Advertisement

ಮಂಗಳೂರಿನಲ್ಲಿದ್ದ ಹೋವರ್‌ಕ್ರಾಫ್ಟ್‌ ಪಾಕ್‌ ಗಡಿಗೆ : ಕಮಾಂಡರ್‌ ಮನೋಜ್‌ ಬಾಡ್ಕರ್‌

09:40 AM Oct 16, 2022 | Team Udayavani |

ಮಂಗಳೂರು : ಮಂಗಳೂರಿನಲ್ಲಿ ಕಾರ್ಯಾ ಚರಿಸುತ್ತಿದ್ದ ಎರಡು ಹೋವರ್‌ಕ್ರಾಫ್ಟ್‌ಗಳನ್ನೂ ಗುಜರಾತ್‌ನಲ್ಲಿ ಭಾರತ- ಪಾಕಿಸ್ಥಾನದ ಗಡಿಭಾಗದ ಕಾವಲಿಗಾಗಿ ಕಳುಹಿಸಲಾಗಿದೆ ಎಂದು ಕೋಸ್ಟ್‌ಗಾರ್ಡ್‌ ಪಶ್ಚಿಮ ವಲಯ ಕಮಾಂಡರ್‌ ಮನೋಜ್‌ ವಿ. ಬಾಡ್ಕರ್‌ ಹೇಳಿದ್ದಾರೆ.

Advertisement

ಪಶ್ಚಿಮ ವಲಯ ಕಮಾಂಡರ್‌ ಆಗಿ ಅಧಿಕಾರ ವಹಿಸಿದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಭೇಟಿ ನೀಡಿ ಶನಿವಾರ ಪಣಂಬೂರಿನ ಕೋಸ್ಟ್‌ ಗಾರ್ಡ್‌ ನೌಕೆ ಐಸಿಜಿಎಸ್‌ ವರಾಹ ದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

ತಣ್ಣೀರುಬಾವಿಯಲ್ಲಿದ್ದ ಎರಡು ಹೋವರ್‌ಕ್ರಾಫ್ಟ್‌ ನೌಕೆಗಳನ್ನೂ ಗುಜರಾತಿಗೆ ಕಳುಹಿಸಲಾಗಿದೆ. ಇಲ್ಲಿಗಿಂ ತಲೂ ಅಲ್ಲಿ ಅದರ ಆಗತ್ಯ ಹೆಚ್ಚಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಸದ್ಯ ನಮ್ಮಲ್ಲಿ 18 ಹೋವರ್‌ಕ್ರಾಫ್ಟ್‌ಗಳಿದ್ದು, ಮುಂದೆ ಸಂಖ್ಯೆ ಹೆಚ್ಚಾದಾಗ ಮತ್ತೆ ಮಂಗಳೂರಿಗೆ ಬರುವ ಸಾಧ್ಯತೆ ಇದೆ ಎಂದರು.

ಸದ್ಯ ಮಂಗಳೂರಿನ ಹಳೆ ವಿಮಾನ ನಿಲ್ದಾಣದಲ್ಲಿ ಕೋಸ್ಟ್‌ ಗಾರ್ಡ್‌ ವಿಮಾನಗಳು ನಿಲ್ಲುತ್ತಿವೆ. ಅಲ್ಲಿ ವಿಮಾನ ನಿಲುಗಡೆ ಮಾಡುವ ಹ್ಯಾಂಗರ್‌ಗಳ ನಿರ್ಮಾಣ ನಡೆಯುತ್ತಿದ್ದು, ಅದು ಪೂರ್ಣಗೊಂಡಾಗ ನಾಲ್ಕು ಡಾರ್ನಿ ಯರ್‌ ವಿಮಾನಗಳಿಗೆ ನಿಲ್ಲಲು ಅವಕಾಶ ಇರಲಿದೆ. ಆಗ ಮಂಗಳೂರು ಕೋಸ್ಟ್‌ಗಾರ್ಡ್‌ನ ಪ್ರಮುಖ ವಾಯು ನೆಲೆಯಾಗಲಿದೆ ಎಂದರು.

ಬದಲಾದ ಸನ್ನಿವೇಶ
ನಾನು ಮೂಲತಃ ಕನ್ನಡಿಗ, ಕಾರವಾರ ದವನು. ಹಿಂದೆ 2006ರ ಸುಮಾರಿಗೆ ಮಂಗಳೂರಿನ ಕೋಸ್ಟ್‌ ಗಾರ್ಡ್‌ ಕಚೇರಿಯಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಆಗ ಹಾಗೂ ಈಗಿನ ಕರಾವಳಿಯ ಸನ್ನಿವೇಶಗಳಲ್ಲಿ ಬಹಳ ವ್ಯತ್ಯಾಸಗಳಾಗಿವೆ. ತಂತ್ರಜ್ಞಾನದಲ್ಲಿ ಸುಧಾರಣೆಯಾಗಿದೆ. ನಮ್ಮ ಕಾರ್ಯ ವಿಧಾನದಲ್ಲೂ ಬಹಳ ಪರಿವರ್ತನೆ ಯಾಗಿದೆ. ಹೆಚ್ಚು ಮೀನುಗಾರರಿಗೆ ನೆರವು, ಮರ್ಚೆಂಟ್‌ ಹಡಗುಗಳಿಗೆ ನೆರವು ನೀಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಬಾಡ್ಕರ್‌ ಹೇಳಿದರು.

