Advertisement

ಹಸನಾಗಲಿ ಹಳ್ಳಿ: ಗ್ರಾಮ ಪಂಚಾಯಿತಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಹೇಗೆ?

09:12 AM Dec 07, 2020 | keerthan |

ಲೋಕಸಭೆ, ವಿಧಾನಸಭೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಚುನಾವಣೆಗೆ ನಾಮಪತ್ರ ಸಲ್ಲಿಸುವಂತೆ ಆಕಾಂಕ್ಷಿಗಳು ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಬೇಕು. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ, ನಾಮಪತ್ರದ ಜೊತೆಗೆ ಸಲ್ಲಿಸಬೇಕಾದ ದಾಖಲೆಗಳು,ಚುನಾವಣಾ ಠೇವಣಿ ಹಾಗೂ ಚಿನ್ಹೆಗಳ ಹಂಚಿಕೆಯ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

Advertisement

ನಾಮಪತ್ರ ಸಲ್ಲಿಕೆಗೆ ರಾಜ್ಯ ಚುನಾವಣಾ ಆಯೋಗ ನಿಗದಿಪಡಿಸಿದ ದಿನ ಹಾಗೂ ಸಮಯದೊಳಗೆ ನಾಮಪತ್ರ ಸಲ್ಲಿಸಬೇಕು. ಅದರಂತೆ ರಜಾ ದಿನಗಳನ್ನು ಹೊರತುಪಡಿಸಿ ನಾಮಪತ್ರ ಸಲ್ಲಿಕೆಗೆ ನಿಗದಿಪಡಿಸಿದ ದಿನಾಂಕಗಳ ಎಲ್ಲಾ ಕೆಲಸದ ದಿನಗಳಲ್ಲಿ ಬೆ. 11ರಿಂದ ಮ. 3 ಗಂಟೆಯೊಳಗೆನಮೂನೆ-5ರಲ್ಲಿ ನಾಮಪತ್ರ ಸಲ್ಲಿಸಬಹುದು

ನಾಮಪತ್ರ ಸಲ್ಲಿಕೆಗೆ ಅಗತ್ಯವಿರುವ ದಾಖಲೆಗಳು

* ನಾಮಪತ್ರ ಸಲ್ಲಿಸುವ ಅಭ್ಯರ್ಥಿಯು ತಾನು ಪ್ರತಿನಿಧಿಸುವ ಗ್ರಾಮ ಪಂಚಾಯಿತಿಯ ಮತದಾರರ ಪಟ್ಟಿಯಲ್ಲಿರುವ ತನ್ನ ಹೆಸರು ಮತ್ತು ಗುರುತಿನ ಸಂಖ್ಯೆಯನ್ನು ನಾಮಪತ್ರದಲ್ಲಿ ನಮೂದಿಸಬೇಕು. ಅದೇ ಗ್ರಾ.ಪಂ. ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಒಬ್ಬ ಸೂಚಕರ ಹೆಸರನ್ನು ಅವರ ಮತದಾರಪಟ್ಟಿಯ ಸಂಖ್ಯೆಯನ್ನು ನಾಮಪತ್ರದಲ್ಲಿ ನಮೂದಿಸಬೇಕು.

* ಸಾಮಾನ್ಯ ಅಭ್ಯರ್ಥಿಗಳು 200 ರೂ. ಹಾಗೂ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಮಹಿಳೆಯರು 100 ಚುನಾವಣಾ ಠೇವಣಿ ಇಡಬೇಕು. ಇದನ್ನು ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾಧಿಕಾರಿಗಳಿಗೆ ನಗದು ರೂಪದಲ್ಲಿ ಪಾವತಿಸಬೇಕು. ಬ್ಯಾಂಕ್‌ ಮೂಲಕವೂ ಪಾವತಿಸಲು ಅವಕಾಶವಿರುತ್ತದೆ.

Advertisement

ಇದನ್ನೂ ಓದಿ:ಆಂಧ್ರದ ಹಳ್ಳಿಯೊಂದರಲ್ಲಿ ಕಾಡುತ್ತಿದೆ ವಿಚಿತ್ರ ಕಾಯಿಲೆ: ಓರ್ವ ಸಾವು, 292 ಮಂದಿ ಅಸ್ವಸ್ಥ

* ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವವರು ಸಂಬಂಧಿಸಿದ ಜಾತಿ ಹಾಗೂ ಸಿಂಧುತ್ವ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.

* ಹಿಂದೆ, ಜಿ.ಪಂ. ತಾ.ಪಂ. ಅಥವಾ ಗ್ರಾ.ಪಂ ಸದಸ್ಯರಾಗಿದ್ದಾಗ ಯಾವುದಾದರೂ ಬಾಕಿ ಇದ್ದರೆ ಅದಕ್ಕೆ ನಾಮಪತ್ರದ ಜೊತೆಗೆ “ನಬಾಕಿ’ (ಎನ್‌ಒಸಿ) ಪ್ರಮಾಣಪತ್ರ ಸಲ್ಲಿಸಬೇಕು.

