Advertisement

Hubballi: ಆತ್ಮಗುರಿಯೇ ನಿಜವಾದ ಆಧ್ಯಾತ್ಮ- ನಿರ್ಭಯಾನಂದ ಶ್ರೀ

04:37 PM Sep 26, 2023 | Team Udayavani |

 

Advertisement

ಹುಬ್ಬಳ್ಳಿ: ವಿವೇಕಾನಂದರನ್ನು ಅರ್ಥೈಯಿಸಿಕೊಂಡರೆ ಹೆಮ್ಮೆ ಎನ್ನಿಸುತ್ತದೆ. ಜತೆಗೆ ಮನದಲ್ಲಿ ರಾಷ್ಟ್ರಭಕ್ತಿ ಪುಟಿದೇಳುತ್ತದೆ ಎಂದು ವಿಜಯಪುರ ಹಾಗೂ ಗದುಗಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ಹೇಳಿದರು.

ನಿರಾಮಯ ಫೌಂಡೇಶನ್‌ ರವಿವಾರ ಡಾ| ಡಿ.ಎಸ್‌.ಕರ್ಕಿ ಕನ್ನಡ ಭವನದಲ್ಲಿ ಆಯೋಜಿಸಿದ್ದ ವಿವೇಕ ಭಾರತ ಕಾರ್ಯಕ್ರಮದಲ್ಲಿ ವಿವೇಕಾನಂದ-ಆಧ್ಯಾತ್ಮ ವಿಷಯವಾಗಿ ಮಾತನಾಡಿದ ಅವರು, ಆಧ್ಯಾತ್ಮದ ಬಗ್ಗೆ ಹಲವರು ಅಜ್ಞಾನ ತುಂಬುತ್ತಿದ್ದಾರೆ. ಆತ್ಮಗುರಿಯೇ ನಿಜವಾದ ಆಧ್ಯಾತ್ಮವಾಗಿದೆ. ಆಧ್ಯಾತ್ಮ ಖುಷಿ ಕೊಡುತ್ತದೆ. ವರ್ತಮಾನ, ಭವಿಷ್ಯದ ಬಗ್ಗೆ ಗಮನ ನೀಡುವವರು ನಿಜವಾದ ವಿವೇಕಿಗಳಾಗುತ್ತಾರೆ ಎಂದರು.

ವಿವೇಕ ಪ್ರೇರಿತ ಶಿಕ್ಷಣ ಕುರಿತಾಗಿ ಮಾತನಾಡಿದ ಧಾರವಾಡ ರಾಮೃಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ವಿಜಯಾನಂದ ಸರಸ್ವತಿ ಅವರು, ಉಪನಿಷತ್ತಿನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಲು ರಾಮಕೃಷ್ಣ ಪರಮಹಂಸರು ಹಾಗೂ ವಿವೇಕಾನಂದರ ಜೀವನ ಅರಿತರೆ ಸಾಕಾಗಿದೆ. ರಾಮಕೃಷ್ಣರು ಮನುಷ್ಯರೂಪದ ಉಪನಿಷತ್ತು ಆಗಿದ್ದರು. ಉಪನಿಷತ್ತು ಏನು ಹೇಳುತ್ತದೆಯೋ ಅದನ್ನು ಅನುಭವಿಸಿ ಜಗತ್ತಿಗೆ ನೀಡಿದವರು ವಿವೇಕಾನಂದರು. ಆತ್ಮವಿಶ್ವಾಸ ಮೂಡಿಸುವುದೇ ನಿಜವಾದ ಶಿಕ್ಷಣವಾಗಿದೆ ಎಂದರು.

ಜಗದ್ಗುರು ಭಾರತ ವಿಷಯವಾಗಿ ಮಾತನಾಡಿದ ಆರೆಸ್ಸೆಸ್‌ ಕರ್ನಾಟಕದ ಉತ್ತರ ಮತ್ತು ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ ಅರುಣಕುಮಾರ, ಭಾರತ ಮತ್ತೂಮ್ಮೆ ಜಗದ್ಗುರು ಸ್ಥಾನಕ್ಕೇರುವುದು ಅಸಾಧ್ಯವೇನಲ್ಲ. ಅಸಾಧ್ಯವನ್ನು ಸಾಧ್ಯವಾಗಿಸುವುದು ಇಂದಿನ ಯುವಕರ ಜವಾಬ್ದಾರಿ. ಭಾರತ ಜಗದ್ಗುರುವಾಗಿಸಲು ಜೀವನಗಳನ್ನು ನೀಡಬೇಕಾಗುತ್ತದೆ. ವಿಶ್ವ ನಮ್ಮನ್ನು ಅನುಸರಿಸುವುದು, ವಿವಿಧ ಕ್ಷೇತ್ರಗಳ ಬಗ್ಗೆ ನಮ್ಮ ಮಾಹಿತಿ ಕೇಳುವಂತಾಗುವುದೇ ಜಗದ್ಗುರುವಿನ ಸ್ಥಾನವಾಗಿದೆ ಎಂದು ಹೇಳಿದರು.

