Advertisement

ತಾರಸಿ ಮೇಲೂ ಬೆಳೆಯಬಹುದು ಲಾವಂಚ

12:14 PM Mar 13, 2021 | Team Udayavani |

ನದಿ, ಕೆರೆ, ತೋಡು ಬದಿಯಲ್ಲಿ ಕಾಣುವ ಲಾವಂಚದ ಗಿಡಗಳನ್ನು ಮನೆಯಂಗಳದಲ್ಲೂ ಬೆಳೆಯಬಹುದು. ಲಾವಂಚ ಅಥವಾ ರಾಮಂಚ ಒಂದು ಹುಲ್ಲಿನ ವರ್ಗಕ್ಕೆ ಸೇರಿದ ಸಸ್ಯ. ಸುಗಂಧ ತೈಲಗಳ ತಯಾರಿಕೆಗೆ ಬಳಸುವ ಸಸ್ಯಗಳಲ್ಲಿ ಇದು ಪ್ರಮುಖವಾದುದು. ಅಲ್ಲದೇ ಇದನ್ನು ಔಷಧವಾಗಿಯೂ ಬಳಸುತ್ತಾರೆ. ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಕಪಾಟು, ಟ್ರಂಕ್‌ಗಳ ಒಳಗೆ ಜಿರಳೆ, ತಿಗಣೆ ಇತ್ಯಾದಿಗಳ ಕಾಟದಿಂದ ಬಟ್ಟೆಗಳನ್ನು ರಕ್ಷಿಸಿಕೊಳ್ಳಲು ಲಾವಂಚದ ಬೇರುಗಳನ್ನು ಇಡುತ್ತಿದ್ದರು.

Advertisement

ಇದನ್ನೂ ಓದಿ:ಭಾರತ: ಕಳೆದ 24ಗಂಟೆಯಲ್ಲಿ 24,882 ಪ್ರಕರಣ ಪತ್ತೆ, ಒಟ್ಟು ಸಂಖ್ಯೆ 2ಲಕ್ಷಕ್ಕೆ ಏರಿಕೆ

ಲಾವಂಚದ ಬೇರುಗಳು ಸುಮಾರು ಎರಡರಿಂದ ಮೂರು ಮೀಟರುಗಳಷ್ಟ ಭೂಮಿಯ ಆಳಕ್ಕೆ ಇಳಿಯಬಲ್ಲುದು. ಇದರಿಂದ ಅದು ಮಣ್ಣಿನ ಸವಕಳಿಯನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಇದರಲ್ಲಿ ನೀರಿಂಗಿಸುವ ಗುಣವಿದೆ. ಇಳಿಜಾರು ಪ್ರದೇಶಗಳಲ್ಲಿ ಲಾವಂಚದ ಗಿಡಗಳನ್ನು ನೆಡುವುದರಿಂದ ಮಳೆ ನೀರು ಹರಿದು ಹೋಗುವುದನ್ನು ತಡೆಯಬಹುದು. ಮಾತ್ರವಲ್ಲ ನೀರಿನೊಂದಿಗೆ ಕೊಚ್ಚಿಹೋಗುವ ಮಣ್ಣನ್ನು ಸ್ವಲ್ಪಮಟ್ಟಿಗೆ ತಡೆಹಿಡಿಯಬಹುದು. ಇದರಿಂದಲೇ ಲಾವಂಚವನ್ನು “ಬಡವನ ನೀರಾವರಿ’ ಎನ್ನುವರು.

ನೀರಿನ ಶುದ್ಧೀಕರಣಕ್ಕೆ ನಮ್ಮಲ್ಲಿ ಮಾತ್ರವಲ್ಲ ವಿದೇಶಗಳಾದ ಕ್ವೀನ್ಸ್‌ ಲ್ಯಾಂಡ್‌, ಆಸ್ಟ್ರೇಲಿಯಾ, ಚೀನಾ, ಥೈಲ್ಯಾಂಡ್‌, ವಿಯೆಟ್ನಾಂ, ಸೆನೆಗಲ್‌ ಮುಂತಾದ ಕಡೆಗಳಲ್ಲೂ ವೆಟಿವೇರ್‌ ಗಳನ್ನು ಬಳಸಲಾಗುತ್ತದೆ. ಲಾವಂಚ ಬೆಳೆಗೆ ಮರಳು ಮಿಶ್ರಿತ ಕೆಂಪು ಅಥವಾ ಕಪ್ಪು ಮಣ್ಣು ಉತ್ತಮ. ಸುಮಾರು ಒಂದೂವರೆಯಿಂದ ಎರಡೂವರೆ ಅಡಿಗಳಷ್ಟ ಎತ್ತರ ಬೆಳೆಯ ಬಹುದಾದ ಈ ಹುಲ್ಲನ್ನು ಸಮಶಿತೋಷ್ಣ, ಉಷ್ಣವಲಯದಲ್ಲೂ ಕೃಷಿ ಮಾಡಬಹುದು. ಯಾಕೆಂದರೆ ಇದರ ಬೇರು ಇತರ ಜಾತಿಯ ಹುಲ್ಲಿಗಿಂತ ಆಳದ ವರೆಗೆ ಇಳಿದು ನೀರನ್ನು ಹೀರುವ ಸಾಮರ್ಥ್ಯ ಹೊಂದಿದೆ.

