Advertisement

ಶರಾವತಿ ನದಿಗೆ ಧಕ್ಕೆಯಾದರೆ ಹೋರಾಟ: ಚನ್ನಬಸವ ಸ್ವಾಮೀಜಿ

04:05 PM Jun 28, 2019 | Team Udayavani |

ಹೊಸನಗರ: ಶರಾವತಿ ನಮ್ಮ ತಾಲೂಕಿನ ಜೀವನದಿ. ಮಲೆನಾಡ ಪರಿಸರ ಹುಟ್ಟಿ ಬೆಳೆದ ಈ ನದಿ ಮಲೆನಾಡಿಗರ ಸಾಕ್ಷಿಪ್ರಜ್ಞೆಯಾಗಿದೆ. ಶರಾವತಿ ನದಿಯಲ್ಲಿ ನಮ್ಮವರು ಬದುಕು ಕಟ್ಟಿಕೊಂಡಿದ್ದಾರೆ. ನದಿ ಆಸರೆಯಲ್ಲಿ ನಾವಿದ್ದೇವೆ. ಬದುಕಿಗೆ ಆಸರೆಯಾಗಿರುವ ನಮ್ಮ ಶರಾವತಿ ನದಿ ಅಸ್ತಿತ್ವಕ್ಕೆ ಧಕ್ಕೆ ಆದಲ್ಲಿ ಹೋರಾಟವೇ ಉತ್ತರವಾಗಬೇಕಿದೆ. ಈ ವಿಚಾರದಲ್ಲಿ ಮಲೆನಾಡಿಗರಾದ ನಾವು ಕೈ ಕಟ್ಟಿ ಕೂರುವ ಪ್ರಶ್ನೆಯೇ ಉದ್ಭವಿಸದು ಎಂದು ಮೂಲೆಗದ್ದೆ ಸದಾನಂದ ಶಿವಯೋಗಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಸುದ್ದಿಮನೆಯಲ್ಲಿ ನಡೆದ ‘ಶರಾವತಿ ನದಿಗಾಗಿ ನಾವು.. ಶರಾವತಿ ನದಿ ನೀರು ಉಳಿಸಿ’ ಹೋರಾಟ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರ ಪ್ರಸ್ತಾಪಿಸಿದ ಈ ಯೋಜನೆ ತೀರಾ ಅವೈಜ್ಞಾನಿಕವಾಗಿದೆ. ಇದು ಯಾವ ಕಾರಣಕ್ಕೂ ಕಾರ್ಯಸಾಧುವಲ್ಲ. ಯೋಜನೆ ಜಾರಿಯಿಂದ ಮಲೆನಾಡ ಜನರಲ್ಲಿ ಆತಂಕ ಉಂಟಾಗಿದೆ. ಮಲೆನಾಡಲ್ಲಿ ಶಾಂತಿ ಕದಡುವ ಪ್ರಯತ್ನದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.

ಪರಿಸರ ಕಾರ್ಯಕರ್ತ ಚಕ್ರವಾಕ ಸುಬ್ರಹ್ಮಣ್ಯ ಮಾತನಾಡಿ, ಲಿಂಗನಮಕ್ಕಿಯಿಂದ ಬೆಂಗಳೂರಿಗೆ ಶರಾವತಿ ನೀರನ್ನು ಕೊಂಡೊಯ್ಯುವ ಸರ್ಕಾರದ ಪ್ರಸ್ತಾವಿತ ಯೋಜನೆ ತೀರಾ ಮೂರ್ಖತನದ್ದಾಗಿದೆ. ಮಾತ್ರವಲ್ಲ ಸಾರ್ವಜನಿಕವಾಗಿಯೂ ಇದು ನಗೆಪಾಟಲಿಗೆ ಗುರಿಯಾಗಿದೆ ಎಂದರು.

