Advertisement

ಬಸವಣ್ಣ ಸಮ ಸಮಾಜ ನಿರ್ಮಾಣದ ಕರ್ತೃ: ರಮೇಶ

04:22 PM May 08, 2019 | Naveen |

ಹೊಸಪೇಟೆ: ಬಸವಣ್ಣನವರ ಚಿಂತನೆಗಳು ಸರ್ವ ಕಾಲಕ್ಕೂ ಪ್ರಸ್ತುತವಾಗಿದ್ದು, ಬಡವರು, ಅಂಚಿನ ಸಮುದಾಯ, ಹಿಂದುಳಿದವರನ್ನು ಒಟ್ಟುಗೂಡಿಸಿ ಸಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ್ದರು ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ.ರಮೇಶ ಹೇಳಿದರು.

Advertisement

ಕನ್ನಡ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ, ಕೂಡಲ ಸಂಗಮದ ವತಿಯಿಂದ ಬಸವ ಜಯಂತಿ ಪ್ರಯುಕ್ತ ಮಂಗಳವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವಣ್ಣನವರು ಸಮಾಜದಲ್ಲಿನ ವೃತ್ತಿಗಳನ್ನು ಹಿರಿದು, ಕಿರಿದು ಎಂದು ಬೇಧ ಭಾವ ಮಾಡದೇ ಸಮಾನವಾಗಿ ಗೌರವಿಸುವ ಮೂಲಕ ವ್ಯಕ್ತಿಯ ಸ್ವಾಭಿಮಾನ ಎತ್ತಿ ಹಿಡಿದಿದ್ದರು. ಬಸವಣ್ಣನವರು ಒಬ್ಬ ತತ್ವಜ್ಞಾನಿ, ಚಿಂತಕ, ಕವಿಯಾಗಿ, ಹೋರಾಟಗಾರ, ಸಂಘಟಕರಾಗಿ, ಸಮಾಜ ಸುಧಾರಕರಾಗಿ ಅವರು ಜಗತ್ತಿಗೆ ನೀಡಿದ ಕೊಡುಗೆ ಅಪಾರವಾದುದು. ಎನಗಿಂತ ಕಿರಿಯರಿಲ್ಲ ಎಂದು ಹೇಳುವ ಮೂಲಕ ಮನುಷ್ಯನಲ್ಲಿರುವ ಅಹಂಕಾರವನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು. ಕಾಯಕ ಮತ್ತು ದಾಸೋಹದಂತಹ ಪರಿಕಲ್ಪನೆ ಹುಟ್ಟು ಹಾಕುವ ಮೂಲಕ ವಚನ ಚಳುವಳಿಯಂತಹ ಮಹಾನ್‌ ಕ್ರಾಂತಿಯನ್ನು ಸೃಷ್ಟಿಸಿದರು ಎಂದರು.

ನಾವು ಮೊದಲು ಪರಿಶುದ್ಧರಾಗಬೇಕು. ಇತರರನ್ನು ನಮಂತೆ ಕಾಣುವ ದೃಷ್ಟಿಕೋನಗಳು ಮತ್ತು ವೈಚಾರಿಕ ವಿಚಾರಗಳನ್ನು ನಾವು ವಚನಗಳಲ್ಲಿ ಕಾಣಬಹುದು. ವಚನಗಳನ್ನು ರಾಜಕೀಯಶಾಸ್ತ್ರ, ಸಮಾಜಶಾಸ್ತ್ರ, ಮನೋವಿಜ್ಞಾನದಂತಹ ಮಾನವಿಕ ಮತ್ತು ವೈಜ್ಞಾನಿಕ ಶಾಸ್ತ್ರಗಳ ಮೂಲಕ ಅರ್ಥಮಾಡಿಕೊಳ್ಳುವ ಕೆಲಸವಾಗಬೇಕು.

ಬಸವ ಜಯಂತಿ ಸಾಂಪ್ರದಾಯಿಕ ಆಚರಣೆಯಾಗಬಾರದು. ಬಸವ ಜಯಂತಿ ಸಾರ್ಥಕಗೊಳ್ಳಬೇಕಾದರೆ ಸಮ ಸಮಾಜ ನಿರ್ಮಾಣಕ್ಕೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದರು.