ಲಾವಂಚದ ಬೇರಿನ ಗುಣ, ಉಪಯೋಗಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ ಆದ್ದರಿಂದಲೇ ಇದರ ಕೃಷಿಗೆ ಅಷ್ಟೊಂದು ಪ್ರಚಾರ ಸಿಕ್ಕಿಲ್ಲ. ಹಾಗಾಗಿ ಬೇರಿಗೆ ಬೇಡಿಕೆಯು ಬಂದಿಲ್ಲ. ಶ್ರಮವಹಿಸಿ ಕೃಷಿ ಮಾಡಿದರೆ ಕಡಿಮೆ ಖರ್ಚಿನಲ್ಲಿ ಇದರಿಂದ ಲಾಭ ಪಡೆಯಬಹುದಾಗಿದೆ. ಲಾವಂಚದ ಬೇರಿನ ಬಳಕೆ ಲಾವಂಚದ ಬೇರುಗಳನ್ನು ಕುದಿಯುವ ನೀರಿನಲ್ಲಿ ಹಾಕಿ, ಬೇಯಿಸಿ, ಭಟ್ಟಿ ಇಳಿಸಿ ತೈಲ ಉತ್ಪಾದಿಸುತ್ತಾರೆ. ಆ ತೈಲವನ್ನು ಸೋಪು, ಅತ್ತರ್‌, ಅಗರು ಬತ್ತಿ, ಆಯುರ್ವೇದ ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಬೇರುಗಳಿಂದ ಹೂವಿನ ಬುಟ್ಟಿ, ಬೀಸಣಿಕೆ, ಗೃಹಾಲಂಕಾರದ ವಸ್ತುಗಳು, ಚಾಪೆ ಇತ್ಯಾದಿಗಳನ್ನು ನಿರ್ಮಿಸುತ್ತಾರೆ.

Advertisement

ಕೃಷಿ ಹೇಗೆ?
ಲಾವಂಚದ ಕೃಷಿಗೆ ಹೊಲ, ನದಿ ತೀರ, ಬಯಲು ಪ್ರದೇಶಗಳೇ ಬೇಕೆಂದಿಲ್ಲ. ಬದಲಾಗಿ ಮನೆಯ ಅಂಗಳದಲ್ಲಿ, ಟಾರಸಿಯ ಮೇಲ್ಭಾಗದಲ್ಲಿಯೂ ಬೆಳೆಯಬಹುದು. ಮಣ್ಣಿನ ಅಥವಾ ಪ್ಲಾಸ್ಟಿಕ್‌ ಚಟ್ಟಿ, ಹಳೆಯ ಸ್ಟೀಲ್‌, ಅಲ್ಯುಮಿನಿಯಂ ಪಾತ್ರೆ, ಪ್ಲಾಸ್ಟಿಕ್‌ ಲಕೋಟೆಗಳಿಗೆ ಮರಳು ಮಿಶ್ರಿತ ಮಣ್ಣಿಗೆ ಸ್ವಲ್ಪ ಬೂದಿ ಸೇರಿಸಿ ತುಂಬಿಸಬೇಕು. ಬಳಿಕ ಅದರಲ್ಲಿ ಲಾವಂಚದ ಸಸಿಗಳನ್ನು ನಡಬೇಕು. ನಾಟಿಗೆ ಜೂನ್‌ -ಜುಲಾಯಿ ಸೂಕ್ತ. ನೀರು ಧಾರಾಳವಾಗಿದ್ದರೆ ವರ್ಷದ ಎಲ್ಲ ಸಮಯದಲ್ಲೂ ನಾಟಿ ಮಾಡಬಹುದು. ನಾಟಿ ಮಾಡಿದ ಸುಮಾರು ಹತ್ತು ತಿಂಗಳುಗಳಲ್ಲಿ ಇದು ಕೊಯ್ಲಿಗೆ ಸಿದ್ಧವಾಗುವುದು.

ಗಿಡದ ಬುಡದಿಂದ ಸ್ವಲ್ಪ ದೂರದಿಂದ ಬೇರನ್ನು ಕತ್ತರಿಸಿ, ನೀರಿನಲ್ಲಿ ಸ್ವಚ್ಛಗೊಳಿಸಿ, ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ಇದರಿಂದ ಬೇರು ಬಹುಕಾಲ ಬಾಳಿಕೆ ಬರುತ್ತದೆ. ಹೀಗೆ ಚಟ್ಟಿ, ಪಾತ್ರೆ, ಅಥವಾ ಲಕೋಟೆಗಳಲ್ಲಿ ಬೆಳೆಸುವುದರಿಂದ ಕೊಯ್ಲು ಸುಲಭವಾಗುವುದಲ್ಲದೆ ಬೇರು ಹೇರಳ ಪ್ರಮಾಣದಲ್ಲಿ ದೊರೆಯುವುದು.

Advertisement

Udayavani is now on Telegram. Click here to join our channel and stay updated with the latest news.

Next