ಲಿಂಗನಮಕ್ಕಿಯಿಂದ ಬೆಂಗಳೂರು ಸುಮಾರು 4 ಸಾವಿರ ಮೀಟರ್‌ ಎತ್ತರ ಇದ್ದು ಸುಮಾರು 400ಕ್ಕೂ ಹೆಚ್ಚು ಕಿಮೀ ದೂರ ಇದೆ. ಇಷ್ಟು ಅಂತರದಲ್ಲಿ ನದಿ ನೀರನ್ನು ಕೊಂಡ್ಯೊಯಲು ಸಾಧ್ಯವೇ ಇಲ್ಲವಾಗಿದೆ ಎಂದರು. ಸಾಮಾಜಿಕ ಕಾರ್ಯಕರ್ತ ಹನಿಯ ರವಿ ಮಾತನಾಡಿ, ಶರಾವತಿ ನದಿ ನೀರಿಗಾಗಿ ನಡೆಯುತ್ತಿರುವ ಈ ಹೋರಾಟ ಕೇವಲ ಹೋರಾಟವಾಗಿ ಉಳಿಯದೆ ನಿರಂತರವಾಗಿ ಶರಾವತಿ ಸಂರಕ್ಷಣೆಗೆ ಕಟಿಬದ್ಧವಾಗಿ ನಡೆಯುವ ಸಾಂಘಿಕ ಹೋರಾಟದ ಶಕ್ತಿ ಪ್ರದರ್ಶನಕ್ಕೆ ನಾಂದಿ ಹಾಡಬೇಕಿದೆ. ಇದರಿಂದ ಸ್ಥಳೀಯ ಸಮಸ್ಯೆಗಳ ನಿವಾರಣೆ ಜಾಗೃತಿ ಮೂಡಿಸಲಿ ಎಂದು ಹಾರೈಸಿದರು.

Advertisement

ಜಿಪಂ ಸದಸ್ಯ ಕಲಗೋಡು ರತ್ನಾಕರ್‌ ಮಾತನಾಡಿ, ಈ ಹಿಂದೆ ಜಿಲ್ಲೆಯ ಗ್ರಾಮಗಳ ಕುಡಿಯುವ ನೀರು ಸರಬರಾಜಿಗಾಗಿ ಬಹುಗ್ರಾಮ ಯೋಜನೆ ಕಾರ್ಯರೂಪಕ್ಕೆ ಪ್ರಸ್ತಾವನೆ ಕಳಿಸಿತ್ತು. ಆದರೆ ಈ ಯೋಜನೆ ಇನ್ನೂ ಜಾರಿಗೆ ಬಂದಿಲ್ಲ. ಈಗ ಸರ್ಕಾರ ಬೆಂಗಳೂರಿಗೆ ಶರಾವತಿ ನದಿ ನೀರು ಹರಿಸಲು ಯೋಜನೆ ರೂಪಿಸಲು ಹೊರಟಿದ್ದು ಮಲೆನಾಡ ಜನತೆ ಶಾಪವೇ ಸರಿ ಎಂದರು.

ಜೆಡಿಎಸ್‌ ತಾಲೂಕು ಅಧ್ಯಕ್ಷ ಎಂ.ವಿ. ಜಯರಾಮ್‌ ಮಾತನಾಡಿ, ಶರಾವತಿ ನದಿ ನೀರು ವಿಚಾರದಲ್ಲಿ ಸಂಘಟನಾತ್ಮಕ ಹೋರಾಟ ಅಗತ್ಯವಾಗಿದೆ. ಒಗ್ಗಟ್ಟಿನ ಪ್ರದರ್ಶನವಾಗಿ ಮಲೆನಾಡ ಜನತೆಗೆ ನೆಮ್ಮದಿ ತರುವ ಪ್ರಯತ್ನವಾಗಬೇಕಿದೆ ಎಂದು ಆಶಿಸಿದರು. ಬಿಜೆಪಿ ಮುಖಂಡ ಎನ್‌.ಆರ್‌. ದೇವಾನಂದ್‌ ಮಾತನಾಡಿ, ಶರಾವತಿ ನದಿ ನೀರು ಬೆಂಗಳೂರಿಗೆ ಹರಿಸುವ ಮುನ್ನ ಸಾಗರ, ಹೊಸನಗರ ತಾಲೂಕುಗಳ ಗ್ರಾಮಗಳ ಕುಡಿಯುವ ನೀರು ಸಂಬಂಧಿತ ಯೋಜನೆ ಜಾರಿ ಆಗಬೇಕಿದೆ. ಇಲ್ಲಿ ಕುಡಿಯಲು ನೀರಿಲ್ಲವಾಗಿರುವಾಗ ದೂರದ ಬೆಂಗಳೂರಿಗೆ ನೀರು ಹರಿಸುವ ಯೊಜನೆ ಯಾವತ್ತಿಗೂ ಸಲ್ಲ ಎಂದರು.

