೌಷಧ ಬಳಸಿ ಕಸರತ್ತು ರಹಿತ ಬಾಡಿ ಬಿಲ್ಡರ್ ಆಗಲು ಹವಣಿಸುತ್ತಿದ್ದಾರೆ. ಆದರೆ, ಇದು ಯಾವತ್ತಿದ್ರೂ ಆಪತ್ತಿಗೆ ಆಹ್ವಾನ ನೀಡುವ ಕೆಟ್ಟ ಪದ್ಧತಿ. ವರ್ಷಾನುಗಟ್ಟಲೇ ದೇಹ ದಂಡಿಸಿ ಪಡೆಯುವ ಫ‌ಲವೇ ಶಾಶ್ವತ ಎನ್ನವುದು ಜಿಮ್‌ ರಮೇಶ್‌ ಅನುಭವದ ಮಾತು.

ಮಾಡಿದ ಖರ್ಚು ಮರಳದು: ಬಾಡಿ ಬಿಲ್ಡಿಂಗ್‌ ಮಡುವುದು ಎಂದರೇ ಸುಲಭದ ಮಾತಲ್ಲ. ದಿನವೊಂದಕ್ಕೆ ಕನಿಷ್ಠ 500ರಿಂದ 1 ಸಾವಿರ ರೂ. ಖರ್ಚು ಮಾಡಬೇಕು. ಕೆಜಿಗಟ್ಟಲೆ ಕೋಳಿ ಮಾಂಸ, ಡಜನ್ನಗಟ್ಟಲೆ ತತ್ತಿ ಇದಲ್ಲದೆ ಮೊಳಕೆ ಕಾಳು, ಎನರ್ಜಿ ಡ್ರಿಂಕ್ಸ್‌ ಸೇರಿದಂತೆ ದೇಹಕ್ಕೆ ಅಗತ್ಯ ಪ್ರೊಟೀನ್‌ ಪದಾರ್ಥಗಳನ್ನು ಪೂರೈಸಬೇಕು. ಇದೊಂದು ರೀತಿ ಬಿಳಿಯಾನೆ ಸಾಕಿದಂತೆ. ಇಲ್ಲಿ ವಿಪರ್ಯಾಸ ಎಂದರೆ, ಸ್ಪರ್ಧೆಗಳಲ್ಲಿ ಗೆದ್ದ ಮೇಲೆ ನೀಡುವ ಹಣ ದೇಹದಾಡ್ಯìಕ್ಕೆ ತಗಲುವ ಖರ್ಚಿಗೂ ಸಾಲದು. ಹೀಗಾಗಿ ದೇಹದಾಡ್ಯì ಮಾಡುವುದು ಸುಲಭದ ಮಾತಲ್ಲ. 

ಬಾಡಿ ಬಿಲ್ಡಿಂಗ್‌ ನನ್ನ ಕನಸು. ನಾನೊಬ್ಬ ಅಂತಾರಾಷ್ಟ್ರೀಯ ಚಾಂಪಿಯನ್‌ ಆಗಬೇಕು ಎನ್ನುವ ಕನಸಿದೆ. ಬಡತನವಿದ್ದರೂ ನನ್ನ ತಾಯಿ ಯಾವ ಕೊರತೆ ಕಾಡದಂತೆ ಕಾಪಾಡಿದ್ದಾಳೆ. ಅವಳ ಶ್ರಮ ವ್ಯರ್ಥವಾಗಬಾರದು. ಜಿಮ್‌ ಮೂಲಕ ನನ್ನ ಕೈಲಾದಷ್ಟು ಸೇವೆ ಮಾಡಿ ಯುವಕರನ್ನು ದುಶ್ಚಟದಿಂದ ದೂರು ಮಾಡಿ ಸದೃಢರನ್ನಾಗಿಸುವ ದೃಢ ನಿರ್ಧಾರ ಕೈಗೊಂಡಿದ್ದೇನೆ.
-ರಮೇಶ್‌ ಅಂಬಿಗೇರ, ಬಾಡಿ ಬಿಲ್ಡರ್‌

ಬಡವರ ಬಂಧು ಲಕ್ಕಿ ಜಿಮ್‌
ಪ್ರಸ್ತುತ ಜಿಮ್‌ಗಳು ಪಕ್ಕಾ ಕಮರ್ಷಿಯಲ್‌ ವ್ಯಾಯಾಮ ಕೇಂದ್ರಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಹೊಸದಾಗಿ ಪ್ರವೇಶ ಆಗಬೇಕಾದರೆ ಕನಿಷ್ಠ 300 ರೂ. ಮುಂಗಡ ಇರುವುದು ಸಾಮಾನ್ಯ. ಇನ್ನೂ ಶುಲ್ಕ ಅಂತೂ ಕೇಳುವಂತಿಲ್ಲ. ಆದರೆ, ಜಿಮ್‌ ರಮೇಶನ ಲಕ್ಕಿ ಜಿಮ್‌ ನಲ್ಲಿ ಇದೆಲ್ಲ ತದ್ವಿರುದ್ಧ. ಅದೊಂದು ರೀತಿ ಬಡವರ ಬಂಧು ಎನ್ನುವಂತಾಗಿದ್ದು, ಒಂದೂ ರೂಪಾಯಿನೂ ಅಡ್ವಾನ್ಸ್‌ ತೆಗೆದುಕೊಳ್ಳದೆ ಉಚಿತವಾಗಿ ಪ್ರವೇಶ ನೀಡಲಾಗುತ್ತದೆ. ಇನ್ನೂ ತಿಂಗಳಿಗೆ 250 ರೂ. ಪಡೆದು ಜಿಮ್‌ ಬಾಡಿಗೆ ಕಟ್ಟುತ್ತಿದ್ದಾರೆ. ಅದರಲ್ಲೂ ಕೆಲವು ಬಡ ಮಕ್ಕಳಿಗೆ ಸಂಪೂರ್ಣ ಉಚಿತವಾಗಿ ಜಿಮ್‌ ಮಾಡಲು ಅವಕಾಶ ಕಲ್ಪಿಸಿ ಸದೃಢ ಸಮಾಜ ನಿರ್ಮಿಸುವಲ್ಲಿ ರಮೇಶ್‌ ತೆರೆಮರೆಕಾಯಿಯಂತೆ ಶ್ರಮಿಸುತ್ತಿರುವುದು ಶ್ಲಾಘನೀಯ.

