Advertisement

ವಲಸಿಗರಿಗೆ ಹಾಸ್ಟೆಲ್‌ ವಾಸ

01:36 PM May 14, 2020 | mahesh |

ಬಾಗಲಕೋಟೆ: ಬೇರೆ ಬೇರೆ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುತ್ತಿರುವ ಸಾರ್ವಜನಿಕರು ಮತ್ತು ಕಾರ್ಮಿಕರನ್ನು ಕ್ವಾರಂಟೈನ್‌ ಮಾಡಲು ಜಿಲ್ಲೆಯ ಎಲ್ಲ ವಸತಿ ನಿಲಯಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ| ಕೆ.ರಾಜೇಂದ್ರ ಸೂಚಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ವಸತಿ ನಿಲಯಗಳ ಪಟ್ಟಿ ಸಲ್ಲಿಸಬೇಕು. ಅಲ್ಲದೇ ವಸತಿ ನಿಲಯಗಳಲ್ಲಿ ಎಷ್ಟು ಕೊಠಡಿಗಳಿಗೆ, ಎಷ್ಟು ಜನರನ್ನು ಕ್ವಾರಂಟೈನ್‌ ಮಾಡಲು ಸಾಧ್ಯವೆಂದು ಕುರಿತ ಮಾಹಿತಿಯನ್ನು  ತುರ್ತಾಗಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಬೇರೆ ರಾಜ್ಯದಿಂದ ಬಂದವರಿಗೆ ಕ್ವಾರಂಟೈನ್‌: ದಿನದಿಂದ ದಿನಕ್ಕೆ ಬೇರೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಬಾಗಲಕೋಟೆ ಜಿಲ್ಲೆಗೆ ಆಗಮಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕು ಹೆಚ್ಚಾಗಿರುವ ರಾಜ್ಯದಿಂದ ಬರುವ ವ್ಯಕ್ತಿಗಳನ್ನು ಇನ್ಸ್ಟಿಟ್ಯೂಶನ್‌ ಕ್ವಾರಂಟೈನ್‌ ಮಾಡುವ ಅಗತ್ಯವಿದ್ದು, ಮೊದಲು ತಾಲೂಕಾ ಕೇಂದ್ರದಲ್ಲಿರುವ ವಸತಿ ನಿಲಯಗಳನ್ನು ಸಿದ್ಧಗೊಳಿಸಿ ಅಲ್ಲಿ ಊಟದ ವ್ಯವಸ್ಥೆ ಕೂಡಾ ಮಾಡಬೇಕು. ನಂತರ ಗ್ರಾಮೀಣ ಭಾಗದಲ್ಲಿರುವ ವಸತಿ ನಿಲಯ ಬಳಸಿಕೊಳ್ಳಲಾಗುವುದು. ಇವುಗಳನ್ನು ಹೊರತುಪಡಿಸಿ ತಾಲೂಕುವಾರು ಕೆಲವೊಂದು ಶಾಲೆಗಳನ್ನು ಸಹ ಗುರುತಿಸಿ ಇಟ್ಟುಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ತಿಳಿಸಿದರು.

ವಲಸಿಗರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇದ್ದಲ್ಲಿ ಖಾಸಗಿ ಹೋಟೆಲ್‌, ಕಲ್ಯಾಣ ಮಂಟಪಗಳನ್ನು ಸಹ ಬಳಸಿಕೊಳ್ಳಲಾಗುವುದು. ಈಗಾಗಲೇ ಗುರುತಿಸಬೇಕು. ನಗರ ಮತ್ತು ಗ್ರಾಮಗಳಲ್ಲಿ
ಸ್ವಚ್ಛತಾ ಕಾರ್ಯ ಕೈಗೊಳ್ಳಲು ಸೂಚಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿಪಂ ಸಿಇಒ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಉಪಸ್ಥಿತರಿದ್ದರು.