Advertisement

ಬೆಂಗಳೂರು ಆಕಾಶವಾಣಿ ನಿವೃತ್ತ ನಿರ್ದೇಶಕ ಡಾ.ಬಸವರಾಜ ಸಾದರ ಮಾತನಾಡಿ, ವಚನ ಚಳವಳಿ ಮಾನವನ ಅಸ್ಮಿತೆ ಮತ್ತು ಅರಿವನ್ನು ಜಾಗೃತಗೊಳಿಸುವ ಕೆಲಸ ಮಾಡಿತು. ವಚನ ಚಳವಳಿಯು ಪ್ರಮುಖವಾಗಿ ಪ್ರಶ್ನಿಸುವ, ಪ್ರತಿಭಟಿಸುವ, ನಿರಾಕರಿಸುವ ಮತ್ತು ಪರ್ಯಾಯ ಸೂಚಿಸುವ ಅಂಶಗಳನ್ನು ಒಳಗೊಂಡಿದೆ. ಅರಿವೇ ನಿಜವಾದ ಧರ್ಮ ಎಂಬುದನ್ನು ತೋರಿಸಿಕೊಟ್ಟಿತು. ಮನುಷ್ಯರಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕುವ ಪ್ರವೃತ್ತಿ ಬೆಳಸಿತು. ಇದಕ್ಕೆ ನಿದರ್ಶನವಾಗಿ ಈಗ ದೊರಕಿರುವ 23 ಸಾವಿರ ವಚನಗಳಲ್ಲಿ 10 ಸಾವಿರ ವಚನಗಳು ಪ್ರಶ್ನೆಯ ರೂಪದಲ್ಲಿರುವುದನ್ನು ಕಾಣಬಹುದು. ಆದರೆ ವಚನ ಚಳವಳಿಯು ಪ್ರಪಂಚದ ಇತರ ಕ್ರಾಂತಿಗಳಂತೆ ಇತಿಹಾಸದಲ್ಲಿ ಸರಿಯಾಗಿ ದಾಖಲಾಗಲಿಲ್ಲ. ವಚನ ಕ್ರಾಂತಿಯನ್ನು ಸಾಹಿತ್ಯ ಚಳವಳಿಯಾಗಿ ನೋಡಿದರೇ ಹೊರತು, ಸಾಮಾಜಿಕ ಕ್ರಾಂತಿಯಾಗಿ ಪರಿಗಣಿಸಲಿಲ್ಲ. ಇಂದಿಗೂ ಶರಣ ಚಳವಳಿಯನ್ನು ಹಿಂದೆ ತಳ್ಳುವ ಗೌಪ್ಯ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಲಿವೆ. ಇಂದು ಶರಣ ಚಳವಳಿ ನಡೆಸುವ ಸಂಸ್ಥೆಗಳು ಶರಣೋದ್ಯಮಗಳಾಗುತ್ತಿವೆ ಎಂದರು.

ವಿಶ್ರಾಂತ ಕುಲಪತಿ ಡಾ. ಎ. ಮುರಿಗೆಪ್ಪ ಮಾತನಾಡಿ, ಬಸವಣ್ಣನವರು ಜಾತಿ ಸೂತಕ ಬೇಡವೆಂದು ದೂರವಿದ್ದವರು. ಆದರೆ ಇಂದು ಅವರನ್ನು ಮತ್ತೇ ಜಾತಿಯ ಬಂಧನಕ್ಕೆ ಸೀಮಿತಗೊಳಿಸುವ ಕೆಲಸವಾಗುತ್ತಿದೆ ಎಂದರು. ಕುಲಸಚಿವ ಡಾ.ಅಶೋಕಕುಮಾರ ರಂಜೇರೆ ಹಾಗೂ ಡಾ.ಅಮರೇಶ ನುಗಡೋಣಿ ಮಾತನಾಡಿದರು. ಆರಂಭದಲ್ಲಿ ಗಣ್ಯರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾನಮನ ಸಲ್ಲಿಸಿದರು. ಡಾ.ಎಸ್‌.ಆರ್‌ ಚನ್ನವೀರಪ್ಪ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿನಿ ಗಂಗಮ್ಮ ನಿರೂಪಿಸಿದರು. ವಿದ್ಯಾರ್ಥಿ ರಾಮಕೃಷ್ಣ ವಂದಿಸಿದರು. ಅಧ್ಯಾಪಕರು, ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next