Advertisement

ಹೊಸ ಹೆಲಿಕಾಪ್ಟರ್‌
ಮೊದಲು ಕೋಸ್ಟ್‌ಗಾರ್ಡ್‌ಗೆ ಸಿಂಗಲ್‌ ಎಂಜಿನ್‌ನ ಚೇತಕ್‌ ಹೆಲಿಕಾಪ್ಟರ್‌ ನೀಡಲಾಗುತ್ತಿತ್ತು. ಆದರೆ ಈಗ ಎಚ್‌ಎಎಲ್‌ ನಿರ್ಮಾಣದ ಅತ್ಯಾಧುನಿಕ ಎಲ್‌ಸಿಎಚ್‌ ಮಾರ್ಕ್‌-3 ಹೆಲಿಕಾಪ್ಟರ್‌ ನೀಡಲಾಗುತ್ತಿದೆ. ಇದರಿಂದಾಗಿ ಕೋಸ್ಟ್‌ಗಾರ್ಡ್‌ ಕಡಲಿನಲ್ಲಿ 350 ಕಿ.ಮೀ. ದೂರದವರೆಗೂ ತೆರಳಿ ಜೀವರಕ್ಷಣೆಯಂತಹ ಕಾರ್ಯಾಚರಣೆ ನಡೆಸುವುದಕ್ಕೆ ಅನುಕೂಲವಾಗಿದೆ.ಕೋಸ್ಟ್‌ಗಾರ್ಡ್‌ ನಲ್ಲಿ ಹಳೆಯದಾದ ನೌಕೆಗಳಿದ್ದು, ಅವುಗಳನ್ನು ಬದಲಾಯಿಸುವ, ಹೊಸ ನೌಕೆಗಳನ್ನು ಸೇರ್ಪಡೆಗೊಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಕೋಸ್ಟ್‌ಗಾರ್ಡ್‌ ವಿಮಾನಗಳಲ್ಲಿ ಪೈಲಟ್‌ಗಳಾಗಿ ಮಹಿಳೆಯರನ್ನು ನಿಯೋಜಿಸಲಾಗುತ್ತಿದೆ. ಆದರೆ ಮಹಿಳಾ ಸೈಲರ್‌ಗಳ ನೇಮಕಾತಿ ಸ್ವಲ್ಪ ಸಮಯ ಬೇಕಾಗಬಹುದು ಎಂದರು.

ಮಂಗಳೂರು ಕೋಸ್ಟ್‌ಗಾರ್ಡ್‌ ಕಮಾಂಡರ್‌ ಅರುಣ್‌ ಕುಮಾರ್‌ ಮಿಶ್ರ ಹಾಜರಿದ್ದರು. ಇದೇ ವೇಳೆ ಕಮಾಂಡರ್‌ ಅವರು ಮಂಗಳೂರಿನ ಕೋಸ್ಟ್‌ಗಾರ್ಡ್‌ ಅಧಿಕಾರಿ, ಸಿಬಂದಿಗಳೊಂದಿಗೆ ಸಮಾಲೋಚನೆ ನಡೆಸಿ, ಮಂಗಳೂರು ಹೆಡ್‌ ಕ್ವಾರ್ಟರ್ಸ್‌ನ ಕಾರ್ಯವೈಖರಿಯ ಪರಿಶೀಲನೆ ನಡೆಸಿದರು.

ಅಕಾಡೆಮಿ ಸ್ಥಾಪನೆ ಕಾರ್ಯ ಚುರುಕು
ಮಂಗಳೂರಿನಲ್ಲಿ ದೇಶದಲ್ಲೇ ಮೊದಲ ಕೋಸ್ಟ್‌ಗಾರ್ಡ್‌ ತರಬೇತಿ ಅಕಾಡೆಮಿ ಸ್ಥಾಪನೆ ಕಾರ್ಯ ಚುರುಕು ಪಡೆಯುತ್ತಿದೆ. ಭೂಸ್ವಾಧೀನ ಸೇರಿದಂತೆ ರಾಜ್ಯ ಸರಕಾರದ ಕಡೆಯಿಂದ ಆಗಬೇಕಾದ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ವಿಸ್ತೃತ ಯೋಜನಾ ವರದಿ ತಯಾರಿ ಕೆಲಸ ನಡೆಯಬೇಕಿದೆ ಎಂದು ಕಮಾಂಡರ್‌ ಬಾಡ್ಕರ್‌ ತಿಳಿಸಿದರು.

ಕೇಂದ್ರ ಸರಕಾರದ ಅನುಮೋದನೆಗಳು ಪ್ರಗತಿಯಲ್ಲಿವೆ. 159 ಎಕ್ರೆ ಜಾಗದಲ್ಲಿ ತಲೆಯೆತ್ತಲಿರುವ ಅಕಾಡೆಮಿಯಿಂದಾಗಿ ಕೋಸ್ಟ್‌ಗಾರ್ಡ್‌ನ ಪ್ರತ್ಯೇಕ ತರಬೇತಿ ವಿಧಾನಗಳು ಸಾಧ್ಯವಾಗಲಿವೆ. ಇದುವರೆಗೆ ನೌಕಾಪಡೆ ಅಕಾಡೆಮಿ ಹಾಗೂ ವಿದೇಶಗಳಲ್ಲಿ ಕೆಲವೊಂದು ವಿಶೇಷ ರೀತಿಯ ತರಬೇತಿ ನೀಡಬೇಕಾಗುತ್ತಿತ್ತು ಎಂದು ಅವರು ಹೇಳಿದರು.

ಇದನ್ನೂ ಓದಿ : ಶಿಕ್ಷಣದಲ್ಲಿ ಹಿಂದಿ ಹೇರಿಕೆ ಮಾಡುವ ಉದ್ದೇಶ ಕೇಂದ್ರ ಸರಕಾರ ಹೊಂದಿಲ್ಲ: ಧರ್ಮೇಂದ್ರ ಪ್ರಧಾನ್‌

Advertisement

Udayavani is now on Telegram. Click here to join our channel and stay updated with the latest news.

Next