ಸಭೆಯಲ್ಲಿ ನೂರಾಕ್ಕೂ ಹೆಚ್ಚು ಮಂದಿ ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ನಮ್ಮ ಶರಾವತಿ ನದಿ ನೀರು ಬೆಂಗಳೂರಿಗೆ ಹೋಗಲು ಸಾಧ್ಯವೇ ಇಲ್ಲ. ಜೀವದ ಹಂಗು ತೊರೆದು ಹೋರಾಟ ನಡೆಸಬೇಕಾಗಿದೆ. ತಾಲೂಕಿನ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲೂ ಹೋರಾಟ ಕಾವು ಪಡೆಯಬೇಕಾಗಿದೆ. ಸಹಿ ಸಂಗ್ರಹ ನಡೆಸಿ ಮುಖ್ಯಮಂತ್ರಿಗಳಿಗೆ ಕಳುಹಿಸಬೇಕಾಗಿದೆ ಎಂಬಿತ್ಯಾದಿ ಅಭಿಪ್ರಾಯಗಳು ವ್ಯಕ್ತವಾದವು.

10ರ ಬಂದ್‌ಗೆ ಬೆಂಬಲ: ಶರಾವತಿ ನದಿ ನೀರು ಹರಿಸುವ ಸರ್ಕಾರದ ಯೋಜನೆ ಖಂಡಿಸಿ ನಡೆಸಲುದ್ದೇಶಿಸಿರುವ ಶಿವಮೊಗ್ಗ ಬಂದ್‌ಗೆ ಹೊಸನಗರ ಜನತೆ ಬೆಂಬಲಿಸುತ್ತದೆ. ಹೊಸನಗರದಿಂದ ಸಾವಿರಾರು ಜನರು ಬಂದ್‌ನಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲಾಗುತ್ತದೆ ಎಂದು ಘೋಷಿಸಿದರು.

ಸಭೆಯಲ್ಲಿ ಚಲನಚಿತ್ರ ನಟ ಏಸು ಪ್ರಕಾಶ್‌, ಸಾರಾ ಸಂಸ್ಥೆಯ ಅರುಣಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ಜಿ. ನಾಗರಾಜ್‌, ಕಸಾಪ ಅಧ್ಯಕ್ಷ ಇಲಿಯಾಸ್‌, ಕಾರ್ಯದರ್ಶಿ ಹ.ರು. ಗಂಗಾಧರಯ್ಯ, ಜೆಸಿಐನ ಬಿ.ಎಸ್‌. ಸುರೇಶ್‌, ಅರೆಮನೆ ವಿನಾಯಕ, ಹೊಸನಗರ ಹಿತರಕ್ಷಣಾ ವೇದಿಕೆಯ ಅಭಿಲಾಷ್‌, ಅನ್ಸರ್‌, ಜಬಗೋಡು ಹಾಲಪ್ಪ, ಪಪಂ ಸದಸ್ಯ ಸುರೇಂದ್ರ ಕೋಟ್ಯಾನ್‌, ಸಿಂಥಿಯಾ ಸೆರೆವೂ, ಶಾಂತಮೂರ್ತಿ ಸಂಕೂರು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next