717 ಜನರಿಗೆ ಸರ್ಕಾರಿ ಕ್ವಾರಂಟೈನ್‌
ಲಾಕ್‌ಡೌನ್‌ ಸಡಿಲಿಕೆ ಬಳಿಕ ಜಿಲ್ಲೆಗೆ ಆಗಮಿಸಿರುವ ಒಟ್ಟು 717 ಜನರಿಗೆ ಜಿಲ್ಲಾಡಳಿತವೇ ವಿವಿಧ ವಸತಿ ನಿಲಯ, ಶಾಲೆಗಳಲ್ಲಿ ಕ್ವಾರಂಟೈನ್‌ ಮಾಡಿದ್ದು, ಅವರ ಆರೋಗ್ಯದ ಕುರಿತು ನಿರಂತರಾಗಿ ನಿಗಾ ವಹಿಸಲಾಗಿದೆ. ಅಲ್ಲದೇ 876 ಜನರು ಹೋಂ ಕ್ವಾರಂಟೈನ್‌ ನಲ್ಲಿದ್ದಾರೆ. ಈ ವರೆಗೆ 4494 ಜನರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಿದ್ದು, ಅದರಲ್ಲಿ 4247 ಜನರ ವರದಿ ನೆಗೆಟಿವ್‌ ಬಂದಿವೆ. 68 ಜನರಿಗೆ ಪಾಜಿಟಿವ್‌ ಬಂದಿದ್ದು, ಅದರಲ್ಲಿ 27 ಜನರು ಕೋವಿಡ್ ದಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಓರ್ವ ವೃದ್ಧ ಮೃತಪಟ್ಟಿದ್ದು, ಇನ್ನುಳಿದ 40 ಜನ ಸೋಂಕಿತರಿಗೆ ಜಿಲ್ಲಾ ಕೋವಿಡ್‌-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಗಲಕೋಟೆ, ಮುಧೋಳ, ಬಾದಾಮಿ, ಜಮಖಂಡಿ ಹಾಗೂ ಬನಹಟ್ಟಿಯಲ್ಲಿ ಒಟ್ಟು 12 ಪ್ರದೇಶಗಳಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಆ ಎಲ್ಲಾ ಪ್ರದೇಶಗಳನ್ನು ನಿರ್ಬಂಧಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಆ ಪ್ರದೇಶದ ಜನರಿಗೆ ದಿನ ಬಳಕೆಯ ವಸ್ತುಗಳ ಪೂರೈಕೆಗಾಗಿ ಆಯಾ ತಾಲೂಕು ಆಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮಂಗಳವಾರದವರೆಗೆ ಕಳುಹಿಸಿದ್ದ 65 ಹಾಗೂ ಬುಧವಾರ ಮತ್ತೆ 99 ಸ್ಯಾಂಪಲ್‌ ಕಳುಹಿಸಿದ್ದು, ಒಟ್ಟು 164 ಜನರ ವರದಿ ಬರಬೇಕಿದೆ ಎಂದು ಜಿಲ್ಲಾಧಿಕಾರಿ ಡಾ|ರಾಜೇಂದ್ರ ತಿಳಿಸಿದ್ದಾರೆ.

Advertisement

ಮುಗಳಖೋಡ ಈಗ ಕೊರೊನಾ ಮುಕ್ತ
ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕಿನ ಮುಗಳಖೋಡ ಗ್ರಾಮವೀಗ ಕೋವಿಡ್ ಮುಕ್ತವಾಗಿದೆ. ಈ ಗ್ರಾಮದ 27 ವರ್ಷದ ಯುವಕ ಕೊರೊನಾದಿಂದ ಗುಣಮುಖವಾಗಿ ಬಿಡುಗಡೆಗೊಂಡಿದ್ದು, ಆ ಬಳಿಕ ಒಂದೂ ಸೋಂಕು ಪತ್ತೆಯಾಗಿಲ್ಲ. ಹೀಗಾಗಿ ಗ್ರಾಮದ ಕಂಟೈನ್‌ಮೆಂಟ್‌ ಪ್ರದೇಶ, ನಿರ್ಬಂಧದಿಂದ ಮುಕ್ತಗೊಳಿಸಲಾಗಿದೆ. ಯಾವುದೇ ಪ್ರದೇಶದಲ್ಲಿ ಮೊದಲು ಸೋಂಕಿತರು ಕಂಡು ಬಂದ 28 ದಿನಗಳ ಬಳಿಕ ಹೊಸ ಸೋಂಕಿತರು ಕಂಡು ಬರದೇ ಇದ್ದಲ್ಲಿ ಅದನ್ನು ಸೋಂಕು ಮುಕ್ತ ಎಂದು ಘೋಷಿಸಬಹುದಾಗಿದೆ. ಈ ಹಿನ್ನಲೆಯಲ್ಲಿ ಮುಗಳಖೋಡ ಗ್ರಾಮದಲ್ಲಿ ಏಪ್ರಿಲ್‌ 12ರಂದು ಪಿ-240 ಓರ್ವ ವ್ಯಕ್ತಿಗೆ ಕೋವಿಡ್‌ ಸೋಂಕು ದೃಢಪಟ್ಟಿತ್ತು.

ಸೋಂಕು ಕಂಡು ಬಂದ 28 ದಿನಗಳ ಬಳಿಕ ಯಾವುದೇ ಸೋಂಕಿತರು ಕಂಡುಬಂದಿಲ್ಲ. ನಂತರ ಅವರೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದವರೆಲ್ಲರ ಹೋಮ್‌ ಕ್ವಾರಂಟೈನ್‌ ಪೂರ್ಣಗೊಂಡಿರುವುದರಿಂದ ಮುಗಳಖೋಡ ಗ್ರಾಮವನ್ನು ಕೋವಿಡ್‌ ಮುಕ್ತ ಗ್ರಾಮವೆಂದು ಘೋಷಿಸಿ ಕಂಟೇನ್‌ಮೆಂಟ್‌ ಝೋನ್‌ ತೆರವುಗೊಳಿಸಿರುವುದಾಗಿ ಜಿಲ್ಲಾ ವಿಪತ್ತು ನಿರ್ವಹಣೆ ಘಟಕದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ| ರಾಜೇಂದ್ರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next