* ಒಬ್ಬ ಅಭ್ಯರ್ಥಿ ಗರಿಷ್ಠ 4 ನಾಮಪತ್ರಗಳನ್ನು ಸಲ್ಲಿಸಬಹುದು. ಆದರೆ, ಚುನಾವಣಾ ಠೇವಣಿ ಮಾತ್ರ ಒಂದು ನಾಮಪತ್ರಕ್ಕೆ ಅನ್ವಯವಾಗುತ್ತದೆ. ನಾಮಪತ್ರ ಸಲ್ಲಿಸಿದ ದಿನಾಂಕ ಮತ್ತು ಸಮಯದ ಸ್ವೀಕೃತಿಯನ್ನು ಚುನಾವಣಾಧಿಕಾರಿಯಿಂದ ಪಡೆದುಕೊಳ್ಳಬೇಕು.

ನಾಮಪತ್ರ ಪರಿಶೀಲನೆ ವೇಳೆ ಪರಿಗಣಿಸುವ ಅಂಶಗಳು

* ಸಾಮಾನ್ಯವಾಗಿ ಕಾಗುಣಿತ ದೋಷ, ಮುದ್ರ ದೋಷಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದಿಲ್ಲ. ನಾಮಪತ್ರದಲ್ಲಿ ಅಭ್ಯರ್ಥಿ ಹೆಸರು ಇಲ್ಲದೇ ಇದ್ದರೆ ಅಥವಾ ಸೂಚಕ ಬೇರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯವರಾಗಿದ್ದರೆ ನಾಮಪತ್ರ ತಿರಸ್ಕೃತಗೊಳ್ಳುತ್ತದೆ. ನಾಲ್ಕು ನಾಮಪತ್ರಗಳ ಪೈಕಿ ಒಂದು ತಿರಸ್ಕಾರಗೊಂಡು ಒಂದು ಅಂಗೀಕೃತಗೊಂಡರೆ ಉಮೇದುವಾರಿಕೆ ಊರ್ಜಿತಗೊಳ್ಳುತ್ತದೆ.

* ಜಾತಿ ಪ್ರಮಾಣಪತ್ರ ಮತ್ತಿತರ ಸೂಕ್ಷ್ಮ ವಿಚಾರಗಳ ಬಗ್ಗೆ ಆಕ್ಷೇಪಗಳು ಬಂದಾಗ ಅಂತಹ ಸಂದರ್ಭದಲ್ಲಿ ನಾಮಪತ್ರ ಪರಿಶೀಲನೆಯನ್ನು ಒಂದು ದಿನಕ್ಕೆ ಮುಂದೂಡಿ ವಾದ-ಪ್ರತಿವಾದ ಆಲಿಸಿದ ಬಳಿಕ ಚುನಾವಣಾಧಿಕಾರಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾಮಪತ್ರ ತಿರಸ್ಕರಿಸಿ ಅಥವಾ ಅಂಗೀಕರಿಸಿ ಒಮ್ಮೆ ಚುನಾವಣಾಧಿಕಾರಿ ತೀರ್ಮಾನ ತೆಗೆದುಕೊಂಡರೆ ಅದು ಅಂತಿಮ. ಆದನ್ನು ಚುನಾವಣೆ ಮುಗಿದ ಬಳಿಕವಷ್ಟೇ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು.

ಚಿಹ್ನೆ ಹಂಚಿಕೆ

* ರಾಷ್ಟ್ರೀಯ, ಪ್ರಾದೇಶಿಕ ಹಾಗೂ ಇತರೆ ನೋಂದಾಯಿತ ಮಾನ್ಯತೆ ಪಡೆದ ಪಕ್ಷಗಳಿಗೆ ಈಗಾಗಲೇ ಹಂಚಿಕೆಯಾಗಿರುವ ಚಿಹ್ನೆಗಳನ್ನು ಹೊರತುಪಡಿಸಿ ಹಂಚಿಕೆಗೆ ಮುಕ್ತವಾಗಿರುವ 94 ಚಿಹ್ನೆಗಳ ಪೈಕಿ ಯಾವುದಾದರೂ ಒಂದು ಚಿಹ್ನೆಯನ್ನು ಅಭ್ಯರ್ಥಿಗಳು ನಾಮಪತ್ರದಲ್ಲಿ ನಮೂದಿಸಬೇಕು. ಒಂದೇ ಚಿಹ್ನೆಯನ್ನು ಇಬ್ಬರು ಕೇಳಿ ಅದೇ ಚಿಹ್ನೆ ಬೇಕು ಎಂದು ಇಬ್ಬರು ಪಟ್ಟು ಹಿಡಿದಾಗ ಚೀಟಿ ಎತ್ತುವ ಮೂಲಕ ಚಿಹ್ನೆ ಹಂಚಿಕೆ ಮಾಡಲಾಗುತ್ತದೆ.

* ನಾಮಪತ್ರ ವಾಪಸ್‌ ಪಡೆಯುವ ದಿನಾಂಕ ಮುಗಿದ ಬಳಿಕ ಅಭ್ಯರ್ಥಿಗಳ ಹೆಸರನ್ನು ಕನ್ನಡ ವರ್ಣಮಾಲೆಯ ಅಕಾರಾದಿಯಾಗಿ ಪ್ರಕಟಿಸಲಾಗುತ್ತದೆ.

 ಎಂ.ಕೆ.ಕೆಂಪೇಗೌಡ

ನಿವೃತ್ತ ನಿರ್ದೇಶಕರು, ಪಂಚಾಯತ್‌ರಾಜ್‌ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next