ರಮೇಶ್‌ ಅವರ ಕನಸಿಗೆ ನೀವೂ ನೆರವಾಗಬಹುದು
ಅಂತಾರಾಷ್ಟ್ರೀಯಮಟ್ಟದಲ್ಲಿ ಸಾಧನೆಗೈದು ಜಿಲ್ಲೆಯ ಹಾಗೂ ರಾಜ್ಯದ ಕೀರ್ತಿ ಪತಾಕೆ ಹಾರಿಸಬೇಕು ಎನ್ನುವ ಮಹದಾಸೆ ಜಿಮ್‌ ರಮೇಶನಿಗಿದೆ. ಅದರೆ, ಅದಕ್ಕೆ ತಯಾರಿ ನಡೆಸಲು ಬೇಕಾದಷ್ಟು ಹಣವಿಲ್ಲದ ಪರಿಣಾಮ ನಮ್ಮ ನಡುವೆ ಇರುವ ಪ್ರತಿಭೆಯೊಂದನ್ನು ಗುರುತಿಸಲಾಗದಂತಾಗಿದೆ. ಹೃದಯ ಶ್ರೀಮಂತರು ಜಿಮ್‌ ರಮೇಶನಿಗೆ ಸಹಾಯಹಸ್ತ ಚಾಚಬಹುದು.
ಮೊಬೈಲ್‌ ನಂ. 7026683999
ಎಸ್‌.ಬಿ.ಐ ಬ್ಯಾಂಕ್‌ ಖಾತೆ ನಂ. 64209611677
ಐ.ಎಫ್ಎಸ್‌ಸಿ ನಂ. ಟಟ40641

ಪ್ರಶಸ್ತಿಗಳ ಸಾಲು ಸಾಲು
2007ರಲ್ಲಿ ಮೊದಲ ಬಾರಿ ದೇಹದಾಡ್ಯì ಸ್ಪರ್ಧೆಯಲ್ಲಿ ಪಾಲ್ಗೊಂಡು 55ಕೆಜಿ ವಿಭಾಗದಲ್ಲಿ 2ನೇ ಸ್ಥಾನ ಪಡೆದ ರಮೇಶ್‌ ಇಂದಿನವರೆಗೆ ಪ್ರಶಸ್ತಿ ಬಾಚುವುದನ್ನು ನಿಲ್ಲಿಸಿಲ್ಲ. ಸತೀಶ ಶುಗರ್ ವತಿಯಿಂದ್ಸ ಗೋಕಾಕ್‌ನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಮಟ್ಟದ ಸ್ಪರ್ಧೆಯ 55 ಕೆಜಿ ವಿಭಾಗದಲ್ಲಿ, ಕಿರಿಯರ ಮಿ. ಇಂಡಿಯಾ ಬೆಸ್ಟ್‌ ಆಫ್ ಟೆನ್‌ ಆಗಿ ಹೊರಹೊಮ್ಮಿದ. ಬಂಗಾಳದಲ್ಲಿ ನಡೆದ 55 ಕೆಜಿ ವಿಭಾಗದಲ್ಲಿ ಪಾಲ್ಗೊಂಡು ಕಿರಿಯಿರ ಮಿ. ಇಂಡಿಯಾ ಬೆಸ್ಟ್‌ ಆಫ್ ಟೆನ್‌ ಪ್ರಶಸ್ತಿ ಪಡೆದು ಯಶಸ್ಸಿನ ಮೆಟ್ಟಿಲು ಹತ್ತಲಾರಂಭಿಸಿ ಇಲ್ಲಿಯವರೆಗೆ ಒಟ್ಟು 14 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮಿಸ್ಟರ್‌ ಐರನ್‌ ಮ್ಯಾನ್‌2 – 2018
ಮಿಸ್ಟರ್‌ ಜೈ ಭೀಮ್‌ -2018 
ಮಿಸ್ಟರ್‌ ಜೈ ಭಜರಂಗಿ-2018
ಮಿಸ್ಟರ್‌ ಹುಬ್ಬಳ್ಳಿ-2018
ಮಿಸ್ಟರ್‌ ಮೂರ್ತಿ ಕ್ಲಾಸಿಕ್‌-2018-19
ಮಿಸ್ಟರ್‌ ಪಿ.ಆ್ಯಂಡ್‌ ಪಿ ಶೆಟ್ಟಿ-2019
ಮಿಸ್ಟರ್‌ ಓಂ ಸ್ವಾಮಿ ಶರಣಂ ಅಯ್ಯಪ್ಪ-2019 

-ಸೋಮಶೇಖರ್‌ ಎಸ್‌. ಹತ್ತಿ

Advertisement

Udayavani is now on Telegram. Click here to join our channel and stay updated with the latest news.

Next