Advertisement

ಜ್ಞಾನದಿಂದ ಭಗವಂತನ ಸ್ವರೂಪ ಲಭ್ಯ

04:57 PM Apr 29, 2020 | Naveen |

ಹೊಸಪೇಟೆ: ನಮ್ಮೊಳಗಿನ ಅಜ್ಞಾನವನ್ನು ಹೊಡೆದೋಡಿಸಿದಾಗ ಮಾತ್ರ ಜ್ಞಾನ ಪ್ರಾಪ್ತಿಯಾಗುತ್ತದೆ. ಜ್ಞಾನದಿಂದ ಭಗವಂತನ ಸ್ವರೂಪ ಲಭ್ಯವಾಗುತ್ತದೆ ಎಂದು ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೆ. ದಿವಾಕರ್‌ ಹೇಳಿದರು.

Advertisement

ಶಂಕರಾಚಾರ್ಯ ಜಯಂತಿ ನಿಮಿತ್ತ ನಗರದ ಶಂಕರಲಿಂಗ ದೇವಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಹಾಗೂ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಶ್ರೀ ಶಂಕರಾಚಾರ್ಯರು ದೇಶದ ಮೂಲೆ ಮೂಲೆಗಳಿಗೆ ಸಂಚರಿಸಿ ಅದ್ವೈತ ತತ್ವವನ್ನು ಪ್ರತಿಪಾದಿಸುತ್ತಾ ವಿಶ್ವಕ್ಕೆ ಧರ್ಮ ಹಾಗೂ ಶಾಂತತೆಯ ಸೂಬಗನ್ನು ಸಾರಿದರು. ಹಲವಾರು ಅನ್ಯಮತದವರಿಂದ ದಾಳಿಗಳಾಗುತ್ತಿದ್ದಾಗ ಸನಾತನ ಹಿಂದೂ ಧರ್ಮವನ್ನು ರಕ್ಷಿಸಲು ಪಣತೊಟ್ಟು ಪುನರುತ್ಥಾನಗೊಳಿಸಲು ಜನಜಾಗೃತಿ ಮೂಡಿಸಿದ ಮಹನಿಯರೆಂದರು. ಕೇವಲ ತಮ್ಮ 32 ವರ್ಷಗಳ ವಯಸ್ಸಿನಲ್ಲಿ ಅಖಂಡ ಭಾರತ ದೇಶವನ್ನು ಕಾಲ್ನಡಿಗೆಯಲ್ಲಿ ಸಂಚರಿಸಿ ಜನರಲ್ಲಿದ್ದ ಮೌಡ್ಯವನ್ನು ಅಳಿಸಿ, ಅಂಧ ಆಚಾರಗಳನ್ನು ವಿರೋಧಿ ಸಿ ಏಕೀಕೃತ ಆಧ್ಯಾತ್ಮಿಕ ಭಾವ ಪ್ರಚಾರ ಮಾಡಿದರು ಎಂದರು.

ಶ್ರೀ ಶಂಕರರು ಭಾರತ ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಆಮ್ನಾಯ ಪೀಠಗಳನ್ನು ಸ್ಥಾಪನೆ ಮಾಡಿದರು. ಪಶ್ಚಿಮದಲ್ಲಿ ದ್ವಾರಕ, ಉತ್ತರದಲ್ಲಿ ಬದರಿ, ಪೂರ್ವದಲ್ಲಿ ಪುರಿ ಹಾಗೂ ದಕ್ಷಿಣದಲ್ಲಿ ಶೃಂಗೇರಿ. ಈ ಎಲ್ಲ ಮಠಗಳು ಶ್ರೀ ಶಂಕರ ಭಗವತ್ಪಾದರ ತತ್ವಗಳನ್ನು ಪ್ರಚಾರ ಮಾಡುವಲ್ಲಿ ಸಕ್ರಿಯವಾಗಿವೆ ಎಂದರು. ಕೊರೊನಾ ದೇಶ ಮಾತ್ರವಲ್ಲ ವಿಶ್ವದಿಂದ ದೂರವಾಗಿ ರೋಗ ಮುಕ್ತ ಜೀವನ ನಡೆಸಲು ಸಾಕಾರವಾಗಲೆಂದು ಭಗವಂತನಲ್ಲಿ ಪ್ರಾರ್ಥಸಿದರು. ವೇದಪುರೋಹಿತರು ಪೂಜಾ ಕಾರ್ಯಕ್ರಮ ನಡೆಸಿದರು. ವೈದ್ಯ ವೇಣುಗೋಪಾಲ, ರಮೇಶ ಪುರೋಹಿತ್‌, ಶಿವಪ್ರಸಾದ್‌, ಡಾ| ಹನುಮಂತರಾವ್‌ ಶೇಷ, ನಿವೃತ್ತ ತಹಶೀಲ್ದಾರ್‌ ಡಿ.ಕೆ. ಕುಲಕರ್ಣಿ, ಜೋಶಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next