Advertisement

ವಿವೇಕಾನಂದರ ಜನಿಸದಿದ್ದರೆ ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ. ಅವರ ಪ್ರೇರಣೆಯಿಂದಲೇ ಸುಭಾಸ್‌ ಚಂದ್ರಬೋಸ್‌ ಅವರು ಸೈನ್ಯ ಕಟ್ಟಿದರು. ಹಲವು ಕ್ರಾಂತಿಕಾರಿಗಳು ತಮ್ಮದೇ ಹೋರಾಟ-ತ್ಯಾಗ ಮಾಡಿದರು. ಮತ್ತೂಂದು ಕಡೆ ಗಾಂಧೀಜಿಯವರ ನೇತೃತ್ವದಲ್ಲಿಯೂ ಹೋರಾಟ ನಡೆಯಿತು. ಸ್ವಾರ್ಥ ಬಿಟ್ಟು ರಾಷ್ಟ್ರ ಮೊದಲು ಎಂಬ ಪರಿಕಲ್ಪನೆ ಪ್ರತಿಯೊಬ್ಬರಲ್ಲೂ ಮೂಡಿದಾಗ ಭಾರತ ಜಗದ್ಗುರು ಸ್ಥಾನಕ್ಕೇರುವುದು ಖಚಿತ. ಇಂದಿನ ಶಿಕ್ಷಣಕ್ಕೆ ಭಾವನೆಗಳೇ ಇಲ್ಲವಾಗಿದ್ದು, ಕೇವಲ ಗುಲಾಮರನ್ನು ಸೃಷ್ಟಿಸುವ ಸಾಧನವಾಗಿದೆ. ದೇಶದ ಸಮಸ್ಯೆ-ಸವಾಲುಗಳನ್ನು ಅರ್ಥೈಯಿಸಿಕೊಂಡು ಅವುಗಳನ್ನು ಮೆಟ್ಟಿ ನಿಂತು ಭಾರತವನ್ನು ಮತ್ತೆ ಜಗದ್ಗುರುವಾಗಿಸಲು ಒಂದು ಹೆಜ್ಜೆ ಮುಂದೆ ಇರಿಸೋಣ ಎಂದರು. ವಿವೇಕಾನಂದರ ಚಿಕಾಗೋ ಭಾಷಣಗಳ ಕುರಿತಾಗಿ ಆರೆಸ್ಸೆಸ್‌ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವೀಂದ್ರ ಉಪನ್ಯಾಸ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಬಿ.ವಿ. ವಸಂತಕುಮಾರ ಪ್ರಾಸ್ತಾವಿಕ ಮಾತನಾಡಿದರು. ಜ್ಯೋತಿ ಬಾದಾಮಿ ಇದ್ದರು. ಸಾಯಂಕಾಲ ನಡೆದ ಸಮಾರೋಪದಲ್ಲಿ ಹುಬ್ಬಳ್ಳಿ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ರಘುವೀರಾನಂದ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.

ಪ್ರಜ್ಞಾಪ್ರವಾಹ ರಾಷ್ಟ್ರೀಯ ಸಂಯೋಜಕ ರಘುನಂದ, ನಿರಾಮಯ ಅಧ್ಯಕ್ಷ ಡಾ| ಮಲ್ಲಿಕಾರ್ಜುನ ಬಾಳಿಕಾಯಿ, ಎಚ್‌.ವಿ.ಪಾಟೀಲ, ದೇವರಾಜ ದಾಡಿಬಾವಿ, ಕಲ್ಲಪ್ಪ ಮೊರಬದ, ಗುರು ಬನ್ನಿಕೊಪ್ಪ ಇನ್ನಿತರರಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಧರ್ಮ ನಿಂತ ನೀರಾಗಬಾರದು. ದೀನ, ಪಾಪಿ ಹಾಗೂ ದರಿದ್ರರಲ್ಲಿಯೂ ದೇವರನ್ನು ಕಂಡವರು ವಿವೇಕಾನಂದರು. ವಿಶ್ವಕ್ಕೆ ಗುರುವಾಗಿದ್ದ ಭಾರತ ಇಂದು ದುಸ್ಥಿತಿಗೆ ತಲುಪಲು ಜನಸಾಮಾನ್ಯರನ್ನು ನಿರ್ಲಕ್ಷ್ಯ ಮಾಡಿದ್ದೇ ಕಾರಣ. ಉಪನಿಷತ್ತು, ವೇದಗಳು ಹಾಗೂ ಆತ್ಮಜ್ಞಾನವನ್ನು ವಿದೇಶಗಳಲ್ಲಿ ಬೋಧಿಸಿದ ಮೊದಲಿಗರು ವಿವೇಕಾನಂದರು.

ಎಸ್‌.ಬಿ.ನಿತ್ಯಾನಂದ, ಮೈಸೂರಿನ ವಿವೇಕ ವಿದ್ಯಾವಾಹಿನಿ ಟ್ರಸ್ಟ್‌ ಸಂಸ್ಥಾಪಕ

Advertisement

Udayavani is now on Telegram. Click here to join our channel and stay updated with the latest news.

Next